Advertisement

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

10:00 PM Jun 12, 2024 | Team Udayavani |

ಮಹಾಲಿಂಗಪುರ: ರಸ್ತೆ ಅಗಲೀಕರಣಕ್ಕಾಗಿ ನಾಲ್ಕು ವರ್ಷಗಳ ಹಿಂದೆ ತೆರವುಗೊಳಿಸಿರುವ ನಮ್ಮ ಶಾಲೆಯ ಬಿಸಿಯೂಟ ಕೊಠಡಿ ಮತ್ತು ಕಾಂಪೌಂಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದರೆ 1040 ಮಕ್ಕಳೊಂದಿಗೆ ಪುರಸಭೆಯ ಆವರಣದಲ್ಲಿಯೇ ಬಿಸಿಯೂಟ ತಯಾರಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಬಸವಾನಂದ ಶಾಲೆಯ ಮುಖ್ಯ ಶಿಕ್ಷಕ ಎಸ್.ಕೆ.ಗಿಂಡೆ ಹೇಳಿದರು.

Advertisement

ಬುಧವಾರ ಶಾಲೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಹ ಶಿಕ್ಷಕರೊಂದಿಗೆ ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಕಿರಿಯ ಅಭಿಯಂತರ ಎಸ್.ಎಂ.ಕಲಬುರ್ಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯ ಅಗಲೀಕರಣಕ್ಕಾಗಿ 2020 ಫೆಬ್ರುವರಿಯಲ್ಲಿ ಮುಂಚಿತವಾಗಿ ಯಾವುದೇ ನೋಟಿಸ್ ನೀಡದೇ, ಪುರಸಭೆಯ ಅಧಿಕಾರಿಗಳು ಮತ್ತು ಸದಸ್ಯರು, ರಸ್ತೆ ಅಗಲೀಕರಣದ ನಂತರ ಶಾಲೆಯ ಎರಡು ಅಂತಸ್ತಿನ ಅಕ್ಷರ ದಾಸೋಹ(ಅಡುಗೆ) ಕೊಠಡಿ ಮತ್ತು ಕಂಪೌಂಡ್‌ನ್ನು ನಿರ್ಮಿಸಿ ಕೊಡುವ ಷರತ್ತಿನೊಂದಿಗೆ ತೆರವುಗೊಳಿಸಿದ ಪುರಸಭೆಯವರು ನಾಲ್ಕು ವರ್ಷಗಳಾದರೂ ಬಿಸಿಯೂಟ ಕೊಠಡಿ ಮತ್ತು ಕಂಪೌಂಡನ್ನು ನಿರ್ಮಿಸುತ್ತಿಲ್ಲ ಎಂದರು.

ಬಸವಾನಂದ ಶಿಕ್ಷಣ ಸಂಸ್ಥೆಯ ಡಾ.ಬಿ.ಡಿ.ಸೋರಗಾಂವಿ ಮಾತನಾಡಿ 2022 ರಲ್ಲಿ ಶಾಸಕರ ಅನುದಾನದಲ್ಲಿ ಬಿಸಿಯೂಟ ಕೊಠಡಿಯನ್ನು ಪ್ರಾರಂಭಿಸಿ ಬಾರಾ ಕಮಾನಿನಂತೆ ಅರ್ಧಕ್ಕೆ ನಿಲ್ಲಿಸಿದ್ದಾರೆ.ಕೊಠಡಿ ಇಲ್ಲದ ಕಾರಣ ಸರ್ಕಾರದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಕಂಪೌಂಡ ಇಲ್ಲದ ಕಾರಣ ರಾತ್ರಿ ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

ಪುರಸಭೆ ಹಿಂದಿನ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವಧಿಯಲ್ಲಿ ನಗರೋತ್ಥಾನ ಕಾಮಗಾರಿಯಲ್ಲಿ ಕಟ್ಟಡ ನಿರ್ಮಿಸಲು ಡಿಸಿಯವರು ಆದೇಶಿಸಿದ ಪತ್ರ ನೀಡಿದ್ದಿರಿ ಹೊರತು ಈವರೆಗೆ ಕಾಮಗಾರಿ ಪ್ರಗತಿ ಇಲ್ಲ. ಮುಂದಿನ 21 ದಿನದೊಳಗೆ ಸದರಿ ಕಾಮಗಾರಿ ಆರಂಭಿಸದಿದ್ದರೆ ಸಾವಿರಾರು ಮಕ್ಕಳೊಂದಿಗೆ ಪುರಸಭೆ ಆವರಣದಲ್ಲಿ ಧರಣಿ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆಯ ಗಡುವು ನೀಡಿದರು.

ಬಸವಾನಂದ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಬೀದರ ಶಿವಕುಮಾರ ಸ್ವಾಮಿಜಿ, ಉಪಾಧ್ಯಕ್ಷ ಬಸವರಾಜ ಢಪಳಾಪೂರ, ಕಾರ್ಯದರ್ಶಿ ಎಂ.ಎಂ.ಕಟಗಿ, ಸದಸ್ಯರಾದ ಪ್ರಭು ಬೆಳಗಲಿ, ಕೆ.ಸಿ.ಚಿಂಚಲಿ, ಎಂ.ಪಿ.ಅಂಗಡಿ, ಶಿವಾನಂದ ತಾಳಿಕೋಟಿ, ಯಲ್ಲಪ್ಪ ಹಟ್ಟಿ, ಡಾ.ಅಜೀತ ಕನಕರಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಶಿಕ್ಷಕರಾದ ವೈ.ಎ.ಮಗದುಮ್, ಸಿ.ವ್ಹಿ.ಹುಣಶ್ಯಾಳ, ಶ್ರೀನಿವಾಸ ಕಾಂಬಳೇಕರ, ಎಸ್.ಎಂ.ಮೂಗಖೋಡ ಸೇರಿದಂತೆ ಹಲವರು ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರ ಶಾಲೆಯ ಕಾಮಗಾರಿಯನ್ನು ಮುಗಿಸಬೇಕೆಂದು ಒತ್ತಾಯಿಸಿದ್ದಾರೆ.

Advertisement

ಚರಂಡಿಯಂತಾದ ರಸ್ತೆ
ಈವರೆಗೂ ಶಾಲೆಯ ಮುಂದೆ ರಸ್ತೆಯ ಕಾಮಗಾರಿಯು ನಡೆದಿಲ್ಲ. ಈಗ ಮಳೆಗಾಲವಾದ್ದರಿಂದ ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು, ನೀರು ನಿಂತು ವಿದ್ಯಾರ್ಥಿಗಳು ಶಾಲೆಗೆ ಬರುವಾಗ, ಹೋಗುವಾಗ ಕಾಲು ಜಾರಿ ಬೀಳುತ್ತಿದ್ದಾರೆ. ತಾತ್ಕಾಲಿಕವಾಗಿ ರಸ್ತೆಗೆ ಗರಸು ಹಾಕಿ ದುರಸ್ಥಿಗೊಳಿಸಬೇಕೆಂದು ಪುರಸಭೆ ಅಧಿಕಾರಿಗಳಿಗೆ ಶಾಲಾ ಶಿಕ್ಷಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next