Advertisement

ಕುಮಟಾದಲ್ಲಿ ಪ್ರಪ್ರಥಮ ಬಾರಿಗೆ ಚಲನಚಿತ್ರೋತ್ಸವ

03:51 PM Nov 21, 2018 | Team Udayavani |

ಕಾರವಾರ: ತಾಂಡವ ಕಲಾನಿಕೇತನ ಬೆಂಗಳೂರು ಮತ್ತು ವೈಭವ ಸಮಿತಿ ಹಮ್ಮಿಕೊಂಡ ಕುಮಟಾ ವೈಭವದ ನಿಮಿತ್ತ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕಸಾಪ ಸಹಯೋಗದಲ್ಲಿ ನ.23 ರಿಂದ 25ರವರೆಗೆ ಪಟ್ಟಣದ ಕಿತ್ತೂರು ಚೆನ್ನಮ್ಮ ಪಾರ್ಕ್‌ ಪಕ್ಕದ ಪುರಭವನದಲ್ಲಿ‚ತಾಲೂಕಿನಲ್ಲೇ ಮೊಟ್ಟಮೊದಲು ಚಲನಚಿತ್ರೋತ್ಸವ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

Advertisement

ನ.23 ರಂದು ಮುಂಜಾನೆ 10ಕ್ಕೆ ಚಲನಚಿತ್ರೋತ್ಸವವನ್ನು ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಮಟಾ ವೈಭವ ಸಮಿತಿ ಗೌರವಾಧ್ಯಕ್ಷ ನಾಗರಾಜ ನಾಯಕ ತೊರ್ಕೆ, ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಉಪಸ್ಥಿತರಿರುವರು. ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಪ್ರಾಸ್ತಾವಿಕ ಮಾತನಾಡಲಿದ್ದು, ಪತ್ರಕರ್ತ ಎಂ.ಜಿ.ನಾಯಕ ಆಶಯನುಡಿಗಳನ್ನಾಡಲಿದ್ದಾರೆ. ಕುಮಟಾ ತಾಲೂಕು ಕ.ಸಾಪ ಅಧ್ಯಕ್ಷ ಡಾ| ಶ್ರೀಧರ ಉಪ್ಪಿನಗಣಪತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ, ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಸಹ ಕಾರ್ಯದರ್ಶಿ ಪ್ರೊ| ನಾಗರಾಜ ಹೆಗಡೆ ನಿರ್ವಹಿಸಲಿದ್ದಾರೆ.

ಚಲನಚಿತ್ರೋತ್ಸವದಲ್ಲಿ ನ.23 ರಂದು ಮುಂಜಾನೆ 10:30ಕ್ಕೆ ಚಂಪಾ ಶೆಟ್ಟಿ ನಿರ್ದೇಶನದ ಅಮ್ಮಚ್ಚಿಯೆಂಬ ನೆನಪು, ಮಧ್ಯಾಹ್ನ 3ಕ್ಕೆ ಸತ್ಯಪ್ರಸಾದ್‌ ನಿರ್ದೇಶನದ ರಾಮಾ ರಾಮಾ ರೇ, ನ.24 ರಂದು ಮುಂಜಾನೆ 10ಕ್ಕೆ ವಿಶಾಲ್‌ರಾಜ್‌ ನಿರ್ದೇಶನದ ಜುಲೈ 22 1947, ಮಧ್ಯಾಹ್ನ 3ಕ್ಕೆ ವಿಶಾಲ್‌ರಾಜ್‌ ನಿರ್ದೇಶನದ ಸಾವಿತ್ರಿಬಾಯಿ ಫುಲೆ, ನ.25ರಂದು ಮುಂಜಾನೆ 10ಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಶಾಂತಿ, ಮಧ್ಯಾಹ್ನ 3ಕ್ಕೆ ನಾಗರಾಜ್‌ ಅದ್ವಾನಿ ನಿರ್ದೇಶನದ ಅಗಸಿ ಪಾರ್ಲರ್‌ ಹೀಗೆ ಒಟ್ಟು 6 ಸಿನಿಮಾ ಪ್ರದರ್ಶನಗೊಳ್ಳಲಿದೆ.

ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಆಯಾ ಸಿನಿಮಾದ ನಿರ್ದೇಶಕರು, ಕಲಾವಿದರು ಉಪಸ್ಥಿತರಿರಲಿದ್ದಾರೆ. ಪ್ರೇಕ್ಷಕರು ಪ್ರತಿ ಸಿನಿಮಾ ಪ್ರದರ್ಶನದ ನಂತರ ಅವರೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅರವಿಂದ ಕರ್ಕಿಕೋಡಿ ವಿವರಿಸಿದ್ದಾರೆ. ನ.25 ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವಿಮರ್ಶಕ ಡಾ| ಎಂ.ಜಿ.ಹೆಗಡೆ ಸಮಾರೋಪ ನುಡಿಯನ್ನಾಡಲಿದ್ದು ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಚಲನಚತ್ರೋತ್ಸವದ ಸಿನಿಮಾ ಅವಲೋಕನ ಮಾಡಲಿದ್ದಾರೆ. ಕುಮಟಾ ವೈಭವ ಸಮಿತಿ ಸರ್ವಾಧ್ಯಕ್ಷ ಎಂ.ಜಿ. ಭಟ್ಟ ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕೃಷ್ಣಾನಂದ ಭಟ್ಟ, ತಾಲೂಕು ಕಸಾಪ ಕಾರ್ಯದರ್ಶಿ ಚಿದಾನಂದ ಭಂಡಾರಿ, ಎಂ.ಎಂ.ನಾಯ್ಕ ನಿರ್ವಹಿಸಲಾದ್ದಾರೆ. ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರು ಪಾಸ್‌ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 9448438472 ಸಂಪರ್ಕಿಸಬಹುದಾಗಿದೆ ಎಂದು ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next