Advertisement

Feticide case: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು: ನ್ಯಾ.ಎಸ್.ಕೆ.ಒಂಟಗೋಡಿ

06:27 PM Jun 03, 2024 | Team Udayavani |

ಮಹಾಲಿಂಗಪುರ: ಪಟ್ಟಣದಲ್ಲಿ ನಡೆದ ಭ್ರೂಣಹತ್ಯೆಯ ಆರೋಪಿ ಕವಿತಾ ಬಾಡನವರ ಮನೆಯನ್ನು ಗಮನಿಸಿದರೆ ಹಿಂದಿನ ಎರಡು ದಾಳಿಯ ಸಂದರ್ಭದಲ್ಲಿ ಮುಧೋಳ ಟಿಎಚ್‌ಓ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯೇ ಭ್ರೂಣಹತ್ಯೆಯ ಜೊತೆಗೆ ಮಹಾರಾಷ್ಟ್ರ ಮೂಲದ ಮಹಿಳೆಯ ಸಾವಿಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ.ಎಸ್.ಕೆ.ಒಂಟಗೋಡಿ ಹೇಳಿದರು.

Advertisement

ಸೋಮವಾರ ಪಟ್ಟಣದ ಜಯಲಕ್ಷ್ಮಿ ನಗರದಲ್ಲಿ ನಡೆದ ಭ್ರೂಣಹತ್ಯೆ ಆರೋಪಿ ಕವಿತಾ ಬಾಡನವರ ಮನೆಗೆ ಭೇಟಿ ನೀಡಿ, ಭ್ರೂಣಹತ್ಯೆಯ ಸ್ಥಳ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸದರಿ ಪ್ರಕರಣದಲ್ಲಿ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಆಯೋಗದಿಂದ ವರದಿ ತಯಾರಿಸಿ ಆರೋಪಿಗಳು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ.

ಮಹಾಲಿಂಗಪುರದ ಭ್ರೂಣಹತ್ಯೆ ಪ್ರಕರಣದಿಂದ ಮಾನವ ಸಮಾಜವು ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ನಕಲಿ ವೈದ್ಯೆ, ಆಯಾ ಕೆಲಸದ ಕವಿತಾ ಬಾಡನವರ ವಿರುದ್ದ 2019 ಮತ್ತು 2022ರಲ್ಲಿ ಎರಡು ಬಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ವೈದ್ಯಕೀಯ ಹಾಗೂ ಭ್ರೂಣಹತ್ಯೆಗೆ ಬಳಸುತ್ತಿದ್ದ ಎಲ್ಲಾ ಪರಿಕರಗಳನ್ನು ಸರಿಯಾಗಿ ಮಹಜರು ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಿಲ್ಲ. ಮುಖ್ಯವಾಗಿ ಹೊರಗಿನಿಂದ ಒಳಗೆ ಸಂಪರ್ಕ ಇರುವ ಬೇರೆ ಎರಡು ಬಾಗಿಲುಗಳನ್ನು ಶೀಲ್ ಮಾಡಿಲ್ಲ. ಕಾಟಾಚಾರಕ್ಕಾಗಿ ಮುಖ್ಯದ್ವಾರಕ್ಕೆ ಶೀಲ್ ಮಾಡಿ, ಅಕ್ರಮ ದಂದೆಗೆ ಅವಕಾಶ ನೀಡಿ, ಕರ್ತವ್ಯಲೋಪವೆಸಗಿದ್ದಾರೆ ಎಂಬ ಸಂಗತಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅದಕ್ಕಾಗಿ ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತಕ್ರಮಕ್ಕಾಗಿ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದರು.

ಉತ್ತರಿಸಲು ತಡವರಿಸಿದ ಟಿಎಚ್‌ಓ :
ಆರೋಪಿ ಕವಿತಾ ಬಾಡನವರ ಮನೆಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ.ಎಸ್.ಕೆ.ಒಂಟಗೋಡಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮುಧೋಳ ಟಿ.ಎಚ್.ಓ ವೆಂಕಟೇಶ ಮಲಘಾಣ ತಡವರಿಸಿದರು. 2022 ರ ದಾಳಿಯಲ್ಲಿ ಎಲ್ಲಾ ಸಾಮಗ್ರಿಗಳ ಮಹಜರು ಯಾಕೆ ಮಾಡಲಿಲ್ಲ. ಇತ್ತೀಚಿನ ಘಟನೆ ನಂತರವು ಇಲ್ಲಿ ಸಿಕ್ಕ ಪರಿಕರಗಳ ಮಹಜರು ಸರಿಯಾಗಿ ಮಾಡಿ ಯಾಕೆ ಶೀಲ್ ಮಾಡಿಲ್ಲ ಎಂಬ ಆಯೋಗದ ಸದಸ್ಯರ ಪ್ರಶ್ನೆಗೆ, ಒಳಗಿನಿಂದ ಲಾಕ್ ಮಾಡಿ, ಹೊರಗಿನ ಬಾಗಿಲನ್ನು ಮಾತ್ರ ಶೀಲ್ ಮಾಡಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ನನ್ನನ್ನು ಹೊರಗೆ ನಿಲ್ಲಿಸಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಬಿ.ಪಟ್ಟಣಶೆಟ್ಟಿ ಅವರು ಮಹಜರು ಮಾಡಿದ್ದಾರೆ. ನಾನು ಮೆಡಿಸಿನ್ ಮಾತ್ರ ಮಹಜರು ಮಾಡಿದ್ದೇನೆ ಎಂದು, ಮತ್ತೊಮ್ಮೆ ನಾನು ಮಹಜರು ಮಾಡಿಲ್ಲ ಎಂದು ಟಿಎಚ್‌ಓ ಉತ್ತರಿಸಲು ತಡವರಿಸುತ್ತಿದ್ದರು. ನೀವು ಹೊರಗೆ ಇದ್ದು ಮಹಜರ ವರದಿಗೆ ನೀವು ಯಾಕೆ ಸಹಿ ಮಾಡಿದ್ದೀರಿ ? ಎಂದು ಆಯೋಗದ ಸದಸ್ಯರು ಕೇಳಿದ ಪ್ರಶ್ನೆಗೆ ಟಿಎಚ್‌ಓ ಬಳಿ ಉತ್ತರವಿರಲಿಲ್ಲ.

ಆಯೋಗ ಸದಸ್ಯರಿಂದ ಟಿಎಚ್‌ಓ ತರಾಟೆಗೆ:
ಟಿಎಚ್‌ಓ ಅವರಿಂದ ಮಾಹಿತಿ ಕೇಳಿದ ಆಯೋಗದ ಸದಸ್ಯರು, 2019 ಮತ್ತು 2022 ರಲ್ಲಿ ಮಾಡಿದ ದಾಳಿಯ ಸಂದರ್ಭದಲ್ಲಿ ನೀವು ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದಾಗಿ ಆರೋಪಿಯು ಹಿಂಬಾಗಿಲಿನಿಂದ ಭ್ರೂಣಹತ್ಯೆ ಮುಂದುವರೆಸಿ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ. ದಾಳಿಯ ನಂತರ ಸರಿಯಾದ ಮಹಜರು ಮತ್ತು ಮನೆ ಶೀಲ್ ಮಾಡಿ, ನಿಮ್ಮ ಕರ್ತವ್ಯ ದಕ್ಷತೆಯನ್ನು ಪಾಲಿಸಿಲ್ಲ. ಇಂದು ಪ್ರಕರಣದ ಹಾರಿಕೆ ಉತ್ತರ ಯಾಕೆ ನೀಡುತ್ತಿದ್ದಿರಿ? ಎಂದು ಮುಧೋಳ ಟಿಎಚ್‌ಓ ವೆಂಕಟೇಶ ಮಲಘಾಣ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಆರೋಪಿ ಕವಿತಾ ಮನೆಗೆ ಆಯೋಗದ ಸದಸ್ಯರ ಭೇಟಿ ನೀಡಿದ ಸಮಯದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಬಿ.ಪಟ್ಟಣಶೆಟ್ಟಿ ಇರದೇ, ಆಯೋಗದ ಸದಸ್ಯರ ಪ್ರಶ್ನೆಗಳಿಂದ ಬಜಾವ್ ಆದರು. ನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಭೇಟಿ ವೇಳೆ ಡಿ.ಬಿ.ಪಟ್ಟಣಶೆಟ್ಟಿ ಇದ್ದರು.

ತನಿಖೆಗೆ ಸಾರ್ವಜನಿಕರು ಮಾಹಿತಿ ನೀಡಿ :
ಭ್ರೂಣಹತ್ಯೆ ಪ್ರಕರಣದಲ್ಲಿ ಪೊಲೀಸರು ಮಹಿಳೆ ಸಾವಿನ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮನೆಯ ಸುತ್ತಮುತ್ತಲಿನ ಸಾರ್ವಜನಿಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆಗೆ ಬರುತ್ತಿದ್ದ ವ್ಯಕ್ತಿಗಳ ಮಾಹಿತಿಯುಳ್ಳ ಸಿಸಿ ಟಿವಿ ವಿಡಿಯೋ, ಅವರಿಗೆ ಇದ್ದ ಸಹಾಯಕರು, ಬೆಂಬಲಿಸುತ್ತಿದ್ದ ವ್ಯಕ್ತಿಗಳ ಕುರಿತು ಸೇರಿದಂತೆ ಗೊತ್ತಿರುವ ಯಾವುದೇ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿ, ಗಮನಕ್ಕೆ ತಂದರೆ ಪೊಲೀಸರ ವಿಚಾರಣೆಗೆ ಅಹಾಯಕವಾಗುದರ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ ಎಂದು ಆಯೋಗದ ಸದಸ್ಯರು ಸಾರ್ವಜನಿಕರಿಗೆ ಮನವಿ ಮಾಡಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಬಾಗಲಕೋಟೆ ಡಿಎಚ್‌ಓ ಡಾ.ರಾಜಕುಮಾರ ಯರಗಲ್, ಜಮಖಂಡಿ ಎಸಿ ಸಂತೋಷ ಕಾಮಗೌಡ, ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಜಮಖಂಡಿ ಡಿವೈಎಸ್‌ಪಿ ಈ.ಶಾಂತವೀರ, ಬನಹಟ್ಟಿ ಸಿಪಿಆಯ್ ಸಂಜೀವ ಬಳಗಾರ, ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಗಿ, ಮುಧೋಳ ಟಿಎಚ್‌ಓ ವೆಂಕಟೇಶ ಮಲಘಾಣ, ಸಮುದಾಯ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ, ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಆರೋಗ್ಯ ನಿರೀಕ್ಷಕ ಎಂ.ಎಂ.ಮೂಗಳಖೋಡ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next