Advertisement

ಶಾಲಾ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ

06:18 PM Apr 22, 2022 | Shwetha M |

ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾವರ್ದಕ ಸಂಘದಡಿ ನಡೆಯುತ್ತಿರುವ ಸಿದ್ದಲಿಂಗೇಶ್ವರ ವಿಶ್ವಭಾರತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅಸ್ಕಿ ಫೌಂಡೇಶನ್‌ ವತಿಯಿಂದ ಫೌಂಡೇಶನ್‌ ಅಧ್ಯಕ್ಷ ಸಿ.ಬಿ. ಅಸ್ಕಿ (ಕೊಣ್ಣೂರ) ಅವರು 51 ಸಾವಿರ ರೂ. ಧನಸಹಾಯ ನೀಡಿದರು.

Advertisement

ನಂತರ ಮಾತನಾಡಿದ ಅವರು, ಮಿಣಜಗಿ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಂತ ಭಲದ ಮೇಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತ ಬಂದಂತಹ ಸಿದ್ದಲಿಂಗೇಶ್ವರ ವಿಶ್ವ ಭಾರತಿ ಶಾಲೆ ಕಾರ್ಯ ಶ್ಲಾಘನೀಯ. ಈ ಶಾಲೆಗೆ ಇಲ್ಲಿವರೆಗೂ ಕಟ್ಟಡದ ಸೌಭಾಗ್ಯ ದೊರೆತ್ತಿದ್ದಿಲ್ಲ. ಮಿಣಜಗಿ ಗ್ರಾಮದ ಮುಖಂಡರೊಬ್ಬರು 2 ಎಕರೆ ಜಮೀನು ನೀಡಿದ್ದರಿಂದ ಸ್ವಂತ ಕಟ್ಟಡ ಹೊಂದಬೇಕೆಂಬ ಆಡಳಿತ ಮಂಡಳಿಯ ಅಭಿಲಾಷೆಯಂತೆ 23ನೇ ವಾರ್ಷಿಕ ಸ್ನೇಹ ಸಮ್ಮೇಳನದ ಸಮಯದಲ್ಲಿ ಅಸ್ಕಿ ಫೌಂಡೇಶನ್‌ ವತಿಯಿಂದ 51 ಸಾವಿರ ರೂ. ಧನಸಹಾಯ ಘೋಷಣೆ ಮಾಡಲಾಗಿತ್ತು. ಅದರಂತೆ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರಿಗೆ 51 ಸಾವಿರ ರೂ. ಧನಸಹಾಯ ನೀಡಲಾಗಿದೆ. ಶಾಲಾ ಕಟ್ಟಡ ನಿರ್ಮಾಣ ಸಮಯದಲ್ಲಿ ನಮ್ಮ ಫೌಂಡೇಶನ್‌ ವತಿಯಿಂದ ಜಲ್ಲಿ ಕಲ್ಲು ಮತ್ತು ಎಂ ಶ್ಯಾಂಡ್‌ನ್ನು ಉಚಿತವಾಗಿ ಒದಗಿಸುತ್ತೇನೆ ಎಂದರು.

ಈ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಯ ಎಸ್‌.ಎಸ್‌. ಮ್ಯಾಗೇರಿ, ಸಿದ್ದನಗೌಡ ಬಿರಾದಾರ, ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ಬೀರಪ್ಪ ಮಂಗ್ಯಾಳ, ಮುಖ್ಯೋಪಾಧ್ಯಾಯ ರಾಜಶೇಖರ ತೋಟದ, ಶಿಕ್ಷಕರಾದ ಶೃತಿ ಮಸ್ಕಾನಾಳ, ಗುರಲಿಂಗಮ್ಮ, ಅಸ್ಕಿ ಫೌಂಡೇಶನ್‌ ತಾಲೂಕು ಸಂಚಾಲಕ ವೀರೇಶ ಅಸ್ಕಿ, ಯಲ್ಲಪ್ಪ ಮಾದರ, ರಹೀಮ ಅವಟಿ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next