Advertisement

ರಾಜ್ಯದ 221 ಕ್ಷೇತ್ರಗಳಲ್ಲಿ 5.05 ಕೋಟಿ ಮತದಾರರು; ಅಂತಿಮ ಮತದಾರರ ಪಟ್ಟಿ ಪ್ರಕಟ

09:01 PM Jan 05, 2023 | Team Udayavani |

ಬೆಂಗಳೂರು: ರಾಜ್ಯದ 221 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಗುರುವಾರ (ಜ.5) ಪ್ರಕಟಿಸಲಾಗಿದ್ದು, ಅದರಂತೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.05 ಕೋಟಿ ಆಗಿದೆ.

Advertisement

ಮತದಾರರ ಗೌಪ್ಯ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪ ಕೇಳಿ ಬಂದು ವಿಚಾರಣಾ ಹಂತದಲ್ಲಿರುವ ಬೆಂಗಳೂರು ನಗರ ವ್ಯಾಪ್ತಿಯ ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಜ.15 ರಂದು ಪ್ರಕಟಿಸಲಾಗುವುದು.

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವಿವರಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ, 221 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತಿದ್ದು, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮದಹೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯಲ್ಲಿ ಜ.15ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಯನ್ನು ನ.9ರಂದು ಪ್ರಕಟಿಸಲಾಗಿತ್ತು. ಕರಡು ಪಟ್ಟಿಯಲ್ಲಿ 221 ವಿಧಾನಸಭಾ ಕ್ಷೇತ್ರಗಳಲ್ಲಿ 4.99 ಕೋಟಿ ಮತದಾರರು ಇದ್ದರು. ನ.9ರಿಂದ ಡಿ.8ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ನ.11 ಮತ್ತು 20 ಹಾಗೂ ಡಿ.3-4 ಈ ದಿನಗಳಂದು ವಿಶೇಷ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಡಿ.26ರಂದು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಯಿತು.

ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ. ಈ ಅವಧಿಯಲ್ಲಿ 18.32 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 12.31 ಲಕ್ಷ ಹೊಸ ಸೇರ್ಪಡೆಗಳು ಆಗಿದ್ದು, 6.18 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕರಡು ಮತದಾರರ ಪಟ್ಟಿಯಿಂದ ಅಂತಿಮ ಮತದಾರರ ಪಟ್ಟಿಯಲ್ಲಿ ಸರಾಸರಿ 6.13 ಲಕ್ಷ ಸೇರ್ಪಡೆ ಆಗಿದೆ ಎಂದು ಮೀನಾ ಮಾಹಿತಿ ನೀಡಿದರು.

Advertisement

ಎಲ್ಲಾ 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಆಯಾ ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಪ್ರತಿಯೊಬ್ಬರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಹೆಸರು ಬಿಟ್ಟು ಹೋಗಿದ್ದರೆ, ತಪ್ಪಾಗಿದ್ದರೆ ಅಥವಾ ಇತರ ಬದಲಾವಣೆಗಳಿದ್ದರೆ ಆನ್‌ಲೈನ್‌ನಲ್ಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬೇಕು. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದಿಂದ 10 ದಿನ ಮುಂಚೆಯ ತನಕ ಸೇರ್ಪಡೆ, ತಿದ್ದುಪಡಿಗಳಿಗೆ ಅವಕಾಶವಿರುತ್ತದೆ ಎಂದು ಮನೋಜ್‌ ಕುಮಾರ್‌ ಮೀನಾ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್‌. ವೆಂಕಟೇಶ್‌ ಕುಮಾರ್‌, ಪಿ. ರಾಜೇಂದ್ರ ಚೋಳನ್‌, ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್‌. ಯೋಗೇಶ್ವರ್‌, ನಿರ್ಗಮಿತ ಜಂಟಿ ಮುಖ್ಯ ಚುನಾವಣಾಧಿಕಾರಿ ಶಂಭು ಭಟ್‌ ಮತ್ತಿತರರು ಇದ್ದರು.

ಅಂತಿಮ ಮತದಾರರ ಪಟ್ಟಿ:
ಒಟ್ಟು ವಿಧಾನಸಭಾ ಕ್ಷೇತ್ರಗಳು 221
ಪುರುಷ ಮತದಾರರು: 2,54,03,511
ಮಹಿಳಾ ಮತದಾರರು: 2,50,92,726
ಸೇವಾ ಮತದಾರರು: 47,814
ಇತರೆ ಮತದಾರರು: 4,502
ಒಟ್ಟು: 5,05,48,553

– ಕರಡು ಮತದಾರರ ಪಟ್ಟಿ: 4,99,34,730
– ಅಂತಿಮ ಮತದಾರರ ಪಟ್ಟಿ: 5,05,48,553
– ಒಟ್ಟು ಹೆಚ್ಚಳ: 6,13,823

– 2011ರ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಲಿಂಗಾನುಪಾತ: 973
– ಅಂತಿಮ ಮತದಾರರ ಪಟ್ಟಿಯ ಅನುಸಾರ ಲಿಂಗಾನುಪಾತ: 988
– ರಾಜ್ಯದ ಮತದಾರರ ಜನಸಂಖ್ಯೆಯ ಅನುಪಾತ: ಶೇ.68.27

ತೆಗೆದುಹಾಕಿದ್ದು
ನಿಧನ-2,62,854
ಸ್ಥಳಾಂತರ-3,27,488
ಪುನರಾವರ್ತನೆ-24,137
ಇತರೆ-4,486
ಒಟ್ಟು-6,18,965

ಶೇ.97ರಷ್ಟು ಆನ್‌ಲೈನ್‌ಲ್ಲಿ ಅರ್ಜಿ
ಕರಡು ಮತದಾರರ ಪಟ್ಟಿ ಪ್ರಕಟಿಸಿದ ನಂತರ ನ.9ರಿಂದ ಡಿ.8ರವರೆಗೆ ನಡೆಸಲಾದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೇಳೆ ಒಟ್ಟು 18.32 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಆನ್‌ಲೈನ್‌ ವಿಧಾನಗಳಾದ ಎನ್‌ವಿಎಸ್‌ಪಿ, ವಿಎಚ್‌ಎ, ಗರುಡಾ, ಓಟರ್‌ ಪೋರ್ಟಲ್‌ ಮೂಲಕ 17.89 ಲಕ್ಷ ಅರ್ಜಿಗಳು ಬಂದಿದ್ದು, ಒಟ್ಟು ಆನ್‌ಲೈನ್‌ ಅರ್ಜಿಗಳ ಪ್ರಮಾಣ ಶೇ.97.66ರಷ್ಟಿದೆ. ಆಫ್ಲೈನ್‌ ಮೂಲಕ 39,182 (ಶೇ.2.34) ಅರ್ಜಿಗಳು ಬಂದಿವೆ.

ಅತಿಹೆಚ್ಚು ಮತದಾರರು:
– ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: 6.50 ಲಕ್ಷ
ಅತಿ ಕಡಿಮೆ ಮತದಾರರು:
– ಶೃಂಗೇರಿ ವಿಧಾನಸಭಾ ಕ್ಷೇತ್ರ: 1.66 ಲಕ್ಷ
– 221 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮತಗಟ್ಟೆಗಳು: 57,388

ಏಳು ಲಕ್ಷ ಯುವ ಮತದಾರರು
221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯಂತೆ 7.01 ಲಕ್ಷ ಯುವ ಮತದಾರರು (18 ಮತ್ತು 19 ವರ್ಷ) ಇದ್ದಾರೆ. ಇದರಲ್ಲಿ 3.88 ಲಕ್ಷ ಯುವಕರು ಮತ್ತು 3.13 ಲಕ್ಷ ಯುವತಿಯರು, 139 ಇತರೆ ಮತದಾರರು ಸೇರಿದ್ದಾರೆ. 2004ರ ಜೀವಂತ ಜನನ ಪ್ರಮಾಣ 9.50 ಲಕ್ಷ ಇತ್ತು. ಅವರು ಈಗ 18 ವರ್ಷ ತಲುಪಿದ್ದಾರೆ. ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 7 ಲಕ್ಷ ಮಂದಿ ಮಾತ್ರ ಸೇರ್ಪಡೆಯಾಗಿದ್ದಾರೆ. ಉಳಿದ 2.50 ಲಕ್ಷ ಮಂದಿಯನ್ನು ಗುರುತಿಸಲು ವಿಶೇಷ ಆದ್ಯತೆ ವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆಎಂದು ಮನೋಜ್‌ ಕುಮಾರ್‌ ಮೀನಾ ಮಾಹಿತಿ ನೀಡಿದರು.

25 ಸಾವಿರ ಮುಂಗಡ ಅರ್ಜಿ:
ಈ ಹಿಂದೆ ಮತದಾರರ ಪಟ್ಟಿಯಲ್ಲಿ ಸೇರಲು ಆಯಾ ವರ್ಷದ ಜನೆವರಿ 1ರಂದು 18 ವರ್ಷ ತುಂಬಬೇಕಿತ್ತು. ಕಳೆದ ವರ್ಷ ಲೋಕಸಭೆಯಲ್ಲಿ ತಿದ್ದುಪಡಿ ತಂದ ಪರಿಣಾಮ ಈಗ ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಜ.1, ಏ.1, ಜು.1 ಮತ್ತು ಅಕ್ಟೋಬರ್‌ 1 ಅರ್ಹತಾ ದಿನಾಂಕವಾಗಿದೆ. ಅದರಂತೆ ಜ.2ರ ನಂತರ ಏಪ್ರಿಲ್‌1ರ ವೇಳೆಗೆ 18 ವರ್ಷದ ತಲುಪಿದವರು ಮುಂದಿನ ವಿಧಾನಸಭೆ ಚುನಾವಣೆಗೆ ಮತದಾರರಾಗಬಹುದು. ಅದರಂತೆ, ಏಪ್ರಿಲ್‌ 1ರ ವೇಳೆಗೆ 18 ವರ್ಷ ತಲುಪುವ 25,299 ಅರ್ಜಿಗಳು ಬಂದಿವೆ. ಈ ಮೂಲಕ ಮತದಾನದ ಹಕ್ಕು ಪಡೆಯಲು ಮುಂಗಡ ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮನೋಜ್‌ ಕುಮಾರ್‌ ಮೀನಾ ವಿವರಿಸಿದರು.

30 ಸಾವಿರ ಬುಡಕಟ್ಟು ಮತದಾರರು
ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ 30,517 ಬುಡಕಟ್ಟು ಮತದಾರರು ಇದ್ದಾರೆ. ಜೇನು ಕುರುಬ ಬುಡಕಟ್ಟು ಜನಾಂಗಗಳು ಹೆಚ್ಚಾಗಿರುವ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮತ್ತು ಕೊರಗ ಜನಾಂಗ ಹೆಚ್ಚಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗಿತ್ತು. ಅಂತಿಮ ಮತದಾರರ ಪಟ್ಟಿಯಲ್ಲಿ 1.8 ಲಕ್ಷ ಲೈಂಗಿಕ ಕಾರ್ಯಕರ್ತೆಯರು, 5.09 ಲಕ್ಷ ವಿಕಲಚೇತನರು, 41 ಸಾವಿರ ತೃತೀಯ ಲಿಂಗಿಗಳು ಇದ್ದಾರೆ.

ಜ.15ರೊಳಗೆ ಪ್ರಾದೇಶಿಕ ಆಯುಕ್ತರಿಂದ ವರದಿ
ಬೆಂಗಳೂರು: ಚಿಲುಮೆ ಸಂಸ್ಥೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಗೌಪ್ಯ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಪ್ರಕರಣದ ಕುರಿತು ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್‌ ಬಿಸ್ವಾಸ್‌ ಆವರು ತನಿಖೆ ನಡೆಸುತ್ತಿದ್ದಾರೆ. ಅವರು ಜ.15ರೊಳಗೆ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ಬಳಿಕ ತಪ್ಪಿತಸ್ಥರು ಯಾರೇ ಇರಲಿ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮೀನಾ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next