Advertisement

ನೆರೆಯಿಂದಾಗಿ ರೈತರಿಗೆ ಕಬ್ಬು ಇಳುವರಿ ಕುಸಿತದ ಆತಂಕ

11:08 PM Sep 22, 2019 | Lakshmi GovindaRaju |

ಬೆಂಗಳೂರು: ಈ ಬಾರಿ ಪ್ರವಾಹದಿಂದಾಗಿ ಕಬ್ಬು ಇಳುವರಿ ಜತೆಗೆ ಸಕ್ಕರೆ ಉತ್ಪಾದನೆ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್‌ಪಿ (ಫೇರ್‌ ಆ್ಯಂಡ್‌ ರೆಮ್ಯುನರೇಟಿವ್‌ ಪ್ರೈಸ್‌) ದರಕ್ಕಿಂತ ಕಡಿಮೆ ಬೆಲೆ ದೊರೆಯುವ ಆತಂಕ ಎದುರಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಬೀದರ್‌ ಜಿಲ್ಲೆಗಳಲ್ಲಿ ಸುಮಾರು 3 ಲಕ್ಷ ಹೆಕ್ಟೇರ್‌ ಕಬ್ಬು ಬೆಳೆ ಪ್ರವಾಹಕ್ಕೆ ಸಿಲುಕಿ, ತಿಂಗಳುಗಟ್ಟಲೇ ನೀರಿನಲ್ಲಿ ನಿಂತಿದ್ದರಿಂದ ಉತ್ಪಾದನೆ ಕಡಿಮೆಯಾಗಲಿದೆ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Advertisement

ಕಳೆದ ಸಾಲಿಗೆ ಕೇಂದ್ರ ಸರ್ಕಾರ ಶೇ.10ರಷ್ಟು ಇಳುವರಿ ಕಬ್ಬಿಗೆ 2,750 ರೂ.ದರ ನಿಗದಿ ಮಾಡಿತ್ತು. ರಾಜ್ಯ ಸರ್ಕಾರ ಈ ವರ್ಷದ ಕಬ್ಬಿನ ಬೆಲೆ ಇನ್ನೂ ನಿಗದಿಪಡಿಸಿಲ್ಲ. ಒಂದು ಟನ್‌ ಕಬ್ಬಿಗೆ ಶೇ.9.5 ಸಕ್ಕರೆ ಇಳುವರಿಗೆ ಕೇಂದ್ರ ಸರ್ಕಾರ ದರ ನಿಗದಿ ಮಾಡುತ್ತಿತ್ತು. ಆದರೆ, ಕಳೆದ ವರ್ಷದಿಂದ ಅದನ್ನು ಶೇ.10ರಷ್ಟು ಇಳುವರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ, ರೈತರಿಗೆ ಪ್ರತಿ ಟನ್‌ ಕಬ್ಬಿಗೆ ಕನಿಷ್ಠ 150 ರೂ.ನಷ್ಟ ಹಾಗೂ ಶೇ.1ರಷ್ಟು ಇಳುವರಿ ಕಡಿಮೆಯಾದರೆ 275 ರೂ.ಆದಾಯ ಕಡಿಮೆಯಾಗುತ್ತದೆ. ಈ ವರ್ಷವೂ ಅದೇ ಮಾನದಂಡ ಅನುಸರಿ ಸಲಾಗುತ್ತದೆ.

ಹೀಗಾಗಿ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸತತ ಮಳೆ ಹಾಗೂ ನೀರಿನಿಂದಾಗಿ ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಬೀದರ್‌ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಕ್ಕರೆ ಪ್ರಮಾಣ ಪ್ರತಿ ಟನ್‌ ಕಬ್ಬಿಗೆ ಶೇ.10.5ರಿಂದ 12.5ರ ವರೆಗೆ ಇದೆ. ಅಂದರೆ ಪ್ರತಿ ಟನ್‌ ಕಬ್ಬಿಗೆ 105 ಕೆ.ಜಿ.ಯಿಂದ 125 ಕೆ.ಜಿ.ವರೆಗೂ ಸಕ್ಕರೆ ಉತ್ಪಾದನೆಯಾಗುತ್ತದೆ. ಸಂಪೂರ್ಣ ಮುಳು ಗಡೆಯಾದ ಪ್ರತಿ ಟನ್‌ ಕಬ್ಬಿನಿಂದ 60ರಿಂದ 70 ಕೆಜಿ ಸಕ್ಕರೆ ಮಾತ್ರ ಉತ್ಪಾದನೆಯಾಗುವ ಸಾಧ್ಯತೆ ಇದೆ.

ಉತ್ಪಾದನೆಯೂ ಕಡಿಮೆ: ರಾಜ್ಯದ 14 ಜಿಲ್ಲೆಗಳ ಸುಮಾರು 5.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಪ್ರತಿ ವರ್ಷ 396 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಬೆಳೆಯಲಾಗುತ್ತಿದ್ದು, ಸುಮಾರು 36 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದನೆಯಾಗುತ್ತದೆ. ಆದರೆ, ಈ ವರ್ಷ ಕಬ್ಬು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ 3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಕಬ್ಬು, ಪ್ರವಾಹಕ್ಕೆ ಸಿಲುಕಿ ಇಳುವರಿ ಪ್ರಮಾಣ ಕಡಿಮೆ ಯಾಗಲಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.

ನಿಗದಿತ ದರ ನೀಡಲು ರೈತರ ಆಗ್ರಹ: ಈ ವರ್ಷ ಕಬ್ಬಿನ ಇಳುವರಿ ಆಧಾರದಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರು ದರ ನಿಗದಿ ಮಾಡಿದರೆ, ಎಫ್ಆರ್‌ಪಿ ನಿಯಮದಂತೆ ಪ್ರತಿ ಟನ್‌ ಕಬ್ಬಿಗೆ ಅರ್ಧದಷ್ಟು ಬೆಲೆ ಮಾತ್ರ ಸಿಗುತ್ತದೆ. ಹೀಗಾಗಿ, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಕ್ಕರೆ ಇಳುವರಿ ಪ್ರಮಾಣ ಎಫ್ಆರ್‌ಪಿ ಮಾನದಂಡಕ್ಕಿಂತ ಕಡಿಮೆಯಿದ್ದರೂ, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಎಫ್ಆರ್‌ಪಿ ದರವನ್ನಾದರೂ ನೀಡುವಂತೆ ಕಾರ್ಖಾನೆ ಮಾಲಿಕರಿಗೆ ಸೂಚಿಸಬೇಕು. ಇಲ್ಲದೆ ಹೋದರೆ, ಕಾರ್ಖಾನೆಗಳು ನೀಡುವ ಮೊತ್ತದ ಮೇಲೆ ರೈತರಿಗೆ ಆಗುವ ನಷ್ಟದ ಮೊತ್ತವನ್ನು ಸರ್ಕಾರ ಭರಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎನ್ನುವುದು ರೈತರ ಆಗ್ರಹ.

Advertisement

ಪರಿಹಾರ ಹೆಚ್ಚಳಕ್ಕೆ ಆಗ್ರಹ: ಪ್ರವಾಹದಿಂದ ಹಾನಿಗೊಳಗಾದ ಕಬ್ಬಿಗೆ ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪ್ರತಿ ಎಕರೆಗೆ 5 ಸಾವಿರ ರೂ. ಪರಿಹಾರ ನೀಡುತ್ತಿದೆ. ಪ್ರತಿ ಎಕರೆ ಕಬ್ಬು ಬೆಳೆಯಲು ಕನಿಷ್ಠ 94 ಸಾವಿರ ರೂ. ವೆಚ್ಚವಾಗುತ್ತದೆ ಎಂದು ಕೃಷಿ ಇಲಾಖೆಯೇ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದೆ. ಕೃಷಿ ಇಲಾಖೆ ವರದಿ ಆಧಾರದಲ್ಲಿಯೇ ಪ್ರತಿ ಎಕರೆಗೆ ಕನಿಷ್ಠ 94 ಸಾವಿರ ರೂ.ನಷ್ಟವನ್ನಾದರೂ ಸರ್ಕಾರ ಪರಿಹಾರವಾಗಿ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಪ್ರವಾಹಕ್ಕೆ ಸಿಲುಕಿ ಕಬ್ಬು ನಾಶವಾಗಿರುವುದರಿಂದ ಇಳುವರಿ ಆಧಾರದಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು ದರ ನೀಡಿದರೆ, ರೈತರಿಗೆ ಅರ್ಧದಷ್ಟು ನಷ್ಟ ಉಂಟಾಗುತ್ತದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಕೇಂದ್ರ ಸರ್ಕಾರದ ಕನಿಷ್ಠ ಎಫ್ಆರ್‌ಪಿ ದರವನ್ನಾದರೂ ಕೊಡಿಸುವ ಕೆಲಸ ಮಾಡಬೇಕು.
-ಸುಭಾಸ್‌, ರೈತ ಮುಖಂಡ, ಮುಧೋಳ

ಕಬ್ಬು ಹೆಚ್ಚು ದಿನ ಸಂಪೂರ್ಣ ನೀರಿನಲ್ಲಿ ನಿಲ್ಲುವುದರಿಂದ ಅದರಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಅಲ್ಲದೆ ಕಬ್ಬಿನ ಗಿಣ್ಣಿನಲ್ಲಿ ಮೊಳಕೆಯೊಡೆ ಯು ವುದರಿಂದ ಮತ್ತಷ್ಟು ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಈ ಬಾರಿ ಪ್ರವಾಹದಿಂದ ಸಕ್ಕರೆ ಇಳುವರಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
-ಡಾ.ಖಂಡೆರಾವ್‌, ನಿರ್ದೇಶಕರು, ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ

ಕೇಂದ್ರ ಸರ್ಕಾರ ಕಬ್ಬಿನ ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಕಬ್ಬು ನಿಯಂತ್ರಣ ಮಂಡಳಿಯಲ್ಲಿ ಇಟ್ಟು ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತದೆ. ಅಕ್ಟೋಬರ್‌ ಒಳಗೆ ಈ ವರ್ಷದ ಕಬ್ಬಿನ ದರ ನಿಗದಿ ಮಾಡಲಾಗುವುದು.
-ಕೆ.ಎ.ದಯಾನಂದ, ಸಕ್ಕರೆ ಆಯುಕ್ತ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next