Advertisement

ನೇಗಿಲು ಭೂಮಿಗಿಳಿಸಿದ ಅನ್ನದಾತ

02:42 PM Apr 26, 2019 | Suhan S |

ಎಂ.ರವಿಕುಮಾರ್‌

Advertisement

ಮಾಲೂರು: ತಾಲೂಕಿನ ಹಲವೆಡೆ ಮುಂಗಾರು ಪೂರ್ವ ಮಳೆ ಸಾಧಾರಣವಾಗಿ ಸುರಿದಿದ್ದು, ಕೆಲವು ರೈತರು ಮುಂಗಡವಾಗಿಯೇ ಭೂಮಿ ಹದ ಮಾಡಲು ಮುಂದಾಗಿದ್ದಾರೆ.

ತಾಲೂಕಿನ ಮಾಸ್ತಿ ಹೋಬಳಿಯಲ್ಲಿ 12.2 ಮಿ.ಮೀ., ಮಾಲೂರು ಪಟ್ಟಣ 3.2 ಮಿ.ಮೀ., ಟೇಕಲ್ನಲ್ಲಿ 25 ಮಿ.ಮೀ., ಲಕ್ಕೂರು 6 ಮಿ.ಮೀ. ಮಳೆಯಾಗಿದೆ. ಟೇಕಲ್ನ ಕೆಲವು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಇದರಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ರಣ ಬಿಸಿಲಿಗೆ ಬೆಂದಿದ್ದ ಭೂಮಿ ತಂಪಾಗಿದೆ. ರೈತರ ಮೊಗದಲ್ಲೂ ಸಂತಸ ತರಿಸಿದೆ. ತಾಲೂಕಿನ ಮಾಸ್ತಿ, ಲಕ್ಕೂರು ಮತ್ತು ಚಿಕ್ಕತಿರುಪತಿ ಅಸುಪಾಸಿನಲ್ಲಿ ಮೂರು ನಾಲ್ಕು ದಿನಗಳಿಂದ ಸಾಧಾರಣ ಮಳೆಯಾದ್ದರಿಂದ ರೈತರು ಕೃಷಿಯತ್ತ ಮುಖಮಾಡುತ್ತಿದ್ದಾರೆ. ಎತ್ತುಗಳನ್ನು ಹೊಂದಿರುವ ರೈತರು ಸುಗ್ಗಿ ನಂತರ ಮೂಲೆ ಸೇರಿದ್ದ ನೇಗಿಲು, ಕೃಷಿ ಸಲಕರಣೆಗಳನ್ನು ಸರಿಪಡಿಸಿಕೊಂಡು ಉಳುಮೆಗೆ ಅಣಿಯಾಗುತ್ತಿದ್ದರೆ, ಇನ್ನು ಎತ್ತುಗಳಿಲ್ಲದ ರೈತರು, ಟ್ರ್ಯಾಕ್ಟರ್‌ಗಳಲ್ಲಿ ಗೇಯ್ಮೆ ಮಾಡಿಸಲು ಮುಂದಾಗಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಮೊದಲ ಉಳುಮೆ: ಮೊದಲ ಉಳುಮೆ ಟ್ರ್ಯಾಕ್ಟರ್‌ನಲ್ಲಿ ಮಾಡಿಸಿದರೆ, ಸಾಲುಗಳು ಆಳ ಮತ್ತು ಅಗಲವಾಗಿ ಬೀಳುವುದರಿಂದ ಮುಂದಿನ ದಿನಗಳಲ್ಲಿ ಕಡಿಮೆ ಮಳೆಯಾದ್ರೂ ಉಳುಮೆ ಮಾಡಲು ಅನುಕೂಲವಾಗುತ್ತದೆ ಹಾಗೂ ನೆಲವು ಹೆಚ್ಚು ನೀರು ಹಿಡಿದಿಟ್ಟುಕೊಳ್ಳುತ್ತದೆ. ಮುಂದೆ ಮಳೆ ಸ್ವಲ್ಪ ತಡವಾಗಿ ಬಂದ್ರೂ ಬೆಳೆಗಳು ಬೇಗ ಒಣಗುವುದಿಲ್ಲ. ಹೀಗಾಗಿ ಮೊದಲ ಉಳುಮೆ ರೈತರು ಟ್ರ್ಯಾಕ್ಟರ್‌ಗಳಲ್ಲಿ ಮಾಡಿಸುತ್ತಾರೆ. ತಾಲೂಕಿನ ಬಹುಪಾಲು ರೈತರು ಪ್ರಥಮ ಉಳುಮೆಗಾಗಿ ಟ್ರ್ಯಾಕ್ಟರ್‌ ಅವಲಂಬಿಸಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ. ತಾಲೂಕಿನ ಮಾಸ್ತಿ ಸುತ್ತಮುತ್ತಲಿನ ರೈತರಿಗೆ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಬಾಡಿಗೆ ಆಧಾರದಲ್ಲಿ ಕೃಷಿ ಉಪಕರಣ ಒದಗಿಸುತ್ತಿರುವುದು ಈ ಭಾಗದ ರೈತರಿಗೆ ಹೆಚ್ಚು ವರದಾನವಾಗಿದೆ. ಉಳಿದಂತೆ ಲಕ್ಕೂರು, ಟೇಕಲ್ ಮತ್ತು ಕಸಬಾ ಹೋಬಳಿಗಳಲ್ಲಿ ಖಾಸಗಿ ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಬೇಕಾಗಿದೆ.

Advertisement

ಮಳೆ ಆಶ್ರಿತ ಬೇಸಾಯ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಇದ್ದ ಬೋರ್‌ವೆಲ್ಗಳೂ ಬತ್ತಿಹೋಗಿವೆ. ಸಾಲ ಮಾಡಿ ಹೊಸದಾಗಿ 1750 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತೋಟಗಾರಿಕೆ ಬೆಳೆ ಕೈಬಿಟ್ಟ ರೈತರು, ಪ್ರಸ್ತುತ ಬೀಳುತ್ತಿರುವ ಅಲ್ಪ ಸ್ವಲ್ಪ ಮಳೆಯಿಂದ ಬೀಡು ತೋಟಗಳನ್ನು ಉಳಮೆ ಮಾಡಿ ಮಳೆ ಅಶ್ರಿತ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಈ ಬಾರಿ ತಾಲೂಕಿನಲ್ಲಿ ಕೃಷಿ ಭೂಮಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ನೀಲಗಿರಿ ನಿಷೇಧಿಸಿರುವುದರ ಜೊತೆಗೆ ಬೆಲೆಯೂ ಕಡಿಮೆಯಾದ್ದರಿಂದ ರೈತರು ಹತ್ತಾರು ವರ್ಷಗಳಿಂದ ಎಕರೆಗಟ್ಟಲೆ ಬೆಳೆದಿದ್ದ ನೀಲಗಿರಿ ತೆಗೆದು ಮಾವು, ಸಪೋಟ, ಸೀಬೆ ಹೀಗೆ ಹಣ್ಣಿನ ಬೇಸಾಯಕ್ಕೆ ಮುಂದಾಗುತ್ತಿದ್ದರೆ, ನೀರಿನ ಅನುಕೂಲವಿಲ್ಲದ ರೈತರು ಮಳೆ ಆಶ್ರಿತ ಬೇಸಾಯದಲ್ಲಿ ನಿರತರಾಗಿದ್ದಾರೆ.

ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯು ತಾಲೂಕಿನ ಲಕ್ಕೂರು, ಮಾಸ್ತಿ, ಚಿಕ್ಕತಿರುಪತಿ ಭಾಗದಲ್ಲಿ ಉತ್ತಮವಾಗಿ ಬಿದ್ದಿದ್ದು, ಕಸಬಾ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಸಾಧಾರಣವಾಗಿ, ಮಾಲೂರು ಪಟ್ಟಣದಲ್ಲಿ ಆಶಾದಾಯಕ ಮಳೆಯಾ ಗಿದೆ. ಇದರಿಂದ ಭೂಮಿ ತಂಪಾಗಿ ಬಿಸಿಲಿನ ಝಳ ಮತ್ತು ಧೂಳಿನಿಂದ ಸಾರ್ವಜನಿಕರಿಗೆ ಮುಕ್ತಿ ಸಿಕ್ಕಿದೆ.

ಎಳ್ಳು, ತೊಗರಿ ಬೇಸಾಯಕ್ಕೆ ಸಿದ್ಧತೆ:

ತಾಲೂಕಿನ ಮಾಸ್ತಿ ಹೋಬಳಿಯ ಕೆಲವು ರೈತರು ಅಶ್ವಿ‌ನಿ ಮಳೆಯಲ್ಲಿ ಹೊಲ ಉಳಮೆ ಮಾಡಿ, ಭರಣಿ ಮಳೆಯಲ್ಲಿ ಎಳ್ಳು ಬೇಸಾಯ ಮಾಡುತ್ತಾರೆ. ಕೆಲವು ರೈತರು ಈ ವೇಳೆ ಉಳಮೆ ಅರಂಭಿಸಿ ಮುಂದಿನ ಭರಣಿ, ಕೃತಿಕಾ ಮಳೆಗಳಲ್ಲಿ ತೊಗರಿ, ನೆಲಗಡಲೆ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆ ಮಾಡುವುದರಿಂದ ಪ್ರಸ್ತುತ ಸುರಿದ ಮಳೆಯು ರೈತರ ಪಾಲಿಗೆ ವರದಾನವಾಗಿದೆ. ಮಾಸ್ತಿ, ಚಿಕ್ಕ ಇಗ್ಗಲೂರು, ದೊಡ್ಡ ಇಗ್ಗಲೂರು, ಬಾಳಿಗಾನಹಳ್ಳ ಲಕ್ಕೂರು ಹೋಬಳಿಯ ಮಿಣಸಂದ್ರ ತಾಳಕುಂಟೆ, ಕುಡಿಯನೂರು ಮತ್ತಿತರ ಕಡೆಗಳಲ್ಲಿ ಕೃಷಿ ಚುಟುವಟಿಕೆ ಭರದಿಂದ ನಡೆಯುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next