Advertisement

ಮೀನು, ಗಿಡುಗ ಮತ್ತು ನಾವು

11:45 PM Jul 15, 2019 | Sriram |

ಲೇಖಕರ ಪರಿಚಯ
ಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲಾéವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ  ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ ಸದ ಸ್ಯರಾಗಿರುವ ರಾಧಾನಾಥ ಸ್ವಾಮೀಜಿಗಳು ಆ ಸಂಸ್ಥೆಯ ಮಧ್ಯಾಹ್ನದ ಊಟ ಯೋಜನೆಗೆ ಪ್ರೇರಣೆಯಾದವರು. ಮುಂಬೈ ಯಲ್ಲಿ “ಭಕ್ತಿವೇದಾಂತ ಆಸ್ಪತ್ರೆ’ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಪ್ರಸಕ್ತ-ಭಾರತ, ಅಮೆರಿಕ ಮತ್ತು ಯುರೋಪಿಯನ್‌ ರಾಷ್ಟ್ರಗಳಿಗೆಲ್ಲ ಪಯಣಿಸಿ ಬೋಧಿಸುತ್ತಾರೆ.

Advertisement

ಕೆಲವು ವರ್ಷಗಳ ಹಿಂದಿನ ಘಟನೆಯಿದು. ನಾನು ಗಂಗಾನದಿಯ ತಟದಲ್ಲಿ ಕುಳಿತಿದ್ದೆ. ಅದು ಬೇಸಿಗೆಗಾಲ ಬೇರೆ. ಹೀಗಾಗಿ, ಬಿಸಿಲು 40-43 ಡಿಗ್ರಿಯಷ್ಟಿತ್ತು. ಬಿಸಿಲಿನ ತಾಪಕ್ಕೆ ಬಳಲಿದ್ದ ಕಾರಣದಿಂದ ನನ್ನ ದೇಹ ನೀರಿಗೆ ಇಳಿಯಲು ಹಾತೊರೆಯುತ್ತಿತ್ತು. ಆದರೆ ಅದಕ್ಕೂ ಮುನ್ನ ಕೆಲ ನಿಮಿಷಗಳವರೆಗೆ ಧ್ಯಾನ ಮಾಡಬೇಕೆಂದು ನಿಶ್ಚಯಿಸಿ ಪ್ರಶಸ್ತ ಸ್ಥಳಕ್ಕಾಗಿ ಸುತ್ತಲೂ ತಿರುಗಿ ನೋಡಿದೆ. ಒಬ್ಬೇ ಒಬ್ಬ ವ್ಯಕ್ತಿಯೂ ಕಾಣಲಿಲ್ಲ. ಆಕಾಶದಲ್ಲಿ ಒಂದೇ ಒಂದು ಮೋಡವೂ ಇರಲಿಲ್ಲ.

ಅಷ್ಟರಲ್ಲೇ ನನ್ನ ಮೇಲೆ ಹಕ್ಕಿಯ ನೆರಳೊಂದು ಹಾದು ಹೋಯಿತು. ಕತ್ತೆತ್ತಿ ನೋಡಿದರೆ, ನೀಲಾಕಾಶದಲ್ಲಿ ಬೃಹತ್‌ ಗಿಡುಗವೊಂದು ರೆಕ್ಕೆ ಪಢಪಢಿಸುತ್ತಾ ಹಾರುತ್ತಿತ್ತು. ಅದರ ಕಂದು ಬಣ್ಣದ, ದೈತ್ಯ ರೆಕ್ಕೆಗಳು ಬಿಸಿಲಿಗೆ ಹೊಳೆಯುತ್ತಿದ್ದವು. ಅದು ತನ್ನ ತೀಕ್ಷ್ಣ ನೋಟಗಳಿಂದ ಕೆಳಕ್ಕೆ ದಿಟ್ಟಿಸುತ್ತಾ, ನನ್ನಿಂದ 15-20 ಅಡಿಯ ಮೇಲಕ್ಕೆ ಗಿರಕಿ ಹೊಡೆಯಲಾರಂಭಿಸಿತು. ವೃತ್ತಾಕಾರದಲ್ಲಿ ಹಾರುತ್ತಾ ಆ ಗಿಡುಗ ನಿಧಾನಕ್ಕೆ ಕೆಳಬರಲಾರಂಭಿಸಿತು, ನಾನು ಅದನ್ನೇ ನೋಡುತ್ತಾ ಕುಳಿತುಬಿಟ್ಟೆ. ಆ ಗಿಡುಗ ನನ್ನನ್ನೇ ದಿಟ್ಟುಸುತ್ತಿದೆಯೇನೋ ಎಂದು ನನಗೆ ಕ್ಷಣಕಾಲ ಆತಂಕವಾಯಿತು. ಅಷ್ಟರಲ್ಲೇ ಅದು ಸರ್‌ರ್‌ರ್‌ ಎಂದು ಗುಂಡಿನ ವೇಗದಲ್ಲಿ ಕೆಳಕ್ಕೆ ಬರಲಾರಂಭಿಸಿತು. ದಿಗಿಲಾಗಿ ನಾನು ದೇವರನ್ನು ಪ್ರಾರ್ಥಿಸಲಾರಂಭಿಸಿದೆ! ಆದರೆ ಆ ಗಿಡುಗ ನೇರವಾಗಿ ನನ್ನಿಂದ ಕೆಲವೇ ಅಡಿಗಳ ದೂರದಲ್ಲಿ ನದಿಗೆ ಧುಮುಕಿಬಿಟ್ಟಿತು. ನದಿಯ ನೀರಲ್ಲಿ ಕೆಲ ಕ್ಷಣ ಕೋಲಾಹಲವೆದ್ದಿತು. ಕ್ಷಣಾರ್ಧದಲ್ಲಿ ಅದು ನದಿಯಿಂದ ಮೇಲಕ್ಕೆ ಚಿಮ್ಮಿತು. ನೋಡಿದರೆ, ಅದರ ಬಲಿಷ್ಠ ಇಕ್ಕಳದಂತಹ ಪಂಜದಲ್ಲಿ ಅಜಮಾಸು 1 ಅಡಿ ಉದ್ದದ ಮೀನಿತ್ತು. ತೀರಾ ಸನಿಹದಲ್ಲೇ ಇದೆಲ್ಲಾ ಆದ ಕಾರಣ ಆ ಮೀನಿನ ಒದ್ದಾಟ ಸ್ಪಷ್ಟವಾಗಿ ಕಾಣಿಸಿತು. ಗಿಡುಗನ ಬಲಿಷ್ಠ ಪಂಜಗಳಿಂದ ಬಿಡಿಸಿಕೊಳ್ಳಲು ಮೀನು ವಿಪರೀತ ಪರದಾಡಲಾರಂಭಿಸಿತು. ಅದನ್ನು ನೋಡಿದ್ದೇ ನನಗೆ ಯೋಚನೆ ಆರಂಭವಾಯಿತು. ಬಹುಶಃ ತನ್ನ ಬದುಕು ಹೀಗೆ ಅಂತ್ಯವಾಗುತ್ತದೆ ಅಂತ ಆ ಪುಟ್ಟ ಮೀನು ಕನಸುಮನಸಲ್ಲೂ ಯೋಚಿಸಿರಲಿಲ್ಲವೇನೋ. ಎಂದಿನಂತೆಯೇ ಅಂದೂ ಕೂಡ ತಾನು ಪ್ರವಾಹಕ್ಕೆ ವಿರುದ್ಧವಾಗಿಯೋ, ಹರಿವಿಗೆ ತಕ್ಕಂತೆಯೋ ಈಜುತ್ತಾ, ಆಹಾರವನ್ನು ಹುಡುಕುತ್ತಾ ತನ್ನ ಕುಟುಂಬದ ಸದಸ್ಯರೊಡನೆ ಆಟವಾಡುತ್ತಾ ಇರಬಹುದೆಂದು ಅದರ ಅಂದಾಜಾಗಿತ್ತೆನಿಸುತ್ತದೆ. ಆದರೆ, ಅತ್ಯಂತ ಅನಿರೀಕ್ಷಿತ ಕ್ಷಣವೊಂದರಲ್ಲಿ ಮೇಲಿಂದ ಹಾರಿಬಂದ ಗಿಡುಗವೊಂದು ಈ ಮೀನಿನ ಬದುಕನ್ನೇ ಛಿದ್ರಗೊಳಿಸಿಬಿಟ್ಟಿತು. ಆ ಗಿಡುಗನಿಂದ ತಪ್ಪಿಸಿಕೊಳ್ಳುವ ವಿಫ‌ಲ ಪ್ರಯತ್ನ ಮಾಡುತ್ತಾ ಮೀನು ಒದ್ದಾಡುತ್ತಲೇ ಇತ್ತು. ನಿಧಾನಕ್ಕೆ ಗಿಡುಗ ಈ ಮೀನನ್ನು ಎತ್ತಿಕೊಂಡು ಎತ್ತರೆತ್ತರಕ್ಕೆ ಹಾರುತ್ತಾ ಕಾಡಿನೊಳಗೆ ಮಾಯವಾಗಿಬಿಟ್ಟಿತು. ಇದನ್ನೆಲ್ಲ ನೋಡುತ್ತಿದ್ದ ನಾನು, ಈ ಘಟನೆಯಿಂದ ನಾನೇನು ಕಲಿಯಬಹುದು ಎಂದು ಯೋಚಿಸತೊಡಗಿದೆ…

ಪಾಠ ಸರಳವಾಗಿತ್ತು. ನಮ್ಮ ಬದುಕಲ್ಲಿ ಆ ಗಿಡುಗನಂತೆಯೇ ಯಾವುದೋ ಋಣಾತ್ಮಕ ಸಂಗತಿಯೊಂದು ನಮ್ಮಿಂದ ನೆಮ್ಮದಿಯನ್ನು ಎತ್ತಿಕೊಂಡು ಹೋಗಿಬಿಡಬಹುದು. ಒಂದುವೇಳೆ ಆ ಮೀನೇನಾದರೂ ಇನ್ನಷ್ಟು ಆಳದಲ್ಲಿ ಈಜುತ್ತಿತ್ತು ಎಂದರೆ, ಗಿಡುಗನಿಗೆ ಅಷ್ಟು ಆಳಕ್ಕೆ ಮುಳುಗಲು ಸಾಧ್ಯವಾಗುತ್ತಲೇ ಇರಲಿಲ್ಲ. ಅದೇ ರೀತಿಯಲ್ಲಿಯೇ ಯಾವಾಗ ನಾವು ನಮ್ಮ ಗುರಿಯನ್ನು, ನೆಮ್ಮದಿಯನ್ನು, ಸಂಬಂಧಗಳನ್ನು ಬಹಳ ಆಳವಾದ ಸ್ತರದಲ್ಲಿ ಕೊಂಡೊಯ್ಯುತ್ತೀವೋ ಆಗ ಯಾವ ಋಣಾತ್ಮಕ ಸಂಗತಿಗಳೆಂಬ ಗಿಡುಗಗಳೂ ಅವನ್ನು ತಲುಪಲಾರವು.

ಪುಟ್ಟ ಹುಡುಗ ಮತ್ತು ಮಂಗಗಳು!
ಒಮ್ಮೆ ನಾನು ನೇಪಾಳದ ಬೌದ್ಧನಾಥ ಮಂದಿರಕ್ಕೆ ಹೋಗಿದ್ದೆ. ಒಂದು ದಿನ ಅಲ್ಲಿನ ಹೂವಿನ ಮರವೊಂದರ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದಾಗಲೇ ಹಠಾತ್ತನೆ ಜೋರಾಗಿ ಯಾರೋ ನನ್ನತ್ತ ನುಗ್ಗಿಬರುತ್ತಿರುವ ಸದ್ದಾಯಿತು. ಅರೆ ಜಾಗೃತ-ಸ್ವಪ್ನಾವಸ್ಥೆಯಲ್ಲಿದ್ದ ನಾನು ಹಠಾತ್ತನೆ ಕಣ್ಣಿಬಿಟ್ಟು ನೋಡಿದೆ. ನನ್ನ ಮುಂದೆಯೇ 6 ಅಡಿಗೂ ಎತ್ತರದ, ಕೆಂಚು ಕೂದಲಿನ-ದಷ್ಟಪುಷ್ಟ ಯುರೋಪಿಯನ್‌ ಪ್ರವಾಸಿಯೊಬ್ಬ ನಡೆದು ಹೊರಟಿದ್ದ. ವೃತ್ತಿಪರ ಬಾಡಿಬಿಲ್ಡರ್‌ಗಳನ್ನು ಹೋಲುವಂಥ ದೇಹ ಅವನದ್ದಾಗಿತ್ತು. ಅವನ ಬಲಿಷ್ಠ ತೋಳುಗಳು ಟೀಶರ್ಟ್‌ ಅನ್ನು ಹರಿಯುವಷ್ಟು ಗಟ್ಟಿಯಾಗಿದ್ದವು. ನನ್ನತ್ತ ನೋಡಿ ಮುಗುಳ್ನಗೆ ಬೀರಿ ಅವನು ಮುಂದೆ ಹೊರಟ. ಆ ಬೃಹತ್‌ ಕಾಯನ ಕೈಯಲ್ಲಿನ ಚೀಲದತ್ತ ನನ್ನ ಗಮನ ಹೋಯಿತು. ಅದರ ತುಂಬೆಲ್ಲ ಹಣ್ಣು-ಹಂಪಲುಗಳಿದ್ದವು. ಅವನು ನಾಲ್ಕು ಹೆಜ್ಜೆ ಮುಂದೆ ಹೋಗಿದ್ದನೋ ಇಲ್ಲವೋ ಅಷ್ಟರಲ್ಲಿ ಮರಗಳ‌ಲ್ಲಿ ಗದ್ದಲ ಆರಂಭವಾಯಿತು. ನೋಡನೋಡುತ್ತಿದ್ದಂತೆಯೇ, ಮೂರು ಮಂಗಗಳು ಪ್ರತ್ಯಕ್ಷವಾಗಿ ಕಿರುಚುತ್ತಾ ಆ ವ್ಯಕ್ತಿಯನ್ನು ಸುತ್ತುವರಿದವು. ಆ ಯುವಕನ ಗಾತ್ರದ ಮುಂದೆ ಈ ಕೆಂಪು ಮೂತಿಯ ಮಂಗಗಳೆಲ್ಲ ಚಿಕ್ಕ ಆಟಿಕೆಗಳಂತೆ ಕಾಣುತ್ತಿದ್ದವಾದರೂ, ಎದೆಯಲ್ಲಿ ಒಂದಿಷ್ಟೂ ಹೆದರಿಕೆಯಿಲ್ಲದೇ ಅವನನ್ನು ಬೆದರಿಸಲು, ಅವನ ಕೈಯಲ್ಲಿನ ವಸ್ತುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಲಾರಂಭಿಸಿದವು.

Advertisement

ಯುವಕ ಬೆದರಿಬಿಟ್ಟ, ತನ್ನ ಬಲಿಷ್ಠ ತೋಳಲ್ಲಿ ಹಣ್ಣಿನ ಚೀಲವನ್ನು ಬಿಗಿಯಾಗಿ ಒತ್ತಿ ಹಿಡಿದು ಇನ್ನೊಂದು ಕೈಯಲ್ಲಿ ಬೃಹತ್‌ ಕಲ್ಲೊಂದನ್ನು ಎತ್ತಿಕೊಂಡು, ಅವುಗಳಿಗಿಂತ ಜೋರಾಗಿ ಕಿರುಚುತ್ತಾ ಆ ವಾನರ ಸೇನೆಯನ್ನು ಓಡಿಸಲು ಕೈಬೀಸತೊಡಗಿದ. ಆದರೆ ಮಂಗಗಳು ಹಿಂಜರಿಯಲಿಲ್ಲ, ಅವನ ಕೈಯಲ್ಲಿ ಕಲ್ಲಿನ ಬದಲು ಹಣ್ಣಿದೆಯೇನೋ ಎಂಬಂತೆ, ತಮ್ಮ ಚೂಪು ಹಲ್ಲುಗಳನ್ನು ಕಿರಿಯುತ್ತಾ ನಿಧಾನಕ್ಕೆ ಅವನಿಗೆ ಹತ್ತಿರವಾಗಲಾರಂಭಿಸಿದವು. ಅವನು ತತ್ತರಿಸಿಹೋದ. ಮೂರ್ತಿಯಂತೆ ಸ್ತಂಭೀಭೂತನಾಗಿ ನಿಂತುಬಿಟ್ಟ. ಆತ ಹೆದರಿದ್ದಾನೆ ಎಂಬ ಸುಳಿವು ಸಿಗುತ್ತಲೇ ಆ ಗುಂಪಿನಲ್ಲಿದ್ದ ಚಿಕ್ಕ ಮಂಗವೊಂದು ನಿಧಾನಕ್ಕೆ ಅವನ ಬಳಿ ಸಾಗಿತು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅವನ ಕೈಯಲ್ಲಿದ್ದ ಚೀಲಕ್ಕೆ ಕೈ ಹಾಕಿತು. ಅಚ್ಚರಿಯೆಂಬಂತೆ ಒಂದಿಷ್ಟೂ ಪ್ರತಿರೋಧ ತೋರದೇ ಈ ಚೀಲವನ್ನು ಅದರ ಕೈಗೊಪ್ಪಿಸಿಬಿಟ್ಟ ಆ ಯುವಕ. ಮಂಗಗಳು ಅವನೆದುರೇ ಆ ಚೀಲವನ್ನು ಕೆಳಕ್ಕೆಸೆದು ನಿಶ್ಚಿಂತೆಯಿಂದ ಅದರಲ್ಲಿದ್ದ ಆಹಾರವನ್ನು ಸವಿಯಲಾರಂಭಿಸಿದವು. ಆಗ ಅವನ ದೃಷ್ಟಿ ಇದನ್ನು ನೋಡುತ್ತಾ ಕುಳಿತ ನನ್ನತ್ತ ಬಿತ್ತು, ಅವನು ನಾಚಿಕೆಯಿಂದ ನಿಧಾನಕ್ಕೆ ಅಲ್ಲಿಂದ ಪೇಚಾಡುತ್ತಾ ಕಾಲ್ಕಿತ್ತ.

ಕೆಲವೇ ಕ್ಷಣಗಳಲ್ಲಿ ಸುಮಾರು 8 ವರ್ಷದ ಹುಡುಗನೊಬ್ಬ ಅಲ್ಲಿಗೆ ಬಂದ. ತೆಳುಕಾಯದ ಈ ಹುಡುಗ ನಿಧಾನಕ್ಕೆ ಒಂದು ಚಿಕ್ಕ ಕಲ್ಲನ್ನು ಎತ್ತಿಕೊಂಡು ಮಂಗಗಳತ್ತ ನಡೆದ. ಇವನನ್ನು ನೋಡಿದ್ದೇ, ಮಂಗಗಳು ಹೆದರಿ ತತ್ತರಿಸಿಬಿಟ್ಟವು. ಅವುಗಳ ಕಣ್ಣುಗಳಲ್ಲಿ ಅತೀವ ಭಯ ಕಂಡಿತು. ತಮ್ಮ ಕೈಯಲ್ಲಿದ್ದ ಹಣ್ಣನ್ನೆಲ್ಲ ಅಲ್ಲೇ ಎಸೆದು ದಿಕ್ಕಾಪಾಲಾಗಿ ಓಡಿಬಿಟ್ಟವು. ಆ ಹುಡುಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣ್ಣುಗಳಲ್ಲಿ ಒಂದೆರಡನ್ನೆತ್ತಿಕೊಂಡು ಅಲ್ಲೇ ಕುಳಿತು ಸವಿಯತೊಡಗಿದ. ಮರವೇರಿ ಕುಳಿತಿದ್ದ ಮಂಗಗಳು ಕಿರುಚುತ್ತಲೇ ಗೋಣು ಅತ್ತಿತ್ತ ಮಾಡುತ್ತಾ ಹುಡುಗನನ್ನು ದಿಟ್ಟಿಸುತ್ತಿದ್ದವು.

ನನಗೆ ಇದನ್ನೆಲ್ಲ ನೋಡಿ ಅಚ್ಚರಿಯೋ ಅಚ್ಚರಿ. ಈ ಹುಡುಗನ ಭಾರ ಆ ಯುರೋಪಿಯನ್‌ ಯುವಕನ ಬಲಿಷ್ಠ ತೋಳಿಗಿಂತಲೂ ಕಡಿಮೆಯಿತ್ತು. ಇವನನ್ನು ಒಂದೇ ಏಟಿಗೆ ಕೆಳಕ್ಕೆ ಕೆಡವಷ್ಟು ಶಕ್ತಿಯೂ ಆ ಮಂಗಗಳಿಗಿತ್ತು. ಆದರೆ ಆ ಅಜಾನುಬಾಹು ಯುವಕನಿಗೆ ಬೆದರದ ಮಂಗಗಳು, ಈ ಪುಟ್ಟ ಹುಡುಗನನ್ನು ನೋಡಿ ತತ್ತರಿಸಿಹೋಗಿದ್ದವು. ಏಕೆ ಹೀಗಾಯಿತು? ಏಕೆಂದರೆ, ಆ ಹುಡುಗನಿಗೆ ತಮ್ಮನ್ನು ಕಂಡರೆ ಭಯವಿಲ್ಲ ಎನ್ನುವುದು ಅವನ ನಡುಗೆ, ದೃಢ ನಿಲುವು, ಅವನ ದೃಷ್ಟಿಯನ್ನು ನೋಡಿ ಮಂಗಗಳು ಅರ್ಥಮಾಡಿಕೊಂಡಿದ್ದವು. ಆದರೆ ಯುರೋಪಿಯನ್‌ ಯುವಕನ ನಿಲುವು, ಅವನ ಕಿರುಚಾಟದಲ್ಲೇ ಅವನು ತುಂಬಾ ಹೆದರಿದ್ದಾನೆ ಎನ್ನುವುದನ್ನು ಅವು ಗುರುತಿಸಿಬಿಟ್ಟವು. ಯಾವಾಗ ನಾವು ಭಯಕ್ಕೆ ಶರಣಾಗುತ್ತೇವೋ, ಆಗ ಸೋಲುವ ಸಾಧ್ಯತೆ ದ್ವಿಗುಣಗೊಂಡುಬಿಡುತ್ತದೆ.

ಆ ವಿದೇಶಿ ಯುವಕನಿಗೆ ಮಂಗಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅವುಗಳ ಸಾಮರ್ಥ್ಯವನ್ನು-ಶಕ್ತಿಯನ್ನು ಅವನು ಅತಿ ಉತ್ಪ್ರೇಕ್ಷೆ ಮಾಡಿ ಅಂದಾಜು ಮಾಡಿದ. ಆದರೆ ನೇಪಾಳದ ಬಾಲಕ ತನ್ನ ಜೀವಮಾನದುದ್ದಕ್ಕೂ ಮಂಗಗಳನ್ನು ನೋಡಿದವನು, ಮಂಗಗಳ ಶಕ್ತಿ ಎಷ್ಟು ಎನ್ನುವುದು ಅವನಿಗೆ ತಿಳಿದಿತ್ತು.

ಇದರ ಅರ್ಥವಿಷ್ಟೆ- ಅಪರಿಚಿತ ಸಂಗತಿಗಳು ಎದುರಾದಾಗ ನಾವು ಅನವಶ್ಯಕವಾಗಿ ಅಧಿಕವಾಗಿ ಭಯ ಪಡುತ್ತೇವೆ. ಆದರೆ ನಮಗೆ ನಮ್ಮ ಶಕ್ತಿಯ ಪರಿಚಯವಂತೂ ಇದೆಯಲ್ಲವೇ? ಭಯ ಆವರಿಸಿದಾಗಲೂ ನಮ್ಮ ಶಕ್ತಿಯ ಅರಿವು ನಮಗಿದ್ದಾಗ ಮಾತ್ರ ದಿಟ್ಟವಾಗಿ ನಿಲ್ಲುತ್ತೇವೆ. ಭಯವೆಂಬ ಮಂಗವನ್ನು ಧೈರ್ಯದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅದೂ ಕೂಡ ನಮ್ಮ ಶಕ್ತಿಯನ್ನು ಉತ್ಪ್ರೇಕ್ಷೆ ಮಾಡಿ ನೋಡಿ ಕಾಲ್ಕೀಳುತ್ತದೆ.

ಲೇಖಕರ ಪರಿಚಯಅಮೆರಿಕದ ಶಿಕಾಗೋ ಮೂಲದ ರಿಚರ್ಡ್‌ ಸ್ಲ್ಯಾವಿನ್‌ ಆಧ್ಯಾತ್ಮದ ಹಾದಿ ಹಿಡಿದು ರಾಧಾನಾಥ ಸ್ವಾಮೀಜಿ ಆದರು.ಇಸ್ಕಾನ್‌ನ ನಿರ್ದೇಶನ ಮಂಡಳಿಯ ಹಿರಿಯ ಸದಸ್ಯರಾಗಿರುವ ರಾಧಾನಾಥ ಸ್ವಾಮೀಜಿಗಳು ಆ ಸಂಸ್ಥೆಯ ಮಧ್ಯಾಹ್ನದ ಊಟ ಯೋಜನೆಗೆ ಪ್ರೇರಣೆಯಾದವರು. ಮುಂಬೈಯಲ್ಲಿ ‘ಭಕ್ತಿವೇದಾಂತ ಆಸ್ಪತ್ರೆ’ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಪ್ರಸಕ್ತ-ಭಾರತ, ಅಮೆರಿಕ ಮತ್ತು ಯುರೋಪಿಯನ್‌ ರಾಷ್ಟ್ರಗಳಿಗೆಲ್ಲ ಪಯಣಿಸಿ ಬೋಧಿಸುತ್ತಾರೆ.

-ರಾಧಾನಾಥ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next