Advertisement

ಕಾಡಿನಿಂದ ನಾಡಿಗೆ ಬಂದ ಮೂರು ಸಲಗ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

12:39 PM Jul 04, 2021 | Team Udayavani |

ಹುಣಸೂರು: ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಸಲಗಗಳು ವಾಪಾಸ್ ತೆರಳಲಾಗದೆ ತಾಲೂಕಿನ ನಾಗರಹೊಳೆ ರಸ್ತೆಯ ಹಳೇ ಪೆಂಜಹಳ್ಳಿ ಬಳಿ ಬೀಡು ಬಿಟ್ಟಿದ್ದ ಆನೆಗಳನ್ನು ಗ್ರಾಮಸ್ಥರು ಅಟ್ಟಾಡಿಸಿ, ಕೊನೆಗೂ ಸಂಜೆ ವೇಳೆಗೆ ಕಾಡು ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾದರೂ ಆಕ್ರೋಶಗೊಂಡಿದ್ದ ರೈತರು ಅರಣ್ಯ ಇಲಾಖೆ ಜೀಪ್ ಅಡ್ಡಗಟ್ಟಿ, ಅಧಿಕಾರಿಗಳ ವಿರುದ್ದ  ಪ್ರತಿಭಟನೆ ನಡೆಸಿದರು.

Advertisement

ರೈತರು ಸಲಗಗಳನ್ನು ಕಾಡಿಗಟ್ಟುವ ವೇಳೆ ಅಡ್ಡಾದಿಡ್ಡಿ ಓಡಾಟದಿಂದಾಗಿ ಬಾಳೆ, ಶುಂಠಿ, ಟೊಮಾಟೋ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ. ಹತ್ತಾರು ಮರಗಳನ್ನು ನೆಲಕ್ಕುರುಳಿಸಿವೆ.

ನಾಗರಹೊಳೆ ಉದ್ಯಾನದಿಂದ ಶುಕ್ರವಾರ ರಾತ್ರಿ ವೀರನಹೊಸಹಳ್ಳಿ ವಲಯದಿಂದ ಹೊರ ದಾಟಿರುವ ಸಲಗಗಳು ಬೆಳೆಗಳನ್ನು ತಿಂದು ಬೆಳಗಾದರೂ ಕಾಡಿಗೆ ವಾಪಾಸ್ ಹೋಗಲಾಗದೆ ಲಕ್ಷ್ಮಣತೀರ್ಥ ನದಿಯಲ್ಲಿ ಬೀಡು ಬಿಟ್ಟಿದ್ದವು.

ಆನೆಗಳನ್ನು ಅಟ್ಟಾಡಿಸಿದ ಗ್ರಾಮಸ್ಥರು:

ಸಲಗಗಳು ಬೀಡು ಬಿಟ್ಟಿರುವ ವಿಷಯ ತಿಳಿದ ಗ್ರಾಮಸ್ಥರು ಹಾಗೂ ರೈತರು ನದಿಯ ಎರಡೂ ಬದಿಯಲ್ಲೂ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಹೋ ಎಂದು ಕೂಗುತ್ತಾ ಜಾನುವಾರುಗಳನ್ನು ಅಟ್ಟುವ ರೀತಿಯಲ್ಲಿ ಅತ್ತಿಂದಿತ್ತ ಅಟ್ಟಾಡಿಸಿದರು. ಬೆದರಿದ ಆನೆಗಳು  ನದಿ ದಾಟಲಾಗದೆ ನೀರಿಲ್ಲಿ ಅತ್ತಿಂದಿತ್ತ ಓಡಾಡುತ್ತಾ ಘೀಳಿಡುತ್ತಿದ್ದವು. ಯುವ ಪಡೆಯಂತೂ ಆನೆಗಳನ್ನು ಓಡಾಡಿಸಿ ಸುಸ್ತು ಮಾಡಿಸಿಬಿಟ್ಟರು.

Advertisement

ಕಾಡಿಗಟ್ಟಲು ಸಿಬ್ಬಂದಿಗಳ ಹರಸಾಹಸ:

ವೀರನಹೊಸಹಳ್ಳಿ ಆರ್.ಎಫ್.ಓ. ನಮನ ನಾರಾಯಣ ನಾಯ್ಕ, ವನ್ಯಜೀವಿ ಹಾಗೂ ಪ್ರಾದೇಶಿಕ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ನದಿಯಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಟ್ಟರಾದರೂ ಜನರ ಕೂಗಾಟಕ್ಕೆ ನದಿಯಲ್ಲಿ ಓಡಾಡುತ್ತಲೇ ಸಿಬ್ಬಂದಿಗಳನ್ನು ಹೈರಾಣಾಗಿಸಿದವು. ಕೊನೆಗೆ ಗ್ರಾಮಾಂತರ ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿಗಳು ನೆರವಿನಿಂದ ಜನರನ್ನು ಚದುರಿಸಿದ ನಂತರ ಅರಣ್ಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಬೆದರಿಸಿ ಗುರುಪುರದ ಟಿಬೇಟ್ ಕ್ಯಾಂಪ್ ಮೂಲಕ ನಾಗರಹೊಳೆ ಉದ್ಯಾನಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.

ಜೀಪ್ ಅಡ್ಡಗಟ್ಟಿ ಪ್ರತಿಭಟನೆ:

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ, ಸೂಕ್ತ ಪರಿಹಾರವನ್ನೂ ಸಕಾಲದಲ್ಲಿ ನೀಡುತ್ತಿಲ್ಲ, ಪರಿಹಾರ ನೀಡಿ ಹೋಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಆರ್.ಎಫ್.ಓ. ಹಾಗೂ ಸಿಬ್ಬಂದಿಗಳಿದ್ದ ಜೀಪನ್ನು ಒಂದೂವರೆ ಗಂಟೆಗೂ ಹೆಚ್ಚು ತಡೆಯೊಡ್ಡಿದರು. ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ ರೈತರ ಮನವೊಲಿಸಿದರು. ಅಲ್ಲದೆ ಈಗಲೇ ಹಾನಿಯಾಗಿರುವ ಬೆಳೆಯನ್ನು ಮಹಜರ್ ನಡೆಸಿ, ಶೀಘ್ರವೇ ಪರಿಹಾರ ಕೊಡಿಸುವುದಾಗಿ ಆರ್‌ಎಫ್‌ಓ ನಮನ್ ನಾರಾಯಣನಾಯ್ಕ ನೀಡಿದ ಭರವಸೆ ಮೇರೆಗೆ ರೈತರು ಜೀಪ್ ತೆರಳಲು ಅನುವು ಮಾಡಿಕೊಟ್ಟರು.

ಸಾಕಷ್ಟು ಬೆಳೆಹಾನಿ:

ಆನೆಗಳ ಓಡಾಟದಿಂದ ಹಳೇಪೆಂಜಹಳ್ಳಿಯ ನಾಗರಾಜೇಗೌಡರ ಬಾಳೆತೋಟ, ಗೋವಿಂದ, ವೆಂಕಟೇಶರ ಜಮೀನಿನಲ್ಲಿದ್ದ ಮರಗಳು, ಕರ್ಪಯ್ಯ, ಲೋಕೇಶ್, ಲಕ್ಷಮ್ಮ ಸೇರಿದಂತೆ ಹತ್ತಾರು ರೈತರ ತಂಬಾಕು, ಶುಂಠಿಬೆಳೆ, ಮುಸುಕಿನ ಜೋಳ, ಟಮಾಟೋ ಬೆಳೆಗೆ ಹಾಗೂ ಹನಿ ನೀರಾವರಿಯ ಸ್ಪಿಂಕ್ಲರ್‌ಸೆಟ್‌ಗಳಿಗೂ ಸಾಕಷ್ಟು ಹಾನಿಯಾಗಿದೆ.

ಆನೆಗಳನ್ನು ನೋಡಲು ಜಮಾಯಿಸಿದ್ದ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರಿಂದ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಹರಸಾಹಸ ಪಡಬೇಕಾಯಿತು. ಗುರುಪುರ, ನಾಗಾಪುರ,ನಾಗರಹೊಳೆ ರಸ್ತೆ ಮತ್ತಿತರ ಕಡೆ ಸಾರ್ವಜನಿಕರಿಗೆ ಮೈಕ್ ಮೂಲಕ ಎಚ್ಚರಿಕೆ ನೀಡಿ ಕಾಡಿಗಟ್ಟಲಾಯಿತು. ಬೆಳೆ ನಷ್ಟದ ಮಹಜರ್ ನಡೆಸಲಾಗಿದ್ದು. ಪರಿಹಾರಕ್ಕಾಗಿ ವರದಿ ನೀಡಲಾಗುವುದೆಂದು ಆರ್‌ಎಫ್‌ಓ ನಮನ್ ನಾರಾಯಣನಾಯ್ಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next