Advertisement

2 ವರ್ಷದಲ್ಲಿ  5 ಚಿನ್ನ ಗೆದ್ದ ಐದರ ಸ್ಕೇಟಿಂಗ್‌ ಪೋರ !

06:00 AM May 27, 2018 | Team Udayavani |

ಕುಂದಾಪುರ: ವ್ಯಾಯಾಮಕ್ಕೆಂದು 4 ವರ್ಷದ ಪೋರ ಸ್ಕೇಟಿಂಗ್‌ ಅಭ್ಯಾಸ ಆರಂಭಿಸಿ ಕೇವಲ ಎರಡೇ ವರ್ಷಗಳಲ್ಲಿ 5 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಕ್ರೀಡಾಲೋಕದಲ್ಲಿ ಭರವಸೆಯ ಬೆಳಕಾಗುತ್ತಿದ್ದಾನೆ. ಯುಕೆಜಿ ವಿದ್ಯಾರ್ಥಿಯೊಬ್ಬನ ಕಿರು ಅವಧಿಯ ಹಿರಿ ಸಾಧನೆ ಬೆರಗಾಗಿಸುವಂತಿದೆ. 

Advertisement

ಕುಂದಾಪುರದ ಯೆರುಕೋಣೆಯ ಅರುಣ್‌ ಕುಮಾರ್‌ ಶೆಟ್ಟಿ-ಶಮಿತಾ ಎ. ಶೆಟ್ಟಿ ಅವರ ಪುತ್ರ ತಕ್ಷಕ್‌ ಎ. ಶೆಟ್ಟಿ ರಾಜ್ಯ ಮಟ್ಟದಲ್ಲಿ ಪದಕಗಳ ಸರಣಿ ಹಾರವಾಗಿಸುತ್ತಿದ್ದಾನೆ. 2012ರ ಎ. 30ರಂದು ಜನಿಸಿದ ತಕ್ಷಕ್‌ ಮಂಗಳೂರಿನ ಹನಿಕೋಂ ಮಾಂಟೆಸರಿ ಶಾಲೆಯ ವಿದ್ಯಾರ್ಥಿ. 1ನೇ ತರಗತಿಗೆ ಲೂರ್ಡ್ಸ್‌ ಸೆಂಟ್ರಲ್‌  ಶಾಲೆಗೆ ಸೇರ್ಪಡೆಯಾಗಿದ್ದಾನೆ. 


ಆರೇ ತಿಂಗಳಲ್ಲಿ ಪದಕ ಬೇಟೆ ಆರಂಭ ತರಬೇತಿ ಆರಂಭವಾಗಿ 6 ತಿಂಗಳಲ್ಲಿ ಪಣಂಬೂರಿನಲ್ಲಿ ನಡೆದ ಬೀಚ್‌ ಫೆಸ್ಟಿವಲ್‌ನಲ್ಲಿ ತೃತೀಯ ಸ್ಥಾನ ಪಡೆದ ತಕ್ಷಕ್‌ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬಾರ ದೆಂಬ ಮೊದಲ ಪಾಠ ಕಲಿತ. 2017ರ ಫೆಬ್ರವರಿಯಲ್ಲಿ ನಡೆದ ಪ್ರಸಿಡೆನ್ಸಿ ಇಂಟರ್‌ ಸ್ಕೂಲ್‌ ಸ್ಪರ್ಧೆಯಲ್ಲಿ ಮೊದಲ ಚಿನ್ನದ ಪದಕ ದೊರೆಯಿತು. ಅದೇ ವರ್ಷ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ  ಒಳಾಂಗಣ ರಾಷ್ಟ್ರೀಯ ರೋಲರ್‌ ಸ್ಪೀಡ್‌ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ  2 ಕಂಚಿನ ಪದಕ ಪಡೆದ. ಆಗಸ್ಟ್‌ನಲ್ಲಿ ರೋಲರ್‌ ರಿಲೇ ಸ್ಕೇಟಿಂಗ್‌ ಫೆಡರೇಶನ್‌ ಆಫ್ ಇಂಡಿಯಾದವರು ಗೋವಾದಲ್ಲಿ ನಡೆಸಿದ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1 ಕಂಚಿನ ಪದಕ ಗೆದ್ದ. ಬಳಿಕ ಮಂಗಳೂರಿನಲ್ಲಿ ನಡೆದ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ನಲ್ಲಿ 2 ಚಿನ್ನ ಹಾಗೂ ಚಾಂಪಿಯನ್‌ ಟ್ರೋಫಿ ಎತ್ತಿದ ಹೆಗ್ಗಳಿಕೆಯಿದೆ. ನವೆಂಬರ್‌ನಲ್ಲಿ ಮಂಗಳೂರಿನ ಡೋರಿಸ್‌ ಸ್ಟೇಟ್ಸ್‌ ಸಿಟಿಯಲ್ಲಿ ನಡೆದ 33ನೇ ಮುಕ್ತ ರಾಜ್ಯ ಮಟ್ಟದ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 1 ರಜತ, 1 ಕಂಚಿನ ಪದಕ ಪಡೆದ ತಕ್ಷಕ್‌ 2018ರ ಫೆ.24ರಂದು ಮಂಗಳೂರಿನ ನೀರುಮಾರ್ಗದಲ್ಲಿ  ನಡೆದ ಪ್ರಸಿಡೆನ್ಸಿ ಇಂಟರ್‌ ಸ್ಕೂಲ್‌ ಕಾಂಪಿಟೇಶನ್‌ನಲ್ಲಿ ರಜತ ಪದಕ ಪಡೆದಿದ್ದಾನೆ.

ವ್ಯಾಯಾಮಕ್ಕಾಗಿ ಸ್ಕೇಟಿಂಗ್‌
ಐದರ ಎಳೆ ವಯಸ್ಸಿನಲ್ಲಿಯೇ ತಕ್ಷಕ್‌ಅವರಿಗೆ ಸ್ಕೇಟಿಂಗ್‌ನಲ್ಲಿ ಸಾಲು ಸಾಲು ಚಿನ್ನ ಸಿಕ್ಕಿದ್ದರೂ “ಇಂತಹ ಸಾಧನೆ ಮಾಡಬೇಕೆಂದು’ ಅಂದುಕೊಂಡು ಶುರು ಮಾಡಿದ್ದಲ್ಲ. ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆದ ಅರುಣ್‌ ಅವರು ಮಂಗಳೂರಿನಲ್ಲಿ ಕನಕಾ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ನಡೆಸುತ್ತಿದ್ದು, ಪುತ್ರನಿಗೆ “ವ್ಯಾಯಾಮ ಆಗಲಿ’ ಎಂದು 2016ರ ಮೇ ತಿಂಗಳಲ್ಲಿ  ಮಂಗಳೂರಿನ ಹೈ ಫ್ಲೈಯರ್ಸ್‌ ಸ್ಕೇಟಿಂಗ್‌ ಕ್ಲಬ್‌ಗ ಸೇರಿಸಿದರು. ಅಲ್ಲಿ ಮೋಹನ್‌ದಾಸ್‌ ಕೆ. ಹಾಗೂ ಜಯರಾಜ್‌ ಅವರು ಬಾಲಕನ ಆಸಕ್ತಿ ನೋಡಿ ಅವನ ಕ್ರೀಡಾಸ್ಫೂರ್ತಿಗೆ ಇನ್ನಷ್ಟು ಪ್ರೋತ್ಸಾಹ, ನಿಖರ ತರಬೇತಿ ನೀಡಿ ಸ್ಪರ್ಧೆಗೆ ಅಣಿ ಮಾಡಿದರು.

ಅಮ್ಮನ ಬೆಂಬಲ ಹೆಚ್ಚು
“ನನಗಿಂತ ಹೆಚ್ಚು ಅವನ ಅಮ್ಮನ ಬೆಂಬಲ ಇದೆ. ನಾನು ಕಾಲೇಜು ಹಂತದಲ್ಲಿ ವಾಲಿಬಾಲ್‌ ಆಟಗಾರನಾಗಿದ್ದರೂ ಕೆಲಸದ ಒತ್ತಡದಿಂದ ಕ್ರೀಡಾ ಚಟುವಟಿಕೆ ಮುಂದುವರಿಸಲಾಗಲಿಲ್ಲ. ಆದರೆ ಪುತ್ರನ ಆಸಕ್ತಿಯನ್ನು ಪೋಷಿಸುತ್ತ ಬಂದಿದ್ದೇನೆ. ರಾಜ್ಯ ಮಟ್ಟದಲ್ಲಿ ವಿಜಯಿಯಾದರೂ 8 ವರ್ಷ ಆಗುವ ತನಕ ಆತನಿಗೆ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಆದ್ದರಿಂದ ಇನ್ನೂ 2 ವರ್ಷ ಅವಧಿ ಕಾದು ಆತನನ್ನು ರಾಷ್ಟ್ರಮಟ್ಟದ ಆಟಗಾರನಾಗಿಸಬೇಕು ಎಂಬ ಹಂಬಲ ಇದೆ’ ಎನ್ನುತ್ತಾರೆ ತಕ್ಷಕ್‌ನ ತಂದೆ ಅರುಣ್‌ ಶೆಟ್ಟಿ ಅವರು. ಇವರಿಗೆ ತನ್ಮಯ್‌ ಶೆಟ್ಟಿ ಎಂಬ ಪುತ್ರಿ ಇದ್ದಾಳೆ. 

– ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next