Advertisement

Bangalore Central Prison: ಜೈಲಲ್ಲಿ ರೌಡಿಶೀಟರ್‌ಗಳ ಮಧ್ಯೆ ಮಾರಾಮಾರಿ

02:57 PM Jun 11, 2024 | Team Udayavani |

ಬೆಂಗಳೂರು: ಹಫ್ತಾ ವಸೂಲಿ ಅಥವಾ ಹಳೇ ದ್ವೇಷಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ರೌಡಿಶೀಟರ್‌ಗಳಾದ ಕುಳ್ಳ ರಿಜ್ವಾನ್‌ ಮತ್ತು ಸಾಗರ್‌ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜೂ.7ರಂದು ಘಟನೆ ನಡೆದ್ದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂದು ಸಂಜೆ 6.30ಕ್ಕೆ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳ ವಿಭಾಗದ ಬ್ಯಾರಕ್‌ 3 ಮತ್ತು 4 ಎದುರು ಈ ಗಲಾಟೆ ನಡೆದಿದ್ದು, ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ್‌ ನೀಡಿದ ದೂರಿನ ಮೇರೆಗೆ ಪೊಲೀಸರು, ವಿಚಾರಣಾಧೀನ ಕೈದಿಗಳಾದ ವಿಶ್ವನಾಥ, ಮುನಿರಾಜ್‌, ಜಾಫ‌ರ್‌ ಸಾದಿಕ್‌, ವಿಶಾಲ್‌ಗೌಡ, ಟಿಪ್ಪು ಸುಲ್ತಾನ್‌, ಸೇಂದಿಲ್‌ ಕುಮಾರ್‌, ಅಜಯ್‌ ಸಿಂಗ್‌, ಕುಮಾರ್‌, ಇರ್ಷಾದ್‌ ಪಾಷಾ ವಿರುದ್ಧ ಎಫ್ ಐಆರ್‌ ದಾಖಲಿಸಲಾಗಿದೆ. ಈ ವೇಳೆ ಗಲಾಟೆಯಲ್ಲಿ ಗಾಯಗೊಂಡಿರುವ ವಿಚಾರಣಾಧೀನ ಕೈದಿಗಳಾದ ತೇಜಸ್‌, ಅಮಿತ್‌ ಕುಮಾರ್‌, ಶೇಷಾದ್ರಿ, ಧನುಷ್‌ಗೆ ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಘಟನೆ?: ಜೂ.7ರಂದು ಸಂಜೆ 6.30ಕ್ಕೆ ವಿಚಾರ ಣಾಧೀನ ಕೈದಿಗಳ ವಿಭಾಗದ ಬ್ಯಾರಕ್‌ 3 ಮತ್ತು 4 ಎದುರು ರೌಡಿ ಕುಳ್ಳ ರಿಜ್ವಾನ್‌ ಸಹಚರರು ಮತ್ತು ರೌಡಿ ಸಾಗರ್‌ ಸಹಚರರ ನಡುವೆ ಏಕಾಏಕಿ ಜಗಳ ಶುರುವಾಗಿದೆ. ಪರಸ್ಪರ ಕಲ್ಲಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಅದನ್ನು ಕಂಡ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ ಎರಡೂ ಗುಂಪುಗಳನ್ನು ಚದುರಿಸಿದ್ದಾರೆ. ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಫ್ತಾ ವಸೂಲಿ ವಿಚಾರ ಅಥವಾ ಹಳೇ ದ್ವೇಷಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.

ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next