Advertisement

ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

11:06 PM Feb 24, 2021 | Team Udayavani |

ಕಾರ್ಕಳ: ಪರಿಸರ ಸ್ವತ್ಛತೆ ಕುರಿತು ಸಾರ್ವಜನಿಕರಲ್ಲಿ ಎಷ್ಟೇ ಜಾಗ್ರತಿ ಮೂಡಿಸಿದರೂ ಕೆಲವರು ಕಸ ಎಸೆಯುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಇದರಿಂದ ಬೇಸತ್ತ ಕಾರ್ಕಳದ ಹಿರಿಯ ನಾಗರಿಕರೊಬ್ಬರು ಪ್ರತಿ ನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಕ್ಕುವ ಮೂಲಕ ಮಾದರಿಯಾಗಿದ್ದಾರೆ.

Advertisement

ನಗರದ ಮಂಗಲಪಾದೆ ನಿವಾಸಿ 71ರ ಇಳಿವಯಸ್ಸಿನ ಫೆಲಿಕ್ಸ್‌ ವಾಜ್‌ ಪ್ರತಿನಿತ್ಯ ಕಸ ಹೆಕ್ಕುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ಇವರು ಪ್ರತಿದಿನ ಬೆಳಗ್ಗೆ 2 ತಾಸು ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು ಹೆಕ್ಕಿ ಸ್ವತ್ಛಗೊಳಿಸುತ್ತಾರೆ. ಕಳೆದ 7 ವರ್ಷಗಳಿಂದ ಈ ಕಾರ್ಯ ಮಾಡುವ ಮೂಲಕ ಪರಿಸರ ಪ್ರೇಮದ ಕಾಳಜಿ ತೋರುತ್ತಿದ್ದಾರೆ. ಅವರ ಸೇವೆಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಬದಲಾಗಿದೆ ಕಾಲ
ಆರಂಭದಲ್ಲಿ ಕಸ ಸಂಗ್ರಹಕ್ಕೆಂದು ತೆರಳಿದಾಗೆಲ್ಲ ಜನ ಒಂದು ತರಹ ಭಿನ್ನವಾಗಿ ಕಾಣುತ್ತಿದ್ದರು. ಮುಜುಗರ ಪಡುವ ಹಾಗೆ ವರ್ತಿಸುತ್ತಿದ್ದರು. ಅನಂತರದಲ್ಲಿ ಸ್ವತ್ಛತೆಯ ಕುರಿತು ಎಲ್ಲೆಡೆ ಅರಿವು ಮೂಡಿ ಎಲ್ಲರು ಇದರಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದರು. ಜಾಗೃತಿ ಎಲ್ಲೆಡೆಗೂ ಪಸರಿಸಿತು ಎನ್ನುತ್ತಾರೆ ಅವರು.

ಸಂಡೇ ಬ್ರಿಗೇಡ್‌ ಜತೆ
ಕಾರ್ಕಳ ಸ್ವಚ್ಚ ಬ್ರಿಗೇಡ್‌ ತಂಡ ಪ್ರತಿ ರವಿವಾರ ಸ್ವಚ್ಚತೆ ಆಂದೋಲನ ನಡೆಸುತ್ತಿದ್ದಾರೆ. ರವಿವಾರದ ಒಂದು ದಿನ ಫೆಲಿಕ್ಸ್‌ ರವರು ಆ ತಂಡದ ಜತೆಗೆ ಜತೆಗೆ ಸ್ವಚ್ಚತೆ ಸೇವೆಯಲ್ಲಿ ತೊಡಗಿಸಿಕೊಂಡು ಶ್ರಮ ಸೇವೆ ನೀಡುತ್ತಾರೆ.

ನಿತ್ಯ 2 ಗಂಟೆ
ಕಳೆದ 7 ವರ್ಷಗಳಿಂದ ಇವರು ಪ್ರತಿನಿತ್ಯ ಬೆಳಗ್ಗೆ 6ರಿಂದ 8 ಗಂಟೆ ತನಕ ಸ್ವತ್ಛತೆ ಸೇವೆ ಮಾಡುತ್ತಿದ್ದಾರೆ, ಮಂಗಲಪಾದೆ, ಸ್ವರಾಜ್‌ ಮೈದಾನ, ಅನಂತಶಯನ ದೇವಸ್ಥಾನ ಮುಂತಾದ ಕಡೆ ತೆರಳಿ ಕಸ ಹೆಕ್ಕುತ್ತಾರೆ. ಕಸ ಸಂಗ್ರಹಕ್ಕೆ ಕಾರನ್ನು ಬಳಸಿಕೊಳ್ಳುತ್ತಿದ್ದಾರೆ. ಪೆಟ್ರೋಲ್‌ ದರ ಏರಿಕೆಯಾದರೂ ಕಾರಲ್ಲೇ ಕಸ ಸಂಗ್ರಹಿಸಿ ನಷ್ಟವಾದರೂ ಪರವಾಗಿಲ್ಲ, ಪರಿಸರ ಸ್ವಚ್ಚವಾಗಿರಬೇಕು ಎನ್ನುವುದು ಇವರ ದೃಢ ಉದ್ದೇಶ.

Advertisement

ಪರಿಸರ ಪ್ರೇಮ
ವಿದೇಶದಲ್ಲಿ 35 ವರ್ಷ ಉದ್ಯೋಗದಲ್ಲಿದ್ದರು. ಅನಂತರದಲ್ಲಿ ಕೆಲಸ ತೊರೆದು ಊರಿಗೆ ಬಂದು ನೆಲೆಸಿದ್ದಾರೆ. ಸ್ವದೇಶಕ್ಕೆ ಮರಳಿ 11 ವರ್ಷವಾಗಿದೆ. ಮೊದಲಿನಿಂದಲೂ ಪರಿಸರದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದರು.

ಊರಿಗೆ ಮರಳಿದಾಗ ಎಲ್ಲೆಂದರಲ್ಲಿ ಕಸ ಹರಡಿ ಬಿದ್ದಿರುವುದನ್ನು ಕಣ್ಣಾರೆ ಕಂಡು ಬೇಸತ್ತಿದ್ದರು. ಪರಿಸರ ಸ್ವತ್ಛವಿಲ್ಲದೆ ಕೊಳಚೆಯಿಂದ ಇರುವುದಕ್ಕೆ ಅಸಹನೆಗೊಂಡರು. ಅನಂತರದಲ್ಲಿ ಸ್ವತಃ ಶುಚಿತ್ವದ ಪಣತೊಟ್ಟರು. ಕಸ ಹೆಕ್ಕುವುದನ್ನು ನಿತ್ಯದ ಪರಿಪಾಠವನ್ನಾಗಿಸಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ತಡೆಯಲು ಸ್ವರಾಜ್‌ ಮೈದಾನ ಬಳಿ ತ್ಯಾಜ್ಯ ಸಂಗ್ರಹ ಚೀಲಗಳನ್ನು ನೇತು ಹಾಕಿ ಇಟ್ಟಿದ್ದಾರೆ. ನಿತ್ಯ ಸಂಗ್ರಹಿಸಿದ ಕಸವನೆಲ್ಲ ಒಂದೆಡೆ ಇರಿಸಿದ ಬಳಿಕ ಪುರಸಭೆ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ.

– 20 ಕೆ.ಜಿ.ದಿನವೊಂದಕ್ಕೆ ಕಸ ಸಂಗ್ರಹ
– 2 ತಾಸು ಪ್ರತಿನಿತ್ಯ ಸ್ವತ್ಛತೆ ಸೇವೆ
– 4 ಕಿ.ಮೀ ನಿತ್ಯ ಕಾರಲ್ಲಿ ಪ್ರಯಾಣಿಸಿ ಸಂಗ್ರಹ
– 7 ವರ್ಷದಿಂದ ಕಾಯಕ

ಸ್ವತಃ ತ್ಯಾಜ್ಯ ಸಂಗ್ರಹಕ್ಕೆ ಮಾದರಿ
ವಿದೇಶದಿಂದ ಹಿಂತಿರುಗಿ ಊರಲ್ಲಿ ನೆಲೆಸಿದಾಗ ಸುತ್ತಮುತ್ತಲ ಪರಿಸರದಲ್ಲಿ ಕಸ ತುಂಬಿರುತ್ತಿರುವುದನ್ನು ಕಂಡಿದ್ದೆ. ಅದರಿಂದ ಮನಸ್ಸಿಗೆ ದುಃಖವಾಗುತ್ತಿತ್ತು. ಅಂದಿನಿಂದ ಸ್ವತಃತ್ಯಾಜ್ಯ ಸಂಗ್ರಹಕ್ಕೆ ಆರಂಭಿಸಿದೆ.
-ಫೆಲಿಕ್ಸ್‌ ವಾಜ್‌

Advertisement

Udayavani is now on Telegram. Click here to join our channel and stay updated with the latest news.

Next