Advertisement

ಮೊದಲ ಡೋಸ್‌ 2021 ರ ಹಿನ್ನೋಟ: ಲಸಿಕಾ ಸಂಜೀವಿನಿ ಪರ್ವ

10:39 AM Dec 30, 2021 | Team Udayavani |

2020ರ ಕಹಿ ನೆನಪುಗಳು ಮತ್ತು ಸಂಜೀವಿನಿಯ ಭರವಸೆಯೊಂದಿಗೆ ಇಡೀ ಜಗತ್ತು 2021ಕ್ಕೆ ಕಾಲಿಟ್ಟಿತು. ಇಡೀ ವರ್ಷವನ್ನು ಇಲ್ಲಿ ಎರಡು ಭಾಗವಾಗಿ, ಅಂದರೆ, ಮೊದಲ ಡೋಸ್‌ ಮತ್ತು ಎರಡನೇ ಡೋಸ್‌ ಎಂದು ವಿಂಗಡಿಸಲಾಗಿದೆ. ಮೊದಲ ಡೋಸ್‌ನಲ್ಲಿ ಲಸಿಕಾ ಸಂಜೀವಿನಿಗೆ ಒಪ್ಪಿಗೆ ಸಿಕ್ಕಿದ್ದರಿಂದ ಹಿಡಿದು, 2ನೇ ಡೋಸ್‌ ಆರಂಭವಾಗುವವರೆಗೆ ಮುಂದುವರಿಯುತ್ತದೆ. ಈ ಆರು ತಿಂಗಳಲ್ಲಿ ಜಗತ್ತಿನೆಲ್ಲೆಡೆ ಆದ ಆಗುಹೋಗುಗಳ ಕುರಿತ ಸಣ್ಣ ಇಣುಕು ನೋಟ ಇಲ್ಲಿದೆ..

Advertisement

ಜನವರಿ

ಹೊಸ ವರ್ಷಕ್ಕೆ ಲಸಿಕೆ ಸಿಹಿ- ಜನವರಿ 01
ಲಸಿಕೆ ವಿತರಣೆ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಭಾರತ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಹೇಳಿಕೆ. ಇದಕ್ಕಾಗಿ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಪ್ರಾತ್ಯಕ್ಷಿಕೆ ಶುರು. ಈ ಪ್ರಾತ್ಯಕ್ಷಿಕೆಯಲ್ಲಿ ಲಸಿಕೆ ಕೊಡುವುದೊಂದು ಬಿಟ್ಟು ಉಳಿದೆಲ್ಲ  ಪ್ರಕ್ರಿಯೆ ನಡೆಸಲಾಯಿತು. ಜ.1ರಂದೇ ಸೀರಂ ಸಂಸ್ಥೆಯ ಕೊವಿಶೀಲ್ಡ್‌ ಲಸಿಕೆ ತುರ್ತು ಬಳಕೆಗೆ ಡಿಸಿಜಿಐಗೆ ಶಿಫಾರಸು ಮಾಡಿದ ತಜ್ಞರ ಸಮಿತಿ. ಜ.2ರಂದು ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ಗೆ ತಜ್ಞರ ಸಮಿತಿಯಿಂದ ಒಪ್ಪಿಗೆ. ಜ.3ರಂದು ಭಾರತ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ)ನಿಂದ ಲಸಿಕೆ ಬಳಕೆಗೆ ನಿರ್ಧಾರ. ದೇಶಾದ್ಯಂತ ಜ.16ರಿಂದ ಮೊದಲ ಹಂತದ ಲಸಿಕಾ ಅಭಿಯಾನ ಆರಂಭ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ವೈದ್ಯರು, ಸಫಾಯಿ ಕರ್ಮಚಾರಿಗಳಿಗೆ ಲಸಿಕೆ ನೀಡಿಕೆ. ಅಷ್ಟೇ ಅಲ್ಲ, ವಾರಕ್ಕೆ ನಾಲ್ಕು ದಿನ ಲಸಿಕೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಅಮೆರಿಕ ಶೇಮ್‌- ಜನವರಿ 07
ಇಡೀ ಜಗತ್ತಿನ ತಲೆ ತಗ್ಗಿಸುವ ಸರದಿ ಅಮೆರಿಕದ್ದಾಯಿತು. ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅದಾಗಲೇ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿದ್ದರು. ಜೋ ಬೈಡೆನ್‌ ಗೆದ್ದಿದ್ದರು. ಇದನ್ನು ಸಹಿಸದ ಟ್ರಂಪ್‌ ಹಿಂಬಾಲಕರು ಸಂಸತ್‌ ಭವನಕ್ಕೆ ನುಗ್ಗಿ, ಅದರೊಳಗೆ ದಾಂಧಲೆ ಎಬ್ಬಿಸಿದರು. ಕೋಲಾಹಲದ ಬಳಿಕ ಅಧಿಕಾರ ಹಸ್ತಾಂತರದ ಬಗ್ಗೆ ಒಪ್ಪಿಕೊಂಡ ಡೊನಾಲ್ಡ್‌ ಟ್ರಂಪ್‌.

ಜೋ, ಕಮಲಾ ಯುಗಾರಂಭ – ಜನವರಿ 20
ಅಮೆರಿಕದಲ್ಲಿ ಅಧ್ಯಕ್ಷರಾಗಿ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್‌ ಅಧಿಕಾರ ಸ್ವೀಕಾರ. ಸೋತ ಟ್ರಂಪ್‌ ಗೈರು.

Advertisement

ಷೇರುಪೇಟೆ 50,000- ಜನವರಿ 21
ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಷೇರುಪೇಟೆ ದಾಖಲೆಯ 50 ಸಾವಿರ ಸೂಚ್ಯಂಕಕ್ಕೆ ತಲುಪಿತು. ಜ.21ರ ಮಧ್ಯಾಂತರ ವಹಿವಾಟಿನಲ್ಲಿ ಈ ಸಾಧನೆ ಮಾಡಿತು. 1990ರ ಜು.25ರಂದು ಸಾವಿರ ಸೂಚ್ಯಂಕ ದಾಖಲಿಸಿದ್ದ ಷೇರುಪೇಟೆ, 2021ರ ಹೊತ್ತಿಗೆ 50 ಸಾವಿರ ಮುಟ್ಟಿತು. ಅಷ್ಟೇ ಅಲ್ಲ, 2021 ಮುಗಿಯುವ ಹೊತ್ತಿಗೆ 60 ಸಾವಿರ ಸೂಚ್ಯಂಕ ದಾಟಿ ಕೆಳಗಿಳಿಯಿತು.

ಕೆಂಪುಕೋಟೆ ಹಿಂಸಾಚಾರ- ಜನವರಿ 26
ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿ, ದೇಶದ ಇತಿಹಾಸದಲ್ಲೇ ಕಪ್ಪುಚುಕ್ಕೆ ಇಟ್ಟ ದಿನವಾಯಿತು. ದೇಶಾದ್ಯಂತ ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿದ್ದ ರೈತರು, ದಿಲ್ಲಿಯಲ್ಲಿ ಕೆಂಪುಕೋಟೆ ಬಳಿಗೆ ನುಗ್ಗಿ ಒಳಗೆ ಸಿಖ್‌ ಧ್ವಜ ಹಾರಿಸಿದರು. ಇದಾದ ಬಳಿಕ ದಿಲ್ಲಿಯಲ್ಲಿ ಹಿಂಸಾಚಾರ ನಡೆಯಿತು.

ಪೆಟ್ರೋಲ್‌ ಸೆಂಚುರಿ- ಜನವರಿ 27
ದೇಶದಲ್ಲಿಯೇ ಇದೇ ಮೊಟ್ಟಮೊದಲ ಬಾರಿಗೆ ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ 100 ರೂ. ದಾಟಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಯಿತು. ಬಳಿಕ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 100 ರೂ. ದಾಟಿತು.

ಫೆಬ್ರವರಿ

ಲೋಕಲ್‌ ಕಲ್ಯಾಣಾರ್ಥ- ಫೆಬ್ರವರಿ 2
ಮೇಡ್‌ ಇನ್‌ ಇಂಡಿಯಾ ಕಾನ್ಸೆಪ್ಟ್ನೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿದರು. ಕೊರೊನಾ ಲಸಿಕೆ, ರಕ್ಷಣ ಇಲಾಖೆಯ ಸುಧಾರಣೆ, ಕೃಷಿ ಮತ್ತು ರೈತರ ಅಭಿವೃದ್ಧಿ, ರೈಲ್ವೇ ಇಲಾಖೆಯ ಸುಧಾರಣೆ, ಹೆದ್ದಾರಿ ಮತ್ತು ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದುದು ವಿಶೇಷ.

ಹಿಮ ಸುನಾಮಿ- ಫೆಬ್ರವರಿ 8

ಉತ್ತರಾಖಂಡದಲ್ಲಿ ಭಾರೀ ಹಿಮ ಪ್ರವಾಹವೇ ಉಂಟಾಗಿ 171 ಮಂದಿ ಪ್ರಾಣ ಕಳೆದುಕೊಂಡರು. ಚಮೋಲಿ ಜಿಲ್ಲೆಯ ಜೋಶಿ ಮಠದಲ್ಲಿ ನಡೆದ ಈ ದುರಂತದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲ ವಿದ್ಯುತ್‌ ಸ್ಥಾವರೂ ಕೊಚ್ಚಿ ಹೋಯಿತು. ನೀರ್ಗಲ್ಲು ಪ್ರವಾಹದಿಂದಾಗಿ ಈ ಘಟನೆ ಸಂಭವಿಸಿತು.

ಗೋ ಹತ್ಯೆ ನಿಷೇಧ ಮಸೂದೆ-  ಫೆಬ್ರವರಿ 9
ವಿಧಾನಸಭೆಯಲ್ಲಿ ಅಂಗೀಕಾರವಾಗಿ ಪರಿಷತ್‌ನ ಒಪ್ಪಿಗೆಗೆ ಮಾತ್ರ ಬಾಕಿ ಉಳಿದಿದ್ದ ಗೋ ಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ಸಿಕ್ಕಿತು. ವಿಪಕ್ಷಗಳ ಆಕ್ಷೇಪದ ನಡುವೆ ಈ ಮಸೂದೆಗೆ ಅಂಗೀಕಾರ ನೀಡಲಾಯಿತು. ಈ ಪ್ರಕಾರ ಅಕ್ರಮವಾಗಿ ಗೋ ಸಾಗಾಟ ಮತ್ತು ವಧೆಗೆ 10 ಲಕ್ಷ ರೂ.ವರೆಗೆ ದಂಡ, 3 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿತು.

ಸೆಕೆಂಡ್‌ ಡೋಸ್‌- ಫೆಬ್ರವರಿ 13
ಜನವರಿ 16ರಿಂದ ದೇಶಾದ್ಯಂತ ಮೊದಲ ಡೋಸ್‌ ಲಸಿಕೆ ನೀಡಿದ ಕಾರಣದಿಂದಾಗಿ 2ನೇ ಡೋಸ್‌ ಪ್ರಕ್ರಿಯೆ ಫೆ.13ರಿಂದ ಆರಂಭವಾಯಿತು. ಅಂದರೆ, ಆಗಿನ ನಿರ್ಧಾರದ ಪ್ರಕಾರ, ಮೊದಲ ಡೋಸ್‌ ಪಡೆದ 28ನೇ ದಿನಕ್ಕೆ 2ನೇ ಡೋಸ್‌ ಪಡೆಯಬೇಕಾಗಿತ್ತು. ಹೀಗಾಗಿ, ಎರಡನೇ ಡೋಸ್‌ ಪ್ರಕ್ರಿಯೆ ಶುರುವಾಯಿತು. ಮೊದಲ ಡೋಸ್‌ ಪಡೆದಿದ್ದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ವೈದ್ಯರು, ಸಫಾಯಿ ಕರ್ಮಚಾರಿಗಳು ಎರಡನೇ ಡೋಸ್‌ ಪಡೆಯುವ ಪ್ರಕ್ರಿಯೆ ಆರಂಭಿಸಿದರು. ಈ ಮಧ್ಯೆ, ಮೊದಲ ಡೋಸ್‌ ಶುರು ಮಾಡಿದಾಗಿನಿಂದ ಒಂದು ತಿಂಗಳಲ್ಲಿ ಒಂದು ಕೋಟಿ ಲಸಿಕೆ ನೀಡಲಾಯಿತು. ಮಾರ್ಚ್‌ 1ರಿಂದ 60 ವರ್ಷ ದಾಟಿದ ವೃದ್ಧರಿಗೆ ಮತ್ತು ಇತರ ರೋಗಗಳಿಂದ ನರಳುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೆಲಸ ಶುರುವಾಯಿತು.

ಪಂಚಮಸಾಲಿ ಮೀಸಲಾತಿ- ಫೆಬ್ರವರಿ 21
ಪಾದಯಾತ್ರೆ ಮೂಲಕ ಬೆಂಗಳೂರಿಗೆ ಬಂದ ಪಂಚಮಸಾಲಿ ಪಂಗಡದ ಸ್ವಾಮೀಜಿಗಳು ಮತ್ತು ಜನತೆ 2ಎ ಮೀಸಲಾತಿಗಾಗಿ ರಾಜ್ಯ ಸರಕಾರಕ್ಕೆ ಗಡುವು ನೀಡಿದರು. ಮಾ.4ರ ಗಡುವು ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಂದು ಮೀಸಲು ಘೋಷಣೆ ಮಾಡದಿದ್ದರೆ, ಆಮರಣಾಂತ ಉಪವಾಸ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರೀ ಸಮಾವೇಶ ನಡೆದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಮಾರ್ಚ್‌

ಪ್ರಧಾನಿ ಮೋದಿಗೆ ಕೊವ್ಯಾಕ್ಸಿನ್‌ ಲಸಿಕೆ-  ಮಾರ್ಚ್‌ 1
60 ವರ್ಷ ದಾಟಿದವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಶುರುವಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಲಸಿಕೆ ಪಡೆದು ಚಾಲನೆ ನೀಡಿದರು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಸಿಗದೇ ಇದ್ದ, ಭಾರತದಲ್ಲೇ ತಯಾರಾಗಿದ್ದ ಕೊವ್ಯಾಕ್ಸಿನ್‌ ಲಸಿಕೆ ಪಡೆದು, ಆತ್ಮ ನಿರ್ಭರ ಭಾರತಕ್ಕೆ ಉತ್ತೇಜನ ನೀಡಿದರು.

ಸಿಡಿ ಪ್ರಕರಣದ ಸಿಡಿಲು- ಮಾರ್ಚ್‌ 2
ರಾಜ್ಯದ ಸಚಿವರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾದ ಆಶ್ಲೀಲ ಸಿಡಿಯೊಂದು ಬಹಿರಂಗವಾಯಿತು. ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಕ್ಕೂ ಕಾರಣವಾಯಿತು. ಯುವತಿಯೊಬ್ಬಳ ಜತೆ ಸಲ್ಲಾಪದಲ್ಲಿ ತೊಡಗಿದ್ದ ಸಿಡಿ ಇದು. ಮಾರನೇ ದಿನ, ಅಂದರೆ ಮಾ.3ರಂದು ರಮೇಶ್‌ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಭಾವಭೃಂಗದ ಶೃಂಗ ಕವಿ ಸಾವು- ಮಾರ್ಚ್‌ 6
ಭಾವಗೀತೆಗಳ ಹರಿಕಾರ, ಭಾವಭೃಂಗದ ಶೃಂಗಕವಿ ಎಂದೇ ಹೆಸರಾಗಿದ್ದ ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟ ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದರು. ದೀರ್ಘ‌ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ ಸ್ವಗೃಹದಲ್ಲೇ ನಿಧನ ಹೊಂದಿ ದರು. ಭಾವಗೀತೆ, ಸಾಹಿತ್ಯ ವಿಮರ್ಶೆ, ನವ್ಯಕವಿತೆ, ಅನುವಾದ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಇವರು ಕೆಲಸ ಮಾಡಿದ್ದರು.

ಕೊರೊನಾ ಕಾಟಕ್ಕೆ ವರ್ಷ- ಮಾರ್ಚ್‌ 8
ಅಮೆರಿಕ ಪ್ರವಾಸದಿಂದ ರಾಜ್ಯಕ್ಕೆ ಮರಳಿದ್ದ ಟೆಕ್ಕಿಯೊಬ್ಬರಲ್ಲಿ ಸರಿಯಾಗಿ ವರ್ಷದ ಹಿಂದೆ ಸೋಂಕು ಪತ್ತೆಯಾಗಿತ್ತು. ಅದೇ ರಾಜ್ಯದಲ್ಲಿನ ಮೊದಲ ಕೊರೊನಾ ಕೇಸ್‌. ಈ ಕೇಸ್‌ ಆದ ಬಳಿಕ ಮಾ.14ರ ಹೊತ್ತಿಗೆ ರಾಜ್ಯದಲ್ಲಿ ಒಟ್ಟು ಆರು ಕೇಸ್‌ ಪತ್ತೆಯಾಗಿದ್ದವು. ಹೀಗಾಗಿ ರಾಜ್ಯ ಸರಕಾರ ಮುಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಕಠಿನ ನಿರ್ಬಂಧ ಘೋಷಣೆ ಮಾಡಿತು.

ಎಂಟರ ವಿಕಾಸು ಗಂಟು-  ಮಾರ್ಚ್‌ 9
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ ಮಂಡಿಸಿ, ಮಹಿಳೆಯರು ಮತ್ತು ರೈತರಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದರು. ವಿಶೇಷವೆಂದರೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಘೋಷಣೆಯಾದ ಬಜೆಟ್‌ ಇದು. ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ. ಅನುದಾನ, ಸರಕಾರಿ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಮಕ್ಕಳ ಆರೈಕೆ ರಜೆ ನೀಡುವ ಬಗ್ಗೆ ಘೋಷಣೆಯಾಯಿತು.

ಹೊಸಬಾಳೆ ಸರಕಾರ್ಯವಾಹ- ಮಾರ್ಚ್‌ 21
ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ಆರ್‌ಎಸ್‌ಎಸ್‌ನ ಅತ್ಯುನ್ನತ ಹುದ್ದೆ ಸರಕಾರ್ಯವಾಹ ಸ್ಥಾನಕ್ಕೆ ಏರಿದರು. ಅಖೀಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸರಕಾರ್ಯವಾಹ ಹುದ್ದೆಗೆ ಚುನಾವಣೆ ನಡೆಯಿತು. ಇದರಲ್ಲಿ ಹೊಸಬಾಳೆಯವರು ಸರ್ವಾನುಮತದಿಂದ ಆಯ್ಕೆಯಾದರು.

ಎಪ್ರಿಲ್‌

45 ಪ್ಲಸ್‌ ಲಸಿಕೆ-  ಎಪ್ರಿಲ್‌ 1
ಮಾರ್ಚ್‌ನಲ್ಲೇ ಇತರ ರೋಗಗಳಿಂದ ನರಳುತ್ತಿರುವ 45 ಪ್ಲಸ್‌ನವರಿಗೆ ಲಸಿಕೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಎಪ್ರಿಲ್‌ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಂಡು, ಎ.1ರಿಂದಲೇ ಲಸಿಕೆ ನೀಡುವ ಪ್ರಕ್ರಿಯೆ ಶುರುವಾಯಿ 3ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 2 ಲಕ್ಷ ಮಂದಿಗೆ ಲಸಿಕೆ ಹಾಕಲಾಯಿತು. ಇದರಲ್ಲಿ 45-59 ವರ್ಷದ 1.11 ಲಕ್ಷ ಮಂದಿ, 81 ಸಾವಿರ ಹಿರಿಯ ನಾಗರಿಕರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿ 2 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡರು. ಆ ಹೊತ್ತಿಗೆ ಇದೇ ದಿನದ ಗರಿಷ್ಠ ದಾಖಲೆಯಾಯಿತು.

ಒಂದೇ ದಿನ 11,265 ಮಂದಿಗೆ ಕೊರೊನಾ – ಎಪ್ರಿಲ್‌ 15
ಮೊದಲ ಅಲೆಯ ಅನಂತರ ರಾಜ್ಯದಲ್ಲಿ ಒಂದೇ ದಿನ 11 ಸಾವಿರಕ್ಕೂ ಹೆಚ್ಚು ಕೇಸ್‌ ಪತ್ತೆಯಾದವು. ಈ ಮೂಲಕ ರಾಜ್ಯದಲ್ಲಿ ಅಧಿಕೃತವಾಗಿ ಎರಡನೇ ಅಲೆ ಎಂಟ್ರಿ. ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಜನ ಮುಂಜಾಗ್ರತೆ ಕ್ರಮ ಬಿಟ್ಟು ಓಡಾಡಿದ್ದರಿಂದ ಈ ಪ್ರಮಾಣದ ಕೇಸ್‌ ದಾಖಲು. ಲಸಿಕೆ ಪಡೆಯುವಲ್ಲಿಯೂ ಜನರಲ್ಲಿ ನಿರಾಸಕ್ತಿ. ಲಸಿಕೆಯೊಂದೇ ಕೊರೊನಾ ನಿಯಂತ್ರಣಕ್ಕೆ ಪರಿಹಾರ ಎಂದು ತಜ್ಞರಿಂದಲೂ ಎಚ್ಚರಿಕೆ.

ಎಲ್ಲ ವಯಸ್ಕರಿಗೆ ಲಸಿಕೆ – ಎಪ್ರಿಲ್‌ 19
ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಎಲ್ಲ ವಯಸ್ಕರಿಗೆ ಲಸಿಕೆ ನೀಡಲು ಕೇಂದ್ರ ಸರಕಾರದ ನಿರ್ಧಾರ. 18 ವರ್ಷ ತುಂಬಿದ ಎಲ್ಲರಿಗೂ ಮೇ 1ರಿಂದ ಲಸಿಕೆ. ಲಸಿಕೆಯನ್ನು ನೇರವಾಗಿ ಖರೀದಿಸಲು ರಾಜ್ಯ ಸರಕಾರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಅವಕಾಶ. ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌, ನೈಟ್‌ ಕರ್ಫ್ಯೂವಿನಂಥ ಪ್ರತಿಬಂಧಕ ಕ್ರಮಗಳಿಗೆ ಮೊರೆ.

ಪ್ರೊ| ಜಿ.ವೆಂಕಟಸುಬ್ಬಯ್ಯ ನಿಧನ – ಎಪ್ರಿಲ್‌ 19
ಕನ್ನಡದ ನಿಘಂಟು ತಜ್ಞ, ಶತಾಯುಷಿ ಪ್ರೊ| ಜಿ. ವೆಂಕಟ್ಟಸುಬ್ಬಯ್ಯ ಅವರು ನಿಧನಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಹ ಲೋಕ ತ್ಯಜಿಸಿದರು. 10 ಸಾವಿರ ಪುಟಕ್ಕೂ ಮೀರಿದ ಶಬ್ಧಕೋಶವನ್ನು ರಚಿಸಿದ್ದು ಇವರ ಸಾಧನೆಯ ಹೆಗ್ಗುರುತು.

ಕರುನಾಡು ಭಾಗಶಃ ಲಾಕ್- ಎಪ್ರಿಲ್‌ 21
ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ. ಎ.21ರಿಂದಲೇ ನೈಟ್‌ಕರ್ಫ್ಯೂ ಜಾರಿ. ಶನಿವಾರ ಮತ್ತು ರವಿವಾರ ಫ‌ುಲ್‌ ಲಾಕ್‌ಡೌನ್‌. ಸಿನೆಮಾ ಮಂದಿರ, ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರಗಳು ಬಂದ್‌ ಆದವು.

ಮೇ

ದೀದಿ, ಸ್ಟಾಲಿನ್‌, ವಿಜಯನ್‌ಗೆ ಗೆಲುವು-  ಮೇ 3
2021ರ ಮಧ್ಯಾಂತರದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಹಿಡಿತ ಸಾಧಿಸಿದ್ದು ವಿಶೇಷ. ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬಿಜೆಪಿ ಭಾರೀ ಪ್ರತಿರೋಧ ಒಡ್ಡಿದರೂ, ಅಲ್ಲಿ ಜಯಗಳಿಸಲಾಗಲಿಲ್ಲ. ಇಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅವರ ಪಕ್ಷವೇ ಗೆದ್ದು ಗದ್ದುಗೆ ಸನಿಹಕ್ಕೆ ಬಂದಿತು. ಆದರೆ ಮಮತಾ ಬ್ಯಾನರ್ಜಿ ಮಾತ್ರ ನಂದಿಗ್ರಾಮದಲ್ಲಿ ಸೋತು ಹೋದರು. ಇತ್ತ ಕೇರಳದಲ್ಲಿ ಎಡರಂಗದ ಪಿಣರಾಯಿ ವಿಜಯನ್‌ ಹಾಗೂ ತಮಿಳುನಾಡಿನಲ್ಲಿ ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಗೆದ್ದರು. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಗೆದ್ದಿತು. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಪುದುಚೇರಿಯಲ್ಲಿ ಇದೇ ಮೊದಲ ಬಾರಿಗೆ ಎನ್‌ಡಿಎ ಅಧಿಕಾರಕ್ಕೇರಿತು.

ಕೋಟಿ ಮಂದಿಗೆ ಲಸಿಕೆ -ಮೇ 06
ಕರ್ನಾಟಕದಲ್ಲಿ ಎರಡೂ ಡೋಸ್‌ ಸೇರಿ ಒಂದು ಕೋಟಿ ಮಂದಿಗೆ ಲಸಿಕೆ ಹಾಕುವ ಪ್ರಕ್ರಿಯೆ ಪೂರ್ಣವಾಯಿತು. ಇದರಲ್ಲಿ 18 ಲಕ್ಷ ಮಂದಿ ಎರಡೂ ಡೋಸ್‌ ಪಡೆದರೆ, ಉಳಿದವರು ಕೇವಲ ಒಂದು ಡೋಸ್‌ ಮಾತ್ರ ಪಡೆದರು. ಲಸಿಕೆ ಪಡೆದವರಲ್ಲಿ ಮಹಿಳೆಯರೇ ಹೆಚ್ಚು ಎನ್ನುವುದು ವಿಶೇಷ.

ಮತ್ತೆ ಲಾಕ್‌-  ಮೇ 10

2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಲಾಕ್‌ಡೌನ್‌ ಆರಂಭ. ಅಗತ್ಯ ಸೇವೆಗಳಿಗಷ್ಟೇ ಅವಕಾಶ. ಮೆಟ್ರೋ, ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳಿಗೆ ಸಂಪೂರ್ಣ ರಜೆ. ಪಾರ್ಸೆಲ್‌ ಹೊರತುಪಡಿಸಿ ಹೊಟೇಲ್‌, ರೆಸ್ಟೋರೆಂಟ್‌ಗಳು ಬಂದ್‌. ಎಲ್ಲ ರೀತಿಯ ಮನೋರಂಜನ ಕಾರ್ಯಕ್ರಮಗಳೂ ರದ್ದಾದವು.

2ನೇ ಡೋಸ್‌ಗೆ 3 ತಿಂಗಳು ಕಾಯಬೇಕು-  ಮೇ 14
2ನೇ ಅಲೆ ಹೆಚ್ಚಾದಂತೆ ದೇಶದಲ್ಲಿ ಲಸಿಕೆಗೂ ಹೆಚ್ಚಿನ ಬೇಡಿಕೆ ಬಂದು ಎಲ್ಲೆಡೆ ಕೊರತೆ ಕಾಣಿಸಿತು. ಹೀಗಾಗಿ ಕೇಂದ್ರ ಸರಕಾರ ಕೊವಿಶೀಲ್ಡ್‌ ಲಸಿಕೆಯ ಅಂತರವನ್ನು 12ರಿಂದ 16 ವಾರಗಳ ವರೆಗೆ ವಿಸ್ತರಣೆ ಮಾಡಿತು. ಅಂದರೆ ಮೊದಲ ಡೋಸ್‌ ಲಸಿಕೆ ಪಡೆದು 3 ತಿಂಗಳ ಬಳಿಕ ಎರಡನೇ ಡೋಸ್‌ ಪಡೆಯಬೇಕು ಎಂಬ ನಿಯಮ ಮಾಡಿತು.

ಬಹುಗುಣ ಸಾವು – ಮೇ 22
ಕೊರೊನಾ ಸೋಂಕಿನಿಂದಾಗಿ ಹಿರಿಯ ಪರಿಸರವಾದಿ ಚಿಪ್ಕೋ ಖ್ಯಾತಿಯ ಸುಂದರ್‌ಲಾಲ್‌ ಬಹುಗುಣ ನಿಧನ. ಮೇ 8ರಿಂಲೇ ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಚಿಕಿತ್ಸೆ ಫ‌ಲಿಸದೇ ನಿಧನ ಹೊಂದಿದರು. ಜತೆಗೆ ಉತ

ಜೂನ್‌

ಪರೀಕ್ಷೆ ರದ್ದು-   ಜೂನ್‌ 1
ಕೊರೊನಾ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಲು ಕೇಂದ್ರ ಸರಕಾರ ನಿರ್ಧಾರ. ಜೂ.4ರಂದು ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲು ನಿರ್ಧಾರ. 10ನೇ ತರಗತಿಗೆ ಮಾತ್ರ ಪರೀಕ್ಷೆ ನಡೆಸಲು ತೀರ್ಮಾನ. ಯಾರನ್ನೂ ಫೇಲ್‌ ಮಾಡದೇ ಇರಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಉಚಿತ ಲಸಿಕೆ- ಜೂನ್‌ 07
ದೇಶಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ನೀಡಲು ಕೇಂದ್ರ ಸರಕಾರದಿಂದ ತೀರ್ಮಾನ. ಕೇಂದ್ರ ಸರಕಾರವೇ ಲಸಿಕೆ ತಯಾರಕ ಕಂಪೆನಿಗಳಿಂದ ಖರೀದಿಸಿ ರಾಜ್ಯಗಳಿಗೆ ರವಾನೆ. ಖಾಸಗಿಯವರೂ ಶೇ.25ರಷ್ಟನ್ನು ಸಿರಿವಂತರಿಗೆ ಅಥವಾ ಖರೀದಿ ಸಾಮರ್ಥ್ಯವಿರುವವರಿಗೆ ಮಾರಲು ಅವಕಾಶ. ರಾಜ್ಯಗಳ ಕೈನಲ್ಲಿ ಇದ್ದ ಲಸಿಕೆ ಹಂಚಿಕೆ ಅಧಿಕಾರ ಕೇಂದ್ರಕ್ಕೆ.

ಸಿದ್ದಲಿಂಗಯ್ಯ ಇನ್ನಿಲ್ಲ-  ಜೂನ್‌ 11
ದಲಿತ ಚಳವಳಿ, ಬಂಡಾಯ ಸಾಹಿತ್ಯಕ್ಕೆ ಹೊಸ ಸ್ಪರ್ಶ ನೀಡಿದ್ದ ಹಿರಿಯ ಕವಿ ಡಾ| ಸಿದ್ದಲಿಂಗಯ್ಯ (67 ) ವಿಧಿವಶ. 81ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೊರೊನಾ ಸೋಂಕು ತಗಲಿ ಗುಣಮುಖರಾಗಿದ್ದ ಸಿದ್ದಲಿಂಗಯ್ಯ ಅವರಿಗೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು. ಚಿಕಿತ್ಸೆ ಫ‌ಲಕಾರಿಯಾಗದೇ ನಿಧನ.

ಸಂಚಾರ ಮುಗಿಸಿದ ವಿಜಯ್‌ -ಜೂನ್‌ 14
ಸಂಚಾರಿ ವಿಜಯ್‌ ನಿಧನ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದ ವಿಜಯ್‌ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ಅವರ ಅಂಗಾಂಗಗಳನ್ನು ದಾನ ಮಾಡಲಾ ಯಿತು. ಹಾಗೆಯೇ, ನಿರ್ಮಾಪಕ  ಕೆ.ಸಿ. ಚಂದ್ರಶೇಖರ್‌(ಕೆಸಿಎನ್‌) ನಿಧನ.

ಓಟದ ಅಂತ್ಯ-ಜೂನ್‌ 14
ಓಟದ ದಂತಕತೆ ಮಿಲ್ಟಾಸಿಂಗ್‌ (91) ಕೊರೊನಾ ಸೋಂಕಿನಿಂದ ಸಾವು. ಫ್ಲೈಯಿಂಗ್‌ ಸಿಖ್‌ ಎಂದೇ ಖ್ಯಾತಿಯಾಗಿದ್ದರು. ಏಷ್ಯನ್‌ ಗೇಮ್ಸ್‌ ಹಾಗೂ ಒಲಂಪಿಕ್ಸ್‌ನಲ್ಲಿ  ಚಿನ್ನದ ಪದಕ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next