Advertisement

ಐದು ಕೆರೆಗಳಿದ್ದರೂ ಒಂದೂ ಉಪಯೋಗಕ್ಕೆ ಬರುತ್ತಿಲ್ಲ !

11:37 PM Feb 03, 2020 | Team Udayavani |

ಕುಂದಾಪುರ: ಈ ವಾರ್ಡ್‌ನಲ್ಲಿ ಐದು ಕೆರೆಗಳಿವೆ. ಆದರೆ ಎಲ್ಲದರಲ್ಲೂ ಹೂಳು, ಗಿಡಗಂಟಿಗಳು ಹಬ್ಬಿವೆ. ಹೂಳು ತೆಗೆದು ಸ್ವಚ್ಛಗೊಳಿಸಿದರೆ ಧಾರಾಳ ನೀರು ದೊರೆಯುವುದು ಖಚಿತ. ಈ ಬಗ್ಗೆ ಅನೇಕ ವರ್ಷಗಳಿಂದ ಜನರು ಹೇಳುತ್ತಿದ್ದರೂ ಬೇಡಿಕೆ ಮಾತ್ರ ಈಡೇರಿಲ್ಲ.

Advertisement

ವಾರ್ಡ್‌ನಲ್ಲಿ “ಸುದಿನ’ ಸುತ್ತಾಟ ಸಂದರ್ಭ ಕುಂದೇಶ್ವರ ವಾರ್ಡ್‌ನ ನಾವಡರ ಕೇರಿ, ವಿಠಲವಾಡಿ, ಬರೆಕೆರೆ, ಗಣಪತಿ ದೇವಸ್ಥಾನ ಮೊದಲಾದೆಡೆ ಜನರಿಂದ ಕೇಳಿ ಬಂದ ಸಮಸ್ಯೆಗಳಲ್ಲಿ ಪ್ರಮುಖವಾಗಿ ಕೇಳಿ ಬಂದದ್ದೇ ಕೆರೆ ಅಭಿವೃದ್ಧಿ. ಅನಂತರದ ಬೇಡಿಕೆ ರಸ್ತೆ ದುರಸ್ತಿ ಕುರಿತು.

ಐದು ಕೆರೆಗಳು
ಚಟೆRರೆ, ಹುಣಸೆಕೆರೆ, ದೊಡ್ಡಕೆರೆ, ಹಂದೆಯವರ ಕೆರೆ, ಬರೆಕಟ್ಟು ಬಳಿ ಸಣ್ಣಕೆರೆ ಹೀಗೆ ಐದು ಪ್ರಮುಖವಾದ ಕೆರೆಗಳಿವೆ. ಇವುಗಳಲ್ಲೆಲ್ಲಾ ಹೂಳು ತುಂಬಿದೆ. ನೀರಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಸನಿಹದಲ್ಲಿ ಕೃಷಿಭೂಮಿ ಇದ್ದರೂ ಅವುಗಳಿಗೆ ಪ್ರಯೋಜನಕ್ಕಿಲ್ಲ. ಕೆಲವಕ್ಕೆ ಸರಿಯಾದ ತಡೆಗೋಡೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ತುಂಬಿ ಮನೆಗಳ ಅಂಗಳ ಕೆರೆನೀರಿನಿಂದ ಆವೃತವಾಗಿರುತ್ತದೆ. ರಸ್ತೆ, ಗದ್ದೆ ಎಂದು ಕೆರೆ ನೀರಿನಿಂದ ತುಂಬಿರುತ್ತದೆ. ವಿಠಲವಾಡಿಯ ಕೆರೆ ರಸ್ತೆ ಬದಿಯೇ ಇದ್ದು ಆವರಣ ಗೋಡೆಯೂ ಇಲ್ಲ. ರಾತ್ರಿ ವೇಳೆ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳು ಆತಂಕದಿಂದ ಚಲಿಸುವಂತಾಗಿದೆ. ಜಾನುವಾರುಗಳು ಬಿದ್ದರೆ ಎನ್ನುವ ಆತಂಕ ಕೂಡಾ ಇಲ್ಲಿನವರಿಗಿದೆ.

ಆಗಬೇಕಾದ್ದೇನು?
ಕೆರೆಗಳಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಬೇಕು
ವಿಠಲವಾಡಿಯ ಕೆರೆಗೆ ಆವರಣಗೋಡೆ
ಪ್ರಸನ್ನ ಗಣಪತಿ ದೇವಸ್ಥಾನದ ರಸ್ತೆ ಅಭಿವೃದ್ಧಿ

ತೋಡು ಸರಿಪಡಿಸಿ
ಗಾಂಧಿ ಮೈದಾನದಿಂದ ಜೆಎಲ್‌ಬಿ ರಸ್ತೆ ಮೂಲಕ ವಿಠಲವಾಡಿಯಾಗಿ ಒಂದು ತೋಡು ಹೋಗುತ್ತದೆ. ಗಾಂಧಿ ಮೈದಾನ ಕಡೆಯಿಂದ, ರಾಷ್ಟ್ರೀಯ ಹೆದ್ದಾರಿಯಿಂದ ಬರುವ ನೀರು ಇದರಲ್ಲೇ ಹೋಗಬೇಕು. ಆದರೆ ಇದಿನ್ನೂ ಪೂರ್ಣವಾಗಿ ದುರಸ್ತಿಯಾಗದ ಕಾರಣ ಮಳೆಗಾಲದಲ್ಲಿ ಸದಾ ಸಮಸ್ಯೆ ತಂದೊಡ್ಡುತ್ತಿದೆ. ಇದರ ದುರಸ್ತಿಗೂ ಸ್ಥಳೀಯರ ಒತ್ತಾಯವಿದೆ. ಹೊಳೆ ದಂಡೆ ಒಡೆದು ಮಳೆಗಾಲದಲ್ಲಿ ನೀರೆಲ್ಲ ಮನೆಗಳಿಗೆ ನುಗ್ಗುವ ತಾಪತ್ರಯ ಕಳೆದ ಮಳೆಗಾಲದಲ್ಲೂ ಇತ್ತು ರಸ್ತೆ ಕಥೆ ನಾವಡರ ಕೇರಿಯ ಪ್ರಸನ್ನ ಗಣಪತಿ ದೇವಸ್ಥಾನದ ರಸ್ತೆಯನ್ನು 14ನೇ ಹಣಕಾಸು ಯೋಜನೆಯಡಿ 4 ಲಕ್ಷ ರೂ. ಕಾಮಗಾರಿಯಲ್ಲಿ ಅಭಿವೃದ್ಧಿ ಮಾಡಲಾಗಿದ್ದು ಇಲ್ಲಿಂದ ಶಕ್ತಿಕೃಪಾ ಹಾಲ್‌ತನಕ 11.5 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯಲಿದೆ. ಗಣಪತಿ ದೇವಸ್ಥಾನ ಬಳಿ ಮದಗವೊಂದಕ್ಕೆ ಪುರಸಭೆಯಿಂದ 4.5 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಟ್ಟಲಾಗಿದೆ.

Advertisement

ಇಲ್ಲದಿದ್ದರೆ ಮದಗ
ತುಂಬಿದರೆ ಮನೆಯೊಳಗೆ ನೀರು ನುಗ್ಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ದೇವಸ್ಥಾನದ ಹಿಂದಿನ ರಸ್ತೆಯೊಂದು ಜೆಎಲ್‌ಬಿ ರಸ್ತೆಯನ್ನು ಸಂಪರ್ಕಿಸುತ್ತದೆ. ಇದಕ್ಕೆ 20 ಲಕ್ಷ ರೂ. ಅನುದಾನ ಇಡಲಾಗಿತ್ತು. ಆದರೆ ಯುಜಿಡಿ ಕಾಮಗಾರಿ ಮಾಡಿದ ಮೇಲೆ ರಸ್ತೆ ಅಭಿವೃದ್ಧಿಪಡಿಸಿದರೆ ಉತ್ತಮ ಎಂದು ಕಾಮಗಾರಿ ನಡೆಸಲಿಲ್ಲ. ಯುಜಿಡಿ ನಡೆಯಲಿಲ್ಲ, ರಸ್ತೆ ಅಭಿವೃದ್ಧಿ ಆಗಲಿಲ್ಲ, ಅನುದಾನ ಮರಳಿ ಹೋಯಿತು. ಇನ್ನು ಹೊಸದಾಗಿ ಅನುದಾನ ಇಡಬೇಕಿದೆ.

ದುರಸ್ತಿ
ಈ ವಾರ್ಡ್‌ನ ಅಷ್ಟೂ ಕೆರೆಗಳನ್ನು ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಬೇಡಿಕೆ ಇಡುತ್ತಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 60 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ 4 ಕೆರೆಗಳನ್ನು ಹೂಳೆತ್ತಿಸಿ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. ಚಟೆRರೆ ಹಾಗೂ ಗಣಪತಿ ದೇವಸ್ಥಾನ ಬಳಿಯ ದೊಡ್ಡಕೆರೆ ಅಭಿವೃದ್ಧಿಗೆ ತಲಾ 25 ಹಾಗೂ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮನವಿ ಮಾಡಿದ್ದಾರೆ. ಈ ಕುರಿತು ಸದಸ್ಯ ಗಿರೀಶ್‌ ಜಿ.ಕೆ. ಅವರು ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಸಚಿವರ ಮನವಿಗೆ ಇಲಾಖೆ ಇನ್ನೂ ಸ್ಪಂದಿಸಿದಂತಿಲ್ಲ. ಈ ಮಧ್ಯೆಯೇ ಕೆಲವು ಕೆರೆಗಳ ಒತ್ತುವರಿ ಕೂಡಾ ಸದ್ದಿಲ್ಲದೇ ನಡೆದಿದೆ. 15,20 ಸೆಂಟ್ಸ್‌ನ ಕೆರೆಯ ವಿಸ್ತಾರ ಒಂದೆರಡು ಸೆಂಟ್ಸ್‌ಗೆ ಇಳಿಯುತ್ತಿದೆ.

ಹೇಳಿದರೂ ಆಗಲಿಲ್ಲ
ಕೆರೆಗಳ ಅಭಿವೃದ್ಧಿಗೆ ಎಷ್ಟೇ ಬಾರಿ ಹೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ಇವುಗಳಲ್ಲಿ ಧಾರಾಳ ನೀರಿದೆ. ಅಂತರ್ಜಲ ಅಭಿವೃದ್ಧಿಯಾದರೆ ಹಾಗೂ ಸ್ಥಳೀಯ ಇತರ ಉಪಯೋಗಕ್ಕೆ ದೊರೆಯುತ್ತದೆ.
– ನಾರಾಯಣ ನಾಯ್ಕ, ವಿಠಲವಾಡಿ

ವ್ಯರ್ಥ ಕಾಮಗಾರಿ
ನಮ್ಮ ಮನೆ ಸಮೀಪ ಹಂದೆಯವರ ಕೆರೆಯಲ್ಲಿ ಬಾವಿತೋಡಿ ಪಂಪ್‌ ಹಾಕಲಾಯಿತು. ಸ್ವಲ್ಪ ಸಮಯ ಟ್ಯಾಂಕ್‌ಗೆ ನೀರು ಹರಿಸಿದರು. ಆದರೆ ಈಗ ಏನೇನೂ ಉಪಯೋಗಕ್ಕೆ ದೊರೆಯುತ್ತಿಲ್ಲ.
– ಪ್ರವೀಣ್‌ ಹಂದೆ, ವಿಠಲವಾಡಿ

ಕುಂದೇಶ್ವರ ವಾರ್ಡ್‌ ಅನುದಾನ ಇಲ್ಲ
ಸದಸ್ಯರಿಗೆ ಅಧಿಕಾರ ಇನ್ನೂ ದೊರೆತಿಲ್ಲ ಎನ್ನುವುದಕ್ಕಿಂತ ಮುಖ್ಯ ಅನುದಾನದ ಕೊರತೆ. ಒಟ್ಟು ಪುರಸಭೆಗೆ ಅನುದಾನದ ಕೊರತೆಯಿದೆ. ಅಭಿವೃದ್ಧಿಗೆ ಸಾಲುತ್ತಿಲ್ಲ. ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರ ನಿಧಿ ಕೂಡಾ ಪುರಸಭೆ ವ್ಯಾಪ್ತಿಗೆ ಬಳಕೆಗೆ ದೊರೆತರೆ ಅನುಕೂಲ.
– ಗಿರೀಶ್‌ ಜಿ.ಕೆ,
ಸದಸ್ಯರು, ಕುಂದೇಶ್ವರ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next