Advertisement

ದೀಪಾವಳಿಗೆ ಜನಾಕರ್ಷಣೆ ಕಳೆದುಕೊಂಡ ಪಟಾಕಿ

03:11 PM Oct 27, 2019 | Suhan S |

ಮಂಡ್ಯ: ಪಟಾಕಿ ಸಿಡಿಸುವುದರ ಬಗ್ಗೆ ಜನರಲ್ಲಿ ಉಂಟಾಗಿರುವ ಜಾಗೃತಿ ದೀಪಾವಳಿ ಹಬ್ಬಕ್ಕೆ ಪಟಾಕಿ ಆಕರ್ಷಣೆ ಕಳೆದುಕೊಳ್ಳುವಂತೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಪಟಾಕಿ ವ್ಯಾಪಾರದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

Advertisement

ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮ ಹಾಗೂ ಮನುಷ್ಯರಿಗೆ ಉಂಟುಮಾಡುವ ಅಪಾಯದ ಬಗ್ಗೆ ಜನರು ಎಚ್ಚರಗೊಂಡಿದ್ದಾರೆ. ಹಾಗಾಗಿ ಹಬ್ಬದ ಸಮಯದಲ್ಲಿ ಪಟಾಕಿ  ಸದ್ದು ಕ್ಷೀಣಿಸುತ್ತಿದೆ. ಹಲವಾರು ವರ್ಷದಿಂದ ಪಟಾಕಿ ಬೆಲೆಯಲ್ಲಿ ಏರಿಕೆ ಕಾಣದಿದ್ದರೂ ಜನ ಮಾತ್ರ ಅದರ ಆಕರ್ಷಣೆಗೆ ಒಳಗಾಗದೆ ದೂರವೇ ಉಳಿದಿದ್ದಾರೆ. ಹಬ್ಬದ ಸಮಯದಲ್ಲಿ ಲಕ್ಷಾಂತರ ಬಂಡವಾಳ ಹೂಡಿ ಮಾರಾಟಕ್ಕಿಳಿಯುವವರುಇದೀಗ ನಷ್ಟದ ಹಾದಿ ಹಿಡಿದಿದ್ದಾರೆ.

15 ಪಟಾಕಿ ಮಳಿಗೆ: ನಗರದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಪಟಾಕಿ ಮಳಿಗೆ ತೆರೆಯಲಾಗಿದೆ. ವರ್ಷದಿಂದ ವರ್ಷಕ್ಕೆ ಮಳಿಗೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. 2017ರಲ್ಲಿ 24 ಮಳಿಗೆಗಳಿದ್ದವು. 2018ರಲ್ಲಿ 18 ಮಳಿಗೆಗಳಿಗೆ ಇಳಿದು, ಈ ವರ್ಷ 15 ಮಳಿಗೆಗಳಿಗೆ ಕುಸಿದಿದೆ. ಹಲವಾರು ವರ್ಷಗಳಿಂದ ಮಳಿಗೆ ತೆರೆಯುತ್ತಿದ್ದ ಜನತಾ ಬಜಾರ್‌ 3 ವರ್ಷದಿಂದ ಪಟಾಕಿ ವ್ಯಾಪಾರ ಸ್ಥಗಿತಗೊಳಿಸಿದೆ.

ಶುಲ್ಕ ಹೆಚ್ಚಳ: ಐದಾರು ವರ್ಷಗಳ ಹಿಂದೆ ನಗರಸಭೆ ಟ್ರೇಡ್‌ ಲೈಸೆನ್ಸ್‌, ವಿದ್ಯುತ್‌ ಸಂಪರ್ಕ, ಅಗ್ನಿ ಅವಘಡ ತಪ್ಪಿಸಲು ಅಗ್ನಿಶಾಮಕ ದಳದ ಶುಲ್ಕ, ಜಿಲ್ಲಾಡಳಿತದ ಪರವಾನಗಿ ಶುಲ್ಕ, 8 ದಿನಗಳ ನೆಲಬಾಡಿಗೆ ಸೇರಿ 10 -12 ಸಾವಿರ ರೂ. ಖರ್ಚಾಗುತ್ತಿತ್ತು. ಆದರೆ, ಈಗ 25 ರಿಂದ 30 ಸಾವಿರ ರೂ.ವರೆಗೆ ಖರ್ಚಾಗುತ್ತಿದೆ. ಇದು ಪಟಾಕಿ ವ್ಯಾಪಾರಸ್ಥರಿಗೆ ಹೊರೆಯಾಗುತ್ತಿದೆ. ಪಟಾಕಿ ವ್ಯಾಪಾರದಿಂದ ಸಿಗುವ ಲಾಭಾಂಶವೂ ಕಡಿಮೆಯಾಗುತ್ತಿರುವುದರಿಂದ ವ್ಯಾಪಾರಸ್ಥರೂ ಕಡಿಮೆಯಾಗುತ್ತಿದ್ದಾರೆ. ಹಿಂದೆಲ್ಲಾ ಅತಿ ಹೆಚ್ಚು ಶಬ್ಧ ಬರುವ ಪಟಾಕಿಗಳನ್ನ ಮಾರಾಟಕ್ಕಿಡುತ್ತಿದ್ದರು. ಕಳೆದ ವರ್ಷ ಸುಪ್ರೀಂಕೋರ್ಟ್‌ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿ ತೀರ್ಪು ನೀಡಿರುವುದರಿಂದ ಅದಕ್ಕೆ ಅನುಗುಣವಾಗಿ ಪಟಾಕಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

ಮಕ್ಕಳ ಪಟಾಕಿಗೆ ಪ್ರಾಮುಖ್ಯತೆ: ವೈವಿಧ್ಯಮಯ ಪಟಾಕಿಗಳು ಕನಿಷ್ಠ 30 ರೂ.ನಿಂದ 2000 ರೂ.. 2,500 ರೂ.ವರೆಗೆ ಇದೆ. 200 ರೂ.ನಿಂದ ಬಾಕ್ಸ್‌ ಪ್ರಾರಂಭವಾಗಿ 1,500 ರೂ.ವರೆಗೆ ದೊರೆಯುತ್ತಿವೆ. ಮಕ್ಕಳು ಹೆಚ್ಚಾಗಿ ಸಿಡಿಸುವ ಪಟಾಕಿಗಳನ್ನು ಹೆಚ್ಚು ಮಾರಾಟಕ್ಕಿಡಲಾಗಿದೆ. ಅತಿ ಹೆಚ್ಚು ಶಬ್ಧ ಬರುವ ಪಟಾಕಿಗಳನ್ನು ಮಾರಾಟದಿಂದ ದೂರವಿಟ್ಟಿದ್ದಾರೆ.

Advertisement

ಹಸಿರು ಪಟಾಕಿಗಳ ಸ್ಟಿಕ್ಕರ್‌: ಈ ವರ್ಷ ಹಸಿರು ಪಟಾಕಿಗಳ ಹೆಸರಿನಲ್ಲಿ ಕೆಲ ಮಾರುಕಟ್ಟೆಗೆ ಬಂದಿವೆಯಾದರೂ ಅವುಗಳ ನಿಖರತೆ ಅರಿಯಲು ಸಾಧ್ಯವಾಗುತ್ತಿಲ್ಲ. ಪಟಾಕಿ ಮಾರಾಟಗಾರರು ಪ್ರತಿ ವರ್ಷ ಮಾರಾಟ ಮಾಡುವ ಪಟಾಕಿಗಳನ್ನೇ ಈಗಲೂ ಮಾರಾಟಕ್ಕೆ ಇಟ್ಟಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಯಾವ ಪಟಾಕಿಗಳನ್ನು ಮಾರಾಟ ಮಾಡಬೇಕು. ಯಾವುದನ್ನು ನಿಷೇಧ ಮಾಡಲಾಗಿದೆ ಎಂಬ ಬಗ್ಗೆ ಮೇಲ ಧಿಕಾರಿಗಳಿಂದ ಸ್ಪಷ್ಟ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಗೊಂದಲ ಮೂಡಿದೆ. ರಾತ್ರಿ 8 ರಿಂದ 10 ಗಂಟೆಗೆ ಸೀಮಿತವಾಗಿ ಪಟಾಕಿ ಸಿಡಿಸಬೇಕು. ಆ ನಂತರವೂ ಪಟಾಕಿ ಸಿಡಿಸಿದರೆ ಕಾನೂನುಕ್ರಮ ಜರುಗಿಸುವ ಎಚ್ಚರಿಕೆ ಮಾತ್ರ ಹೊರಬಿದ್ದಿದೆ.

ಮಳೆ ಭೀತಿ:ಈ ಬಾರಿ ಪಟಾಕಿ ಮಾರಾಟಕ್ಕೆ ಮಳೆ ಕಾಟವೂ ಅಡ್ಡಿಯಾಗಿದೆ. ಮಳಿಗೆ ಇರುವ ಜಾಗ ಸಮತಟ್ಟಾಗಿಲ್ಲ. ಮಳೆ ಸುರಿದರೆ ನೀರೆಲ್ಲವೂ ಮಳಿಗೆಯೊಳಗೆ ಹರಿದುಬರುತ್ತಿದೆ. ಹಾಗಾಗಿ ರಟ್ಟಿನ ಬಾಕ್ಸ್‌ಗಳನ್ನು ಕೆಳಕ್ಕೆ ಹಾಸಿ ಮರದ ಸ್ಟ್ಯಾಂಡ್‌ಗಳ ಮೇಲೆ ಪಟಾಕಿ ಜೋಡಿಸಿಡಲಾಗಿದೆ. ಮಳಿಗೆ ಮುಂಭಾಗಕ್ಕೆ ಮರದ ಆಧಾರದೊಂದಿಗೆ ಪ್ಲಾಸ್ಟಿಕ್‌ ಹೊದಿಕೆ ನಿರ್ಮಿಸಿ ಮಳೆಯಿಂದ ಪಟಾಕಿಗಳನ್ನು ರಕ್ಷಣೆ ಮಾಡಿದೆ.

ಭಾರೀ ಶಬ್ಧದ ಪಟಾಕಿ ಮಾರದಂತೆ ಸೂಚನೆ: ಭಾರೀ ಪ್ರಮಾಣದಲ್ಲಿ ಶಬ್ಧ ಬರುವ ಪಟಾಕಿಗಳನ್ನು ಮಾರಾಟ ಮಾಡದಂತೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಈ ಬಾರಿ ಒಳಾಂಗಣ ಕ್ರೀಡಾಂಗಣದ ಬಳಿ 15 ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ವಿದ್ಯುತ್ಛಕ್ತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪಟಾಕಿಗಳ ಬಗೆಯ ಬಗ್ಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಆದರೂ, ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದ್ದೇವೆಂದು ನಗರಸಭೆ ಪೌರಾಯುಕ್ತ ಎಸ್‌. ಲೋಕೇಶ್‌ ತಿಳಿಸಿದ್ದಾರೆ.

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next