ಲಕ್ನೋ(ಉತ್ತರಪ್ರದೇಶ): 2024ರ ಜನವರಿ 22ರಂದು ಭವ್ಯ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿದ್ದು, ಅಂದು 12-20ರ ಶುಭ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಜನವರಿ 24ರಿಂದ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯಬಹುದಾಗಿದೆ.
ಇದನ್ನೂ ಓದಿ:Chikmagalur; ‘ನಾನು ಕರಸೇವಕ, ನನ್ನನ್ನೂ ಬಂಧಿಸಿ..’: ಪೊಲೀಸ್ ಠಾಣೆ ಎದುರು ಸಿ.ಟಿ ರವಿ ಧರಣಿ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಪ್ರದಾಯದ ಪ್ರಕಾರ ಗಣ್ಯ ವ್ಯಕ್ತಿಗಳು ಹಾಗೂ ಸಾಧು, ಸಂತರಿಗೆ ಸಂಪ್ರದಾಯದಂತೆ ಆಮಂತ್ರಣ ಪತ್ರಿಕೆ ಹಂಚಲು ಆರಂಭಿಸಿರುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ರಾಮಮಂದಿರ ಉದ್ಘಾಟನೆಯ ಆಕರ್ಷಕ ಆಮಂತ್ರಣ ಪತ್ರಿಕೆಯನ್ನು ದೂರದರ್ಶನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಆಹ್ವಾನ ಪತ್ರಿಕೆಯ ಮೊದಲ ಪುಟದಲ್ಲಿ ರಾಮಮಂದಿರ ನಿರ್ಮಾಣದ ಟೈಮ್ ಲೈನ್ ಮತ್ತು ಬೃಹತ್ ಮಂದಿರದ ವಿವರ ನೀಡಲಾಗಿದೆ. ಅಲ್ಲದೇ ರಾಮಲಲ್ಲಾ ಮೂಲ ಸ್ಥಾನವನ್ನು ಅಲಂಕರಿಸಲಿರುವ ಮಾಹಿತಿಯನ್ನು ಒಳಗೊಂಡಿರುವುದಾಗಿ ವರದಿ ತಿಳಿಸಿದೆ.
ಜನವರಿ 15ರ ಮಕರ ಸಂಕ್ರಾಂತಿ ದಿನದಂದು ಭಗವಾನ್ ರಾಮನ ಮೂರ್ತಿ ಗರ್ಭಗುಡಿ ಪ್ರವೇಶಿಸಲಿದೆ. ಜನವರಿ 16ರಂದು ಸರಯೂ ನದಿ ದಡದಲ್ಲಿ ವಿಷ್ಣುಪೂಜೆಯೊಂದಿಗೆ ಗೋ ದಾನ ನಡೆಸುವ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಜನವರಿ 17ರಂದು ಬಾಲರಾಮನ ಮೂರ್ತಿಯ ಪುರ ಮೆರವಣಿಗೆ ನಡೆಯಲಿದೆ. ಜನವರಿ 18ರಂದು ಮಂಟಪ ಪ್ರವೇಶ ಪೂಜೆ, ವಾಸ್ತು ಪೂಜೆ, ವರಣಾ ಪೂಜೆ, ಗಣಪತಿ ಪೂಜೆ, ಮೃತ್ತಿಕಾ ಪೂಜೆಯೊಂದಿಗೆ ಮೂರ್ತಿಯ ಪ್ರಾಣ ಪ್ರತಿಷ್ಠೆ ಕೈಂಕರ್ಯಕ್ಕೆ ಚಾಲನೆ.
ಜನವರಿ 19ರಂದು ರಾಮಮಂದಿರದ ಅಗ್ನಿಕುಂಡದಲ್ಲಿ ಯಜ್ಞ ಆರಂಭ. ನವಗ್ರಹ ಶಾಂತಿ ಹವನ ನಡೆಯಲಿದೆ. ಜನವರಿ 20ರಂದು ರಾಮಮಂದಿರದ ಗರ್ಭಗುಡಿಯನ್ನು ವಿವಿಧ ಪವಿತ್ರ ನದಿಗಳ ಜಲದ 81 ಕಲಶಾಭಿಷೇಕದ ಮೂಲಕ ಶುಚಿಗೊಳಿಸುವುದು. ಬಾಲ ರಾಮನ ಮೂರ್ತಿಯನ್ನು 125 ಕಲಶದಲ್ಲಿ ಅವಭ್ರತ ಸ್ನಾನ.
ವರದಿಯ ಪ್ರಕಾರ, ರಾಮಮಂದಿರ ಅದ್ದೂರಿ ಉದ್ಘಾಟನಾ ಸಮಾರಂಭಕ್ಕಾಗಿ ಸುಮಾರು 6,000 ಆಹ್ವಾನ ಪತ್ರಿಕೆಯನ್ನು ಗಣ್ಯರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗವರ್ನರ್ ಆನಂದಿಬೆನ್ ಪಟೇಲ್, ಸಿನಿಮಾ ನಟರಾದ ರಜಿನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ರಿಷಬ್ ಶೆಟ್ಟಿ, ನಿರ್ದೇಶಕರಾದ ರಾಜ್ ಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ, ರೋಹಿತ್ ಶೆಟ್ಟಿ ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.