Advertisement

ಮೂರು ಪ್ರತ್ಯೇಕ ಅಪಘಾತಗಳಲ್ಲಿ ಐವರ ಸಾವು

12:50 AM Dec 16, 2019 | Team Udayavani |

ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬೆಳ್ತಂಗಡಿಯ ಮಂಜೊಟ್ಟಿ ಮತ್ತು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ.

Advertisement

ಮಂಜೇಶ್ವರ: ಬಸ್‌- ಬೈಕ್‌ ಢಿಕ್ಕಿ; ಇಬ್ಬರ ಸಾವು
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ಕರೋಡಾ ಬಳಿ ರವಿವಾರ ಸಾಯಂಕಾಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಹಾಗೂ ಬೈಕ್‌ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಕಾಸರಗೋಡು ಕೂಡ್ಲು ರಾಮದಾಸ ನಗರದ ಪಚ್ಚೆಕಾಡು ನಿವಾಸಿ ಶಿವಾನಂದ ಅವರ ಪುತ್ರ ಜಗದೀಶ್‌ (22) ಹಾಗೂ ಮಂಜೇಶ್ವರ ಕಣ್ಣಿಗುಡ್ಡೆ ನಿವಾಸಿ ಕುಶಲ ಅವರ ಪುತ್ರ ಸುನಿಲ್‌ (21) ಮೃತಪಟ್ಟವರು.

ಅವರು ಪಲ್ಸರ್‌ ಬೈಕಿನಲ್ಲಿ ಮಂಗಳೂರು ಭಾಗದಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಕರೋಡಾ ಬಳಿ ಬರುತ್ತಿದ್ದಂತೆ ಬೈಕ್‌ ಸ್ಕಿಡ್‌ ಆಯಿತು. ರಸ್ತೆಯ ಮೇಲೆ ಉರುಳಿದ ಅವರಿಬ್ಬರ ಮೇಲೆ ಕಾಸರಗೋಡಿ ನಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಲಿಸಿತು. ಪರಿಣಾಮ ಬೈಕ್‌ ಚಲಾಯಿಸುತ್ತಿದ್ದ ಜಗದೀಶ್‌ ಸ್ಥಳದಲ್ಲೇ ಮೃತಪಟ್ಟರು. ಅವರ ಮೃತ ದೇಹ ಛಿದ್ರವಾಗಿದೆ.

ಹಿಂಬದಿ ಸವಾರ ಸುನಿಲ್‌ ತೀವ್ರವಾಗಿ ಗಾಯಗೊಂಡರು. ಅವರನ್ನು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಆಸ್ಪತ್ರೆ ತಲುಪುವ ಮೊದಲೇ ಕೊನೆಯು ಸಿರೆಳೆದರು.ಇಬ್ಬರೂ ಹೆಲ್ಮೆಟ್‌ ಧರಿಸಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಆಪ್ತ ಸ್ನೇಹಿತರು
ಜಗದೀಶ್‌ ಕಾಸರಗೋಡು ಹೊಸ ಬಸ್‌ ನಿಲ್ದಾಣದ ಬಳಿ ಮೊಬೈಲ್‌ ಅಂಗಡಿಯೊಂದರಲ್ಲಿ ಟೆಕ್ನಿಶಿಯನ್‌ ಆಗಿದ್ದು, ಸುನಿಲ್‌ ಪೈಂಟಿಂಗ್‌ ವೃತ್ತಿ ಮಾಡುತ್ತಿದ್ದರು. ಇವರಿಬ್ಬರೂ ಆಪ್ತಮಿತ್ರ ರಾಗಿದ್ದು, ರವಿವಾರ ರಜೆಯಾದ ಕಾರಣ ಮಂಗಳೂರಿಗೆ ತೆರಳಿದ್ದರು. ಜಗದೀಶ್‌ ಅವರು ತಂದೆ ಶಿವಾನಂದ, ತಾಯಿ ಶಾಂತಾ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸುನಿಲ್‌ ಅವರು ತಂದೆ ಕುಶಲ, ತಾಯಿ ಉಷಾ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಸ್ಕೂಟರ್‌ ಮಗುಚಿ ಬಿದ್ದು ಓರ್ವ ಸಾವು
ಮೂಡುಬಿದಿರೆ: ನಾಯಿಯೊಂದು ಸ್ಕೂಟರ್‌ಗೆ ಅಡ್ಡ ಬಂದು ಸ್ಕೂಟರ್‌ ಪಲ್ಟಿಯಾದ ಕಾರಣ ಹಿಂಬದಿ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಶಿರ್ತಾಡಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.

ಗಂಟಾಲ್‌ಕಟ್ಟೆ ನಿವಾಸಿ ಅರುಣ್‌ ಪಿರೇರ (44) ಮೃತಪಟ್ಟವರು.ಅವರು ತನ್ನ ಸಂಬಂಧಿ, ಕೃಷಿಕ ಅರುಣ್‌ ಸುನಿಲ್‌ ಪಿರೇರ ಅವರ ಜತೆ ಶಿರ್ತಾಡಿಯಿಂದ ಮೂಡುಬಿದಿರೆಗೆ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಬರುತ್ತಿದ್ದರು. ಅಪಘಾತದಲ್ಲಿ ತಲೆಗೆ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು ಎನ್ನಲಾಗಿದೆ.
ಅರುಣ್‌ ಅವರ ಪತ್ನಿ ದಿವ್ಯಾ ಪಿರೇರ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಂಜೊಟ್ಟಿ: ಪಿಕಪ್‌-ಬೈಕ್‌ ಢಿಕ್ಕಿ; ಇಬ್ಬರ ಸಾವು
ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಮಂಜೊಟ್ಟಿಯಲ್ಲಿ ರವಿ ವಾರ ಬೈಕ್‌ಗೆ ಪಿಕ್‌ಅಪ್‌ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಮೃತಪಟ್ಟಿ ದ್ದಾರೆ.

ನಾವೂರು ಭೀಮಂಡೆ ನಿವಾಸಿ ಸೇಸಪ್ಪ ಮೂಲ್ಯ (44) ಮತ್ತು ಅವರ ಸಂಬಂಧಿ ನಾವೂರು ಜನತಾ ಮನೆ ನಿವಾಸಿ ಕಲ್ಯಾಣಿ (55) ಮೃತಪಟ್ಟವರು.

ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ನಾವೂರು ಕಡೆಗೆ ಹೋಗುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಪಿಕಪ್‌ ಢಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಸವಾರ ಸೇಸಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಕಲ್ಯಾಣಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಸೇಸಪ್ಪ ಅವರು ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದರು. ಅವರ ಪತ್ನಿ ಗರ್ಭಿಣಿ ಯಾಗಿದ್ದು ವಾರದ ಹಿಂದೆಯಷ್ಟೇ ಸೀಮಂತ ಕಾರ್ಯಕ್ರಮ ನಡೆದಿತ್ತು. ರವಿವಾರ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಕಲ್ಯಾಣಿ ಅವರೊಂದಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿತು.ಸೇಸಪ್ಪ ಅವರು ಪತ್ನಿಯನ್ನು ಅಗಲಿದ್ದಾರೆ. ಕಲ್ಯಾಣಿ ಅವರ ಪತಿ ಈ ಹಿಂದೆಯೇ ನಿಧನಹೊಂದಿದ್ದು, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಐದೇ ನಿಮಿಷ ಬಾಕಿ!
ಸೇಸಪ್ಪ ಅವರ ಮನೆಗೆ ಅಪಘಾತ ಸ್ಥಳದಿಂದ ಕೆಲವೇ ಕಿ.ಮೀ.ಗಳಿದ್ದು ಐದು ನಿಮಿಷಗಳಾಗಿದ್ದರೆ ಮನೆಗೆ ತಲುಪವವರಿದ್ದರು. ಈ ಮಧ್ಯೆ ಅಪಘಾತ ಸಂಭವಿಸಿದೆ. ಪಿಕಪ್‌ ವಾಹನ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next