Advertisement

ಮುಗಿದ ಮತದಾನ ; ಆರಂಭವಾದ ಗೆಲುವಿನ ಗಣಿತ

03:51 AM Apr 20, 2019 | Team Udayavani |

ಮಂಗಳೂರು: ಸುಮಾರು ಒಂದು ತಿಂಗಳಿನಿಂದ ಕರಾವಳಿಯಲ್ಲಿ ಬಿಸಿಯೇರಿದ್ದ ಚುನಾವಣೆಯ ಹವಾ
ತಣ್ಣಗಾಗಿದೆ. ಮೇ 23ರ ಮತ ಎಣಿಕೆಯತ್ತ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ. ಮತಯಂತ್ರದೊಳಗೆ ಭದ್ರವಾಗಿರುವ ಜನಾದೇಶ ಪ್ರಕಟಗೊಳ್ಳಲು ಇನ್ನು 34 ದಿನಗಳು ಬಾಕಿಯಿದ್ದು, ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ, ವಿಶ್ಲೇಷಣೆ ಆರಂಭಗೊಂಡಿದೆ.

Advertisement

ಕರಾವಳಿಯ ಕಡು ಬಿಸಿಲ ಬೇಗೆಯನ್ನು ಚುನಾವಣೆಯ ಕಾವು ಇನ್ನಷ್ಟು ಏರಿಸಿತ್ತು. ಮತದಾರರ ಮನಸ್ಸು ಗೆಲ್ಲಲು ಪಕ್ಷಗಳು ನಾನಾ ರೀತಿಯ ಕಸರತ್ತು, ಕಾರ್ಯತಂತ್ರ ಅನುಸರಿಸಿದ್ದವು. ಆರೋಪ ಪ್ರತ್ಯಾರೋಪ, ವಾದ ವಿವಾದ, ಭರವಸೆ, ಆಶ್ವಾಸನೆಗಳು ಕಣದಲ್ಲಿ ಸಾಕಷ್ಟು ಹರಿದಾಡಿದ್ದವು. ಬಹಿರಂಗ ಪ್ರಚಾರ, ರೋಡ್‌ಶೋಗಳು ನಡೆದಿದ್ದವು. ಮತದಾರರ ಮನೆಯೆಡೆಗೆ ಅಭ್ಯರ್ಥಿಗಳು, ಕಾರ್ಯಕರ್ತರ ನಡಿಗೆಯಿತ್ತು. ಪ್ರಭಾವಿ ನಾಯಕರು ಆಗಮಿಸಿ ಪ್ರಖರ ಭಾಷಣದ ಮೂಲಕ ಸಂಚಲನ ಮೂಡಿಸಿದ್ದರು. ಎ.18ರ ಮತದಾನದ ಜತೆಗೆ ಇದೆಲ್ಲದಕ್ಕೂ ತೆರೆಬಿದ್ದಿದೆ.

ದಾಖಲೆ ಮತದಾನ; ಗೆಲುವಿನ ಲೆಕ್ಕಚಾರ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಹಿಂದಿನ ಎಲ್ಲ ಲೆಕ್ಕಾಚಾರಗಳನ್ನು ಮೀರಿಸಿ ದಾಖಲೆಯ ಶೇ.77.90 ಮತ ದಾನವಾಗಿದೆ. ಸುಳ್ಯದಲ್ಲಿ ಆಗಿರುವ ಶೇ.84 ಮತದಾನ ಜಿಲ್ಲೆಯ ಗರಿಷ್ಠ. ಹೆಚ್ಚಿದ ಮತದಾನ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಟ್ರೆಂಡ್‌ ಆಧರಿಸಿ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಆರಂಭಗೊಂಡಿದೆ. ಇದರ ಜತೆಗೆ ಗರಿಷ್ಠ ಮತದಾನ ಯಾವ ರಾಜಕೀಯ ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.

ಬೂತ್‌ ಮಟ್ಟದಲ್ಲಿ ಲೆಕ್ಕಚಾರ
ಕ್ಷೇತ್ರದ ಎಲ್ಲ 1,861 ಬೂತ್‌ಗಳ ಮತದಾರರ ಪಟ್ಟಿಯನ್ನು ಹಿಡಿದುಕೂಡಿಸಿ ಕಳೆಯುವ ಲೆಕ್ಕಾಚಾರ ನಡೆಯುತ್ತಿದೆ. ಪ್ರತೀ ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಬರುವ ಪಕ್ಕಾ ಮತಗಳು, ಎದುರಾಳಿ ಅಭ್ಯರ್ಥಿಗೆ ಹೋಗಿರಬಹುದಾದ ಮತಗಳು, ಶೇ.50-50ರ ಅಂಚಿನಲ್ಲಿರುವ ಮತಗಳನ್ನು ಅಂದಾಜಿಸಿ ಮತಗಳಿಕೆ ಲೆಕಾಚಾರ ಆರಂಭಗೊಂಡಿದೆ. ಇದನ್ನು ಕ್ರೋಡೀಕರಿಸಿ ಗೆಲುವಿನ ಸಾಧ್ಯತೆ, ಅಂತರಗಳ ಒಟ್ಟು ರೇಖಾಚಿತ್ರಣ ರೂಪಿಸುವುದರಲ್ಲಿ ಪಕ್ಷಗಳು, ಅಭ್ಯರ್ಥಿಗಳು ವ್ಯಸ್ತರಾಗಿದ್ದಾರೆ.

ಇನ್ನೊಂದೆಡೆ ಗೆಲುವು ಯಾರದಾಗಿರಬಹುದು ಎಂಬ ಕುತೂಹಲ ಮತದಾರರಲ್ಲೂ ಮನೆ ಮಾಡಿದೆ.ಮದುವೆ ಸಹಿತ ಶುಭ ಸಮಾರಂಭಗಳು, ಇತರ ಕಾರ್ಯಕ್ರಮಗಳಲ್ಲಿ ಮತದಾನೋತ್ತರ ಚರ್ಚೆಯೇ ಮುಖ್ಯಾಂಶ.

Advertisement

ಹರಕೆ, ಹಾರೈಕೆ
ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಟೆಂಪಲ್‌ ರನ್‌ ನಡೆದಿದ್ದರೆ ಮತದಾನದ ಬಳಿಕ ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಹರಕೆ ಪರ್ವ ಆರಂಭಗೊಂಡಿದೆ. ತಮ್ಮ ಅಭ್ಯರ್ಥಿ ಗೆದ್ದರೆ ದೇವರಿಗೆ, ದೈವಗಳಿಗೆ ವಿವಿಧ ರೀತಿಯ ಹರಕೆಗಳನ್ನು ಹೇಳಿ ಪ್ರಾರ್ಥನೆ ಸಲ್ಲಿಸುವ ಕಾರ್ಯ ನಡೆಯುತ್ತಿದೆ. ಇದು ಸಾವಿರ ರೂ.ನಿಂದ ಆರಂಭವಾದದ್ದು ಲಕ್ಷಗಟ್ಟಲೆ ರೂ.ವರೆಗೂ ಇದೆ. ಕದ್ದುಮುಚ್ಚಿದ ಬೆಟ್ಟಿಂಗ್‌ ನಡೆಯುತ್ತಿರುವುದು ಕೂಡ ಸುಳ್ಳಲ್ಲ.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next