ಬೆಳ್ತಂಗಡಿ: ನೆರಿಯ ಅಣಿಯೂರು ಹಳ್ಳದ ಖಾಸಗಿ ಕಿರು ಜಲವಿದ್ಯುತ್ ಯೋಜನೆಯಿಂದ ಗುರುವಾಯನಕೆರೆ ಪವರ್ ಗ್ರಿಡ್ಗೆ ವಿದ್ಯುತ್ ಹರಿಯುವ ವಯರ್ನಲ್ಲಿ ಗುರುವಾರ ಮಧ್ಯರಾತ್ರಿ ಸೋಮಂತಡ್ಕ ಶಾರದಾ ನಗರ ಅಡೂರು ತಿರುವು ಸನಿಹ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವತರಣ ಸೃಷ್ಟಿಯಾಗಿತ್ತು.
ಈ ವಯರ್ನಲ್ಲಿ 2 ಗಂಟೆ ರಾತ್ರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಉಂಡೆಗಳು ಕೆಳಬಿದ್ದು ಪೊದೆಗೆ ಬೆಂಕಿ ಹತ್ತಿಕೊಂಡಿತ್ತು. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಲಾರಂಭಿಸಿದೆ.
ಆದರೆ ಕಳೆದ ರಾತ್ರಿ ಮಂಜುಶ್ರೀ ಭಜನಾ ಮಂದಿರದಲ್ಲಿ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ಇದ್ದುದರಿಂದ ರಸ್ತೆಯಲ್ಲಿ ಅಪರಾತ್ರಿಯೂ ಜನ ಸಂಚಾರ ಇತ್ತು. ಪೂಜೆಯಿಂದ ಮನೆಗೆ ಮರಳುತ್ತಿದ್ದ ಮುಂಡಾಜೆ ಗ್ರಾ.ಪಂ.ಅಧ್ಯಕ್ಷ ಗಣೇಶ್ ಬಂಗೇರ ಅವರು ಬೆಂಕಿ ಉರಿಯುತ್ತಿದ್ದುದನ್ನು ಗಮನಿಸಿ ಇಲಾಖೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡ ಪಕ್ಕದಲ್ಲೇ ಹಳೆಯ ವಾಹನಗಳ ಬಿಡಿಭಾಗ ಮಾರಾಟದ ವಿಶಾಲ ಶೋರೂಂ ಇದ್ದು, ಅಪರಾತ್ರಿ ಬೆಂಕಿಯನ್ನು ಯಾರೂ ನೋಡಿರದಿದ್ದರೆ ಬೆಂಕಿ ವ್ಯಾಪಿಸಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಲ್ಲೇ ಹಿಂದಕ್ಕೆ ಮನೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡ ಇತ್ತು. ವಿಷಯ ಅರಿತ ಸ್ಥಳೀಯರು ಪೊದೆಗೆ ನೀರು ಹಾಯಿಸಿ ಬೆಂಕಿ ಹಬ್ಬದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯುತ್ ಮಾರ್ಗದುದ್ದಕ್ಕೂ ಪೊದೆಗಳು ವಯರ್ನ ಸಮೀಪದವರೆಗೂ ಜೋತುಬಿದ್ದಿವೆ. ಸಮರ್ಪಕ ನಿರ್ವಹಣೆಯಿಲ್ಲದೆ ಇಂತಹಾ ಅವ್ಯವಸ್ಥೆಗೆ ಕಾರಣವಾಗುತ್ತದೆ. ಕಂಪೆನಿ ಕಡೆಯಿಂದ ಪೊದೆಗಳ ನಿರ್ವಹಣೆಯಾದರೆ ಇಂತಹ ಸಂದರ್ಭಗಳಲ್ಲಿ ಹಾನಿ ಪ್ರಮಾಣ ತಗ್ಗಿಸಬಹುದಾಗಿದೆ.