Advertisement

ಗುಜ್ಜಾಡಿ: ಬೇಸಗೆ ಆರಂಭಕ್ಕೆ ಮೊದಲೇ ಬತ್ತುತ್ತಿವೆ ಬಾವಿಗಳು

09:04 PM Jan 27, 2021 | Team Udayavani |

ಕುಂದಾಪುರ: ಗುಜ್ಜಾಡಿ ಗ್ರಾಮದ ಅನೇಕ ಕಡೆಗಳಲ್ಲಿ ಬಾವಿಗಳು ಈಗಿನಿಂದಲೇ ನೀರು ಖಾಲಿಯಾಗಿ ಬತ್ತುತ್ತಿದ್ದು, ಇಲ್ಲಿನ 3-4 ವಾರ್ಡ್‌ಗಳ ನೂರಾರು ಮನೆಗಳಿಗೆ ಈಗಿನಿಂದಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿನ ಜನತಾ ಕಾಲನಿ,ಮಂಕಿ, ಕಳಿಹಿತ್ಲು, ಭಾರತ್‌ ನಗರ ಭಾಗದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದ್ದು, ಜನರಿಗೆ ಸಂಕಷ್ಟಪಡುವಂತಾಗಿದೆ.

Advertisement

ಪ್ರತಿ ವರ್ಷ ಫೆಬ್ರವರಿ ಕೊನೆಯ ವಾರದಿಂದ ನೀರಿನ ಸಮಸ್ಯೆ ಕಾಣಿಸುತ್ತಿದ್ದು, ಈ ಬಾರಿ ಜನವರಿಯಿಂದಲೇ ಮನೆಗಳ ಬಾವಿಯ ನೀರು ತಳಮಟ್ಟಕ್ಕೆ ಇಳಿದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಈಗಾಗಲೇ 2-3 ಕಡೆಗಳಲ್ಲಿ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ.

ಗುಜ್ಜಾಡಿ ಗ್ರಾಮದ 5 ವಾರ್ಡ್‌ಗಳಿಗೆ ಗ್ರಾ.ಪಂ.ನಿಂದ ಒಂದು ದಿನ ಬಿಟ್ಟು ದಿನ ನಳ್ಳಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕೆಲವು ವಾರ್ಡ್‌

ಗಳ ಎತ್ತರದ ಪ್ರದೇಶಗಳಲ್ಲಿರುವ ಮನೆಗಳಿಗೆ ಸೇರಿದಂತೆ ಕೆಲವು ಮನೆಗಳಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ ಎನ್ನುವುದಾಗಿ ಗ್ರಾಮಸ್ಥರು ದೂರಿದ್ದಾರೆ.

ಎಷ್ಟು ಮನೆಗಳಿಗೆ ಸಮಸ್ಯೆ :

Advertisement

ಮಂಕಿ ವಾರ್ಡ್‌ನ 50-60 ಮನೆ, ಕಳಿಹಿತ್ಲು ವಾರ್ಡ್‌ನ 50 ಮನೆ, ಜನತಾ ಕಾಲನಿಯ 100 ಮನೆ, ಭಾರತ್‌ ನಗರ ಭಾಗದ 100 ಮನೆ ಸೇರಿದಂತೆ ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ 300ಕ್ಕೂ ಅಧಿಕ ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಕಳಿಹಿತ್ಲು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯೂ ಇದೆ. ಬಾವಿಗಳಲ್ಲಿ ಇರುವ ನೀರು ಉಪ್ಪಾಗಿದ್ದು, ಕುಡಿಯಲು, ಅಡುಗೆ, ಇತರ ಬಳಕೆಗೂ ಕಷ್ಟ. ಈ ಭಾಗಕ್ಕೆ ಪ್ರತಿದಿನ ನೀರು ನೀಡಬೇಕು ಎನ್ನುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಓವರ್‌ ಹೆಡ್‌ ಟ್ಯಾಂಕ್‌  :

ಗುಜ್ಜಾಡಿ ಗ್ರಾಮ ಪಂಚಾಯ ತ್‌ ಕಚೇರಿ ಸಮೀಪದಲ್ಲೇ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್‌ ಮುತುವರ್ಜಿಯಲ್ಲಿ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ 50 ಸಾವಿರ ಲೀ. ನೀರಿನ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ಹಾಗೂ ಬಾವಿ ನಿರ್ಮಾಣವಾಗುತ್ತಿದೆ. ಇದು ಪೂರ್ಣಗೊಂಡಲ್ಲಿ ಜನತಾ ಕಾಲನಿ, ಭಾರತ್‌ನಗರ ಮತ್ತಿತರ ಭಾಗಗಳಿಗೆ ನೀರು ಪೂರೈಕೆಗೆ ಅನುಕೂಲವಾಗಬಹುದು.

ಈಗಾಗಲೇ ಗುಜ್ಜಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಅವಧಿಗೂ ಮುನ್ನವೇ ಕೆಲವು ಬಾವಿಗಳು ಬತ್ತಿ ಹೋಗಿದ್ದು, ಕೆಲವು ಬಾವಿಗಳ ನೀರು ತಳಕ್ಕೆ ಇಳಿದಿವೆ. ತುರ್ತಾಗಿ ನೀರಿನ ಪೂರೈಕೆಗೆ ಈಗಾಗಲೇ ಸಂಬಂಧಪಟ್ಟ ಕುಡಿಯುವ ನೀರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಳಿ ಮಾತನಾಡಿದ್ದು, ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಜಲಜೀವನ್‌ ಮಿಷನ್‌ನಡಿ ಕೂಡ ಅನುದಾನ ಕೇಳಲಾಗಿದೆ.– ಶೋಭಾ, ಪಿಡಿಒ ಗುಜ್ಜಾಡಿ ಗ್ರಾ.ಪಂ.

ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಹಲವೆಡೆಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದ್ದು, ಗ್ರಾ.ಪಂ.ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಶಾಸಕರಿಗೂ ಮನವಿ ಮಾಡಿಕೊಳ್ಳಲಾಗಿದೆ. ಜಲಜೀವನ್‌ ಮಿಷನ್‌ನಡಿ ಅನುದಾನ ಬಂದಲ್ಲಿ ಅನುಕೂಲವಾಗಬಹುದು. ಓವರ್‌ಹೆಡ್‌ ಟ್ಯಾಂಕ್‌ ಹಾಗೂ ಬಾವಿ ಆಗುತ್ತಿದ್ದು, ಇದರಿಂದ ಜನತಾ ಕಾಲನಿ ಮತ್ತಿತರ ಕೆಲವೆಡೆಗಳಿಗೆ ನೀರು ಪೂರೈಸಬಹುದು. – ಹರೀಶ್‌ ಮೇಸ್ತ, ಮಾಜಿ ಅಧ್ಯಕ್ಷರು, ಗುಜ್ಜಾಡಿ ಗ್ರಾ.ಪಂ.

 

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next