Advertisement

ಎರಡನೇ ಪತ್ನಿ ಜೊತೆ ಸೇರಿ ಹೆತ್ತ ಮಗಳನ್ನೇ ಕೊಲೆ ಮಾಡಿದ ಅಪ್ಪ!

12:49 AM Aug 26, 2020 | Hari Prasad |

ಗುಂಡ್ಲುಪೇಟೆ (ಚಾಮರಾಜನಗರ): ಎರಡನೇ ಹೆಂಡತಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತನ್ನ ಮೊದಲ ಪತ್ನಿಯಲ್ಲಿ ತನಗೆ ಜನಿಸಿದ ಸ್ವಂತ ಮಗಳನ್ನೇ ಕೊಲೆ ಮಾಡಿರುವ ಅಮಾನುಷ ಘಟನೆ ವರದಿಯಾಗಿದೆ.

Advertisement

ತನ್ನ ಎರಡನೇ ಹೆಂಡತಿಗೆ ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ತಂದೆ ಮತ್ತು ಚಿಕ್ಕಮ್ಮನೇ ಪುಟ್ಟ ಬಾಲಕಿಯನ್ನು ಕೊಂದು ಹಾಕಿದ್ದಾರೆ. ಈ ಘಟನೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪಾಪಿ ತಂದೆ ಮಹೇಶ ಹಾಗೂ ಕ್ರೂರಿ ಚಿಕ್ಕಮ್ಮ ರತ್ನಮ್ಮ ದಂಪತಿಯನ್ನು ತೆರಕಣಾಂಬಿ ಪೊಲೀಸರು ಬಂಧಿಸಿದ್ದಾರೆ.

ಮಹೇಶನ ಮೊದಲ ಪತ್ನಿ, ಸೋಮಹಳ್ಳಿ ಗ್ರಾಮದ ಗೌರಮ್ಮ ಎಂಬುವರ ಪುತ್ರಿ ಮಹಾಲಕ್ಷ್ಮಿ(5) ಕೊಲೆಯಾದ ದುರ್ದೈವ ಬಾಲಕಿ.

ಘಟನೆಯ ವಿವರ: ಸೋಮಹಳ್ಳಿ ಗ್ರಾಮದ ಮಹೇಶ ತನ್ನ ಮೊದಲನೇ ಹೆಂಡತಿ ಗೌರಮ್ಮಳಿಗೂ ಎದುರು ಮನೆಯ ಮಹದೇವಸ್ವಾಮಿ ಎಂಬಾತನಿಗೂ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಕಳೆದ ಆರು ವರ್ಷಗಳ ಹಿಂದೆಯೇ ಊರಿನ ಮುಖಂಡರ ಸಮ್ಮುಖದಲ್ಲಿ ನ್ಯಾಯಪಂಚಾಯಿತಿ ನಡೆಸಿ ಆಕೆಯಿಂದ ದೂರವಾಗಿದ್ದ.

Advertisement

ನಂತರ ಮಹೇಶ ರತ್ನಮ್ಮ ಎಂಬಾಕೆಯನ್ನು ಮದುವೆಯಾಗಿದ್ದರೂ ಇವರಿಗೆ ಮಕ್ಕಳಾಗಿರಳಿಲ್ಲ.   ಈ ನಡುವೆ ಈ ದಂಪತಿ ಸೋಮವಾರ ಗೌರಮ್ಮಳ ಪುಟ್ಟ ಮಗಳು ಮಹಾಲಕ್ಷಿಯನ್ನು ಅಪಹರಿಸಿ ತಮ್ಮ ಮನೆಗೆ ಕರೆದೊಯ್ದು  ಹಿತ್ತಿಲಿನಲ್ಲಿದ್ದ ನೀರು ತುಂಬಿದ್ದ ತೊಟ್ಟಿಗೆ ಮುಳುಗಿಸಿ ಸಾಯಿಸಿದ್ದಾರೆ. ಆ ಬಳಿಕ ಬಾಲಕಿಯ ಮೃತ ದೇಹವನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೇವರ ಮನೆಯಲ್ಲಿ ಬಚ್ಚಿಟ್ಟಿದ್ದಾರೆ.


ಇತ್ತ, ಎಷ್ಟೇ ಹುಡುಕಾಟ ನಡೆಸಿದರೂ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದರು. ಕೂಡಲೇ ಗ್ರಾಮಕ್ಕೆ ತೆರಳಿದ ಪಿಎಸ್‌ಐ ರಾಧಾ ಬರುತ್ತಿದ್ದಂತೆ ರತ್ನಮ್ಮ ಓಡಿಹೋಗಿ ಮನೆಯ ಬಾಗಿಲು ಮುಚ್ಚಿಕೊಂಡಳು.

ಇದರಿಂದ ಅನುಮಾನಗೊಂಡ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದಾಗ ದೇವರ ಮನೆಯಲ್ಲಿ ಅನುಮಾನಾಸ್ಪದವಾಗಿಟ್ಟಿದ್ದ ಚೀಲವನ್ನು ಬಿಚ್ಚಿದಾಗ ಅದರಲ್ಲಿ ಮಹಾಲಕ್ಷ್ಮಿಯ ಮೃತದೇಹ ಪತ್ತೆಯಾಗಿದೆ.

ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮಗುವಿನ ಮೃತ ದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪಾಲಕರ ವಶಕ್ಕೆ ನೀಡಿದ್ದಾರೆ.

ಸ್ಥಳಕ್ಕೆ ಎಎಸ್‌ಪಿ ಅನಿತಾ, ಡಿವೈಎಸ್‌ಪಿ ಮೋಹನ್, ಸರ್ಕಲ್ ಇನ್‌ಸ್ ಪೆಕ್ಟರ್ ಮಹದೇವಸ್ವಾಮಿ ತೆರಳಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next