Advertisement

ATM ವಿತ್‌ ಡ್ರಾಗೆ ಶುಲ್ಕವಿಲ್ಲ; ರಿಟರ್ನ್ಸ್ ಗಡುವು ವಿಸ್ತರಣೆ

11:15 AM Mar 27, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ದಾಳಿಗೆ ತತ್ತರಿಸಿರುವ ಜನತೆ, ಹೂಡಿಕೆದಾರರು ಹಾಗೂ ಹಣಕಾಸು ಮಾರುಕಟ್ಟೆಗೆ ಉತ್ತೇಜನ ನೀಡಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

Advertisement

ಇನ್ನು 3 ತಿಂಗಳ ಕಾಲ ನೀವು ಯಾವುದೇ ಬ್ಯಾಂಕಿನ ಎಟಿಎಂನಲ್ಲೂ ಡೆಬಿಟ್‌ ಕಾರ್ಡ್‌ ಮೂಲಕ ಎಷ್ಟು ಬಾರಿ ಹಣ ವಿತ್‌ ಡ್ರಾ ಮಾಡಿದರೂ, ಅದಕ್ಕೆ ಶುಲ್ಕ ವಿಧಿಸಲಾಗುವುದಿಲ್ಲ. ಈ ಉಚಿತ ವಹಿವಾಟಿಗೆ ಸದ್ಯಕ್ಕೆ 3 ತಿಂಗಳ ಮಿತಿ ಹೇರಲಾಗಿದೆ. ಅಲ್ಲದೆ, ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇಲ್ಲದಿದ್ದರೆ ವಿಧಿಸಲಾಗುತ್ತಿದ್ದ ಶುಲ್ಕವನ್ನೂ ಮನ್ನಾ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಘೋಷಿಸಿದ್ದಾರೆ.

ಕೋವಿಡ್ 19 ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‌ ಡೌನ್‌ ಆಗಿದ್ದು, ಜನಸಾಮಾನ್ಯರಿಂದ ಹಿಡಿದು ಬೃಹತ್‌ ಕಂಪನಿಗಳವರೆಗೆ ಎಲ್ಲರೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವ ಕಾರಣ ಇಂಥ ಘೋಷಣೆಗಳನ್ನು ಮಾಡಲಾಗಿದೆ.

ಇದೇ ವೇಳೆ, ಪ್ರಸ್ತುತ ಆರ್ಥಿಕ ಸ್ಥಿತಿಯು ಏಪ್ರಿಲ್‌ ಬಳಿಕವೂ ಹೀಗೆಯೇ ಮುಂದುವರಿದರೆ, ದಿವಾಳಿ ಸಂಹಿತೆ (ಐಬಿಸಿ)ಯ ಸೆಕ್ಷನ್‌ 7, 9 ಮತ್ತು 10 ಅನ್ನು 6 ತಿಂಗಳ ಅವಧಿಗೆ ರದ್ದು ಮಾಡುವ ಕುರಿತು ಪರಿಶೀಲಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಕಂಪನಿಗಳು ಸಾಲ ಮರುಪಾವತಿ ಮಾಡಲಾಗದೆ, ದಿವಾಳಿಯಾಗುವುದನ್ನು ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

5 ಕೋಟಿ ರೂ. ವರೆಗೆ ವಹಿವಾಟು ನಡೆಸುವ ಕಂಪನಿಗಳು ಜಿಎಸ್‌ಟಿ ರಿಟನ್ಸ್‌ ಅನ್ನು ವಿಳಂಬವಾಗಿ ಸಲ್ಲಿಸಿದರೆ, ವಿಳಂಬ ಶುಲ್ಕ, ದಂಡ ಅಥವಾ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು 5 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸುವ ಕಂಪನಿಗಳು ವಿಳಂಬವಾಗಿ ಜಿಎಸ್‌ಟಿ ರಿಟನ್ಸ್‌ ಫೈಲ್‌ ಮಾಡಿದರೆ, 15 ದಿನಗಳವರೆಗೆ ಅಂಥ ಕಂಪನಿಗಳಿಗೆ ವಿಳಂಬ ಶುಲ್ಕ ಮತ್ತು ದಂಡ ವಿಧಿಸುವುದಿಲ್ಲ. ಆದರೆ, ಶೇ. 9ರಷ್ಟು ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ ಎಂದಿದ್ದಾರೆ. ಜತೆಗೆ, ಟಿಡಿಎಸ್‌ ಠೇವಣಿ ಪಾವತಿಗೆ ವಿಳಂಬ ಮಾಡಿದರೆ ವಿಧಿಸಲಾಗುವ ಬಡ್ಡಿ ದರವನ್ನು ಈಗಿರುವ ಶೇ.18ರಿಂದ ಶೇ.9ಕ್ಕಿಳಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

Advertisement

ಎಂಎಸ್‌ಎಂಇಗಳಿಗೆ ನೆಮ್ಮದಿ: ಈವರೆಗೆ ದಿವಾಳಿ ಸಂಹಿತೆಯ ಅನ್ವಯ ಸಾಲ ಮರುಪಾವತಿ ಮಾಡದೇ ಇದ್ದರೆ, ಅಂಥ ಕಂಪನಿಗಳ ವಿರುದ್ಧ ದಿವಾ ಳಿತನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದಕ್ಕೆ ಸುಸ್ತಿಯ ಮೊತ್ತವನ್ನು 1 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು. ಆದರೆ, ಈಗ ಈ ಮಿತಿಯನ್ನು 1 ಕೋಟಿ ರೂ.ಗೆ ಏರಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಾಗಿದೆ.

ಇದೇ ವೇಳೆ, ಹೊಸದಾಗಿ ಸ್ಥಾಪನೆಯಾದ ಸಂಸ್ಥೆಗಳು ತಮ್ಮ ವಹಿವಾಟು ಆರಂಭದ ಕುರಿತು ಘೋಷಣಾ ಪತ್ರ ಸಲ್ಲಿಸಲು ಇರುವ 6 ತಿಂಗಳ ಕಾಲಮಿತಿಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ. ವ್ಯಾಪಾರ ಮತ್ತು ರಫ್ತು ಚಟುವಟಿಕೆಗಳಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಕಸ್ಟಮ್ಸ್ ಇಲಾಖೆಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ ನಿರ್ಮಲಾ.

ಸದ್ಯದಲ್ಲೇ ಆರ್ಥಿಕ ಪ್ಯಾಕೇಜ್‌
ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕೆಂದು ಸರಕಾರ ಇತ್ತೀಚೆಗೆ ರಚಿಸಿರುವ ಆರ್ಥಿಕ ಕಾರ್ಯಪಡೆಯ ನಿರ್ಧಾರದಂತೆ, ನಾಗರಿಕರು ಹಾಗೂ ಕಂಪನಿಗಳ ಮೇಲಿನ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ಈ ಘೋಷಣೆಗಳನ್ನು ಮಾಡಲಾಗಿದೆ. ಸದ್ಯದಲ್ಲೇ ಕೋವಿಡ್ -19 ನಷ್ಟವನ್ನು ಭರಿಸಲು ಕೈಗಾರಿಕೆಗಳಿಗೆ ಆರ್ಥಿಕ ಪರಿಹಾರ ಪ್ಯಾಕೇಜನ್ನು ಘೋಷಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಆದರೆ, ಈ ಪರಿಹಾರ ಪ್ಯಾಕೇಜನ್ನು ಯಾವಾಗ ಘೋಷಿಸಲಾಗುತ್ತದೆ ಎಂಬ ಬಗ್ಗೆ ಸಚಿವೆ ನಿರ್ಮಲಾ ಯಾವುದೇ ಮಾಹಿತಿ ನೀಡಿಲ್ಲ.

ಪ್ರಮುಖ ಘೋಷಣೆಗಳು
– ಎಲ್ಲ ಬ್ಯಾಂಕುಗಳ ಎಟಿಎಂಗಳಲ್ಲೂ ಡೆಬಿಟ್‌ ಕಾರ್ಡ್‌ ಬಳಕೆ ಶುಲ್ಕ ಸಂಪೂರ್ಣ ಮನ್ನಾ
– ಬ್ಯಾಂಕ್‌ ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಬ್ಯಾಲೆನ್ಸ್‌ ನಿಯಮ 3 ತಿಂಗಳ ಅವಧಿಗೆ ರದ್ದು
– 2018-19ರ ಹಣಕಾಸು ವರ್ಷದ ರಿಟನ್ಸ್‌ ಸಲ್ಲಿಕೆ ಗಡುವು ಜೂನ್‌ 30ರವರೆಗೆ ವಿಸ್ತರಣೆ
– ಸಲ್ಲಿಕೆ ವಿಳಂಬವಾದರೆ ವಿಧಿಸಲಾಗುವ ಬಡ್ಡಿ ದರ ಶೇ.12ರಿಂದ ಶೇ.9ಕ್ಕೆ ಇಳಿಕೆ
– ಮಾರ್ಚ್‌, ಏಪ್ರಿಲ್‌ ಮತ್ತು ಮೇ ಜಿಎಸ್‌ಟಿ ರಿಟನ್ಸ್‌ ಸಲ್ಲಿಕೆ ಮಾಡುವ ದಿನಾಂಕ ಜೂ.30ರವರೆಗೆ ವಿಸ್ತರಣೆ
– ಆಧಾರ್‌- ಪ್ಯಾನ್‌ ಕಾರ್ಡ್‌ಲಿಂಕ್‌ಗೆ ವಿಧಿಸಲಾಗಿದ್ದ ಗಡುವು ಜೂ.30ರವರೆಗೆ ಮುಂದೂಡಿಕೆ
– ಕಂಪನಿಗಳ ನಿರ್ದೇಶಕರ ಮಂಡಳಿಯ ಕಡ್ಡಾಯ ಸಭೆ ನಡೆಸುವ ಅವಧಿ 60 ದಿನಗಳವರೆಗೆ ವಿಸ್ತರಣೆ
– ವಿವಾದ್‌ ಸೇ ವಿಶ್ವಾಸ್‌ ಸೇರಿದಂತೆ ಅನೇಕ ಹಣಕಾಸು ಸಂಬಂಧಿ ಯೋಜನೆಗಳ ಡೆಡ್‌ ಲೈನ್‌ ಕೂಡ ಜೂ.30ರವರೆಗೆ ವಿಸ್ತರಣೆ
– ವಿವಾದ್‌ ಸೇ ವಿಶ್ವಾಸ ಯೋಜನೆಯ ಫ‌ಲಾನುಭವಿಗಳು ಪ್ರಿನ್ಸಿಪಲ್‌ ಮೊತ್ತದ ಮೇಲೆ ಶೇ.10 ಬಡ್ಡಿ ಪಾವತಿಸಬೇಕಿಲ್ಲ

ಉತ್ತೇಜನದ ಭರವಸೆ; ಚೇತರಿಸಿದ ಮಾರುಕಟ್ಟೆ
ಸೋಮವಾರ ಸಾರ್ವಕಾಲಿಕ ಕುಸಿತ ದಾಖಲಿಸಿದ್ದ ಮುಂಬೈ ಷೇರುಪೇಟೆಯಲ್ಲಿ ಮಂಗಳವಾರ ಭರವಸೆಯ ಬೆಳಕು ಮೂಡಿದೆ. ಜಗತ್ತಿನಾದ್ಯಂತ ಸರಕಾರಗಳು ಕೊರೊನಾ ವೈರಸ್‌ ನಿಂದಾಗುವ ಆರ್ಥಿಕ ಹಾನಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿವೆ ಎಂಬ ಆಶಾಭಾವನೆ ಮೂಡುತ್ತಿದ್ದಂತೆ, ಮುಂಬೈ ಷೇರುಪೇಟೆ ಸೇರಿದಂತೆ ವಿಶ್ವಾದ್ಯಂತದ ಷೇರು ಮಾರುಕಟ್ಟೆಗಳು ಚೇತರಿಕೆ ಕಂಡವು.

ಸರಕಾರ ಉತ್ತೇಜನಾ ಕ್ರಮಗಳನ್ನು ಘೋಷಿಸಲಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ತೊಡಗಿದ ಪರಿಣಾಮ, ಸೆನ್ಸೆಕ್ಸ್‌ 692 ಅಂಕ ಏರಿಕೆಯಾಗಿ(ಶೇ.2.67), 26,674ರಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 190 ಅಂಕ ಏರಿಕೆ ಕಂಡು, ದಿನಾಂತ್ಯಕ್ಕೆ 7,801ಕ್ಕೆ ತಲುಪಿತು. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಏಷ್ಯಾದ ಷೇರು ಮಾರುಕಟ್ಟೆಗಳು ಕೂಡ ಲಾಭ ಕಂಡವು.

ಕೊರೊನಾವೈರಸ್‌ ನಿಂದಾಗಿ ಬಿಕ್ಕಟ್ಟಿಗೆ ಸಿಲುಕಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ನೆರವು ನೀಡುವುದಾಗಿ ಅಮೆರಿಕದ ಫೆಡರಲ್‌ ರಿಸರ್ವ್‌ ಮಂಗಳವಾರ ಘೋಷಣೆ ಮಾಡುತ್ತಿದ್ದಂತೆ, ಟೋಕಿಯೋ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಗಳು ಶೇ.6ರಷ್ಟು ಏರಿಕೆ ಕಂಡರೆ, ಶಾಂಘೈ, ಹಾಂಕಾಂಗ್‌ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳೂ ಏಕಾಏಕಿ ಚೇತರಿಸಿದವು. ಇದೇ ವೇಳೆ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 26 ಪೈಸೆ ಏರಿಕೆಯಾಗಿ, 75.94ಕ್ಕೆ ತಲುಪಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next