Advertisement

ರಸ್ತೆ ಆಗದಿದ್ದರೆ ಉಪವಾಸ ಸತ್ಯಾಗ್ರಹ

03:07 PM Dec 01, 2017 | Team Udayavani |

ಪುತ್ತೂರು: ಅರಿಯಡ್ಕ ಗ್ರಾ.ಪಂಗೆ ಒಳಪಟ್ಟ ಶೇಕಮಲೆ ಎಂಬಲ್ಲಿ ದಲಿತ ಕಾಲನಿಗೆ ಹೋಗುವ ಕಾಲು ದಾರಿಯನ್ನು ಸಂಪರ್ಕ ರಸ್ತೆಯನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ, ಮಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ. ದಲಿತ್‌ ಸಂಘರ್ಷ ಸಮಿತಿ ಮತ್ತು ವಿವಿಧ ದಲಿತ ಸಂಘಟನೆಗಳ ಹಾಗೂ ಶೇಕಮಲೆ ಸಂಪರ್ಕ ರಸ್ತೆ ಹೋರಾಟ ಸಮಿತಿ ವತಿಯಿಂದ ಮಿನಿ ವಿಧಾನ ಸೌಧದ ಎದುರು ಅಹೋರಾತ್ರಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

Advertisement

ದರ್ಬೆಯಲ್ಲಿ ಪ್ರತಿಭಟನ ರ‍್ಯಾಲಿಯನ್ನು ದಸಂಸ ರಾಜ್ಯ ಸಮಿತಿ ಸದಸ್ಯ ನಿರ್ಮಲ್‌ ಕುಮಾರ್‌ ಧ್ವಜ ಹಸ್ತಾಂತರ ಮಾಡಿ ಚಾಲನೆ ನೀಡಿದರು. ಅನಂತರ ಮಿನಿ ವಿಧಾನ ಸೌಧದ ಮುಂಭಾಗದ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ದಸಂಸ ಜಿಲ್ಲಾ ಸಂಘಟನ ಸಂಚಾಲಕ ಆನಂದ ಬೆಳ್ಳಾರೆ ಮಾತನಾಡಿ, ಕಳೆದ 12 ವರ್ಷಗಳಿಂದ ರಸ್ತೆಗಾಗಿ ಹೋರಾಟ ಮಾಡುತ್ತಿದ್ದೇವೆ. ದಲಿತ ಕಾಲನಿಗೆ ಹೋಗುವ ಕಾಲುದಾರಿಯನ್ನು ಸಂಪರ್ಕ ರಸ್ತೆಯನ್ನಾಗಿ ಪರಿವರ್ತಿಸಲು ಮನವಿ ನೀಡಿದರೂ ಈ ತನಕ ಸ್ಪಂದನೆ ಸಿಕ್ಕಿಲ್ಲ. ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರಿಗೆ ಅಧಿಕಾರ ಇದೆ. ಇದರಲ್ಲಿ ಯಾರು ರಾಜಕೀಯ ಮಾಡಬೇಡಿ ಎಂದು ಅವರು ಆಗ್ರಹಿಸಿದರು.

ಅಧಿಕಾರಿಗಳೇ ಹೊಣೆ
ರಸ್ತೆಗೆ ಭೂಮಿ ಒತ್ತುವರಿ ಮಾಡಿದರೆ ಅದಕ್ಕೆ ಕೋರ್ಟ್‌ ಮೂಲಕ ಸ್ಟೇ ತರುತ್ತಾರೆ. ಹಾಗೆ ಮಾಡಿದರೆ, ರಸ್ತೆ ಆಗದು. ಅಲ್ಲಿ 8 ಫೀಟ್‌ನ ಮೋರಿ ಹಾಕಿ ಅದರ ಮೇಲೆ ಮಣ್ಣು ಹಾಸಿ ರಸ್ತೆ ಮಾಡಿ ಕೊಡಬೇಕು. ಇಲ್ಲದಿದ್ದರೆ 2 ದಿನ ಆಹೋರಾತ್ರಿ ಧರಣಿ ನಡೆಸುತ್ತೇವೆ. ಮೂರನೆ ದಿನ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಯಾವುದೇ ಸಮಸ್ಯೆ ಉಂಟಾದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ ಮಿತ್ತಬೈಲು ಮಾತನಾಡಿ, ದಲಿತರ ಹಕ್ಕನ್ನು ದಮನಿಸುವುದನ್ನು ಸಹಿಸಲು ಸಾಧ್ಯವಾಗದು. ಜನಪ್ರತಿನಿಧಿಗಳು ಸಮಸ್ಯೆ ಬಗೆ ಹರಿಸಬೇಕಾಗಿತ್ತು. ಆದರೆ ಈ ತನಕ ಸ್ಪಂದನೆ ನೀಡಿಲ್ಲ. ದಲಿತರನ್ನು ಕುರಿಗಳಂತೆ ಭಾವಿಸಬೇಡಿ. ದಲಿತರು ಒಟ್ಟು ಜಾಗೃತರಾಗಿದ್ದಾರೆ ಎಂದು ಅವರು ಎಚ್ಚರಿಸಿದರು.

Advertisement

ಕಾಲನಿಗೆ ರಸ್ತೆಯಾಗಲಿ
ಕರ್ನಾಟಕ ದಲಿತ್‌ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು ಮಾತನಾಡಿ, ದೇಶ ಡಿಜಿಟಲ್‌ ಇಂಡಿಯಾ ಆಗುವ ಮೊದಲು ಕಾಲನಿಗೆ ಕನಿಷ್ಠ ರಸ್ತೆ ನಿರ್ಮಾಣವಾದರೂ ಆಗಲಿ. ಇದು ಶೇಕಮಲೆ ಒಂದು ಕಡೆಯ ಸಮಸ್ಯೆಯಲ್ಲ. ಬಹುತೇಕ ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳ ಸಮಸ್ಯೆ ಇದೆ. ಈ ಕುರಿತು ದಲಿತ್‌ ಸೇವಾ ಸಮಿತಿ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಈ ಕುರಿತು ಅಧಿಕಾರಿಗಳು ಸ್ಪಂದಿಸದಿದ್ದರೆ ಎ.ಸಿ. ಕಚೇರಿಗೂ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಸ್‌. ನಾರಾಯಣ್‌ ಮಾತನಾಡಿ, ಚುನಾವಣೆ ಸಂದರ್ಭ ರಸ್ತೆ ಮಾಡಿ ಕೊಡುತ್ತೇನೆ ಎಂದು ಹೇಳಿದ ಶಾಸಕಿ, ಗೆದ್ದ ಬಳಿಕ ಸ್ಥಳೀಯರೊಬ್ಬರು ಜಾಗ ಬಿಟ್ಟರೆ ರಸ್ತೆ ಮಾಡಬಹುದು ಎಂದಿರುವುದು ಬೇಸರ ತರಿಸಿದೆ. ಅವರು ಜಾಗ ಕೊಡುವುದಾದರೆ ರಸ್ತೆ ಮಾಡಿ ಕೊಡಲು ನಮಗೆ ಶಾಸಕರು ಬೇಡ ಎಂದು ಅವರು ಹೇಳಿದರು.

ನಾವು ಶಾಸರಕರಲ್ಲಿ ಜಾಗ ತೆಗಿಸಿಕೊಡಿ ಎಂದು ಕೇಳಿದ್ದೆವು. ಈ ಕುರಿತು ಅವರು ಮತ್ತೂಮ್ಮೆ ಪ್ರಯತ್ನ ಮಾಡುತ್ತೇನೆ. ಆರು ತಿಂಗಳ ಬಳಿಕ ಮಾತನಾಡುವ ಎಂದಿದ್ದರು. ಆದರೆ ಅಂತಹ ಆರು ತಿಂಗಳು ಕಳೆದು ಈಗ ನಾಲ್ಕುವರೆ ವರ್ಷಗಳು ಕಳೆದವು ಎಂದು ಅವರು ಆರೋಪಿಸಿದರು.

ಪಟು ಬಿಡದ ಪ್ರತಿಭಟನಕಾರರು: ಸ್ಥಳ ಪರಿಶೀಲಿಸಿದ ಅಧಿಕಾರಿಗಳು
ಪ್ರತಿಭಟನನಿರತ ಸ್ಥಳಕ್ಕೆ ಸಹಾಯಕ ಕಮಿಷನರ್‌, ಇತರೆ ಅಧಿಕಾರಿಗಳು ಬಾರದೆ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದರು. ಸಹಾಯಕ ಕಮಿಷನರ್‌ ಮಂಗಳೂರಿನಲ್ಲಿ ಸಭೆಯೊಂದರಲ್ಲಿ ಭಾಗವಹಿಸಲು ತೆರಳಿದ್ದಾರೆ. ಸಂಜೆ ಐದು ಗಂಟೆ ಹೊತ್ತಿಗೆ ಬರುತ್ತಾರೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು. ಸಂಜೆ ಐದು ಗಂಟೆ ಆಗುತ್ತಿದ್ದಂತೆ ಪ್ರತಿಭಟನಕಾರರು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ತತ್‌ಕ್ಷಣ ಪೊಲೀಸ್‌ ಸಿಬಂದಿ ವಿಧಾನಸೌಧ ಪ್ರವೇಶಿಸದಂತೆ ತಡೆ ಹಿಡಿದರು. ಘೋಷಣೆಗಳನ್ನು ಕೂಗುತ್ತಾ ನ್ಯಾಯಕ್ಕಾಗಿ ವಿಧಾನಸೌಧದ ಮೆಟ್ಟಿಲಿನಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ತಹಶೀಲ್ದಾರ್‌ ಅನಂತಶಂಕರ್‌, ತಾ.ಪಂ. ಇಒ ಜಗದೀಶ್‌, ಉಪ ತಹಶೀಲ್ದಾರ್‌ ಶ್ರೀಧರ್‌ ಹಾಗೂ ಪ್ರತಿಭಟನನಿರತರ ಮಾತುಕತೆ ನಡೆದು, ಸ್ಥಳ ಪರಿಶೀಲನೆ ಮಾಡಿ ಮೇಲಧಿಕಾರಿಗಳಿಗೆ ವರದಿ ಕಳುಹಿಸುವ ಭರವಸೆಯನ್ನು ತಹಶೀಲ್ದಾರ್‌ ನೀಡಿದರು. ಇಂದೇ ಸ್ಥಳ ಪರಿಶೀಲನೆ ಮಾಡಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಕೊನೆಕ್ಷಣದಲ್ಲಿ ಎಸಿ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆದು, ಸ್ಥಳ ಪರಿಶೀಲಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು. ಸಂಜೆ ವೇಳೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆಗೆ ತೆರಳಿದ ಅನಂತರ ಪ್ರತಿಭಟನಕಾರರು ಅವರನ್ನು ಹಿಂಬಾಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next