ಬೀಳಗಿ: ತಾಲೂಕಿನ ರೈತರು ಹಾಗೂ ನಾಗರಿಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಕ ರೈತರ ಜಮೀನಗಳಿಗೆ ಸಮರ್ಪಕವಾಗಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಈ ಭಾಗದಲ್ಲಿ ಹೊಸದಾಗಿ ಕಾರ್ಖಾನೆಗಳನ್ನು ನಿರ್ಮಾಣ ಮಾಡಲು ಉದ್ಯೋಗ ಅವಕಾಶಗಳು ಹೆಚ್ಚಿಸಲು ವಜ್ರಮಟ್ಟಿಯ ಬದಲಾಗಿ ಕೂಡಗಿಯ (ಎನ್ಟಿಪಿಸಿ)ದಿಂದ ಬೀಳಗಿ 220ಕೆವಿ ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡಲು ಮಾರ್ಗ ರಚಿಸಬೇಕು ಎಂದು ತಹಶೀಲ್ದಾರ್ ಶಂಕರ್ ಗೌಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಎಪಿಎಂಸಿ ಸದಸ್ಯ ಸಂಗಪ್ಪ ಕಂದಗಲ ಮಾತನಾಡಿ, ತಾಲೂಕಿನ ಬಾಡಗಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹೊಂದಿಕೊಂಡ ಸ್ಥಳದಲ್ಲಿ 220ಕೆವಿ ವಿದ್ಯುತ್ ಘಟಕ ಮಂಜೂರಾಗಿದೆ. ಈ ವಿದ್ಯುತ್ ಘಟಕದಿಂದ ಬೀಳಗಿ 110ಕೆವಿ, ಗಿರಿಸಾಗರ 110ಕೆವಿ, ಅನಗವಾಡಿ 110ಕೆವಿ, ತೋಳಮಟ್ಟಿ 110ಕೆವಿ, ಬಿಸನಾಳ 110ಕೆವಿ, ತೆಗ್ಗಿ 110ಕೆವಿ ವಿದ್ಯುತ್ ವಿತರಣೆ ಕೇಂದ್ರ ಕಾರ್ಯನಿರ್ವಹಿಸುತ್ತೀವೆ. ಅಲ್ಲದೆ ಇನ್ನೂ ಎರಡು 33 ಕೆವಿ ವಿದ್ಯುತ್ ಕೇಂದ್ರಗಳು ಮಂಜೂರಾತಿ ಹಂತದಲ್ಲಿವೆ. ಇವುಗಳಿಗೆ ಈಗಾಗಲೆ ವಜ್ರಮಟ್ಟಿ ಸ್ಥಾವರದಿಂದ ವಿದ್ಯುತ್ ಪೂರೈಕೆ ಆಗುತ್ತಿದೆ.
ಬೀಳಗಿಯಲ್ಲಿ ಹೊಸದಾಗಿ ಮಂಜೂರಾದ 220ಕೆವಿ ಸ್ಟೇಶನ್ ವಜ್ರಮಟ್ಟಿಯಿಂದ ಬೀಳಗಿಗೆ ಸೂಮಾರು 45ಕಿ. ಮೀ.ಗಳಷ್ಟು ದೂರದ ಅಂತರವಿದೆ. ಆದರೆ ನಿರೀಕ್ಷೀತ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗುವುದಿಲ್ಲ. ಇದರ ಬದಲಾಗಿ ಸಮಿಪದ 15 ಕಿ.ಮೀ ದೂರದಲ್ಲಿರುವ ಕೂಡಗಿ ವಿದ್ಯುತ್ ಉತ್ಪಾದನಾ ಕೇಂದ್ರ (ಎನ್.ಟಿ.ಪಿ.ಸಿ) ದಿಂದ ಸುಲಭವಾಗಿ ಉತ್ತಮ ವಾಹಕಗಳ ಮೂಲಕ ವಿದ್ಯುತ್ ಪೂರೈಕೆಯನ್ನು ಪಡೆಯಬಹುದಾಗಿದೆ. ಸರಕಾರಕ್ಕೆ ಇದರಿಂದ ಉಳಿತಾಯ ಕೂಡಾ ಆಗುತ್ತದೆ ಎಂದು ಹೇಳಿದರು.
ಮುಖಂಡರಾದ ರವಿಗೌಡ ಪಾಟೀಲ್, ಮುರುಗಯ್ಯ ಪಾಲಂಕಮಠ, ಶ್ರೀಶೈಲ್ ದಳವಾಯಿ, ಯಲ್ಲಪ್ಪ ಮೇಟಿ, ಸುಭಾಸ ಅಂತರಗೊಂಡ, ನಾಗಪ್ಪ ಕೊಲ್ಹಾರ, ಮಹಾಂತೇಶ ಅಂಗಡಿ, ಶಿವಕುಮಾರ್ ಕೊಂತಿಕಲ್ಲ, ಮಹಾದೇವ ಭೋರ್ಜಿ, ಸಿದ್ದು ಮೇಟಿ, ಮಹಾಂತೇಶ ನಾಗರಾಳ, ಶಿವಪ್ಪ ಗಾಳಿ, ಭೀಮಸಿ ಬಂಡಿವಡ್ಡರ, ಹಣಮಂತ ಬಿದರಿ, ಅರವಿಂದ್ ಚೂರಿ, ಸೋಮಪ್ಪ ಪೂಜಾರಿ, ಚಂದ್ರಶೇಖರ ಶಿರಬೂರ, ಶ್ರೀಶೈಲ್ ಪರಗೊಂಡ ಮುಂತಾದವರು ಪಾಲ್ಗೊಂಡಿದ್ದರು.