Advertisement

Karkala ಹಣಕಾಸಿನ ವಿಚಾರ: ವ್ಯಕ್ತಿಯ ಅಪಹರಿಸಿ ಹಲ್ಲೆ, ಪ್ರಕರಣ ದಾಖಲು

12:05 AM Sep 06, 2023 | Team Udayavani |

ಕಾರ್ಕಳ: ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ಕೊಂಕಣರಬೆಟ್ಟು ಹೌಸ್‌ ನಿವಾಸಿ ಜಗದೀಶ್‌ ಪೂಜಾರಿ (40) ಅವರನ್ನು ಹಣಕಾಸಿನ ತಗಾದೆ ಹಿನ್ನೆಲೆಯಲ್ಲಿ ಅಪಹರಿಸಿ ಹಲ್ಲೆ ಮಾಡಿದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರೆಂಜಾಳ ಗ್ರಾಮದ ಪ್ರಕಾಶ್‌ ಮೆಂಡೋನ್ಸಾ ಎಂಬವರಿಗೆ 12 ವರ್ಷದ ಹಿಂದೆ ಜಗದೀಶ್‌ ಪೂಜಾರಿ 1.50 ಲಕ್ಷ ರೂ. ಸಾಲ ನೀಡಿದ್ದರು. ಇದರ ಭದ್ರತೆಗಾಗಿ ಜಗದೀಶ್‌ ಪೂಜಾರಿ ಖಾಲಿ ಚೆಕ್‌ ಪಡೆದುಕೊಂಡಿದ್ದರು. ಮೆಂಡೊನ್ಸಾ ಹಣ ವಾಪಸ್‌ ನೀಡದಿರುವ ಹಿನ್ನೆಲೆಯಲ್ಲಿ ಜಗದೀಶ್‌ ಪೂಜಾರಿ ಚೆಕ್‌ ಬೌನ್ಸ್‌ ಕೇಸು ದಾಖಲಿಸಿದ್ದರು. ಮೆಂಡೋನ್ಸಾ 1 ಲಕ್ಷ ರೂ. ನೀಡಿ ಕೇಸು ಹಿಂದೆಗೆದುಕೊಳ್ಳಲು ಹೇಳಿದ್ದರು. ಉಳಿದ 50 ಸಾವಿರ ರೂ. ನೀಡಿದ ಬಳಿಕವಷ್ಟೆ ಕೇಸು ಹಿಂಪಡೆಯುವುದಾಗಿ ಜಗದೀಶ್‌ ಪೂಜಾರಿ ತಿಳಿಸಿದ್ದರು.

ಆ. 29ರಂದು ಜಗದೀಶ್‌ ಪೂಜಾರಿಯವರು ಸಂಜೆ 5 ಗಂಟೆಗೆ ಇರ್ವತ್ತೂರು ಗ್ರಾಮದ ಹಾಲಿನ ಡೇರಿಗೆ ಹಾಲು ನೀಡಲೆಂದು ಹೋದ ವೇಳೆ ಅಶೋಕ್‌ ಕೋಟ್ಯಾನ್‌, ಸಾಣೂರು ಜಗದೀಶ್‌ ಪೂಜಾರಿ ಅಡ್ಡಗಟ್ಟಿ ದಬಾಯಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಜಗದೀಶ್‌ ಪೂಜಾರಿಯವರನ್ನು ವಾಹನದಲ್ಲಿ ಅಶೋಕ್‌ ಕೋಟ್ಯಾನ್‌ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಹಲ್ಲೆ ಮಾಡಿ ಪ್ರಕಾಶ್‌ ಮೆಂಡೋನ್ಸನ ವಿರುದ್ಧ ಹಾಕಿರುವ ಕೇಸು ವಾಪಸು ತೆಗೆದುಕೊಳ್ಳಬೇಕು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಸಿ ಬಳಿಕ ಅದೇ ವಾಹನದಲ್ಲಿ ವಾಪಸು ಕರೆತಂದು ಸಾಣೂರು ಬಳಿ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದಂತೆ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next