Advertisement

ಫ್ಲಾಪ್‌ ಆದ ಬಲೂನ್‌ ಐಡಿಯಾ!

05:52 PM Jun 03, 2019 | mahesh |

ಗಣಿತ ಸಂಘದ ಉದ್ಘಾಟನೆಯ ದಿನ ಹತ್ತಿರ ಬಂದೇ ಬಿಟ್ಟಿತು. ಗಣಿತ ಮೇಡಂ ಬಳಿ ಹೋಗಿ- “ಮೇಡಂ, ನಮ್ಮ ಸಂಘವನ್ನು ಸಖತ್ತಾಗಿ, ಇದುವರೆಗೆ ಯಾರೂ ಮಾಡಿರದ ರೀತಿಯಲ್ಲಿ ಉದ್ಘಾಟನೆ ಮಾಡುತ್ತೇನೆ. ನೋಡ್ತಾ ಇರಿ’ ಎಂದು ಬಡಾಯಿ ಕೊಚ್ಚಿಕೊಂಡೆ. ನನ್ನ ಪ್ಲಾನ್‌ ಏನು ಎಂಬುದನ್ನು ಅವರಿಗೆ ಹೇಳಲಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟಿದ್ದ ಅವರೂ ಅದನ್ನು ಕೇಳಲಿಲ್ಲ.

Advertisement

ನಾನು ಓದುತ್ತಿದ್ದ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ವಿಷಯಕ್ಕೊಂದರಂತೆ ಸಂಘಗಳು ಇದ್ದವು. ಪ್ರಶಿಕ್ಷಣಾರ್ಥಿಗಳು ತಮ್ಮ ಆಸಕ್ತಿಯ ವಿಷಯದ ಸಂಘಕ್ಕೆ ಸೇರಬಹುದಿತ್ತು. ನನಗೆ ಗಣಿತದಲ್ಲಿ ಆಸಕ್ತಿ ಇದ್ದ ಕಾರಣ, ಗಣಿತ ಸಂಘಕ್ಕೆ ಸೇರಿ ಅದರ ಕಾರ್ಯದರ್ಶಿಯೂ ಆಗಿದ್ದೆ. ಬೇರೆ ಎಲ್ಲ ಸಂಘದ ಉದ್ಘಾಟನೆಗಳು ಸಾಮಾನ್ಯವಾಗಿ ನಡೆದಿದ್ದವು. ಆದರೆ, ನಾನು ಗಣಿತ ಸಂಘವನ್ನು ವಿಭಿನ್ನವಾಗಿ ಉದ್ಘಾಟಿಸುವ ಮೂಲಕ, ಜ್ಯೂನಿಯರ್‌ ಹುಡುಗಿಯರ ಪಾಲಿಗೆ ಹೀರೋ ಆಗಬೇಕೆಂದು ಲೆಕ್ಕ ಹಾಕಿದೆ!

ಗಣಿತ ಸಂಘದ ಉದ್ಘಾಟನೆಯ ದಿನ ಹತ್ತಿರ ಬಂದೇ ಬಿಟ್ಟಿತು. ಗಣಿತ ಮೇಡಂ ಬಳಿ ಹೋಗಿ- “ಮೇಡಂ, ನಮ್ಮ ಸಂಘವನ್ನು ಸಖತ್ತಾಗಿ, ಇದುವರೆಗೆ ಯಾರೂ ಮಾಡಿರದ ರೀತಿಯಲ್ಲಿ ಉದ್ಘಾಟನೆ ಮಾಡುತ್ತೇನೆ. ನೋಡ್ತಾ ಇರಿ’ ಎಂದು ಬಡಾಯಿ ಕೊಚ್ಚಿಕೊಂಡೆ. ನನ್ನ ಪ್ಲಾನ್‌ ಏನು ಎಂಬುದನ್ನು ಅವರಿಗೆ ಹೇಳಲಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟಿದ್ದ ಅವರೂ ಅದನ್ನು ಕೇಳಲಿಲ್ಲ.

ಸಂಘದ ಸದಸ್ಯರೆಲ್ಲ, ಉದ್ಘಾಟನೆ ಸಮಾರಂಭದ ಹಿಂದಿನ ದಿನ ಸಂಜೆ 6 ಗಂಟೆಯವರೆಗೂ ಸಭಾಂಗಣದ ಸ್ವತ್ಛತೆ ಕೆಲಸ ಮಾಡಿ ಮುಗಿಸಿದರು. ವೇದಿಕೆ ಅಲಂಕಾರವನ್ನು ನಾಳೆ ಮಾಡೋಣ ಅಂತ ನಾನು ಅವರನ್ನೆಲ್ಲ ಮನೆಗೆ ಕಳಿಸಿದೆ. ಯಾಕೆಂದರೆ, ವೇದಿಕೆ ಅಲಂಕಾರದ ಸೀಕ್ರೆಟ್‌ ಸಸ್ಪೆನ್ಸ್ ಆಗಿರಬೇಕೆಂಬುದು ನನ್ನ ನಿಲುವಾಗಿತ್ತು.

ಅವತ್ತು ಸಂಜೆ ಗೆಳೆಯರಾದ ತಿಪ್ಪು, ರಾಘು ಜೊತೆ ವೇದಿಕೆಯ ಅಲಂಕಾರಕ್ಕೆ ಬೇಕಾದ ಬಲೂನ್‌, ಬಟ್ಟೆ, ದಾರ, ಮಿಂಚುಪುಡಿಯ ಪ್ಯಾಕೆಟ್‌ಗಳನ್ನು ಖರೀದಿಸಿದೆ. ರಾತ್ರಿ ಊಟವಾದ ನಂತರ, ಗೆಳೆಯರನ್ನೆಲ್ಲಾ ಕೂರಿಸಿಕೊಂಡು ಉದ್ಘಾಟನೆಯ ಪ್ಲಾನ್‌ ಅನ್ನು ಹಂಚಿಕೊಂಡೆ. ಆ ಐಡಿಯಾ ಹೀಗಿತ್ತು- ಬಟ್ಟೆ ತುಂಡನ್ನು ಚೌಕಾಕಾರವಾಗಿ 5 ಸಮಭಾಗಗಳಾಗಿ ಕತ್ತರಿಸಿ, ಅವುಗಳ ಮೇಲೆ ಗ, ಣಿ, ತ, ಸಂ, ಘ ಎಂದು ಒಂದೊಂದಾಗಿ ಬರೆಯಬೇಕು. ನಂತರ ಒಂದೊಂದು ಬಟ್ಟೆ ತುಂಡನ್ನು ಒಂದೊಂದು ಬಲೂನಿನೊಳಗೆ ಸೇರಿಸಿ, ಮಿಂಚಿನ ಪುಡಿಯನ್ನು ಬಲೂನಿನೊಳಗೆ ಹಾಕಿ, ಅವನ್ನು ವೇದಿಕೆಯ ಮೇಲೆ ದಾರಕ್ಕೆ ತೂಗು ಹಾಕಿ ಕಟ್ಟಬೇಕು. ಉದ್ಘಾಟನೆಯ ವೇಳೆ ಅತಿಥಿಗಳಿಂದ ಪ್ರತಿ ಬಲೂನನ್ನು ಊದುಬತ್ತಿಯಿಂದ ಮುಟ್ಟಿಸಿ ಒಡೆಸಬೇಕು. ಒಂದೊಂದೇ ಬಲೂನು ಒಡೆದುಕೊಳ್ಳುತ್ತಿದ್ದಂತೆ, ಒಳಗಿರುವ ಬಟ್ಟೆಯ ಮೇಲಿನ ಅಕ್ಷರಗಳು ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತವೆ.

Advertisement

ನನ್ನ ಐಡಿಯಾವನ್ನು ನನ್ನ ಗೆಳೆಯರು ಕೂಡಾ ಒಪ್ಪಿಕೊಂಡರು. ಎಲ್ಲರೂ ಒಟ್ಟಾಗಿ ಸೇರಿ ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಮೊದಲಿಗೆ, ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲಾಗಲಿಲ್ಲ. ಏನೇನೋ ಪ್ರಯತ್ನಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದ ಮೇಲೆ ಮತ್ತೂಂದು ಸಮಸ್ಯೆ ಎದುರಾಯ್ತು. ಅದೇನೆಂದರೆ, ಬಲೂನ್‌ ಒಡೆದ ಕೂಡಲೆ ಬಟ್ಟೆ ಮಡಚಿದ ಸ್ಥಿತಿಯಲ್ಲಿರುತ್ತಿದ್ದುದರಿಂದ ಅಕ್ಷರ ಕಾಣುತ್ತಲೇ ಇರಲಿಲ್ಲ. ಅದನ್ನು ಸರಿ ಮಾಡಲು ವ್ಯರ್ಥ ಪ್ರಯತ್ನ ಮಾಡುತ್ತಾ, ಸಮಯ ಕಳೆದಿದ್ದೇ ತಿಳಿಯಲಿಲ್ಲ. ಗಡಿಯಾರದ ಕಡೆ ನೋಡಿದಾಗಲೇ ಗೊತ್ತಾಗಿದ್ದು, ಸಮಯ ಅದಾಗಲೇ ಬೆಳಗಿನ ಜಾವ ಮೂರು ಎಂದು!

ಒಂದೆಡೆ ನಿದ್ದೆ ಮಂಪರು, ಇನ್ನೊಂದೆಡೆ ಕೈಗೂಡದ ನನ್ನ ಕಾರ್ಯ ಯೋಜನೆ. ಯಾಕಾದ್ರೂ ಸಂಘದ ಕಾರ್ಯದರ್ಶಿ ಆದೆನಪ್ಪಾ ಅನ್ನಿಸಿತು. ಆಗ ಗೆಳೆಯ ತಿಪ್ಪು ಒಂದು ಐಡಿಯಾ ಕೊಟ್ಟ- ಅಕ್ಷರಗಳಿರುವ ಬಟ್ಟೆಯನ್ನು ಗೋಡೆಗೆ ಅಂಟಿಸಿ, ಅದರ ಮೇಲೆ ಬಲೂನು ಕಟ್ಟುವುದು ಅವನ ಐಡಿಯಾ. ನಮಗೂ ಅದು ಸರಿ ಅನ್ನಿಸಿ, ಜೈ ಅಂದು ಮಲಗಿದೆವು.

ಮಾರನೇ ದಿನ ಬೆಳಗ್ಗೆ ಮಾಮೂಲಿಯಂತೆ ತರಗತಿಗಳು ಇದ್ದವು. ಹಾಗಾಗಿ ಬೆಳಗ್ಗೆ 7 ಗಂಟೆಗೇ ಕಾಲೇಜಿಗೆ ಹೋಗಿ, ಬಲೂನು ಕಟ್ಟಿ ಬಂದೆವು. ಸಂಜೆ ಕಾರ್ಯಕ್ರಮ ಶುರು ಆಯಿತು. ನನ್ನದೇ ನಿರೂಪಣೆ ಬೇರೆ. ವೇದಿಕೆಯ ಮೇಲಿದ್ದ ಪ್ರಾಂಶುಪಾಲರ ಕೈಗೆ ಊದುಬತ್ತಿ ಕೊಟ್ಟು, ಬಲೂನು ಒಡೆಯಲು ಸೂಚಿಸಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಬಲೂನು ಒಡೆಯುತ್ತದೆ, ಹುಡುಗಿಯರೆಲ್ಲ ಬೆರಗಾಗಿ ನನ್ನನ್ನು ನೋಡುತ್ತಾರೆ ಅಂತ ಕನಸು ಕಾಣುತ್ತಾ ವೇದಿಕೆ ಮೇಲೆ ನಿಂತಿದ್ದೆ. ಪ್ರಿನ್ಸಿಪಾಲರು ಬಲೂನು ಒಡೆದದ್ದೇ ತಡ, ಅದರಲ್ಲಿರುವ ಮಿಂಚೆಲ್ಲಾ ಅವರ ಮೇಲೆ ಬಿತ್ತು. ಗಣಿತ ಮೇಡಂ ಇನ್ನೊಂದು ಬಲೂನು ಒಡೆದಾಗಲೂ ಮಿಂಚು ಹಾರಿತು. ಆದರೆ, ನನ್ನ ಲೆಕ್ಕಾಚಾರದಂತೆ ಅವರ್ಯಾರಿಗೂ ವಿನೂತನ ಉದ್ಘಾಟನಾ ಶೈಲಿ ಇಷ್ಟವಾಗಲಿಲ್ಲ. ಎಷ್ಟೇ ಉಜ್ಜಿದರೂ ಅಳಿಸಲಾಗದ ಮಿಂಚು ಮೈ ಮೇಲೆ ಬಿದ್ದ ಕೋಪಕ್ಕೋ, ಬಲೂನು ಒಡೆದಾಗ ವೇದಿಕೆಯ ತುಂಬೆಲ್ಲಾ ಮಿಂಚು ಹಾರಿ ಗಲೀಜಾಗಿದ್ದಕ್ಕೋ ಪ್ರಾಂಶುಪಾಲರು ಕೆಂಡಾಮಂಡಲರಾದರು. “ಸಾಕು ನಿಲ್ಲಿಸಿ, ಇದೇನಿದು ನಿಮ್ಮ ಹುಚ್ಚಾಟ?’ ಎಂದು ಎಲ್ಲರೆದುರೇ ಕೂಗಿದರು. ದೂರ್ವಾಸ ಮುನಿಯಂತಿದ್ದ ಅವರ ಕೋಪಕ್ಕೆ ಹೆದರಿ, ಉಳಿದ ಬಲೂನುಗಳನ್ನು ಒಡೆಯದೆ ಹಾಗೆ ಇಳಿಸಿದೆವು. ಬಯಸಿದ್ದೊಂದು, ಆಗಿದ್ದೇ ಮತ್ತೂಂದು. ಇಂಗು ತಿಂದ ಮಂಗನಂತಾಗಿತ್ತು ನನ್ನ ಪರಿಸ್ಥಿತಿ. ಎಲ್ಲರೆದುರಿಗೆ ಹೀರೋ ಆಗಬೇಕೆಂದುಕೊಂಡಿದ್ದ ನಾನು ಜೀರೋ ಆಗಿದ್ದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ.

-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next