ಕನಕಗಿರಿ: ಒಣ ಬೇಸಾಯ ಪ್ರದೇಶವಾಗಿರುವ ತಾಲೂಕಿನಲ್ಲಿ ಮಳೆ ಬಂದರೆ ಮಾತ್ರ ಬೆಳೆ, ಇಲ್ಲವಾದರೇ ದೇವರೇ ಗತಿ ಎನ್ನುವಂತಹ ಪರಿಸ್ಥಿತಿ ಇದೆ. ಈ ಬಾರಿ ಮುಂಗಾರು, ಹಿಂಗಾರು ಮಳೆಗಳು ಸಂಪೂರ್ಣವಾಗಿ ಕೈಕೊಟ್ಟಿದರಿಂದ ಹುಲಿಹೈದರ್, ನವಲಿ, ಮುಸಲಾಪುರ, ಕನಕಗಿರಿ ಭಾಗದ ರೈತರು ಕಂಗಾಲಾಗಿದ್ದಾರೆ. ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದರ ಜೊತೆಗೆ ಜಾನುವಾರುಗಳಿಗೆ ಮೇವು ಸಂಗ್ರಹಿಸುವುದೇ ರೈತರಿಗೆ ಸವಾಲಿನ ಕೆಲಸವಾಗಿದೆ.
ಕನಕಗಿರಿ ತಾಲೂಕು ಒಣ ಬೇಸಾಯ ಪ್ರದೇಶವಾಗಿದ್ದು, ಈ ಭಾಗದ ರೈತರು ಜಾನುವಾರಗಳಿಗೆ ಮೇವು ಸಂಗ್ರಹಿಸಲು ನೀರಾವರಿ ಭಾಗವಾದ ಗಂಗಾವತಿ, ಕಾರಟಗಿಯತ್ತ ಅಲೆದಾಡುತ್ತಿದ್ದಾರೆ. ನೀರಾವರಿ ಭಾಗದಲ್ಲಿ ಬಿತ್ತನೆ ಮಾಡಿದ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಭತ್ತದ ಮೇವು ಸಂಗ್ರಹಿಸಲು ಮುಂದಾಗಿದ್ದಾರೆ. ನೀರಾವರಿ ಭಾಗದಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಆದ್ದರಿಂದ ನೀರಾವರಿ ಆಶ್ರಿತ ರೈತರ ತಮ್ಮ ಜಾನುವಾರಗಳಿಗೆ ಮೇವು ಬೇಕೆಂದು ಮಾರಾಟಕ್ಕೆ ಮುಂದಾಗುತ್ತಿಲ್ಲ. ಇನ್ನು ಒಣ ಬೇಸಾಯ ಪ್ರದೇಶದ ರೈತರು ಒಂದು ಟ್ರ್ಯಾಕ್ಟರ್ ಮೇವಿಗೆ 4ರಿಂದ 5 ಸಾವಿರ ರೂ. ನೀಡಿ ಖರೀದಿ ಮಾಡುತ್ತಿದ್ದಾರೆ.
ಗೋಶಾಲೆ ಪ್ರಾರಂಭಿಸಿಲ್ಲ: ಕನಕಗಿರಿ ತಾಲೂಕನ್ನು ಬರಪೀಡಿತ ತಾಲೂಕೆಂದು ಸರ್ಕಾರ ಘೋಷಿಸಿದೆ. ಆದರೆ ಇವರೆಗೂ ಯಾವುದೇ ಬರ ಕಾಮಗಾರಿ, ಗೋ ಶಾಲೆಯನ್ನೂ ಪ್ರಾರಂಭಿಸಿಲ್ಲ. ಕೆಲ ರೈತರು ಮೇವು ಇಲ್ಲದಿರುವ ಕಾರಣ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ಗೋ ಶಾಲೆಯನ್ನು ಪ್ರಾರಂಭಿಸುವಂತೆ ಈ ಭಾಗದ ರೈತರು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕನಕಗಿರಿ, ಹುಲಿಹೈದರ್, ನವಲಿ ಭಾಗದಲ್ಲಿ ಗೋ ಶಾಲೆಯನ್ನು ಪ್ರಾರಂಭಿಸಬೇಕೆಂಬುವುದು ರೈತರ ಒತ್ತಾಯಿಸುತ್ತಿದ್ದಾರೆ.
ಮೇವಿನ ಕೊರತೆ ಇರುವ ರೈತರಿಗೆ ಪಶು ಸಂಗೋಪನೆ ಇಲಾಖೆಯಿಂದ ಮೇವಿನ ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಮೇವಿನ ಬೀಜಗಳು ಬಿತ್ತನೆ ಮಾಡಿ 40 ದಿನಗಳಲ್ಲಿ ಮೇವು ಕಟಾವು ಮಾಡಬಹುದು. ಈ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬಹುದು.
.
ಡಾ| ಮಲ್ಲಯ್ಯ ತಾಲೂಕು ಪಶು ವೈದ್ಯಾಧಿಕಾರಿ.
ಕನಕಗಿರಿ, ಹುಲಿಹೈದರ್, ನವಲಿ ಭಾಗದಲ್ಲಿ ಗೋ ಶಾಲೆ ಪ್ರಾರಂಭಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜಾನುವಾರುಗಳನ್ನು ಉಳಿಸಿಕೊಳ್ಳಲು ಹಣ ನೀಡಿ ಮೇವು ಖರೀದಿ ಮಾಡುತ್ತಿದ್ದೇವೆ.
. ರಾಘವೇಂದ್ರ, ರೈತ
ಗೋ ಶಾಲೆಯನ್ನು ಪ್ರಾರಂಭಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಗೋ ಶಾಲೆ ಪ್ರಾರಂಭವಾಗಲು 1 ತಿಂಗಳ ಆಗಬಹುದು. ಮೇವಿನ ಅವಶ್ಯಕತೆ ಇರುವ ರೈತರು ಟ್ಯಾಕ್ಟರ್ ತೆಗೆದುಕೊಂಡು ಬಂದರೆ ನಾನೇ ಮೇವು ಖರೀದಿ ಮಾಡಿಕೊಡುತ್ತೇನೆ.
.
ಬಸವರಾಜ ದಢೇಸುಗೂರು, ಶಾಸಕ.
ಶರಣಪ್ಪ ಗೋಡಿನಾಳ