Advertisement

ಅನಧಿಕೃತ ಗೈರಾದ ಶಿಕ್ಷಕರಿಗೆ ಅಂತಿಮ ನೋಟಿಸ್‌

06:33 PM Aug 12, 2021 | Team Udayavani |

ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ಅನಧಿಕೃತ ಗೈರಾದ ಐದು ಜನ ಶಿಕ್ಷಕರಿಗೆ ಮೂರು ಭಾರಿ ನೋಟಿಸ್‌ ಜಾರಿಗೊಳಿಸಿದರೂ ಅವರಿಂದ ಸ್ಪಷ್ಟ ಉತ್ತರ ಬಾರದ ಹಿನ್ನೆಲೆ ಶಿಕ್ಷಣ ಇಲಾಖೆ ಅಂತಿಮ ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ಅಂತಿಮ ನೋಟಿಸ್‌ ಜಾರಿ ಮಾಡಿ ಎರಡು ವಾರ ಗತಿಸಿದರೂ ಉತ್ತರ ಬಾರದ ಕಾರಣ ಸೇವೆಯಿಂದ ವಜಾಗೊಳಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನ ಧಿಕೃತ ಗೈರಾದ ಶಿಕ್ಷಕರಿಗೆ ಕೊನೆಯದಾಗಿ ಅವಕಾಶ ನೀಡಲು ಪತ್ರಿಕೆ ಮೂಲಕ ಪ್ರಕಟಣೆ ಮಾಡಲಾಗುತ್ತದೆ.

Advertisement

ಅನಧಿಕೃತ ಗೈರಾಗಲು ಕಾರಣ ಹೇಳಿ ಸೇವೆಯಲ್ಲಿ ಮುಂದುವರಿಯಲು ಕೊನೆ ಅವಕಾಶವಿದೆ ಎನ್ನಲಾಗುತ್ತಿದೆ. ಮೂರು ನೋಟಿಸ್‌ಗೂ ಕ್ಯಾರೇ ಎನ್ನುತ್ತಿರುವ ಶಿಕ್ಷಕರು ಕೊನೆ ಅವಕಾಶಕ್ಕೆ ಬರುವುದೇ ಡೌಟ್‌.

ಯಾವ ಶಾಲಾ ಶಿಕ್ಷಕರು?: ಪಟ್ಟಣದ ಯಲ್ಲಾಲಿಂಗ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ತಬುಸಮ್‌ 2015ರಲ್ಲೇ ಅನಧಿಕೃತವಾಗಿ ಗೈರಾಗಿದ್ದಾರೆ. 2011-12ನೇ ಸಾಲಿನಲ್ಲಿ ಬಿಎಡ್‌ ಪದವಿ ಮಾಡಲು ಹೋಗಿದ್ದರು. 2014ರಲ್ಲಿ ವೇತನ ರಹಿತ ರಜೆ ಹೋಗಿದ್ದು, 2015ರಿಂದ ಅನಧಿಕೃತವಾಗಿ ಗೈರಾಗಿದ್ದಾರೆ. 2008ರಲ್ಲಿ ಸೇವೆ ಸೇರಿದ್ದು, ಒಂದೂವರೆ ವರ್ಷ ಮಕ್ಕಳಿಗೆ ಪಾಠ ಮಾಡಿದ್ದು ಈಗ ನೆನಪು ಮಾತ್ರ. ಪಲಕನಮರಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿಜಿಟಿ ಶಿಕ್ಷಕ ಶಿವುಕುಮಾರ ಟಿ.ಎಸ್‌. 2015ರಿಂದ ಗೈರಾಗಿದ್ದಾರೆ. ಗಾಣಧಾಳ ಸರಕಾರಿ ಶಾಲೆಯ ಶಿಕ್ಷಕ ಸಿದ್ದಲಿಂಗ 2011ರಿಂದ ಅನಧಿಕೃತ ಗೈರು.

ಆರೇರದೊಡ್ಡಿ ಶಾಲಾ ಶಿಕ್ಷಕ ಮೋತಿರಾಮ ರಾಠೊಡ್‌ 2019ರಿಂದ ಗೈರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಐಇಆರ್‌ಟಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಸರಿತಾ 2017ರಿಂದ ಅನಧಿಕೃತ ಗೈರಾಗಿದ್ದಾರೆ.

ಶಿಕ್ಷಕಿ ಅಮಾನತು: ತಾಲೂಕಿನ ಹದ್ದಿನಾಳ ಸರಕಾರಿ ಶಾಲೆಯ ಸಹ ಶಿಕ್ಷಕಿ ಸುಮಾ ಹೊಸಳ್ಳಿ ಕಳೆದ ಒಂದು ವರ್ಷಗಳಿಂದ ಅನ ಧಿಕೃತವಾಗಿ ಗೈರಾಗಿದ್ದು, ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿದರು. ವೈದ್ಯಕೀಯ ನೆಪ ಹೇಳಿ ಕರ್ತವ್ಯಕ್ಕೆ ಹಾಜಿರಾಗದೇ ಇದ್ದ ಕಾರಣ ಜು.30ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಇಂದಿರಾ ಅವರು ಅಮಾನತು ಮಾಡಿ ಆದೇಶಿಸಿದರು.

Advertisement

ಗೈರಾಗುವ ಶಿಕ್ಷಕರಿಗೆ ಭಯ: ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಹಿನ್ನೆಲೆ ಸರಕಾರಿ ಶಾಲೆಗಳ ತರಗತಿಗಳು ಆರಂಭವಾಗಿಲ್ಲ. ಶಾಲಾ ಶಿಕ್ಷಕರಿಗೆ ಬಾಗಿಲು ಓಪನ್‌ ಆಗಿವೆ. ಕೋವಿಡ್‌, ಮಕ್ಕಳು ಇಲ್ಲ ನೆಪ ಹೇಳಿಕೊಂಡು ಆಗಾಗ ಶಾಲೆಗೆ ಗೈರಾಗುತ್ತಿರುವ ಶಿಕ್ಷಕರಿಗೆ ನೋಟಿಸ್‌ ಭಯ ಶುರುವಾಗಿದೆ. ಗ್ರಾಮೀಣ ಭಾಗದ ದೊಡ್ಡಿ, ತಾಂಡಾ ಶಾಲೆಗಳ ಶಿಕ್ಷಕರು ಸೇರಿದಂತೆ ಶಾಲೆಗೆ ಗೈರಾಗುತ್ತಿರುವ ಬಹುತೇಕ ಶಿಕ್ಷಕರಿಗೆ ಆತಂಕ ತಂದಿದೆ.

ಬಿಇಒಗೆ ಅಧಿಕಾರ: 2002ರಲ್ಲಿ ಸರಕಾರಿ ಶಾಲೆಗೆ ಸೇವೆಗೆ ಸೇರಿದ ಶಿಕ್ಷಕ-ಶಿಕ್ಷಕಿಯರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಈ ಹಿಂದೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಅಧಿಕಾರ ಇತ್ತು. ಆದರೀಗ ಕ್ಷೇತ್ರ ಶಿಕ್ಷಣಾ ಧಿಕಾರಿಗೆ ಹೆಚ್ಚಿನ ಅಧಿಕಾರ ಇದ್ದ ಹಿನ್ನೆಲೆ ಅಂತಿಮ ಕ್ರಮಕೈಗೊಳ್ಳಲಿದ್ದಾರೆ.

*ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next