Advertisement

ಪರಿಹಾರಕ್ಕಾಗಿ ರೈತ ಸಂಘದಿಂದ ಧರಣಿ

08:26 AM Aug 04, 2020 | Suhan S |

ಮದ್ದೂರು: ಚಿರತೆ ದಾಳಿ ತಪ್ಪಿಸಿ. ದಾಳಿಯಿಂದ ಹಾನಿಯಾದ ಜಾನುವಾರು ಮಾಲೀಕರಿಗೆ ಪರಿಹಾರ, ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಪರಿಹಾರದ ಹಣವನ್ನು ಸಕಾಲದಲ್ಲಿ ವಿತರಿಸುವಂತೆ ಒತ್ತಾಯಿಸಿ, ರೈತ ಸಂಘ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ತಾಲೂಕಿನ ಕೊಪ್ಪ ಸಂತೆ ಮೈದಾನದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯ ಕರ್ತರು, ಮದ್ದೂರು ಕೊಪ್ಪ ಮಾರ್ಗದ ರಸ್ತೆ ತಡೆ ನಡೆಸಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ನಾಡ ಕಚೇರಿಗೆ ಮುತ್ತಿಗೆ ಹಾಕಿದರು. ಕೊಪ್ಪದಲ್ಲಿ ಚಿರತೆ ಹಾವಳಿ: ಕೊಪ್ಪ ಭಾಗದಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದ್ದು, ಪ್ರತಿನಿತ್ಯ ಜಾನುವಾರು, ಮೇಕೆ, ಕುರಿ ಇನ್ನಿತರೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದು, ಜಾನುವಾರುಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳ ಬದುಕು ದುಸ್ಥರವಾಗಿದೆ ಎಂದು ದೂರಿದರು.

ಈಗಾಗಲೇ ಚಿರತೆ ಹಾವಳಿಗೆಅನೇಕ ಜಾನುವಾರು ಗಳು ಮೃತಪಟ್ಟಿದ್ದು, ಸಂಬಂಧಿಸಿದ ಅಧಿಕಾರಿ ಗಳು ಪರಿಹಾರ ನೀಡಲು ಮುಂದಾಗದಿದ್ದಲ್ಲಿ ತಾಲೂಕು ಕಚೇರಿ ಬಳಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಹುರಗಲವಾಡಿ ರಾಮಯ್ಯ, ಉಮೇಶ್‌, ಎಂ. ಶಿವಕುಮಾರ್‌, ಎಚ್‌.ಬಿ.ರವಿ, ರಾಮೇಗೌಡ, ಪುಟ್ಟಸ್ವಾಮೀಗೌಡ, ಕೆಂಚಯ್ಯ, ಮುಕುಂದ, ನಾಗರಾಜು, ಕೃಷ್ಣ, ಶಂಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next