Advertisement

ಸಾಲ ಮನ್ನಾ ನಗದು ವಾಪಸ್‌: ರೈತರ ಪ್ರತಿಭಟನೆ

06:01 PM Feb 22, 2020 | Suhan S |

ಪಾವಗಡ: ರಾಜ್ಯ ಸರ್ಕಾರದಿಂದ ಮಂಜೂರು ಮಾಡಿದ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡದೆ ಎಸ್‌ ಬಿಐ ಬ್ಯಾಂಕ್‌ನ ಸಿಬ್ಬಂದಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅರೋಪಿಸಿ ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಾಲೂಕಿನ ಕೋಟಗುಡ್ಡ ಗ್ರಾಮದ ಎಸ್‌ ಬಿಐ ಬ್ಯಾಂಕ್‌ ಮುಂದೆ ಪ್ರತಿಭಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಬ್ಯಾಂಕ್‌ ವ್ಯಾಪ್ತಿಯ 750 ರೈತರ ಖಾತೆಗೆ ಸರ್ಕಾರ ಸಾಲಮನ್ನಾ ಯೋಜನೆಯಡಿ ವರ್ಗಾಯಿಸಿದ್ದು, ಹಣವನ್ನು ಬ್ಯಾಂಕ್‌ ಸಿಬ್ಬಂದಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಮರಳಿಸಿದ್ದಾರೆ. ಇದರಿಂದ ಮಳೆ, ಬೆಳೆಯಿಲ್ಲದೆ ಪರದಾಡುತ್ತಿರುವ ರೈತರಿಗೆ ಅನ್ಯಾಯವಾಗಿದೆ. ಖಾತೆಗೆ ಹಣ ಬಂದಿದೆ ಸಾಲತೀರಿದೆ ಎಂದು ರೈತರು ನಿಟ್ಟುಸಿರು ಬಿಡುವ ಮುನ್ನವೇ ಬ್ಯಾಂಕ್‌ ವ್ಯವಸ್ಥಾಪಕರು ಸಾಲ ಮರು ಪಾವತಿ ಮಾಡುವಂತೆ ನೋಟಿಸ್‌ ನೀಡಿದ್ದಾರೆ. ಸಾಲ ಪೂರ್ಣ ಪಾವತಿಸುವಂತೆ ಬ್ಯಾಂಕ್‌ ವ್ಯವಸ್ಥಾಪಕ ರೈತರ ಮೆಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರ ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಿದೆ. ಆದರೆ, ಬ್ಯಾಂಕ್‌ ಸಿಬ್ಬಂದಿ ಸಾಲ ತೀರಿಸುವಂತೆ ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಪರಿಶೀಲಿಸಿ ಬ್ಯಾಂಕ್‌ ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರ ಪಡೆದ ಬಳಿಕ ಮಾತನಾಡಿದ ಎಸ್‌ಬಿಐಯ ಬ್ಯಾಂಕ್‌ ವ್ಯವಸ್ಥಾಪಕ ಸುರೇಶ್‌ಬಾಬು, ಸರ್ಕಾರದ ಅದೇಶದಂತೆ ತಪ್ಪಾಗಿ ಖಾತೆಗಳಿಗೆ ಜಮಾ ಅದ ಹಣವನ್ನು ಹಿಂದಿರುಗಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಕಿಸಾನ್‌ ಸಂಘದ ಅಧ್ಯಕ್ಷ ಕೃಷ್ಣರಾವ್‌,ಹಸಿರು ಸೇನೆ ಪದಾಧಿಕಾರಿ ಗಳಾದ ಶಿವರಾಜು, ನರಸಪ್ಪ, ಅಶ್ವತ್ಥಪ್ಪ, ಹನುಮಂತ ರಾಯಪ್ಪ, ತಿಮ್ಮಾನಾಯ್ಕ, ವೆಂಕಟಸ್ವಾಮಿ, ಈರಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next