Advertisement

ಈರುಳ್ಳಿ ಬೆಳೆದ ಅನ್ನದಾತರ ಕಣ್ಣೀರು

04:07 PM Nov 17, 2021 | Team Udayavani |

ಗದಗ: ಕಳೆದ ನಾಲ್ಕೈದು ವರ್ಷಗಳಿಂದ ನೆರೆ, ಅತಿವೃಷ್ಟಿಯಿಂದ ಕಂಗೆಟ್ಟಿದ್ದ ರೈತರು ಈ ಬಾರಿ ಮುಂಗಾರು ಫಸಲಿನ ಮೇಲೆ ನೂರಾರು ಕನಸು ಕಟ್ಟಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಶುರುವಾಗಿರುವ ಅಕಾಲಿಕ ಮಳೆಯಿಂದಾಗಿ ವಿವಿಧ ಬೆಳೆಗಳು ಹಾನಿಗೀಡಾಗುತ್ತಿದ್ದು, ಅನ್ನದಾತರ ನಿರೀಕ್ಷೆಗಳು ತಲೆಕೆಳಗಾಗುತ್ತಿವೆ.

Advertisement

ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಈರುಳ್ಳಿ, ಶೇಂಗಾ ಬೆಳೆಗಳಿಗೆ ಕೊಳೆ ರೋಗ ಬಾಧಿಸುತ್ತಿದೆ. ಪರಿಣಾಮ ಈರುಳ್ಳಿ ಬೆಲೆ ಪಾತಾಳಕ್ಕಿಳಿದಿದೆ. ಜತೆಗೆ ಹತ್ತಿ ಅರಳುತ್ತಿರುವಾಗಲೇ ಮಳೆ ಕಾಡುತ್ತಿರುವುದರಿಂದ ಬೆಲೆ ಕುಸಿತದ ಆತಂಕ ಆವರಿಸಿದೆ. ಬಯಲು ಸೀಮೆ ಗದಗ ಜಿಲ್ಲೆಯ ಮುಂಗಾರಿನ ಪ್ರಮುಖ ಬೆಳೆಗಳಾದ ಈರುಳ್ಳಿ ಈಗಾಗಲೇ ಬೆಳೆದು ನಿಂತಿದೆ.

ಹಲವೆಡೆ ಕೊಯ್ಲು ಮಾಡಿರುವ ರೈತರು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ಕಟಾವು ಮಾಡುವ ಸಂದರ್ಭದಲ್ಲೇ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆಗಾರರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಅಕಾಲಿಕ ಮಳೆಯಿಂದಾಗಿ ಜಮೀನುಗಳಲ್ಲಿ ತೇವಾಂಶ ಹೆಚ್ಚಿತ್ತಿದೆ. ಇನ್ನೇನು ಕೊಯ್ಲು ಮಾಡಬೇಕಿದ್ದ ಈರುಳ್ಳಿ ಜಮೀನಿನಲ್ಲೇ ಕೊಳೆಯಲಾರಂಭಿಸಿರುವುದು ರೈತರಲ್ಲಿ ಕಣ್ಣೀರು ತರಿಸುತ್ತಿದೆ.

ಉತ್ತರ ಕರ್ನಾಟಕದಲ್ಲೇ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಪ್ರಸಕ್ತ ಸಾಲಿನ ಮುಂಗಾರಿಗೆ ಜಿಲ್ಲೆಯಲ್ಲಿ ಒಟ್ಟು 35,500 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಈ ಪೈಕಿ ರೋಣ, ಗದಗ, ಶಿರಹಟ್ಟಿ, ಗಜೇಂದ್ರಗಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಈಗಾಗಲೇ ಈರುಳ್ಳಿ ಸದ್ಯಕ್ಕೆ ಮಾರುಕಟ್ಟೆಗೆ ಆಗಮಿಸುತ್ತಿದೆ. ಆದರೆ, ನಿರೀಕ್ಷಿತ ಬೆಲೆ ಸಿಗದೇ ರೈತರಿಗೆ ದಿಕ್ಕು ತೋಚದಂತಾಗಿದೆ.

ಈರುಳ್ಳಿ ಬೆಳೆಗೆ ಸೈಕ್ಲೋನ್‌ ಬರೆ: ಸಾಮಾನ್ಯವಾಗಿ ಈರುಳ್ಳಿಯನ್ನು ಬಳ್ಳಾರಿ, ಬೆಂಗಳೂರು ಹಾಗೂ ಹೈದರಾಬಾದ್‌ ಸೇರಿದಂತೆ ಇನ್ನಿತರೆ ಭಾಗಕ್ಕೆ ರಫು¤ ಮಾಡಲಾಗುತ್ತಿತ್ತು. ಗದಗ ಈರುಳ್ಳಿಗೆ ಬೆಂಗಳೂರು ಯಶವಂತಪುರ ಮಾರುಕಟ್ಟೆ ಪ್ರಮುಖ ಮಾರಾಟ ಕೇಂದ್ರವಾಗಿದೆ. ಆದರೆ, ನೆರೆಯ ತಮಿಳುನಾಡಿನಲ್ಲಿ ಉಂಟಾಗಿರುವ ಸೈಕ್ಲೋನ್‌ನಿಂದಾಗಿ ರಾಜ್ಯದಿಂದ ಈರುಳ್ಳಿ ಸಾಗಾಣಿಕೆಯಾಗುತ್ತಿಲ್ಲ. ಅದರ ಪರಿಣಾಮ ಗದಗ ಮಾರುಕಟ್ಟೆಗೂ ಬೀರಿದೆ.

Advertisement

ನವೆಂಬರ್‌ ಆರಂಭದಲ್ಲಿ ಉತ್ತಮವಾಗಿ ಬಂದಿದ್ದ ಈರುಳ್ಳಿ ಗಡ್ಡೆ ಪ್ರತಿ ಕ್ವಿಂಟಲ್‌ 4,500 ರೂ. ವರೆಗೆ ಮಾರಾಟವಾಗಿತ್ತು. ಆದರೆ, ಈಗ ಅಕಾಲಿಕ ಮಳೆ ಹಾಗೂ ಬೇಡಿಕೆ ಕಡಿಮೆಯಾಗಿದ್ದರಿಂದ ಈರುಳ್ಳಿ ಸದ್ಯ ಸರಾಸರಿ 1200 ರೂ. ದರದಲ್ಲಿ ಮಾರಾಟವಾಗುತ್ತಿದೆ. ಅಲ್ಲದೇ, ಈಗ ಮಾರುಕಟ್ಟೆಗೆ ಆವಕವಾಗುತ್ತಿರುವ ಈರುಳ್ಳಿಯಲ್ಲಿ ತೇವಾಂಶ ಹೆಚ್ಚಿದ್ದು, ಒಂದೆರಡು ದಿನಗಳಲ್ಲಿ ಕೊಳೆಯಲು ಆರಂಭಿಸುತ್ತದೆ. ಹೀಗಾಗಿ, ದಾಸ್ತಾನು ಮಾಡಲಾಗದು ಮತ್ತು ಬೇರೆ ಜಿಲ್ಲೆಗೆ ಸಾಗಿಸುವುದರೊಳಗೆ ಬಹುತೇಕ ಕೊಳೆತು ಗಬ್ಬು ನಾರುತ್ತದೆ. ಇದರಿಂದ ಗದಗಿನ ಕೆಲ ವರ್ತಕರು ಈರುಳ್ಳಿ ವ್ಯಾಪಾರದಿಂದ ಕೈಸುಟ್ಟುಕೊಂಡಿದ್ದಾರೆ.

ಮಾರುಕಟ್ಟೆಗೆ ಆವಕವಾಗುತ್ತಿರುವ ಈರುಳ್ಳಿಯನ್ನು ಸ್ಥಳೀಯ ಮಾರುಕಟ್ಟೆಗೆ ಮಿತಿಗೊಳಿಸಲಾಗುತ್ತಿದೆ. ಈ ಬಾರಿ ಈರುಳ್ಳಿ ಬೆಳೆಯಿಂದ ರೈತರೊಂದಿಗೆ ವರ್ತಕರಿಗೂ ನಷ್ಟ ತಂದೊಡ್ಡಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರು.

ಶೇಂಗಾ-ಹತ್ತಿ ಬೆಳೆಗಾರರ ಪರದಾಟ: ಇನ್ನು, ಶೇಂಗಾ ಬೆಳೆಗಾರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಆದರೆ, ಅಕಾಲಿಕ ಮಳೆಯಿಂದಾಗಿ ಶೇಂಗಾ ಭೂಮಿಯಲ್ಲೇ ಕೊಳೆಯಲು ಆರಂಭಿಸಿದೆ. ಅಲ್ಲದೇ, ಕಪ್ಪು ಭೂಮಿಯಲ್ಲಿ ಶೇಂಗಾ ಕೀಳಲಾಗದೇ ರೈತರು ಪರದಾಡುವಂತಾಗಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹತ್ತಿ ಹುಲುಸಾಗಿ ಬೆಳೆದಿದ್ದರೂ, ಇತ್ತೀಚೆಗೆ ಸುರಿಯುತ್ತಿರುವ ಜಿಟಿ ಮಳೆಯಿಂದಾಗಿ ಬೆಲೆ ಕಡಿಮೆಯಾಗುವ ಆತಂಕ ಶುರುವಾಗಿದೆ ಎಂಬುದು ರೈತರ ಅಳಲು…

ಕಳೆದ ವರ್ಷದ ಈರುಳ್ಳಿ ಪ್ರತಿ ಕೆಜಿ 100 ರೂ. ಮೀರಿತ್ತು. ಈ ಬಾರಿ ಲಾಭದ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆದಿದ್ದೇವೆ. ಆದರೆ, ಅಕಾಲಿಕ ಮಳೆಯಿಂದ ಕೊಳೆ ರೋಗ ಬಂದು ಭಾಗಶಃ ಬೆಳೆ ಹಾನಿಯಾಗಿದೆ. ಈರುಳ್ಳಿ ಬಿತ್ತನೆಗೆ ಮಾಡಿದ ಖರ್ಚೂ ಕೈಸೇರಿಲ್ಲ. ರಮೇಶ್‌ ಹೂಗಾರ, ಎಸ್‌.ಎಂ.ಪಾಟೀಲ, ಈರುಳ್ಳಿ ಬೆಳೆಗಾರರು, ಗದಗ

ಇತ್ತೀಚಿನ ಮಳೆಗಿಂತ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಈರುಳ್ಳಿಗೆ ಹೆಚ್ಚು ಹಾನಿಯಾಗಿದೆ. ಒಂದು ತಿಂಗಳ ಹಿಂದೆಯೇ ಈರುಳ್ಳಿಗೆ ಕೊಳೆ ರೋಗ ಬಾಧಿಸುತ್ತಿದ್ದು, ಅದರ ನಿಯಂತ್ರಣಕ್ಕಾಗಿ ರೈತರಿಗೆ ಸಾಕಷ್ಟು ಸಲಹೆ ನೀಡಲಾಗಿತ್ತು. ಆದರೂ ಅದು ನಿಯಂತ್ರಣಕ್ಕೆ ಬಂದಿಲ್ಲ. ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದಿದ್ದರೂ ಗಡ್ಡೆ ಒಳಗೆ ಕೊಳೆಯುತ್ತಿರುತ್ತದೆ. ಒಟ್ಟಾರೆ, ಬಿತ್ತನೆಯಲ್ಲಿ ಶೇ.60 ರಷ್ಟು ಕಟಾವು ಆಗಿದ್ದು, ಶೇ.35 ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. –ಶ್ರೀಶೈಲ ಬಿರಾದರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಗದಗ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next