Advertisement

ರೈತರು ಸಂಘಟಿತರಾದರಷ್ಟೇ ಸೌಲಭ್ಯ ಪಡೆಯಲು ಸಾಧ್ಯ

12:04 PM Jun 26, 2018 | Team Udayavani |

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ಇದರಿಂದ ರೈತರು ಎಚ್ಚೆತ್ತುಕೊಂಡು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ಕರೆ ನೀಡಿದರು.

Advertisement

ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ನಡೆದ ತಾಲೂಕು ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ರೈತರ ಬದುಕು ಹಸನಾಗಬೇಕಾದರೆ ಭದ್ರಾ ಮೇಲ್ದಂಡೆ ಯೋಜನೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರೆ ಮಾತ್ರ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಕಾಮಗಾರಿ ವಿಳಂಬವಾದಲ್ಲಿ ಹೋರಾಟ ಮಾಡುವ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಎಚ್ಚರಿಸಬೇಕು ಎಂದರು.

ಕೃಷಿಗಾಗಿ ಸಾಲ ಮಾಡಿರುವ ರೈತರು ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೋರಾಟದಿಂದ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಭದ್ರಾ ಮತ್ತು ಸಾಸ್ವೆಹಳ್ಳಿ ಯೋಜನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಮಾತನಾಡಿ, ಅನ್ನ ನೀಡುವ ಅನ್ನದಾತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತ ಬರುತ್ತಿದ್ದರೂ ಬರೀ ಭರವಸೆಗಳಷ್ಟೇ ಸಿಗುತ್ತಿವೆ. ಅದಕ್ಕಾಗಿ ರೈತರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

Advertisement

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜುಲೈ 5 ರಂದು ಮಂಡಿಸಲಿರುವ ಬಜೆಟ್‌ ಕಾದು ನೋಡುತ್ತೇವೆ. ಒಂದು ವೇಳೆ ರೈತರ ಸಾಲ ಮನ್ನಾ ಮಾಡದಿದ್ದರೆ ಉಗ್ರ ಚಳವಳಿ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಅಕ್ರಮ-ಸಕ್ರಮ ಯೋಜನೆಯಡಿ ರೈತರ ಹೊಲಗಳಿಗೆ ಪರಿವರ್ತಕಗಳನ್ನು ಅಳವಡಿಸಿ ನ್ಯೂನತೆಗಳನ್ನು ಸರಿಪಡಿಸಬೇಕು. ಪ್ರತಿ ತಿಂಗಳು ರೈತರ ಸಭೆ ಕರೆದು ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರುವ ಕೆಲಸ ಆಗಬೇಕು ಎಂದರು.

ಧಾರವಾಡ ಜಿಲ್ಲೆಯ ನವಲಗುಂದ-ನರಗುಂದದಲ್ಲಿ ಜುಲೈ 21 ರಂದು ರೈತ ಹುತಾತ್ಮರ ದಿನಾಚರಣೆ ನಡೆಯಲಿದೆ. ನಮ್ಮ ಜಿಲ್ಲೆಯಿಂದ ಕನಿಷ್ಠ 500 ರೈತರಾದರೂ ಪಾಲ್ಗೊಂಡು ಹುತಾತ್ಮ ರೈತರಿಗೆ ಗೌರವ ಸಮರ್ಪಿಸಬೇಕು ಎಂದು ಮನವಿ ಮಾಡಿದರು. 

ನಿವೃತ್ತ ಶಿಕ್ಷಕ ಈಶ್ವರಪ್ಪ ಮಾತನಾಡಿ, ರೈತರಲ್ಲಿ ಸಂಘಟನೆ ಇಲ್ಲದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಎಲ್ಲಾ ಸರ್ಕಾರಗಳು ರೈತರ ಪರವಾಗಿವೆ ಎಂದು ಮೊಸಳೆ ಕಣ್ಣೀರು ಸುರಿಸುತ್ತವೆ. ಹಗಲಿರುಳು ರೈತರು ಕಷ್ಟ ಪಟ್ಟರೂ ಸುಖವಾಗಿಲ್ಲ. ಏಕೆಂದರೆ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರ ನೋವು ಕಡಿಮೆಯಾಗಬೇಕಾದರೆ ಹೋರಾಟ ಗಟ್ಟಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾಲ ಮನ್ನಾ ಮಾಡಿ ಎಂದು ಸರ್ಕಾರದ ಮೇಲೆ ಬಲವಾದ ಒತ್ತಡ ಹೇರುವ ರೈತರೇ ಇಲ್ಲದಂತಾಗಿದ್ದಾರೆ. ಸಂಘಟನೆಗಳು ಬಲವಾಗಬೇಕಾದರೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಸಂಘ ಹುಟ್ಟಿಕೊಳ್ಳಬೇಕು. ಆಗ ಮಾತ್ರ ರೈತರ
ಬಲವನ್ನು ಯಾವ ಸರ್ಕಾರಗಳೂ ಕುಗ್ಗಿಸಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ತಾಪಂ ಸದಸ್ಯ ಕರಿಯಪ್ಪ, ರೈತ ಮುಖಂಡರಾದ ತಿಮ್ಮಣ್ಣ, ಕೆಂಚಯಲ್ಲಪ್ಪ, ಸಿದ್ದಮ್ಮ, ಇಮಾಂಸಾಬ್‌, ತಿಪ್ಪೇಸ್ವಾಮಿ, ಚಂದ್ರು, ಶೇಖರಪ್ಪ, ಲಕ್ಷ್ಮೀನರಸಿಂಹಸ್ವಾಮಿ, ಚಿಕ್ಕಪ್ಪನಹಳ್ಳಿ ಸ್ವಾಮಿ, ತಿಪ್ಪೇಸ್ವಾಮಿ ಮೊದಲಾದವರು
ಭಾಗವಹಿಸಿದ್ದರು.

ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ರೈತ ಸಂಘದಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗುವುದು. ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕಾರ   ಹಿಡಿಯಲು ಈಗಿನಿಂದಲೇ ಸಿದ್ಧತೆ ಮಾಡಬೇಕು. 

 ಬಸ್ತಿಹಳ್ಳಿ ಸುರೇಶ್‌ಬಾಬು, ರೈತ ಸಂಘದ ತಾಲೂಕು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next