Advertisement

ಹಣ್ಣು ಮಾರಿ ಹಣ ಗಳಿಸಿ ಹೊರಟ ರೈತರು

11:55 AM Jun 25, 2018 | Team Udayavani |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ತಿಂಗಳಿನಿಂದ ನಡೆದ ಮಾವು- ಹಲಸು ಮೇಳಕ್ಕೆ ಭಾನುವಾರ ತೆರೆಬಿದ್ದಿದೆ. ನಾನಾ ತಳಿಯ ಮಾವಿನ ಸ್ವಾದದ ರುಚಿ ಸವಿದು ನಗರವಾಸಿಗಳು ಖುಷಿಪಟ್ಟರೆ, ಅತ್ತ 100ಕ್ಕೂ ಹೆಚ್ಚು ರೈತರು ಯಾವುದೇ ಖರ್ಚಿಲ್ಲದೆ ನೇರವಾಗಿ ಮಾವು- ಹಲಸು ಮಾರಿ ದುಪ್ಪಟ್ಟು ಲಾಭದೊಂದಿಗೆ ಹಳ್ಳಿಗಳಿಗೆ ತೆರಳಿದ್ದಾರೆ.

Advertisement

ತೋಟಗಾರಿಕೆ ಇಲಾಖೆಯು ಮಾವು ನಿಗಮದ ಸಹಯೋಗದಲ್ಲಿ ಎಂಟು ವರ್ಷಗಳಿಂದ ಮಾವು- ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಆಯ್ದು ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿತ್ತು.

ಮಾವಿನ ಸಸಿ ನೆಟ್ಟು ಮರವಾಗಿಸಿ ಮಾವಿನಹಣ್ಣು ಬೆಳೆದ ರೈತರೇ ಖುದ್ದಾಗಿ ಇಲ್ಲಿಗೆ ಬಂದು ಮಧ್ಯವರ್ತಿಗಳು, ವ್ಯಾಪಾರಿಗಳ ಹಾವಳಿ ಇಲ್ಲದೇ ಹಣ್ಣುಗಳನ್ನು ಮಾರಾಟ ಮಾಡಿ ಕೈತುಂಬ ಹಣ ಗಳಿಸುವುದು ಮೇಳದ ವಿಶೇಷ. ಒಟ್ಟು ತೆರೆಯಲಾಗಿದ್ದ 82 ಮಳಿಗೆಗಳಲ್ಲಿ ಸುಮಾರು 30 ತಳಿಯ ಮಾವು ಮತ್ತು ಹಲಸಿನ ಹಣ್ಣುಗಳು ಮಾರಾಟವಾಗಿವೆ.

ಉಚಿತ ಸೌಕರ್ಯ: ಮಾರಾಟಕ್ಕೆ ಅಗತ್ಯವಾದ ಎಲ್ಲ ಸೌಲಭ್ಯ ಕಲ್ಪಿಸಿರುವ ಮಾವು ನಿಗಮ ಹಾಗೂ ತೋಟಗಾರಿಕಾ ಇಲಾಖೆಯು ಕೇವಲ ನೋಂದಣಿಗೆಂದು 250 ರೂ. ಸಂಗ್ರಹಿಸಿದೆ. ಇದರ ಹೊರತಾಗಿ ಬಾಡಿಗೆ, ನಿರ್ವಹಣಾ ವೆಚ್ಚ, ಸೌಲಭ್ಯದ ಹೆಸರಿಯಲ್ಲಿ ರೈತರಿಂದ ಬಿಡಿಗಾಸು ಪಡೆದಿಲ್ಲ. ಆ ಮೂಲಕ ರೈತರಿಗೆ ಉಚಿತ ಹಾಗೂ ನೇರ ಮಾರುಕಟ್ಟೆ ಕಲ್ಪಿಸಿಕೊಟ್ಟಿದಂತಾಗಿತ್ತು.

ತಿಂಗಳ ವಹಿವಾಟು: ಈ ಬಾರಿಯ ಮೇಳದಲ್ಲಿ 7 ಜಿಲ್ಲೆಯ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, 1733 ಟನ್‌ ಮಾವು ಬಿಕರಿಯಾಗಿದ್ದು, 10.39 ಕೋಟಿ ರೂ.ನಷ್ಟು ವಹಿವಾಟು ನಡೆದಿದೆ. 

Advertisement

ಪ್ರತಿ ವರ್ಷ ಮೇಳದಲ್ಲಿ ಅಂಗಡಿ ಹಾಕುತ್ತೇನೆ. ಯಾವುದೇ ಬಾಡಿಗೆ ಪಡಿಯದೆ ನಿಗಮದವರು ಎಲ್ಲಾ ಸುಸಜ್ಜಿತ ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ಬಾರಿ ಜನರ ಪ್ರತಿಕ್ರಿಯೆಯೂ ಉತ್ತಮವಾಗಿದ್ದು, ಸುಮಾರು 4 ಲಕ್ಷ ರೂ. ಲಾಭ ಗಳಿಸಿದ್ದೇನೆ. 
-ವೆಂಕಟೇಶ್‌ ರೆಡ್ಡಿ, ಕೋಲಾರ ಭಾಗದ ರೈತ

ಈ ಬಾರಿ 15 ಟನ್‌ ಮಾವು ವ್ಯಾಪಾರ ಮಾಡಿದ್ದು, 7 ಲಕ್ಷ ರೂ. ವಹಿವಾಟು ಮಾಡಿದ್ದೇನೆ. ಸುಮಾರು ಮೂರ್‍ನಾಲ್ಕು ಲಕ್ಷರೂ. ಲಾಭ ಗಳಿಸಿದ್ದೇನೆ. ಅವಕಾಶ ಮಾಡಿಕೊಟ್ಟ ಮಾವು ನಿಗಮಕ್ಕೆ ನನ್ನ ಅಭಿನಂದನೆ. 
-ಎಂ.ಎನ್‌.ರಾಮಕೃಷ್ಣ ರೆಡ್ಡಿ, ಮಂಡಿಕಲ್ಲು ಗ್ರಾಮ

ಮಾವನ್ನು ಮಾರುಕಟ್ಟೆಗೆ ಹಾಕಿದ್ದರೆ ಟನ್‌ಗೆ 10 ರಿಂದ 12 ಸಾವಿರ ಮಾತ್ರ ರೂ. ಸಿಗುತ್ತಿತ್ತು. ಇದರಲ್ಲಿ ಅಸಲಷ್ಟೇ ಪಡೆಯಬಹುದಿತ್ತು. ಆದರೆ ಮೇಳದಲ್ಲಿ ಮಾರಾಟ ಮಾಡಿದ್ದರಿಂದ ಟನ್‌ಗೆ 50 ರಿಂದ 60 ಸಾವಿರ ಹಣ ಸಂಗ್ರಹವಾಗಿದೆ. ನಮ್ಮಂತಹ ರೈತರಿಗೆ ನಿಜಕ್ಕೂ ಇದೊಂದು ಉತ್ತಮ ವೇದಿಕೆ.
-ಬಿ.ಎಸ್‌.ಕೆಂಪರೆಡ್ಡಿ, ಶ್ರೀನಿವಾಸಪುರ

ಪ್ರತಿವರ್ಷ ಮಾವಿನ ಸುಗ್ಗಿಯಲ್ಲಿ ಲಾಲ್‌ಬಾಗ್‌ ಮಾವು ಮೇಳಕ್ಕಾಗಿ ಕಾಯುತ್ತಿರುತ್ತೇವೆ. ಕಡಿಮೆ ಬೆಲೆ ಹಾಗೂ ರಾಸಾಯನಿಕ ಮುಕ್ತ ಹಣ್ಣು ಸಿಗುವುದರಿಂದ ಸಾಕಷ್ಟು ಹಣ್ಣು ಖರೀದಿಸಿ ಸವಿಯುತ್ತೇವೆ. 
-ಆಶಿಷ್‌, ಜಯನಗರ ನಿವಾಸಿ

ಈ ಬಾರಿ ಮೇಳಕ್ಕೆ 6 ಬಾರಿ ಭೇಟಿ ನೀಡಿದ್ದೇನೆ. ರಾಸಾಯನಿಕ ಮುಕ್ತವಾಗಿರುವುದರಿಂದ ಪ್ರತಿ ಬಾರಿಯೂ 4 ರಿಂದ 5 ಕೆ.ಜಿ. ಹಣ್ಣು ಖರೀದಿಸಿ ಕುಟುಂಬದವರ ಜೊತೆ ತಿನ್ನುತ್ತೇವೆ. ಇದೇ ರೀತಿ ಇತರೆ ಹಣ್ಣುಗಳನ್ನು ಬೆಳೆಯುವ ರೈತರಿಗೆ ವೇದಿಕೆ ಕಲ್ಪಿಸಲು ತೋಟಗಾರಿಕೆ ಇಲಾಖೆ ಮುಂದಾಗಬೇಕು.
-ಸುಧೀಂದ್ರ, ಬಸವನಗುಡಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next