Advertisement

ಫೆ. 5-7: ರಾಜ್ಯಮಟ್ಟದ ಯುವಜನ ಮೇಳ

02:45 PM Jan 17, 2018 | Team Udayavani |

ಪುತ್ತೂರು: ಪುತ್ತೂರಿನಲ್ಲಿ ರಾಜ್ಯಮಟ್ಟದ ಯುವಜನ ಮೇಳವು ಫೆ. 5ರಿಂದ 7ರ ತನಕ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ
ನಗರದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಯಿತು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜ, ಪ್ರತಿ ಜಿಲ್ಲೆಯಿಂದ 192 ಜನರಂತೆ ಒಟ್ಟು 6 ಸಾವಿರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಊಟ, ವಸತಿ ಸಹಿತ ಎಲ್ಲ ವ್ಯವಸ್ಥೆಗಳಿಗೆ 75 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ. ರಾಜ್ಯ ಸರಕಾರದಿಂದ 40 ಲಕ್ಷ ರೂ. ಅನುದಾನ ಲಭಿಸುತ್ತದೆ ಎಂದು ಮಾಹಿತಿ ನೀಡಿದರು.

ಪ್ರಥಮ ಬಾರಿಗೆ 40 ಲಕ್ಷ ರೂ.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಯುವಜನ ಮೇಳಕ್ಕೆ ಸರಕಾರದಿಂದ 40 ಲಕ್ಷ ರೂ. ಲಭಿಸುತ್ತಿದೆ. ಕಳೆದ ಬಾರಿ ವಿಟ್ಲದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆದಿತ್ತು. 25 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಊಟದ ವ್ಯವಸ್ಥೆಗೆ 30 ಲಕ್ಷ ರೂ.ನ ಟೆಂಡರ್‌ ಆಗುತ್ತದೆ. 6 ಸಾವಿರ ಮಂದಿಗೆ ವಸತಿ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಉಳಿದ ಹಣವನ್ನು ಭರಿಸಬೇಕಾದ
ಜವಾಬ್ದಾರಿ ಇದೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಸುತ್ತೋಲೆ
ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು. ಗ್ರಾ.ಪಂ., ಜಿ.ಪಂ., ತಾ.ಪಂ.ನಿಂದ
ಅನುದಾನ ಕೇಳಲು ನಿರ್ಧರಿಸಲಾಯಿತು. ಜಿಲ್ಲೆಯ ಪ್ರತಿ ಗ್ರಾ.ಪಂ.ಗಳಿಂದ ತಲಾ 5 ಸಾವಿರ ರೂ. ಹಾಗೂ ತಾ.ಪಂ.ಗಳಿಂದ ತಲಾ 25 ಸಾವಿರ ರೂ. ಸಹಾಯ ಕೇಳಲು ಹಾಗೂ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಂದ ಸುತ್ತೋಲೆಗಳನ್ನು ಕಳುಹಿಸಲು ಶಾಸಕರು ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದರು.

ಮಂಗಳೂರು ಮಹಾನಗರಪಾಲಿಕೆಯಿಂದ 5 ಲಕ್ಷ ರೂ. ಕೇಳಲು ಶಾಸ ಕರು ಸೂಚಿಸಿದರು. ಎನ್‌ಜಿಒಗಳಿಂದ, ಎಂಆರ್‌ ಪಿಎಲ್‌, ಕ್ಯಾಂಪ್ಕೋ, ಎಸ್‌ ಸಿಡಿಸಿಸಿ ಬ್ಯಾಂಕ್‌ ಸಹಿತ ಹಲವು ಮೂಲಗಳಿಂದ ಸಹಾಯ ಕೇಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಎಲ್ಲ ಇಲಾಖೆಗಳ ಸಭೆ ಕರೆಯುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿ ಮುಳ್ಳು ಮಾತನಾಡಿ, ರಾಜ್ಯ ಒಕ್ಕೂಟದ ಸಭೆಯೂ ಅಂದೇ ನಡೆಯಲಿದೆ ಎಂದು ತಿಳಿಸಿದರು.

Advertisement

ಸಮಿತಿಗಳ ರಚನೆ
ಶಾಸಕರ ಗೌರವಾಧ್ಯಕ್ಷತೆ, ಸಹಾಯಕ ಆಯುಕ್ತರ ಅಧ್ಯಕ್ಷತೆಯ ಆರ್ಥಿಕ ಸಮಿತಿ ಕರಡನ್ನು ರಚಿಸಲಾಯಿತು. ಉಳಿದ ಸಮಿತಿಗಳನ್ನೂ ರಚಿಸಿ ಆಯಾ ಸಮಿತಿಯಲ್ಲಿ ಒಬ್ಬರಿಗೆ ಜವಾಬ್ದಾರಿ ಹಂಚಿಕೆ ಮಾಡುವಂತೆ ಶಾಸಕರು ಸೂಚಿಸಿದರು. ಕಾರ್ಯಕ್ರಮಕ್ಕೆ ಮೊದಲು ಎಲ್ಲ ಸಮಿತಿಗಳ ಸಭೆ ನಡೆಸಲು ನಿರ್ಧರಿಸಲಾಯಿತು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಪ್ರಮೀಳಾ ಜನಾರ್ದನ, ಶಯನಾ ಜಯಾನಂದ, ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಇಒ ಜಗದೀಶ್‌, ತಾ| ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರಂಬಾರು, ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ವಂ| ವಿಜಯ ಹಾರ್ವಿನ್‌, ಪತ್ರಕರ್ತ ಯು.ಪಿ. ಶಿವಾನಂದ, ಅರುಣ್‌ ಕುಮಾರ್‌ ಪುತ್ತಿಲ, ಸಾಜ ರಾಧಾಕೃಷ್ಣ ಆಳ್ವ, ಶಿವನಾಥ ರೈ ಮೇಗಿನಗುತ್ತು, ಮೊದಲಾದವರು ಉಪಸ್ಥಿತರಿದ್ದರು. ತಾ| ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್‌ ನಿರೂಸಿದರು.

ಪುತ್ತೂರಿನ ಹಬ್ಬ
ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್‌ ಮಾತನಾಡಿ, ಪುತ್ತೂರಿನ
ಎಲ್ಲ ಸಂಘ- ಸಂಸ್ಥೆಗಳು, ಯುವ ಸಂಘಟನೆಗಳು ಸಂಘಟಿತವಾಗಿ ಕಾರ್ಯಕ್ರಮ ಆಯೋಜಿಸಬೇಕು. ಇದು ಪುತ್ತೂರಿನ ಹಬ್ಬವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next