Advertisement

ತಂದೆಯ ಕೊಂದು ಶವ ಸುಟ್ಟ ಮಡದಿ ಮಕ್ಕಳು!

12:28 AM Nov 17, 2019 | Lakshmi GovindaRaju |

ಬೆಂಗಳೂರು: ರೈಲ್ವೆ ಹಳಿಗಳ ಸಮೀಪ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಬಳಿ ಸಿಕ್ಕ ಕಾಲೇಜು ವಿದ್ಯಾರ್ಥಿನಿಯ ಸಮವಸ್ತ್ರದ ಮೇಲಿನ ಮೊಹರು ಹಾಗೂ ಒಂದು ಮೊಬೈಲ್‌ ನಂಬರ್‌ ಕೊಲೆ ರಹಸ್ಯ ಬಯಲು ಮಾಡಿದೆ. ಕೆಲದಿನಗಳ ಹಿಂದೆ ಮಾಲೂರಿನ ಸಮೀಪ ರೈಲ್ವೆ ಹಳಿ ಬಳಿ ದೊರೆತಿದ್ದ ಅಪರಿಚಿತ ಶವದ ಬೆನ್ನತ್ತಿದ್ದ ದಂಡು ರೈಲ್ವೆ ಪೊಲೀಸರು, ಮೃತ ದೇಹದ ಬಳಿಯಿದ್ದ ಕಾಲೇಜು ಸಮವಸ್ತ್ರ ಚೂಡಿದಾರ್‌ ಹಾಗೂ ಮೊಬೈಲ್‌ ನಂಬರ್‌ನಿಂದಲೇ ಪ್ರಕರಣ ಭೇದಿಸಿದ್ದಾರೆ.

Advertisement

ಅಷ್ಟೇ ಅಲ್ಲದೆ, ಕೊಲೆಯಾದ ವ್ಯಕ್ತಿ ಗುರುತು ಪತ್ತೆಹಚ್ಚಿದ್ದು, ಆತನನ್ನು ಕೊಲೆಮಾಡಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಕೆ.ಆರ್‌.ಪುರ ಸಮೀಪದ ಚಿಕ್ಕ ಬಸನಪುರದ ಐವತ್ತು ವರ್ಷ ವಯಸ್ಸಿನ ಬಸವರಾಜು ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಆತನ ಪತ್ನಿ ಶೋಭಾ, ಮಕ್ಕಳಾದ ಅನುಷಾ, ಅಖೀಲಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೂಬ್ಬ ಆರೋಪಿ, ಮೃತನ ಭಾವಮೈದುನ ರವಿಕುಮಾರ್‌ ತಲೆಮರೆಸಿಕೊಂಡಿದ್ದಾನೆ.

ಆಗಿದ್ದೇನು?: ಅಕ್ಟೊಬರ್‌ 17ರಂದು ಮಧ್ಯಾಹ್ನ 2.30ರ ಸುಮಾರಿಗೆ ಮಾಲೂರು ಹಾಗೂ ತಯ್ಕಲ್‌ ರೈಲು ನಿಲ್ದಾಣಗಳ ನಡುವಿನ ಸಮೀಪ ಹಳಿಗಳ ಪಕ್ಕದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದವರು ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಸಬ್‌ ಇನ್ಸ್‌ಪೆಕ್ಟರ್‌ ಸತ್ಯಪ್ಪ ಮುಕ್ಕಣ್ಣವರ್‌ ನೇತೃತ್ವದ ತಂಡ, ಮೃತದೇಹವನ್ನು ಗಮನಿಸಿದಾಗ ಅದು ಗುರುತು ಸಿಗದ ಸ್ಥಿತಿಯಲ್ಲಿತ್ತು.

ಅರ್ಧ ಸುಟ್ಟ ಸ್ಥಿತಿಯಲ್ಲಿಯೂ ಇತ್ತು. ಸ್ಥಳ ಮಹಜರು ಮಾಡುವ ವೇಳೆ ಒಂದು ಸೀರೆ, ಬೆಡ್‌ಶೀಟ್‌, ಒಂದು ಚೂಡಿದಾರ್‌ ಟಾಪ್‌ ಸಿಕ್ಕಿತ್ತು. ಚೂಡಿದಾರ್‌ ಮೇಲೆ ಕೆ.ಆರ್‌.ಪುರದ ಕಾಲೇಜೊಂದರ ಹೆಸರು ಮುದ್ರಣಗೊಂಡಿರುವುದು ಕಂಡು ಬಂದಿತು. ಅದೇ ಕಾಲೇಜು ವಿಳಾಸದ ಜಾಡು ಹಿಡಿದರೆ ತನಿಖೆಗೆ ಅಗತ್ಯ ಮಾಹಿತಿ ಸಿಗುವ ಬಗ್ಗೆ ಸ್ಪಷ್ಟತೆ ಸಿಕ್ಕಿತ್ತು. ಬಳಿಕ, ಘಟನೆ ನಡೆದಿದ್ದ ಸುತ್ತಮುತ್ತಲ ಪ್ರದೇಶ ಹುಡುಕಾಡಿದಾಗ ಕಾಲುವೆಯೊಂದರಲ್ಲಿ ಪ್ಲಾಸ್ಟಿಕ್‌ ಚೀಲ, ಅದರೊಳಗೆ ಬೂದಿ, ಕೆಲವು ಕಾಗದದ ಚೂರುಗಳು ಪತ್ತೆಯಾದವು.

ಕಾಗದದ ಚೂರುಗಳನ್ನು ಪರಿಶೀಲಿಸಿದಾಗ ದೂರವಾಣಿ ನಂಬರ್‌ ಒಂದು ಬರೆದಿತ್ತು. ಆ, ನಂಬರ್‌ಗೆ ಕರೆ ಮಾಡಿದಾಗ ಕೆಲವು ದಿನಗಳ ಬಳಿಕ ಕರೆ ಸ್ವೀಕಾರ ಮಾಡಿದ್ದ ವ್ಯಕ್ತಿ, ಶೋಭಾ ಅವರಿಗೆ ನಂಬರ್‌ ನೀಡಿದ್ದಾಗಿ ಮಾಹಿತಿ ನೀಡಿದ್ದ. ಬಳಿಕ ಶೋಭಾ ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಕೊಲೆಯಲ್ಲಿ ಅಂತ್ಯವಾದ ಜಗಳ: ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು, ವಿಪರೀತ ಮದ್ಯ ವ್ಯಸನಿಯಾಗಿದ್ದ. ನಿತ್ಯ ಮನೆಯಲ್ಲಿ ಗಲಾಟೆ ಮಾಡಿ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಅ.15ರಂದು ರಾತ್ರಿ ಗಲಾಟೆ ತಾರಕಕ್ಕೇರಿ ಊದುಕೊಳವೆಯಿಂದ ಹೊಡೆಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದ, ಪುನಃ ಆತ ಹೊಡೆಯಲು ಮುಂದಾದಾಗ ಗಾಜಿನ ಚೂರಿನಿಂದ ಆತನಿಗೆ ಚುಚ್ಚಲು ಹೋದಾಗ ತನ ಕತ್ತು ಕುಯ್ದು ಕೊಲೆಯಾಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಕೃತ್ಯದಲ್ಲಿ ಬಸವರಾಜು ಪತ್ನಿ ಶೋಭಾ, ಇಬ್ಬರು ಹೆಣ್ಣುಮಕ್ಕಳು ಹಾಗೂ ಮತ್ತೂಬ್ಬ ಕಾನೂನು ಸಂಘರ್ಷಕ್ಕೊಳಗಾದ ಮಗಳು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಮೃತದೇಹ ಸಾಗಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ರವಿಕುಮಾರ್‌ ಹಾಗೂ ಆತನ ಸ್ನೇಹಿತರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಅರ್ಧ ಸುಟ್ಟ ಶವ ಮಾಲೂರಿಗೆ ಕೊಂಡೊಯ್ದ: ಬಸವರಾಜು ಕೊಲೆಯಾದ ಬಳಿಕ ಮೃತದೇಹವನ್ನು ತಾಯಿ ಹಾಗೂ ಇಬ್ಬರು ಮಕ್ಕಳು ರಾತ್ರಿಯಿಡೀ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅದೇ ದಿನ ರಾತ್ರಿ ಸ್ವಲ್ಪವೇ ದೂರದಲ್ಲಿ ಸಾಗಿಸಿ ಸುಟ್ಟಿದ್ದಾರೆ. ಪೂರ್ಣ ಸುಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ. ಶೋಭಾ ಅವರು ತಮ್ಮ ಸಹೋದರ ರವಿಕುಮಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರವಿಕುಮಾರ್‌ ಕೂಡ ಆತಂಕಗೊಂಡು ಮಾರನೇ ದಿನ ರಾತ್ರಿ ಅರ್ಧಸುಟ್ಟ ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿಕೊಂಡು ಸ್ನೇಹಿತರ ಜತೆಗೂಡಿ ಮಾಲೂರು ಸಮೀಪದ ರೈಲ್ವೆ ಹಳಿಗಳ ಮೇಲೆ ಮೃತದೇಹ ಎಸೆದು ಪರಾರಿಯಾಗಿದ್ದ ಎಂದು ಅಧಿಕಾರಿ ವಿವರಿಸಿದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next