Advertisement

ಅಪಕೀರ್ತಿ ಎಂಬ ಸಾವೂ , ನಾವೂ

10:16 AM Jun 15, 2019 | keerthan |

ಮಾನ ಹೋದ ಮೇಲೆ ಬದುಕಿ ಫ‌ಲವೇನು? ಎಂಬ ಮಾತು ರೂಢಿಯಲ್ಲಿದೆ. ಹಾಗಾಗಿ ಮನುಷ್ಯ ಹೆದರುವುದು ಮಾನಕ್ಕೆ. ಧನವಂತನಲ್ಲದೇ ಹೋದರೂ
ತೊಂದರೆಯಿಲ್ಲ, ಇರುವಷ್ಟು ಕಾಲ ಮಾನವಂತನಾಗಿ ಬದುಕಿದರೆ ಸಾಕು ಎಂಬುದು ಎಲ್ಲರ ಆಸೆ. ನಮ್ಮ ಬದುಕು ಸಂಪೂರ್ಣವಾಗಿ ಸ್ವಂತದ್ದೇ ಆದರೂ, ಅದು ಲೌಕಿಕವಾದ ಜಗತ್ತನ್ನೂ ಅಲೌಕಿಕ ಇಂದ್ರಿಯಗಳನ್ನೂ
ಅವಲಂಬಿಸಿದೆ. ಈ ಅವಲಂಬನೆಯ ಬದುಕು, ಸುಖ, ಸಂತೋಷ, ದುಃಖ- ದುಮ್ಮಾನಗಳನ್ನು ಸವರಿಕೊಂಡೇ ಸಾಗುತ್ತಿರುತ್ತದೆ. ಇದು ನಿರಂತರ ಚಲನೆ. ಈ ದಿನ ಅಥವಾ ಇವತ್ತು ಹುಟ್ಟಿದ ಕ್ಷಣವೇ ಸಾವಿನತ್ತ ಮುಖ ಮಾಡುತ್ತದೆ. ನಾವು ಕೂಡ ಅಷ್ಟೆ, ಹುಟ್ಟಿದ್ದೇವೆ ಎಂದರೆ ಸಾಯಲಿದ್ದೇವೆ ಎಂದೇ ಅರ್ಥ. ಆದರೆ
ಸಾವು ಕಾಲ-ಕಾರಣ ಎಲ್ಲವನ್ನೂ ಮೀರಿದ್ದು. ಸಾವು ಇವತ್ತಲ್ಲದಿದ್ದರೆ ನಾಳೆ ಬರಬಹುದು. ಆದರೆ ಬದುಕು ಸಾವಿಗಿಂತಲೂ ಹೀನವಾದದ್ದು. ಬದುಕು ಯಾವುದು? ಮತ್ತು ಹೇಗೆ ಬದುಕುವುದು ಎಂಬ ಚಿಂತೆಯಲ್ಲಿಯೇ ಇವತ್ತು ಹಾಗೂ ನಾಳೆಗಳು ಹುಟ್ಟುತ್ತವೆ; ಸಾಯುತ್ತವೆ. ನಾನು ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಬಹುಶಃ ನಾವು ಪ್ರತಿಕ್ಷಣವೂ ಸಾಯುತ್ತಲೇ ಇರುತ್ತೇವೆ.

Advertisement

ಬದುಕೊಂದು ದಾರಿ
ಈ ಬದುಕಿಗೆ ದಾರಿ ಧರ್ಮ. ಧರ್ಮಾನುಸಾರ ಪಾಲಿಸಬೇಕಾದ ಕರ್ಮಗಳನ್ನು ಬಿಟ್ಟ ಮೇಲೆ ಬದುಕೆಂಬ ಬದುಕೇ, ಸತ್ತು ಶ್ಮಶಾನ ಸೇರಿದಂತೆ. ಹಾಗಾಗಿಯೇ ಮನದ ಸಂಕಲ್ಪ ಧರ್ಮಯುತವಾಗಿ ಇರಬೇಕು. ಇಂದ್ರಿಯಗಳು ನಿಯಂತ್ರಿಸಲ್ಪಡಬೇಕು. ದೇವರು- ಧರ್ಮ ಕೇವಲ ನಂಬುಗೆಯಲ್ಲ. ಅಲಂಕಾರಕ್ಕಿಟ್ಟ ಬಣ್ಣದ ರಥವೂ ಅಲ್ಲ. ನಮ್ಮೊಳಗಿನ ನಾವು ಏನಾಗಿದ್ದೇವೆ? ನಾವು ಏನಾಗಬೇಕು? ಎಂಬ ಅವಲೋಕನಕ್ಕೆ ಇರುವ ಸಾಧನ. ಗುಡಿಯಲ್ಲಿರುವ ಮೂರ್ತಿಗೆ ಧರ್ಮವಿಲ್ಲ. ಅಧರ್ಮವನ್ನು ಆ ಮೂರ್ತಿಯೊಳಗೆ ನೆಟ್ಟು, ಧರ್ಮದೊಳಗೆ ನಾವು ಬಂಧಿಯಾ ಗಬೇಕು. ಹೀಗೆ
ಬಂಧಿಯಾಗದೇ ಬದುಕಿಗೆ ಬಿಡುಗಡೆಯಿಲ್ಲ. ಒಂದು ಶುದ ಸಂಕಲ್ಪ ಮೂರ್ತಿಯೆದುರು ನಿಶ್ಚಯವಾದಾಗ, ಅದುವೇ ನಿಷ್ಕಲ್ಮಷ ಬದುಕಿಗೆ ಸೂತ್ರವಾದಾಗ ಅದಕ್ಕೆ ದೇವರೂ ಸಾಕ್ಷಿಯಾಗುತ್ತಾನೆ ಮತ್ತು ತಥಾಸ್ತು ಅನ್ನುತ್ತಾನೆ. ಇದೇ ಸೂತ್ರವನ್ನು ಇಟ್ಟುಕೊಂಡು ನೀತಿ ಶತಕ ಒಂದು ಮುತ್ತಿನಂಥ ಮಾತನ್ನು ಹೇಳುತ್ತದೆ. ಇದು ಬರಿಯ ಮಾತಲ್ಲ. ಜೀವನಕ್ಕೆ ಹಾಕಿಕೊಳ್ಳಬೇಕಾದ ಒಂದು ಚೌಕಟ್ಟು. ಒಂದು ಜ್ಞಾನ ಮತ್ತು ಒಂದು ಬೆಳಕು. ದುರಾಸೆಯಿದ್ದ ಮೇಲೆ ಇತರ ದುರ್ಗುಣಗಳೇಕೆ ಚಾಡಿಕೋರತನವಿದ್ದರೆ ಪಾತಕಗಳೇಕೆ? ಸತ್ಯವಿದ್ದಮೇಲೆ ತಪಸ್ಸು ಏತಕ್ಕೆ? ನಿಷ್ಕಲ್ಮಷವಾದ ಮನಸ್ಸು ಇದ್ದಮೇಲೆ ತೀರ್ಥಯಾತ್ರೆ ಏತಕ್ಕೆ? ಸೌಜನ್ಯವಿದ್ದ ಮೇಲೆ ಸ್ವಜನರು ಏತಕ್ಕೆ? ನಿಜವಾದ ಮಹಿಮೆಯಿದ್ದ ಮೇಲೆ ಒಡವೆಗಳೇಕೆ? ಒಳ್ಳೆಯ ವಿದ್ಯೆಯಿದ್ದ ಮೇಲೆ ಹಣ ಏತಕ್ಕೆ? ಅಪಕೀರ್ತಿಯಿದ್ದ ಮೇಲೆ ಮೃತ್ಯು ಏತಕ್ಕೆ? ಇದು ನೀತಿಶತಕ ಕೇಳುವ ಮತ್ತು ನಮ್ಮೊಳಗೆ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ದುರಾಸೆಯೇ ದುರ್ಗುಣಗಳ ಮೂಲ
ಶುದಛಿ ಮನಸ್ಸು, ಸತ್ಯ, ಸೌಜನ್ಯ, ಉತ್ತಮ ವಿದ್ಯೆ ನಮ್ಮಲ್ಲಿದ್ದರೆ, ದೇವರು ನಮ್ಮನ್ನೂ, ಜಗವನ್ನೂ ಮೆಚ್ಚುವ. ಇವು ಇಲ್ಲ ವಾದಾಗಲೇ ದುರಾಸೆ, ಚಾಡಿಕೋರತನ, ದೌರ್ಜನ್ಯಗಳು ನಮ್ಮನ್ನು ಆಳುತ್ತವೆ. ಇವುಗಳ ಅಡಿಯಾಳಾದಾಗ ಅಪಕೀರ್ತಿಯ ಪಟ್ಟ ತಪ್ಪಿದ್ದಲ್ಲ. ಅಪಕೀರ್ತಿ ಜೊತೆಯಾದರೆ ಬದುಕಿದ್ದಾಗಲೇ ಸತ್ತಂತೆ. ಕೀರ್ತಿಯು ಕ್ಷಣಿಕ ನೆಮ್ಮದಿಯನ್ನೋ ಹರ್ಷವನ್ನೋ ಕೊಡ ಬಹುದು. ಆದರೆ ಅಪಕೀರ್ತಿ ಕೇವಲ ನೋವನ್ನಲ್ಲ; ಜನ್ಮವಿಡೀ ತಲೆಯೆತ್ತಿ ನಿಲ್ಲದಂಥ ಸ್ಥಿತಿಗೆ ನಮ್ಮನ್ನು ಕರೆದೊಯುತ್ತದೆ. ಜೀವನ ವನ್ನು ಉಳಿಸುವುದು, ಬೆಳೆಸುವುದು ಸತ್ಕರ್ಮ ಮತ್ತು ಸತ್‌ಧರ್ಮ ಮಾತ್ರ.

ವಿಷ್ಣು ಭಟ್ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next