Advertisement

UV Fusion: ಸಹವಾಸ ದೋಷ

01:10 PM Oct 12, 2024 | Team Udayavani |

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೊದಲ ಎಚ್ಚರಿಕೆಯ ಪಾಠವೆಂದರೆ “ಯಾರ ಜತೆಯಾದರು ಸ್ನೇಹ ಮಾಡುವುದಾದರೆ ನೋಡಿ ಸ್ನೇಹ ಮಾಡು’ ಎಂಬುದು. ಈ ಎಚ್ಚರಿಕೆಯ ಸಂದೇಶ ಇಂದು ನೆನ್ನೆಯದಲ್ಲ ಇದು ಶತ-ಶತಮಾನಗಳಿಂದಲೂ ರೂಢಿಯಲ್ಲಿದೆ. ನಾವು ಮಾಡುವ ಸ್ನೇಹ, ಸಹವಾಸಗಳು ನಮ್ಮ ಉನ್ನತಿ ಹಾಗೂ ಅವನತಿ ಎರಡಕ್ಕೂ ಸಹ ದಾರಿ ಮಾಡಿಕೊಡಬಲ್ಲದು.

Advertisement

ಅಂದು ಯಾವುದೋ ಕೆಲಸದ ಮೇಲೆ ನಮ್ಮ ಪತ್ರಿಕೋದ್ಯಮ ವಿಭಾಗಕ್ಕೆ ಹೋಗಿದ್ದೆ. ಅದೇ ದಿನ ನಾನು ಪದವಿ ಓದಿದ್ದ ಕಾಲೇಜಿನಲ್ಲಿ ಯಾವುದೋ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಕುತೂಹಲಕ್ಕೆ ಏನಿರಬಹುದು ಎಂದು ನೋಡಲು ನನ್ನ ಜೂನಿಯರ್‌ ಜತೆ ಹೋದೆ. ಆದರೆ ಅಲ್ಲಿ ಕಿವಿ ಕಿತ್ತೋಗುವ ಹಾಗೆ ಡಿಜೆ ಹಾಕಲಾಗಿತ್ತು, ಹುಡುಗ ಹುಡುಗಿಯರೆಲ್ಲರೂ ಮೈಮರೆತು ಕುಣಿಯುತ್ತಿದ್ದರು. ಅದು ಎಲ್ಲ ಕಾಲೇಜುಗಳಲ್ಲಿಯು ನಡೆಯುವುದೆ, ಅದರಲ್ಲೇನು ವಿಶೇಷ ಎಂದು ನಿಮಗನ್ನಿಸಬಹುದು.

ಅಸಲಿಗೆ ಅಲ್ಲಿ ಒಂದಷ್ಟು ವಿದ್ಯಾರ್ಥಿಗಳು ಮದ್ಯ ಸೇವಿಸಿ, ತಮ್ಮ ಮೇಲೆ ತಮಗೆ ನಿಯಂತ್ರಣವಿಲ್ಲದಂತೆ ಕುಣಿಯುತ್ತಿದ್ದರು. ಇದರ ನಡುವೆ ಉತ್ತರ ಕರ್ನಾಟಕದ ವಿದ್ಯಾರ್ಥಿ, ಧೃಢಕಾಯ ದೇಹದವ ನನ್ನ ಮುಂದೆಯೇ ಎರಡು ವಿಮಲ್‌ ಪಾಕೆಟ್‌ಗಳನ್ನು ತೆಗೆದು ಅದಕ್ಕೆ ಮತ್ತೇನನ್ನೋ ಮಿಕ್ಸ್‌ ಮಾಡಿ ಬಾಯಿಗೆ ರಪ್ಪನೆ ಸುರಿದುಕೊಂಡ. ಇದರ ಮಧ್ಯೆ ಮದ್ಯದ ಅಮಲಿನಲ್ಲಿದ್ದವನೊಬ್ಬ ಬೇರೊಂದು ಕಾಲೇಜಿನ ಯುವತಿಯ ಕಪಾಳಕ್ಕೆ ಬಾರಿಸಿದ್ದ (ಆಮೇಲೆ ತಿಳಿದ್ದದ್ದು ಆಕೆ ಆತನ ಗೆಳತಿ ಎಂದು.

ಹಾಗೆ ನೋಡಿದರೆ ಕ್ಯಾಂಪಸ್‌ ಒಳಗೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಬರುವುದಕ್ಕೆ ಅನುಮತಿಯಿಲ್ಲ. ಆದರೆ ಆಕೆ ಕಾರ್ಯಕ್ರಮಕ್ಕೆ ಬಂದಿದ್ದು ಅಲ್ಲದೆ, ಸ್ನೇಹಿತನಿಂದ ಕಪಾಳಮೊಕ್ಷವನ್ನು ಮಾಡಿಸಿಕೊಂಡಿದ್ದಳು.) ತತ್‌ಕ್ಷಣ ಆಕೆ ತನಗೆ ಆಪ್ತ ವ್ಯಕ್ತಿಯೊಬ್ಬನನ್ನು ಕ್ಯಾಂಪಸ್‌ ಹೊರಗೆ ಕರೆಸಿದಳು. ಬಳಿಕ ಕಪಾಳಕ್ಕೆ ಬಾರಿಸಿದ್ದ ಹುಡುಗನನ್ನು ಸಹ ಹೊರಗಡೆ ಕರೆಸಿಕೊಂಡು ಮಾತನಾಡಲಾರಂಭಿಸಿದರು. ಆರಂಭದಲ್ಲಿ ಶಾಂತಿಯುತವಾಗಿಯೇ ಸಾಗಿದ್ದ ಮಾತುಕತೆ ಮುಂದೆ ಪೊಲೀಸರನ್ನು ಕರೆಸುವ ಹಂತಕ್ಕೆ ತಲುಪಿತು. ಈ ಎಲ್ಲ ಘಟನೆಗಳು ಆಗುವ ವೇಳೆ ಹುಡುಗಿಯ ಕಪಾಳಕ್ಕೆ ಬಾರಿಸಿದ್ದ ಹುಡುಗನ ಪರವಾಗಿ ಆತನ ಕೆಲ ಸ್ನೇಹಿತರು ವಾದಿಸುತ್ತಿದ್ದರು.

ಅವರಲ್ಲಿ ಬಹುತೇಕರು ಮದ್ಯಸೇವಿಸಿದ್ದದ್ದು ನನ್ನ ಗಮನಕ್ಕೆ ಬಂದಿತು. ಆದರೆ ಇಲ್ಲಿ ಕಪಾಳಕ್ಕೆ ಬಾರಿಸಿದ್ದ ಯುವಕ ಕ್ಷಮೆ ಕೇಳುವುದಕ್ಕೆ ಸಿದ್ಧವಿರಲಿಲ್ಲ, ಅಷ್ಟರಲ್ಲಾಗಲೇ ಕ್ಯಾಂಪಸ್‌ ಹೊರಗೆ ಈ ಗಲಾಟೆ ನೋಡಲು ಜನ ಜಮಾಯಿಸುತ್ತಿದ್ದರು. ಆದರೆ ಅಷ್ಟರೊಳಗೆ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಗುಂಪನ್ನು ಚದುರಿಸುವ ಕೆಲಸ ಮಾಡಿದರು. ಆಮೇಲೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಯಿತು. ಆ ಬಳಿಕ ಹೇಗೋ ಆತ ಕ್ಷಮೆ ಕೇಳಿದ ಅದು ಅಲ್ಲಿಗೆ ನಿಂತಿತು. ಆದರೆ ಕ್ಷಮೆ ಕೇಳಿ ಬಂದ ಬಳಿಕ ಆತನ ಕೆಲ ಸ್ನೇಹಿತರು ನೀನು ಕ್ಷಮೆ ಕೇಳಬಾರದಿತ್ತು.

Advertisement

ಆತನನ್ನು ಬೇರೆಯ ಕಡೆ ಕರೆದುಕೊಂಡು ಹೋಗಿ ವಿಚಾರಿಸಿಕೊಳ್ಳಬಹುದಿತ್ತು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಆಗ ನನಗನಿಸಿದ್ದು ನಾವು ಸಹ ಇದೇ ಕಾಲೇಜಿನಲ್ಲಿಯೇ ಓದಿದ ವರು. ನನ್ನ ಜತೆ ಓದಿದ್ದ ಬಹುತೇಕ ಯಾರು ಈ ರೀತಿ ಕಾಲೇಜಿನ ಒಳಗೆ ಮದ್ಯಸೇವಿಸಿ ಬಂದು ಜಗಳ ಮಾಡಿದವರಲ್ಲ. ಆಗ ನಾವು ನಮ್ಮ ಪ್ರಾಧ್ಯಾಪಕರೆದುರು ನಿಂತು ಮಾತನಾಡುವುದಕ್ಕೂ ಹೆದುರುತ್ತಿದ್ದೆವು.

ಇವರ ವರ್ತನೆಗೆ ಈ ಮೂರು ವಿಷಯಗಳು ಕಾರಣವಿರಬಹುದು.ಆಹಾರ ಕ್ರಮ: ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಕ್ರಮ ತೀವ್ರ ಮಟ್ಟದಲ್ಲಿ ಹದಗೆಟ್ಟಿದೆ. ಸಾಮಾನ್ಯವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ಬೆಳಗ್ಗೆ ಬೇಗ ಹೊರಡಬೇಕಾಗಿರುವುದರಿಂದ ಒಂದಷ್ಟು ಮಂದಿ ಹೊಟೇಲ್‌ ಗಳಲ್ಲಿಯೇ ಬೆಳಗ್ಗಿನ ತಿಂಡಿಯಾಗುತ್ತದೆ. ಇನ್ನು ಬಹುತೇಕ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಹೊರಗೆ ಮಾಡುವುದು. ಬಹುತೇಕ ವಿದ್ಯಾರ್ಥಿಗಳ ಮಧ್ಯಾಹ್ನದ ಊಟ ಫಾಸ್ಟ್‌ಫ‌ುಡ್‌. ಈ ರೀತಿ ಫಾಸ್ಟ್‌ಫ‌ುಡ್‌ ಸೇವಿಸುವುದು ದೇಹದಲ್ಲಿನ ಹಾರ್ಮೋನಲ್‌ ಬದಲಾವಣೆಗೆ ಕಾರಣವಾಗುತ್ತದೆ.

ಅತಿಯಾದ ಮೊಬೈಲ್‌ ಬಳಕೆ: ಇನ್ನು ಮೊಬೈಲ್‌ ಅದು ವರವೂ ಹೌದು ಶಾಪವೂ ಹೌದು. ಅದನ್ನು ನಮ್ಮ ಬೆಳವಣಿಗೆಗೆ ಬಳಸಿದರೆ ಅದ್ಭುತ ಯಶಸ್ಸನ್ನು ಕಾಣಬಹುದು ಹಾಗೆಯೇ ಕೆಟ್ಟ ಉದ್ದೇಶಕ್ಕೆ ಬಳಸಿದರೆ ಮತ್ತೆ ಮೇಲೇಳಲಾಗದಂತೆ ನೆಲ ಕಚ್ಚಬಹುದು. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ಅಬ್ಬರ ಹೆಚ್ಚಾಗಿದೆ. ಅವುಗಳಲ್ಲಿ ಬಹುತೇಕ ಕಸವೇ ಹೆಚ್ಚಾಗಿ ಇರುತ್ತದೆ. ಆ ಕಸದ ಮಧ್ಯೆ ಅಪರೂಪಕ್ಕೆ ಒಂದೆರಡು ಉತ್ತಮ ಕಂಟೆಂಟ್‌ ಸಿಗಬಹುದು ಅಷ್ಟೇ. ಇವೆಲ್ಲವೂ ಯುವಕರನ್ನು ಸಾಧ್ಯವಾದಷ್ಟು ಹಾಳುಗೆಡುವುತ್ತಿವೆ.

ಸುತ್ತಲಿನ ವಾತಾವರಣ: ಬೇರೆಲ್ಲದರಂತೆ ನಾವು ಬೆಳೆಯುವ ವಾತಾವರಣವು ನಮ್ಮ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸುತ್ತಲಿನ ವಾತಾವರಣ ನಮ್ಮ ಬೆಳವಣಿಗೆಗೆ ಹಾಗೆಯೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾದರೆ ಪುಸ್ತಕಗಳ ಓದುವಿಕೆ ಹೆಚ್ಚಾಗಬೇಕು, ನಮ್ಮ ಸುತ್ತಲು ಆದಷ್ಟು ತಿಳಿಯಾದ ವಾತಾವರಣ ಇಟ್ಟುಕೊಳ್ಳಬೇಕು, ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್‌ ಬಳಕೆ ಮಾಡಬಾರದು. ಈ ರೀತಿ ಮಾಡುವುದರಿಂದ ನಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಬಹುದು.

-ವರುಣ್‌ ಜಿ.ಜೆ.

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next