Advertisement

ಜಿಲ್ಲೆಯಲ್ಲಿ ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ

10:58 AM Feb 12, 2023 | Team Udayavani |

ದೇವನಹಳ್ಳಿ: ಕಾಡ್ಗಿಚ್ಚು ಇಡೀ ಜಗತ್ತನ್ನೇ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ರಾಜ್ಯದ ವಿವಿಧ ಕಾಡಿನಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಹಬ್ಬುತ್ತಿದೆ. ಬೆಂಕಿ ಅನಾಹುತ ಜಿಲ್ಲೆಯಲ್ಲಿ ಆಗಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೆಂಕಿರೇಖೆ ನಿರ್ಮಿಸುವುದರ ಮೂಲಕ ಮುನ್ನೆಚ್ಚರಿಕಾ ಕ್ರಮವಹಿಸಿದೆ.

Advertisement

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕಡೆಗಳಲ್ಲಿ ಕಳೆದ ಮೂರ್‍ನಾಲ್ಕು ವರ್ಷದಿಂದಲೇ ಜೆಸಿಬಿ ಯಂತ್ರದ ಮೂಲಕ ಬೆಂಕಿರೇಖೆ ಅಳವಡಿಸಿ ಬೆಂಕಿಯನ್ನು ನಂದಿಸುವುದಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸ ಲಾಗಿದೆ. ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗುವ ಸಂದರ್ಭದಲ್ಲಿ ಸುಮಾರು 540 ಎಕರೆ ವಿಮಾನ ಜಾಗವನ್ನು ನಿಲ್ದಾಣಕ್ಕಾಗಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅದಕ್ಕೆ ಬದಲಿ ಜಾಗವನ್ನು ದೊಡ್ಡಬಳ್ಳಾಪುರದಲ್ಲಿ 540 ಎಕರೆ ಸರ್ಕಾರ ಕಾಡು ಬೆಳೆಸಲು ಜಾಗವನ್ನು ನೀಡಿದೆ.

ಜಿಲ್ಲೆಯ ಎಲ್ಲೆಡೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಬಾರದೆಂಬ ಉದ್ದೇಶ ಹೊಂದಿದ್ದು, ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.

ಕಿಡಿಗೇಡಿಗಳ ಮೋಜು-ಮಸ್ತಿ: ಬೇಸಿಗೆ ಆರಂಭವಾಗುತ್ತಿದೆ. ಕಾಡ್ಗಿಚ್ಚಿನ ಆಟ ಶುರುವಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಚಿಕ್ಕದಾಗಿ ಕಾಣುವ ಬೆಂಕಿ ಅರಣ್ಯವನ್ನು ಸುಡುವವರೆಗೂ ಹಬ್ಬುವ ಅಪಾಯವಿರುತ್ತದೆ. ಇದಕ್ಕಾಗಿ ಅರಣ್ಯ ಇಲಾಖೆ ಬೇಸಿಗೆ ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುತ್ತಿದೆ. ಇದರ ಅನುಸಾರ ಈ ಬಾರಿ ಅರಣ್ಯ ಇಲಾಖೆ ಫೈರ್‌ ಅಲರ್ಟ್‌ ತಂತ್ರಜ್ಞಾನದ ಮೂಲಕ ಹೊಸ ರೀತಿಯಲ್ಲಿ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಮುಂದಾಗಿದೆ. ಜಿಲ್ಲೆಯ 4 ತಾಲೂಕಿನಲ್ಲಿ ಸೇರಿದಂತೆ ಒಟ್ಟು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಆವರಿಸಿದೆ. ಜನವರಿಯಿಂದ ಮೇ ತಿಂಗಳವರೆಗೂ ಪ್ರತಿವರ್ಷ ಬೇಸಿಗೆಯ ತಾಪ, ಅರಣ್ಯದೊಳಗಿನ ಕೆಲ ಚಟುವಟಿಕೆಗಳು, ಅರಣ್ಯ ದಂಚಿನ ಗ್ರಾಮಸ್ಥರು, ಕಿಡಿಗೇಡಿಗಳು ಮೋಜು ಮಸ್ತಿ ಕಾರಣಗಳಿಂದ ಅರಣ್ಯಕ್ಕೆ ಬೆಂಕಿ ಬೀಳುವ ಸಂಭವ ಹೆಚ್ಚಾಗಿಯೇ ಇದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮವಹಿಸಲು ಮುಂದಾಗಿದೆ. ಫೈರ್‌ ವಾಚರ್‌ ಸೇರಿದಂತೆ ನಾನಾ ವ್ಯವಸ್ಥೆ ಕೈಗೊಂಡಿದೆ.

ಬೆಂಕಿ ಹರಡುವುದು ಹೇಗೆ?: ಬೆಂಕಿರೇಖೆಗಳನ್ನು ನಿರ್ಮಿಸುವುದರಿಂದ ಅನಾಹುತ ತಡೆಯಬಹುದು. ಕಾಡ್ಗಿಚ್ಚು ಆವರಿಸಿದ ಕೂಡಲೇ ಬೆಂಕಿ ನಂದಿಸಲು ಅನುಕೂಲ ಆಗುವಂತೆ ರೇಖೆ ನಿರ್ಮಿಸಲಾಗಿದೆ. ಮಾನವ ಕಾಡಿನ ಅಂಚಿನಲ್ಲಿ ಒಡನಾಟ ಇದ್ದಾಗ ಬೀಡಿ, ಸಿಗರೇಟ್‌, ಸೇದಿ ಬಿಸಾಡುವುದು, ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮೋಜು-ಮಸ್ತಿ ಸಂದರ್ಭದಲ್ಲಿ ಅಡುಗೆ ಮಾಡಿಕೊಳ್ಳುವುದು. ಉದ್ದೇಶ ಪೂರಕವಾಗಿ ಬೆಂಕಿ ಕಳೆ ಮುಂತಾದ ಬೇಡದ ಗಿಡಗಳ ನಾಶಕ್ಕೆ ಬೆಂಕಿ ಹಚ್ಚುವು ದರಿಂದ ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ನೆಲಮಂಗಲ ತಾಲೂಕಿನ ಬಳಗೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಗಡಿ ಅಂಚಿನಲ್ಲಿ ಮಾಗಡಿ ಮತ್ತು ನೆಲಮಂಗಲ ಗಡಿಪ್ರದೇಶ, ದೇವನಹಳ್ಳಿ ತಾಲೂಕಿನ ಕೊಯಿರಾ ಬೆಟ್ಟ, ಕೋಡಗುರ್ಕಿ, ಕಾರಹಳ್ಳಿ ಸಮೀಪದಲ್ಲಿರುವ ಪಂಚಗಿರಿಧಾಮಗಳಲ್ಲಿ ಒಂದಾದ ದಿಬ್ಬಗಿರಿ ಬೆಟ್ಟ ನಾರಾಯಣಪುರ, ಬೆಟ್ಟಕೋಟೆ, ರಾಯಸಂದ್ರ, ಕೋರಮಂಗಲ ಅರಣ್ಯೇತರ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಕೊಯುರಾ ಬೆಟ್ಟದಲ್ಲಿ, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿ ಕಾಡ್ಗಿಚ್ಚು ಹರಡುತ್ತದೆ.

Advertisement

ವಾಚರ್ಸ್‌ ವ್ಯವಸ್ಥೆ: ಅರಣ್ಯ ಇಲಾಖೆಯು ಪ್ರತಿವರ್ಷ ಬೇಸಿಗೆ ಆರಂಭಕ್ಕೂ ಮುನ್ನ ಕಾಡಿನ ರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ತೊಡಗಿಕೊಳ್ಳುತ್ತದೆ. ಬೇಸಿಗೆ ಆರಂಭವಾದ ಹಿನ್ನೆಲೆ, ಈಗಾಗಲೇ ಮುನ್ನೆಚ್ಚರಿಕೆ ವಹಿಸಿದೆ. ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ವಾರ್ಚಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಜತೆಗೆ ಅರಣ್ಯದ ಸುತ್ತಮುತ್ತಲಿನ ದಾರಿಗಳ ಸ್ವತ್ಛತೆ ಮಾಡಲಾಗಿದೆ. ಈ ಬಾರಿ ಮಳೆ ಕೂಡ ಹೆಚ್ಚಾದ ಹಿನ್ನೆಲೆ ಗಿಡಗಳು ಹೆಚ್ಚಾಗಿ ಬೆಳೆದು ಬೇಸಿಗೆ ಹಿನ್ನೆಲೆ ಒಣಲಿವೆ. ಇದು ಹೆಚ್ಚಾಗಿ ಕಾಡ್ಗಿಚ್ಚಿಗೆ ಕಾರಣವಾಗಲಿದ್ದು, ಇಲಾಖೆ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕಿದೆ.

ಅರಣ್ಯಕ್ಕೆ ಪ್ಲಾಸ್ಟಿಕ್‌ ಕಂಟಕ: ಜಿಲ್ಲೆಯ 4 ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಸಂದರ್ಭ ಅಥವಾ ಆಕಸ್ಮಿಕವಾಗಿ ಹತ್ತುವ ಬೆಂಕಿ ಹೆಚ್ಚಾಗಿ ಹರಡಲು ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಬೆಟ್ಟ, ಅರಣ್ಯಭಾಗಗಳಿಗೆ ಟ್ರಕಿಂಗ್‌ಗೆಂದು ತೆರಳುವ ಪ್ರವಾಸಿಗರು ತಾವು ಕೊಂಡೊಯ್ದ ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಕವರ್‌ ಗಳನ್ನು ಅಲ್ಲಲ್ಲಿ ಎಸೆಯುವುದರಿಂದ ಕಾಡಿಗೆ ಬೆಂಕಿ ಬಿದ್ದ ಸಮಯದಲ್ಲಿ ಹೆಚ್ಚು ಹೊತ್ತು ಉರಿಯುವುದರಿಂದ ಬೆಂಕಿ ಆರಿಸಲು ತಡವಾಗುವಂತೆ ಮಾಡುತ್ತದೆ. ಇದರಿಂದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಬೇಕಿದೆ.

ಹೊಸ ತಂತ್ರಜ್ಞಾನ ಅಳವಡಿಸಿ : ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆಗೆ ಬಹಳ ಸಮಯ ಬೇಕಾಗುವುದರಿಂದ ಅರಣ್ಯ ಇಲಾಖೆಯು ಜಿಲ್ಲೆಯಲ್ಲಿನ ಪ್ರಗತಿಪರ ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಿ ಮುಂಗಾರಿನ ನಂತರ ಹೊಸ ಗಿಡಗಳ ನೆಡಲು ಆಹ್ವಾನಿಸಬೇಕು. ಕಳೆದ ಹಲವು ವರ್ಷಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗಳೇ ಅನಧಿಕೃತವಾಗಿ ಹಣ ಪಡೆದು ಮೋಜು-ಮಸ್ತಿಗೆ ಮತ್ತು ವನ್ಯಮೃಗಗಳ ಬೇಟೆಗೆ ಅವಕಾಶ ನೀಡುವುದು ಕಂಡುಬಂದಿದೆ. ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪರಿಸರ ಪ್ರೇಮಿ ಮಂಜುನಾಥ ತಿಳಿಸಿದ್ದಾರೆ.

ನೀಲಗಿರಿ ಮರಗಳಿಂದ ಅರಣ್ಯಕ್ಕೆ ಹಾನಿ : ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿರುವ ನೀಲಗಿರಿ ಮರಗಳೇ ಕಾಡಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ಮರಗಳ ನೆರಳಿನಲ್ಲಿ ಯಾವುದೇ ಗಿಡಮರಗಳು ಬೆಳೆಯುವುದಿಲ್ಲ. ಭೂಮಿಯೊಳಗಿನ ನೀರಿನ ಅಂಶವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳುವ ಮರಗಳು ಇವಾಗಿವೆ. ಅಲ್ಲದೆ, ನೀಲಗಿರಿ ಮರಗಳು ಬೆಂಕಿ ಬಿದ್ದಂತಹ ಸಮಯದಲ್ಲಿ ಕಾಡಿಗೆ ಬೆಂಕಿ ವ್ಯಾಪಿಸುವುದಕ್ಕೆ ಸಹಕಾರಿಯಾಗುವುದಲ್ಲದೆ, ಅತಿ ಶೀಘ್ರಗತಿಯಲ್ಲಿ ಬೆಂಕಿಯ ಕೆನ್ನಾಲಿಗೆ ಅರಣ್ಯಕ್ಕೆ ವ್ಯಾಪಿಸುತ್ತದೆ. ಹೀಗಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಾಡಿಗೆ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ಕ್ರಮವಹಿಸ ಬೇಕು. ವಿದೇಶಗಳಲ್ಲಿ ಬೆಂಕಿ ನಂದಿಸಲು ಹೆಲಿಕ್ಯಾಪ್ಟರ್‌ ಬಳಸುತ್ತಾರೆ. ಹೊಸ ಮಾದರಿಗಳಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಚಿಕ್ಕೇಗೌಡ, ಸಾಮಾಜಿಕ ಕಾರ್ಯಕರ್ತ

ಜಿಲ್ಲೆಯಲ್ಲಿ ಕಾಡ್ಗಿಚ್ಚು ತಡೆಗೆ ಬೆಂಕಿರೇಖೆಗಳ ನಿರ್ಮಾಣ ಮಾಡಲಾಗುತ್ತಿದೆ. ಬೆಂಕಿ ಆರಿಸಲು ಸಿಬ್ಬಂದಿ ನೇಮಿಸಲಾಗಿದೆ. ಜನರಿಗೆ ಬೆಂಕಿ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಸುಮಿತ್‌, ಅರಣ್ಯ ಉಪಸಂರಕ್ಷಣಾಧಿಕಾರಿ

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next