Advertisement

ನಗರದ ಬಸ್‌ಗಳಲ್ಲಿ ಮಾಯವಾಗಿದೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ !

11:01 AM Nov 15, 2018 | |

ಮಹಾನಗರ: ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಸುರಕ್ಷತೆ ಬಸ್‌ ಮಾಲಕನ ಕರ್ತವ್ಯ. ಒಂದುವೇಳೆ ಪ್ರಯಾಣಿಕರಿಗೆ ಅಪಘಾತವಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಮುಂಜಾಗೃತಾ ದೃಷ್ಟಿಯಿಂದ ಪ್ರತಿ ಬಸ್‌ಗಳಲ್ಲಿಯೂ ತುರ್ತು ಚಿಕಿತ್ಸಾ ಪೆಟ್ಟಿಗೆ ಇರಲೇಬೇಕು ಎಂಬುವುದು ಸಾರಿಗೆ ಇಲಾಖೆಯ ಸೂಚನೆ. ಆದರೆ ನಗರದಲ್ಲಿ ಸಂಚರಿಸುವ ಅನೇಕ ಬಸ್‌ಗಳಲ್ಲಿ ತುರ್ತು ಚಿಕಿತ್ಸಾ ಪೆಟ್ಟಿಗೆಗಳು ಮಾಯವಾಗಿದ್ದು, ಸಾರಿಗೆ ಇಲಾಖೆಯ ನಿಯಮಗಳು ಪಾಲನೆಯಾಗುತ್ತಿಲ್ಲ.

Advertisement

ಬಹುತೇಕ ಬಸ್‌ ಚಾಲಕ ನಿರ್ವಾಹಕರಿಗೆ ತುರ್ತು ಚಿಕಿತ್ಸಾ ವಿಧಾನಗಳನ್ನು ಯಾವ ರೀತಿ ಅನುಸರಿಸಬೇಕು ಎಂಬುವುದೇ ತಿಳಿದಿರುವುದಿಲ್ಲ. ಯಾವುದೇ ಬಸ್‌ಗಳಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸಲು ಸಾರಿಗೆ ಇಲಾಖೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆದಿರಬೇಕು. ಅಗತ್ಯ ಸಂದರ್ಭ ಯಾವ ರೀತಿ ತುರ್ತು ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ನಿರ್ವಾಹಕನಿಗೆ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕವಷ್ಟೇ ಸಾರಿಗೆ ಇಲಾಖೆ ಪರವಾನಗಿ ನೀಡುತ್ತದೆ.

ಕೆಲವೊಂದು ಬಸ್‌ಗಳು ನಗರದಲ್ಲಿ ಮಾತ್ರ ಸಂಚರಿಸದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಂಚರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಲಭ್ಯ ಇರುವುದಿಲ್ಲ. ಈ ಸಮಯದಲ್ಲಿ ಬಸ್‌ ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಔಷಧಗಳಿದ್ದರೆ ಅಪಾಯ ತಪ್ಪಿಸಲು ಸಹಕಾರಿಯಾಗಬಲ್ಲದು.

ಪ್ರಯಾಣಿಕರು ದನಿ ಎತ್ತಬೇಕು
ಸ್ಥಳೀಯ ನಿವಾಸಿ ಶಿವರಾಮ ಅವರು ‘ಉದಯವಾಣಿ-ಸುದಿನ’ ಜತೆ ಮಾತನಾಡಿ, ಪ್ರತಿಯೊಂದು ಬಸ್‌ ಗಳಲ್ಲಿಯೂ ಕಡ್ಡಾಯವಾಗಿ ತುರ್ತು ಚಿಕಿತ್ಸಾ ಪೆಟ್ಟಿಗೆ ಇರಬೇಕು. ತುರ್ತುಚಿಕಿತ್ಸೆಯು ಅಪಘಾತ ಸಮಯದಲ್ಲಿ ಪ್ರಯಾಣಿಕರ ಜೀವ ಉಳಿಸಬಲ್ಲದು. ಕೆಲವೊಂದು ಬಸ್‌ ಗಳಲ್ಲಿ ತುರ್ತು ಚಿಕಿತ್ಸಾ ಪೆಟ್ಟಿಗೆ ಇಲ್ಲ. ಈ ಬಗ್ಗೆ ಪ್ರಯಾಣಿಕರು ದನಿ ಎತ್ತಬೇಕಿದೆ ಎಂದು ತಿಳಿಸಿದ್ದಾರೆ.

ಪೆಟ್ಟಿಗೆಯಲ್ಲಿ ಏನೇನಿರಬೇಕು?
ಗಾಯಗೊಂಡವರಿಗೆ ಶುಶ್ರೂಷೆ ನೀಡಲು ಚಾಲಕನ ಸೀಟಿನ ಹಿಂಭಾಗದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಇಡಲಾಗುತ್ತದೆ. ಇದರಲ್ಲಿ ಹತ್ತಿ, ಡೆಟಾಲ್‌, ಟಿಂಚರ್‌, ಸಾಬೂನು, ಹತ್ತಿ, ಬಟ್ಟೆ, ಮುಲಾಮು, ಸುಟ್ಟ ಗಾಯಕ್ಕೆ ಮದ್ದು, ಕೆಲವೊಂದು ಮಾತ್ರೆಗಳು ಕಡ್ಡಾಯವಾಗಿ ಇರಬೇಕು.

Advertisement

ಹೆಸರಿಗೆ ಮಾತ್ರ ಒಳಗೆ ಖಾಲಿ
ನಗರದ ಕೆಲವೊಂದು ಸಿಟಿ ಬಸ್‌ ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಎಂದು ಬರೆಯಲಾದ ಬಾಕ್ಸ್  ಗಳನ್ನು ಮೊಳೆ ಹೊಡೆದು ನೇತಾಕಿರುತ್ತಾರೆ. ಆದರೆ ಒಳಗಡೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಪರಿಕರಗಳನ್ನು ಇರಿಸಲಾಗಿಲ್ಲ. ಬದಲಿ ಬಸ್‌ ಟಿಕೆಟ್‌ ಗಳು, ಇಟಿಎಂ ಮೆಶಿನ್ ಗಳನ್ನು ಇಡಲು ಕೆಲವರು ಉಪಯೋಗಿಸುತ್ತಿದ್ದಾರೆ.

ಕಾರ್ಯಾಚರಣೆ ನಡೆಸುತ್ತೇವೆ
ನಗರದಲ್ಲಿ ಸಂಚರಿಸುವ ಕೆಲವೊಂದು ಸಿಟಿ ಬಸ್‌ಗಳಲ್ಲಿ ತುರ್ತು ಚಿಕಿತ್ಸಾ ಪೆಟ್ಟಿಗೆ ಇಲ್ಲ. ಈ ವಿಚಾರ ಗಮನಕ್ಕೆ ಬಂದಿದೆ. ಸದ್ಯದಲ್ಲಿಯೇ ನಗರದ ಅನೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತೇವೆ.
– ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಎಸಿಪಿ ಮಂಗಳೂರು.

ಬಸ್‌ ಮಾಲಕರಿಗೆ ಸೂಚಿಸುವೆ
ನಗರದಲ್ಲಿ ಸಂಚರಿಸುವ ಕೆಲವೊಂದು ಸಿಟಿ ಬಸ್‌ಗಳಲ್ಲಿ ತುರ್ತು ಚಿಕಿತ್ಸಾ ಪೆಟ್ಟಿಗೆಗಳಿಲ್ಲ. ಪ್ರತಿಯೊಂದು ಬಸ್‌ಗಳಲ್ಲಿಯೂ ಕಡ್ಡಾಯವಾಗಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಬಸ್‌ ಮಾಲಕರಿಗೆ ಮನವರಿಕೆ ಮಾಡುತ್ತೇನೆ. ಅಲ್ಲದೆ, ಮುಂಬರುವ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡುತ್ತೇನೆ.
ದಿಲ್‌ರಾಜ್‌ ಆಳ್ವ, 
ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ 

‡ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next