Advertisement

ಭಾಷೆ ಮೀರಿದ ಭಾವ

06:47 PM May 23, 2019 | Team Udayavani |

ಮೊದಲಿನಿಂದಲೂ ವಾಚಾಳಿಯಲ್ಲದ ನನಗೆ ಎಲ್ಲಿ ನಾನು ಕೂಪಮಂಡೂಕದಂತಾಗಿ ಬಿಡುತ್ತೇನೋ ಎಂಬ ಭಯವಿತ್ತು. ಹೊಸದೇನನ್ನಾದರೂ ಕಲಿಯಬೇಕೆನ್ನುವ ಬಯಕೆ ಇತ್ತಾದರೂ ಏನು ಕಲಿಯಬೇಕು ಎನ್ನುವುದು ತಿಳಿದಿರಲಿಲ್ಲ. ಹೀಗೊಂದು ದಿನ ರಾಹುಲ್‌ ಎಂಬಾತನ ಪರಿಚಯವಾಯಿತು. ಅವನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ, ಅವನು ಮೂಲತಃ ಕೇರಳದ ಮಲಯಾಳಿಯಾಗಿದ್ದ. ಆತನ ಭಾಷೆ ಕೇಳಿದ ನನಗೆ ನಾನೇಕೆ ಮಲಯಾಳ ಕಲಿಯಬಾರದು? ಎಂದೆನಿಸಿತು. ಧೈರ್ಯಮಾಡಿ ಅವನಲ್ಲಿ, “”ಅಣ್ಣಾ, ನನಗೂ ನಿಮ್ಮ ಭಾಷೆ ಕಲಿಸುವಿರಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ತಡ ಆತ ನನ್ನ ಒಡಹುಟ್ಟಿದವನಂತೇ ಆಗಿಬಿಟ್ಟ.

Advertisement

ಅವನು ನನ್ನ ಮೊದಲ ಮಲಯಾಳಂ ಗುರು. ಹೊಸ ಭಾಷೆಯಲ್ಲಿ ಕುಶ‌ಲೋಪರಿ ವಿಚಾರಿಸುವುದನ್ನು ಕಲಿತ ನನಗೆ ಎಲ್ಲೇ ಮಲಯಾಳಿಗಳು ಸಿಕ್ಕರೂ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. “ನೀವು ಮಲಯಾಳಿಗಳಾ?’ ಎಂದು ಪ್ರಾರಂಭವಾಗುತ್ತಿದ್ದ ಮಾತು ಮುಗಿಯುತ್ತಲೇ ಇರಲಿಲ್ಲ. ಈಗಲೂ ನನ್ನ ಭಾಷಾ ಕಲಿಕೆ ನಡೆಯುತ್ತಲೇ ಇದೆ. ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿರುವ ಬಹುತೇಕ ಮಲಯಾಳಿಗಳು ನನ್ನ ಸ್ನೇಹಿತರು. ಕಾಲೇಜು, ಪರೀಕ್ಷೆ, ಓದು, ಹಾಸ್ಟೆಲ್‌ನಲ್ಲಿ ಇರುವ ನನಗೆ ಮನೆಯ ನೆನಪು ಇವೆಲ್ಲದರ ನಡುವೆ ಹೊಸಬರೊಬ್ಬರ ಪರಿಚಯವಾದಾಗ ಏನೋ ಸಂತೋಷ, ಮನಸ್ಸಿಗೆ ನೆಮ್ಮದಿ. ನನ್ನ ಹಾಗೂ ಮಲಯಾಳಿಗಳ ನಂಟು ಕೇವಲ ಹರಟೆ, ಅಥವಾ ವಾಟ್ಸಾಪ್‌ ಗ್ರೂಪಿಗೆ ಸೀಮಿತವಾಗಿಲ್ಲ. ಹೊಸ ವಿಷಯಗಳ ಕುರಿತು ಚರ್ಚೆ, ಕೇರಳ ಹಾಗೂ ಕರ್ನಾಟಕದ ನಡುವಿನ ವ್ಯತ್ಯಾಸಗಳ ವಿಮರ್ಶೆ, ಅಲ್ಲಿನ ಸಂಸ್ಕೃತಿ, ರಾಜಕೀಯ ಬೆಳವಣಿಗೆ, ಸಿನಿಮಾ ರಂಗದಲ್ಲಾಗುವ ಬೆಳವಣಿಗೆ ಹೀಗೆ ಹಲವಾರು ವಿಷಯಗಳ ವಿನಿಮಯವೂ ನಡೆಯುತ್ತದೆ. ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷವನ್ನು ಭಾಷಾ ಕಲಿಕೆಗಾಗಿ ಮೀಸಲಿಟ್ಟಿರುವ ನನಗೆ ಆಗಿರುವ ಲಾಭಗಳು ಹಲವು. ಈಗ ಮಲಯಾಳಿಗಳಿಗೆ ಕನ್ನಡ ಕಲಿಸುತ್ತ ಅವರಿಂದ ದಿನವೂ ಹೊಸ ಶಬ್ದಗಳನ್ನು ಕಲಿಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪರಿಚಿತರೂ ನಮ್ಮನ್ನು ಸರಿಯಾಗಿ ಮಾತನಾಡಿಸದ ಈ ಕಾಲದಲ್ಲಿ ಭಾಷೆಯಿಂದಾಗಿ ಅಪರಿಚಿತರೂ ನನ್ನವರಾಗಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

ಸಿಂಧೂ ಹೆಗಡೆ
ಪ್ರಥಮ ಬಿ. ಎ.ಎಸ್‌ಡಿಎಮ್‌ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next