Advertisement

ಉಗ್ರ ಕೃತ್ಯ: ಮೂವರಿಗೆ ಕಠಿನ ಜೀವಾವಧಿ ಸಜೆ

03:50 AM Apr 13, 2017 | Team Udayavani |

ಮಂಗಳೂರು: ಉಗ್ರ ಕೃತ್ಯದ ಮೂವರು ಅಪರಾಧಿಗಳಾದ ಪಾಂಡೇಶ್ವರ ಸುಭಾಸ್‌ನಗರದ ಸೈಯದ್‌ ಮೊಹಮದ್‌ ನೌಶಾದ್‌ (25), ಹಳೆಯಂಗಡಿಯ ಅಹ್ಮದ್‌ ಬಾವಾ ಅಬೂಬಕರ್‌ (33) ಮತ್ತು ಪಡುಬಿದ್ರಿ ಉಚ್ಚಿಲದ ಫಕೀರ್‌ ಅಹ್ಮದ್‌ ಬಾವಾ (46) ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಕಠಿನ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.

Advertisement

ಅಕ್ರಮ ಚಟುವಟಿಕೆ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ, ಸ್ಫೋಟಕ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯನ್ವಯ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್‌.ಎಚ್‌. ಪುಷ್ಪಾಂಜಲಿ ದೇವಿ ಅವರು ತೀರ್ಪು ನೀಡಿದರು.

ಆರೋಪಗಳು- ಶಿಕ್ಷೆಯ ವಿವರ
ಎಲ್ಲ ಮೂವರು ಅಪರಾಧಿಗಳಿಗೆ ಅಕ್ರಮ ಚಟುವಟಿಕೆ ಕಾಯ್ದೆಯ ಕಲಂ 16(1) ಬಿ ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ ಹೆಚುÌರಿಯಾಗಿ 1 ವರ್ಷ ಕಠಿನ ಶಿಕ್ಷೆ, ಕಲಂ 17 ಮತ್ತು 18ರನ್ವಯ 5 ವರ್ಷ ಕಠಿನ ಶಿಕ್ಷೆ ಮತ್ತು ತಲಾ 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 3 ತಿಂಗಳ ಕಠಿನ ಸಜೆ, ಸ್ಫೋಟಕ ವಸ್ತು ಕಾಯ್ದೆಯ ಕಲಂ 5 ಬಿ ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಕಠಿನ ಸಜೆ, ಸ್ಫೋಟಕ ಕಾಯ್ದೆ 9 ಬಿಬಿ ಅನ್ವಯ 2 ವರ್ಷ ಕಠಿನ ಸಜೆ ಮತ್ತು 3,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 3 ತಿಂಗಳ ಕಠಿನ ಶಿಕ್ಷೆ, ಐಪಿಸಿ ಕಲಂ 120 (ಕ್ರಿಮಿನಲ್‌ ಒಳ ಸಂಚು) ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಕಠಿನ ಸಜೆ, ಶಸ್ತ್ರಾಸ್ತ್ರ ಕಾಯ್ದೆ 25 (ಎ) (ಎ) ಅನ್ವಯ ಕಠಿನ ಜೀವಾವಧಿ ಸಜೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಕಠಿನ ಸಜೆಯನ್ನು ವಿಧಿಸಲಾಗಿದೆ.

ಇದಲ್ಲದೆ 1ನೇ ಆರೋಪಿ ಸೈಯದ್‌ ಮೊಹಮದ್‌ ನೌಶಾದ್‌ಗೆ ಐಪಿಸಿ ಕಲಂ 420ರ ಅನ್ವಯ 7 ವರ್ಷ ಕಠಿನ ಸಜೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಕಠಿನ ಸಜೆ, ಐಪಿಸಿ ಕಲಂ 468 ಮತ್ತು ಕಲಂ 471ರ ಅನ್ವಯ 3 ವರ್ಷ ಕಠಿನ ಶಿಕ್ಷೆ ಮತ್ತು ತಲಾ 3,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಕಠಿನ ಶಿಕ್ಷೆ ಅನುಭವಿಸಬೇಕಾಗಿದೆ. 

ಹಾಗೆಯೇ 6ನೇ ಆರೋಪಿ ಫಕೀರ್‌ ಅಹ್ಮದ್‌ ಬಾವಾ ಸ್ಫೋಟಕ ವಸ್ತು ಕಾಯ್ದೆಯ ಕಲಂ 6ರನ್ವಯ ಕಠಿನ ಜೀವಾವಧಿ ಸಜೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ವರ್ಷ ಕಠಿನ ಶಿಕ್ಷೆಯನ್ನು ಅನುಭವಿಸಬೇಕು.

Advertisement

ಜೀವಾವಧಿ ಶಿಕ್ಷೆ ಏಕಕಾಲದಲ್ಲಿ; ಉಳಿದ ಶಿಕ್ಷೆಗಳು ಸರದಿ ಪ್ರಕಾರ
ಅಪರಾಧಿಗಳು ಕಠಿನ ಜೀವಾವಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸ ಬೇಕು ಹಾಗೂ ಉಳಿದ ಎಲ್ಲ ಶಿಕ್ಷೆಗಳನ್ನು ಒಂದರ ಹಿಂದೆ ಒಂದರಂತೆ ಅನುಭವಿಸ ಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದರು.

ಈ ಮೂವರು ತಪ್ಪಿತಸ್ಥರಾಗಿದ್ದು, ಅಪರಾಗಳೆಂದು ಎ. 10ರಂದು ನ್ಯಾಯಾಲಯ ತೀರ್ಮಾನಿಸಿತ್ತು ಹಾಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಬುಧವಾರವನ್ನು ನಿಗದಿ ಪಡಿಸಿತ್ತು. ಅದರಂತೆ ಬುಧವಾರ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಕಲಾಪಗಳು ಆರಂಭಗೊಂಡಿದ್ದು, 11.50ರ ವೇಳೆಗೆ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಕೈಕೋಳ ಹಾಕಿರಲಿಲ್ಲ: ಆರೋಪಿಗಳನ್ನು ನ್ಯಾಯಾಯಲಕ್ಕೆ ಕರೆತರುವಾಗ ಮತ್ತು ತೀರ್ಪು ಪ್ರಕಟವಾದ ಬಳಿಕ ಜೈಲಿಗೆ ಕೊಂಡೊಯ್ಯುಧಿವಾಗ ಕೈಕೋಳ ಹಾಕಿರಲಿಲ್ಲ. ಕೈಕೋಳ ಹಾಕುಧಿವುದು ಹಾಕದಿರುವುದು ಪೊಲೀಸರಿಗೆ ಬಿಟ್ಟ ವಿಚಾರ. ಈ ವಿಷಯಧಿದಲ್ಲಿ ಪೊಲೀಸರೇ ರಿಸ್ಕ್ ತಗೊಂಡು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹೈಕೋರ್ಟಿಗೆ ಅಪೀಲು: ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟಿಗೆ ಅಪೀಲು ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.

ವರ್ಷದೊಳಗೆ ಬಂದ ತೀರ್ಪು: 13ನೇ ಆರೋಪಿ ಶಬೀರ್‌ ಮೌಲವಿ ಕಳೆದ ವರ್ಷ ಎಪ್ರಿಲ್‌ನಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದಾಗ ಜಾಮೀನು ನಿರಾಕರಿಸಿದ್ದರೂ ಪ್ರಕರಣವನ್ನು ಒಂದು ವರ್ಷದೊಳಗೆ ಇತ್ಯರ್ಥ ಪಡಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಹಾಗೂ ಮಂಗಳೂರಿನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಪ್ರಕರಣದ ವಿಲೆವಾರಿಯನ್ನು ತ್ವರಿತಗೊಳಿಸಿ ನ್ಯಾಯಾಲಯವು ಒಂದು ವರ್ಷ ಮುಗಿಯುವುದರೊಳಗೆ ತೀರ್ಪು ಪ್ರಕಟಿಸಿದೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಾರಾಯಣ ಶೇರಿಗಾರ್‌ ಯು. ಅವರು ವಾದ ಮಂಡಿಸಿದ್ದರು.

62 ಸಾಕ್ಷಿಗಳು, 122 ದಾಖಲಾತಿಗಳು, 157 ವಸ್ತುಗಳು
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 88 ಸಾಕ್ಷಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 62 ಮಂದಿಯನ್ನು ನ್ಯಾಯಾಧಿಲಯವು ವಿಚಾರಣೆಗೆ ಒಳಪಡಿಸಿತ್ತು. 122 ದಾಖಲಾತಿಗಳನ್ನು ಮತ್ತು 157 ವಸ್ತುಗಳನ್ನು ಸಾಕ್ಷ್ಯಗಳನ್ನಾಗಿ ಗುರುತಿಸಿತ್ತು.

ನ್ಯಾಯ ಸಿಕ್ಕಿಲ್ಲ : ಫಕೀರ್‌ ಅಹ್ಮದ್‌
ಆರೋಪಿಗಳಿಗೆ ಕಠಿನ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ಬಗ್ಗೆ ನ್ಯಾಯಾಧೀಶರು ತೀರ್ಪನ್ನು ಪ್ರಕಟಿಸಿದಾಗ ಅಪರಾಧಿ ಫಕೀರ್‌ ಅಹ್ಮದ್‌ ಕೈಯಲ್ಲಿ ಬರೆದ ಪತ್ರವೊಂದನ್ನು ವಕೀಲರ ಮೂಲಕ ನ್ಯಾಯಾಧೀಶರ ಕೈಗೆ ತಲುಪಿಸಿದ. “ತೀರ್ಪು ಸಮರ್ಪಕವಾಗಿಲ್ಲ; ತನಗೆ ನ್ಯಾಯ ಸಿಕ್ಕಿಲ್ಲ’ ಎಂಬುದಾಗಿ ಅದರಲ್ಲಿ ಬರೆಯಲಾಗಿತ್ತು. ಪತ್ರವನ್ನು ಓದಿದ ನ್ಯಾಯಾಧೀಶರು ಸೂಕ್ತ ಸಾಕ್ಷ್ಯಗಳ ಆಧಾರದಲ್ಲಿ ಈಗಾಗಲೇ ತೀರ್ಪು ಪ್ರಕಟಿಸಲಾಗಿದೆ. ನಾವು ಏನೂ ಮಾಡುವಂತಿಲ್ಲ  ಎಂದು ಹೇಳಿದರು.

ಬಿಗಿ ಬಂದೋಬಸ್ತು 
ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಆರೋಪಿಗಳನ್ನು ಬಿಗಿ ಪೊಲೀಸ್‌ ಬೆಂಗಾವಲಿನಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ನ್ಯಾಯಾಧೀಶರಿಗೂ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿತ್ತು. ಶ್ವಾನ ದಳವನ್ನೂ ಕರೆಸಿ ತಪಾಸಣೆ ನಡೆಸಲಾಗಿತ್ತು.

ಓರ್ವನ ಕಣ್ಣೀರು; ಇಬ್ಬರು ನಿರ್ಲಿಪ್ತ
ನ್ಯಾಯಾಧೀಶರು ತೀರ್ಪು ಪ್ರಕಟಿಸಿದಾಗ ಸೈಯದ್‌ ಮೊಹಮದ್‌ ನೌಶಾದ್‌, ಅಹ್ಮದ್‌ ಬಾವಾ ಅಬೂಬಕರ್‌ ವಿಚಲಿತರಾಗದೆ ನಿಂತಿದ್ದರು. ಫಕೀರ್‌ ಅಹ್ಮದ್‌ ಬಾವಾನ ಮುಖ ಗದ್ಗದಿತರಾದಂತೆ ಕಂಡುಬಂದಿದ್ದು, ಕೊಠಡಿಯಿಂದ ಹೊರಗೆ ಬರುವಾಗ ಕಣ್ಣೀರು ಜಿನುಗುತ್ತಿತ್ತು.

332 ಪುಟಗಳ ತೀರ್ಪು
ಪ್ರಕರಣದ ತೀರ್ಪು ಒಟ್ಟು 332 ಪುಟಗಳನ್ನು ಒಳಗೊಂಡಿದೆ. ನ್ಯಾಯಾಧೀಶರು ತೀರ್ಪಿನ ಮುಖ್ಯಾಂಶಗಳನ್ನು ಮಾತ್ರ ಓದಿದರು.

ಘಟನೆಯ ಹಿನ್ನೆಲೆ
ದೇಶದ ವಿವಿಧೆಡೆ ನಡೆದ ಬಾಂಬ್‌, ಸ್ಫೋಟದಂತಹ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ 2008 ಅ. 3ರಂದು ಮಂಗಳೂರು ಮತ್ತು ಮುಂಬಯಿ ಪೊಲೀಸರು ಕರ್ನಾಟಕ ನಕ್ಸಲ್‌ ನಿಗ್ರಹ ಪಡೆಯ ಸಹಕಾರದಲ್ಲಿ ಮುಂಜಾನೆ 2.45ರಿಂದ 10 ಗಂಂಟೆ ತನಕ ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮತ್ತು ಬಳಿಕ ಪಾಂಡೇಶ್ವರದ ಸುಭಾಸ್‌ನಗರ ಹಾಗೂ ಇತರ ಕಡೆಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ್ದರು. ಅಂದು ಮುಕ್ಕಚ್ಚೇರಿಯ ಮಹಮ್ಮದ ಅಲಿ, ಜಾವೇದ್‌ ಅಲಿ, ಸುಭಾಸ್‌ನಗರದ ನೌಶಾದ್‌ ಮತ್ತು ಹಳೆಧಿಯಂಡಿಯ ಅಹ್ಮದ್‌ ಬಾವಾನನ್ನು ಬಂಧಿಸಿದ್ದರು. ಅನಂತರದ ದಿನಗಳಲ್ಲಿ ಪಡುಬಿದ್ರಿಯ ಉಚ್ಚಿಲ ಮತ್ತು ಚಿಕ್ಕಮಗಳೂರಿನಲ್ಲಿ ಹಾಗೂ ಗುಜರಾತ್‌, ಮಹಾರಾಷ್ಟ್ರಧಿಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ 6 ಮಂದಿಯನ್ನು ಬಂಧಿಸಿದ್ದರು. ಬಂಧನಕ್ಕೆ ಬಾಕಿ ಇರುವ ಮೂವರು ಸೇರಿದಂತೆ ಒಟ್ಟು 13 ಮಂದಿಯ ವಿರುದ್ಧ ಆರೋಪ ಪಟ್ಟಿಯನ್ನು ಆಗಿನ ಪಣಂಬೂರು ಡಿವೈಎಸ್‌ಪಿ ಜಯಂತ್‌ ವಿ. ಶೆಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ದಾಳಿ ಕಾರ್ಯಾಚರಣೆ ವೇಳೆ ಮಹಮ್ಮದ್‌ ಅಲಿ, ಆತನ ಪುತ್ರ ಜಾವೇದ್‌ ಅಲಿ, ನೌಶಾದ್‌ ಮತ್ತು ಅಹ್ಮದ್‌ ಬಾವಾ ಅವರಿಂದ 5 ಬಾಂಬ್‌, 11.39 ಲಕ್ಷ ರೂ. ನಗದು, 1 ಬೈಕ್‌, ಗುಜರಾತ್‌ನ ನಕ್ಷೆ, 21 ಮೊಬೈಲ್‌ ಫೋನ್‌ ಸೆಟ್‌, ಅನೇಕ ಸಿಮ್‌ ಕಾರ್ಡ್‌ಗಳು, ಜೆಹಾದ್‌ ಸಾಹಿತ್ಯ, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್, 4 ಪಾಸ್‌ಪೋರ್ಟ್‌ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಡಿದ್ದರು.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸಿದ 7 ಮಂದಿ ಆರೋಪಿಗಳ ಪೈಕಿ 3 ಮಂದಿಯ ಅಪರಾಧ ಸಾಬೀತಾಗಿದೆ ಎಂಬುದಾಗಿ ಎ. 10ರಂದು ನ್ಯಾಯಾಧೀಶರು ಘೋಷಿಸಿ ಸಾಕ್ಷಾಧಾರಗಳ ಕೊರತೆಯಿಂದಾಗಿ 4 ಮಂದಿಯನ್ನು ಆರೋಪ ಮುಕ್ತಗೊಳಿಸಿದ್ದರು.

2008ರಲ್ಲಿ ಪಶ್ಚಿಮವಲಯದ ಐಜಿಪಿ ಆಗಿದ್ದ ಎ.ಎಂ. ಪ್ರಸಾದ್‌ ಮಾರ್ಗದರ್ಶನದಲ್ಲಿ ದ.ಕ. ಜಿಲ್ಲಾ ಎಸ್‌ಪಿ ಸತೀಶ್‌ ಕುಮಾರ್‌ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿತ್ತು. ಡಿಸಿಐಬಿ ಇನ್ಸ್‌ಪೆಕ್ಟರ್‌ ಆಗಿದ್ದ ಡಾ| ಎಚ್‌. ಎನ್‌. ವೆಂಕಟೇಶ ಪ್ರಸನ್ನ ಪ್ರಕರಣ ದಾಖಲಿಸಿದ್ದರು. ಆಗ ಉಳ್ಳಾಲ ಪಿಎಸ್‌ಐ ಆಗಿದ್ದ ಶಿವಪ್ರಕಾಶ್‌ ಪ್ರಾಥಮಿಕ ತನಿಖೆ, ಅನಂತರದ ತನಿಖೆಯನ್ನು ಪಣಂಧಿಬೂರು ಡಿವೈಎಸ್‌ಪಿ ಆಗಿದ್ದ ಜಯಂತ್‌ ವಿ. ಶೆಟ್ಟಿ ಅವರು ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಯುವಜನರಿಗೆ ಪಾಠ
ಈ ಪ್ರಕರಣದಲ್ಲಿ ಉತ್ತಮ ತೀರ್ಪು ಬಂದಿದೆ. ಯುವಕರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು, ಇಂತಹ ಚಟುವಟಿಕೆಗಳಿಂದ ಏನನ್ನೂ ಸಾಧಿಸಲಾಗದು ಎಂಬ ಸಂದೇಶವನ್ನು ಈ ತೀರ್ಪು ಸಾರುತ್ತದೆ. ದೇಶದ ಏಕತೆ, ಹಿತ ದೃಷ್ಟಿಯಿಂದ ಇದೊಂದು ಯಥೋಚಿತ ತೀರ್ಪು.
ನಾರಾಯಣ ಶೇರಿಗಾರ್‌ ಯು.,ಪಬ್ಲಿಕ್‌ ಪ್ರಾಸಿಕ್ಯೂಟರ್‌

Advertisement

Udayavani is now on Telegram. Click here to join our channel and stay updated with the latest news.

Next