Advertisement

ರೈತರ ಪ್ರತಿಭಟನೆಗಳೂ, ಅವರ ಸೊಲ್ಲಡಗಿಸುವ ಸಂಗತಿಗಳೂ ….

02:28 PM Jan 15, 2018 | |

ರೈತವರ್ಗದವರ ಧ್ವನಿಗೆ ನಮ್ಮ ದೇಶದಲ್ಲಿ ಬೆಲೆಯೇ ಇಲ್ಲ ಎಂಬಂತಾಗಿದೆ. ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಚುನಾವಣಾ ಹೋರಾಟಗಳು ನಡೆಯುವುದೇ ಇಲ್ಲ. ರಾಜಕಿಯ ಪಕ್ಷಗಳ ಪ್ರಣಾಲಿಕೆಗಳಲ್ಲಿ ಕಾಣಿಸುವುದು ರೈತರ ಬಗ್ಗೆ ಚರ್ವಿತಚರ್ವಣ ಭರವಸೆಗಳು, ಅಷ್ಟೇ! ಚುನಾವಣೆಯಲ್ಲಿ ಗೆದ್ದ ನಂತರ ರಾಜಕೀಯ ಪಕ್ಷಗಳು ತಾವಿತ್ತ ಭರವಸೆಗಳನ್ನೆಲ್ಲ ಮರೆತು ಬಿಡುತ್ತವೆ 

Advertisement

ಹೊಸ ವರ್ಷ  ಶುರುವಾದಾಗ, ಗದಗ ಜಿಲ್ಲೆಯ ನರಗುಂದದಲ್ಲಿ ಮಹದಾಯಿ ನೀರಿಗಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ 900 ದಿನಗಳು ದಾಟಿದವು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ರಾಜಕೀಯ ಮುಖಂಡರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದರೆ ಈ ವಿವಾದ ಎಂದೋ ಬಗೆಹರಿಯುತ್ತಿತ್ತು.

ಆದರೆ, 16 ಜುಲೈ 2015ರಂದು ಆರಂಭವಾದ ಈ ನಿರಂತರ ಪ್ರತಿಭಟನೆಗೆ ಎರಡೂವರೆ ವರ್ಷಗಳೇ ತುಂಬಿದರೂ, ವಿವಾದ ಬಗೆಹರಿದಿಲ್ಲ.  ನಮ್ಮ ದೇಶದಲ್ಲಿ ಮತದಾರರ ವರ್ಗಗಳನ್ನು ಪರಿಗಣಿಸಿದರೆ, ಅತ್ಯಂತ ದೊಡ್ಡ ವರ್ಗ ರೈತರದ್ದು ಎನ್ನಬಹುದು. ಅಂದರೆ ಅತ್ಯಂತ ದೊಡ್ಡ ವೋಟು ಬ್ಯಾಂಕ್‌ ರೈತರದ್ದು. ಹಾಗಿರುವಾಗ, ರೈತರಿಗೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬಲ ಒತ್ತಡ ಹೇರಲು ಸಾಧ್ಯವಾಗಬೇಕಿತ್ತು. 

ಏಕೆಂದರೆ, ಜನಗಣತಿ ಪ್ರಕಾರ ಭಾರತದ ಶೇ.54 ಕೆಲಸಗಾರರು ರೈತರು ಮತ್ತು ಕೃಷಿ ಕೆಲಸಗಾರರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ 834 ದಶಲಕ್ಷ ಒಟ್ಟು ಮತದಾರರಿದ್ದು, ಅವರಲ್ಲಿ 542 ದಶಲಕ್ಷ ಮತದಾರರು ಗ್ರಾಮೀಣ ಪ್ರದೇಶದವರು (ಅಂದರೆ ರೈತರು ಮತ್ತು ಕೃಷಿಆರ್ಥಿಕತೆ ಅವಲಂಬಿತರು). ಮತದಾನದ ವಿಶ್ಲೇಷಣೆಯ ಅನುಸಾರ, ಇವರು ಕೈಗಾರಿಕಾ ಕೆಲಸಗಾರರು ಮತ್ತು ನಗರಗಳ ಮಧ್ಯಮ ವರ್ಗದವರು ಮತದಾನ ಮಾಡುವ ಪ್ರಮಾಣದಲ್ಲೇ ಮತದಾನ ಮಾಡುತ್ತಾರೆ.

ಆದರೆ, ರೈತವರ್ಗದವರ ಧ್ವನಿಗೆ ನಮ್ಮ ದೇಶದಲ್ಲಿ ಬೆಲೆಯೇ ಇಲ್ಲ ಎಂಬಂತಾಗಿದೆ. ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಚುನಾವಣಾ ಹೋರಾಟಗಳು ನಡೆಯುವುದೇ ಇಲ್ಲ. ರಾಜಕಿಯ ಪಕ್ಷಗಳ ಪ್ರಣಾಲಿಕೆಗಳಲ್ಲಿ ಕಾಣಿಸುವುದು ರೈತರ ಬಗ್ಗೆ ಚರ್ವಿತಚರ್ವಣ ಭರವಸೆಗಳು, ಅಷ್ಟೇ! ಚುನಾವಣೆಯಲ್ಲಿ ಗೆದ್ದ ನಂತರ ರಾಜಕೀಯ ಪಕ್ಷಗಳು ತಾವಿತ್ತ ಭರವಸೆಗಳನ್ನೆಲ್ಲ ಮರೆತು ಬಿಡುತ್ತವೆ ಹಾಗೂ ಸರಕಾರಗಳು ರೈತರನ್ನು, ಅವರ ಸಮಸ್ಯೆಗಳನ್ನು ಕ್ಯಾರೇ ಅನ್ನುವುದಿಲ್ಲ.

Advertisement

ಕೇಂದ್ರ ಸರಕಾರವು 2017-18ರ ಬಜೆಟ್ಟಿನಲ್ಲಿ ಒಟ್ಟು ವೆಚ್ಚದ ಕೇವಲ ಶೇ.11ಅನ್ನು ಗ್ರಾಮೀಣ ರಂಗಕ್ಕೆ ಒದಗಿಸಿತ್ತು. (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ ಯೋಜನೆಗಳು, ಗ್ರಾಮೀಣ ಮನೆ ನಿರ್ಮಾಣ, ಬೆಳೆವಿಮೆ, ನೀರಾವರಿ, ರಸ್ತೆಗಳು, ರಾಸಾಯನಿಕ ಗೊಬ್ಬರಗಳು  ಇವೆಲ್ಲದರ ವೆಚ್ಚ ಸಹಿತ). ಈ ಬಗ್ಗೆ ರೈತಾಪಿ ಜನರನ್ನು ಮಾತನಾಡಿಸಿದರೆ ತಿಳಿಯುತ್ತದೆ. ಅವರಿಗೆ ತಾವು ಗೌರವಾರ್ಹ ಮತದಾರರೆಂಬ ಕಲ್ಪನೆಯೇ ಇಲ್ಲ! ಚುನಾವಣಾಕಾಲದಲ್ಲಿ ರೈತರನ್ನು .ಯಾಮಾರಿಸಿ, ಅನಂತರ ಸತಾಯಿಸುವುದೇ ರಾಜಕೀಯ ಪಕ್ಷಗಳ ತಂತ್ರ! ಬಹುಸಂಖ್ಯಾತರಾಗಿದ್ದರೂ ಸೊಲ್ಲಿಲ್ಲದ ಪ್ರಜೆಗಳಾಗಿ¨ªಾರೆ ರೈತರು.

ಈ ವಿಪರ್ಯಾಸಕ್ಕೆ ಕಾರಣಗಳೇನು? ಮೊದಲನೆಯದಾಗಿ, ರೈತರಲ್ಲಿ ತಿಳುವಳಿಕೆಯ ಕೊರತೆ. ಸಂಕಟದಲ್ಲಿ ಮುಳುಗಿದ್ದರೂ ರೈತರು ತಮ್ಮ ಪರಿಸ್ಥಿತಿಗೆ ತಮ್ಮನ್ನು, ಪ್ರಕೃತಿಯನ್ನು ಅಥವಾ ವಿಧಿಯನ್ನು ದೂರುತ್ತಾರೆ. ಒಬ್ಬ ರೈತ ತನ್ನ ಪರಿಸ್ಥಿತಿಗೆ ಕಾರಣವಾದ ಸರಕಾರದ ಧೋರಣೆಗಳನ್ನು ಅರ್ಥ ಮಾಡಿಕೊಂಡು, ತನ್ನ ಸಮಸ್ಯೆಗಳನ್ನು ಸರಕಾರದ ಕಾರ್ಯಯೋಜನೆಗಳಿಂದ ಪರಿಹರಿಸಬಹುದೆಂದು ತಿಳಿದುಕೊಳ್ಳುವುದು ಸುಲಭವಲ್ಲ. ತಮ್ಮ ಪರಿಸ್ಥಿತಿ ಬದಲಾಗಬೇಕೆಂಬ ಹಂಬಲ ರೈತರಲ್ಲಿದ್ದರೂ, ಅದಕ್ಕೆ ಸರಕಾರವೇ ಮುಂದಾಗಬೇಕೆಂಬ ಆಗ್ರಹ ಅವರಲ್ಲಿ ಕಾಣಿಸುವುದಿಲ್ಲ.

ಎರಡನೆಯ ಕಾರಣ, ಸಾರ್ವಜನಿಕ ರಂಗದಲ್ಲಿ ರೈತರ ಬೇಡಿಕೆಗಳು ಪರಿಣಾಮಕಾರಿಯಾಗಿ ಪ್ರಸಾರವಾಗದಿರುವುದು. ನಮ್ಮ ದೇಶದ ಬಹುಮಾಧ್ಯಮವು ಬಹು ದೊಡ್ಡ ಗ್ರಾಹಕ ವರ್ಗವಾದ ನಗರ-ಮಧ್ಯಮ ವರ್ಗಕ್ಕೆ ಸಂಬಂಧ ಪಡದಿರುವ ಹಲವಾರು ಸಂಗತಿಗಳ ಜೊತೆಗೆ ರೈತರ ಸಂಕಟಗಳನ್ನೂ ಸೇರಿಸಿ, ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ. ನಮ್ಮ ದೇಶದ ಪ್ರಭಾವಿ ಆಂಗ್ಲಭಾಷಾ ಮಾಧ್ಯಮವಂತೂ, ತನ್ನ ಅಸಡ್ಡೆಯಿಂದಾಗಿ ರೈತ ಸಂಬಂಧಿ ಸಂಗತಿಗಳನ್ನು ಸರಳೀಕರಿಸಿ ಮುಚ್ಚಿ ಹಾಕುತ್ತದೆ. ಭಾರತೀಯ ಭಾಷೆಗಳ ಮಾಧ್ಯಮವೂ, ರೈತರ ಸಮಸ್ಯೆಗಳನ್ನು ಸ್ಥಳೀಯ ಸಮಸ್ಯೆಗಳೆಂದು ಬಿಂಬಿಸುತ್ತದೆ. ಇದೆಲ್ಲದರ ಒಟ್ಟು ನಕಾರಾತ್ಮಕ ಪರಿಣಾಮಕ್ಕೆ ಒಂದು ಉದಾಹರಣೆ: ಬಹುಪಾಲು ನಗರವಾಸಿ ಭಾರತೀಯರಿಗೆ 2015ರ ಭೀಕರ ಬರಗಾಲದ ಬಗ್ಗೆ ಗೊತ್ತೇ ಇರಲಿಲ್ಲ; ಒಂದು ಕ್ರಿಕೆಟ… ಪಂದ್ಯವನ್ನು ನೀರಿನ ಕೊರತೆಯಿಂದಾಗಿ ನಿಲ್ಲಿಸಿದಾಗಲಷ್ಟೇ ಅವರಿಗೆ ಬರಗಾಲದ ಬಗ್ಗೆ ತಿಳಿದದ್ದು! 

ಮೂರನೆಯ ಕಾರಣ, ರೈತರ ಸಂಘಟನೆಗಳ ಸ್ವರೂಪವು ರೈತರ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ತರುವುದಕ್ಕೆ ಅಡ್ಡಿಯಾಗಿದೆ. ಯಾಕೆಂದರೆ, ರೈತರ ಸಂಘಟನೆಗಳು ರೈತರ ಆತ್ಮಹತ್ಯೆಯಂಥ ಘಟನೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿವೆ. ವ್ಯಕ್ತಿಕೇಂದ್ರಿತ ಸ್ಥಳೀಯ ಸಂಘಟನೆಗಳಾಗಿ ಕಾರ್ಯಾಚರಿಸುತ್ತಿವೆ; ಧೋರಣೆಗಳ ಬೆಂಬತ್ತಿ ಹೋರಾಟ ನಡೆಸುವುದರಲ್ಲಿ ಅವು ಹಿಂದೆ ಬಿದ್ದಿವೆ. ಕಾರ್ಮಿಕ ಸಂಘಟನೆಗಳ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ರೈತ ಸಂಘಟನೆಗಳ ಸಹಯೋಗದ ಕಾರ್ಯಾಚರಣೆ ನಡೆದಿದ್ದನ್ನು ಯಾರಾದರೂ ಕಂಡಿದ್ದೀರಾ? ಇದರಿಂದಾಗಿ, ತಮ್ಮ ಹಕ್ಕುಗಳಿಗಾಗಿ ಪ್ರಬಲ ಹೋರಾಟ ನಡೆಸಲು ರೈತಸಂಘಟನೆಗಳಿಗೆ ಸಾಧ್ಯವಾಗುತ್ತಿಲ್ಲ.

ಅಂತಿಮವಾಗಿ, ನಮ್ಮ ರಾಜಕೀಯ ವ್ಯವಸ್ಥೆ ರೈತಪರವಾದ ಯಾವುದೇ ಕಾರ್ಯಾಚರಣೆಯ ಸೊಲ್ಲಡಗಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣೆಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಹಾಗಾಗಿ, ಚುನಾವಣಾ ಸಮಯದಲ್ಲಿತ್ತ ಆಶ್ವಾಸನೆಗಳ ವಿಶ್ಲೇಷಣೆ ಮಾಡಿ, ಎರಡು ಚುನಾವಣೆಗಳ ನಡುವಿನ ಅವಧಿಯಲ್ಲಿ ಅವುಗಳ ಜಾರಿಗೆ ಸರಕಾರವನ್ನು ಉತ್ತರದಾಯಿ ಮಾಡಲು ಸಾಧನಗಳೇ ಇಲ್ಲವಾಗಿದೆ. ರಾಜಕೀಯ ಪಕ್ಷ$ಗಳಲ್ಲಿ ಆಂತರಿಕ ನಿಯಂತ್ರಣದ ಕೊರತೆಯಿಂದಾಗಿ, ಪಕ್ಷಗಳ ಮುಖಂಡರ ಮೇಲೆ ಪ್ರಭಾವ ಬೀರಲು ಅಥವಾ ಅವರನ್ನು ಉತ್ತರದಾಯಿ ಮಾಡಲು ಕಷ್ಟಸಾಧ್ಯವಾಗಿದೆ. ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆ ನಡೆಯದಿರುವ ಸನ್ನಿವೇಶವಂತೂ, ರೈತರ ಸಮಸ್ಯೆಗಳ ಬಗ್ಗೆ ಸಂವಾದದಿಂದ ನುಣುಚಿಕೊಳ್ಳಲು ಸರಕಾರಕ್ಕೆ ಸುಲಭ ದಾರಿಗಳನ್ನು ಒದಗಿಸುತ್ತಿದೆ.

ಒಟ್ಟಾರೆಯಾಗಿ, ರೈತರ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹತ್ತುಹಲವು ಘೋಷಣೆಗಳು, ಭರವಸೆಗಳು ಕೇಳಿಬರುತ್ತಲೇ ಇವೆ. ಆದರೆ, ರೈತರನ್ನು ಭೀಕರ ಬಿಕ್ಕಟ್ಟಿನಿಂದ ಪಾರು ಮಾಡಲು ಅಗತ್ಯವಿರುವ  ರಾಜಕೀಯ ಇಚ್ಛಾಶಕ್ತಿ ಎಲ್ಲೂ ಕಾಣಿಸುತ್ತಿಲ್ಲ! 

ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next