ನಯಾಗಾಂವ್: ‘ಬನ್ನಿ… ಈ ಮರದ ಕೆಳಗೆ ಕುಳಿತರೆ ಸಕಲ ರೋಗಗಳಿಗೆ ಪರಿಹಾರ ಸಿಗುತ್ತದೆ.’ ಹೀಗೆಂದು ಮಧ್ಯಪ್ರದೇಶದ ಹೋಶಾಂಗಾಬಾದ್ನ ರೈತ ರೂಪ್ಸಿಂಗ್ ಎಂಬಾತನ ಘೋಷಣೆ. ಅದನ್ನು ನಂಬಿದ 25ರಿಂದ 30 ಸಾವಿರ ಮಂದಿ ಅಲ್ಲಿಗೆ ಬಂದು ಆ ಇಪ್ಪೆ ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. 2 ತಿಂಗಳಿಂದೀಚೆಗೆ ಪ್ರತಿ ದಿನ ಅಷ್ಟೇ ಸಂಖ್ಯೆಯ ಜನರು ಬರುತ್ತಿದ್ದು, ಇಲ್ಲಿ ಕುಳಿತುಕೊಂಡು ಹೋದವರ ಸಂಖ್ಯೆ 10 ಲಕ್ಷ ದಾಟಿದೆ.
ಜನರ ಈ ನಂಬಿಕೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ತಲೆನೋವಾಗಿದೆ. ಏಕೆಂದರೆ ಸಮೀಪದಲ್ಲಿಯೇ ಸಾತ್ಪುರ ಹುಲಿ ಅಭಯಾರಣ್ಯ ಇದೆ. ಪಚ್ಮಹಿì ಜೈವಿಕ ಮೀಸಲು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಅಭಯಾರಣ್ಯ 525 ಚ.ಕಿ.ಮೀ. ವ್ಯಾಪ್ತಿ ಹೊಂದಿದೆ. ಮಿತಿ ಮೀರಿ ಜನರು ಅಲ್ಲಿಗೆ ಆಗಮಿಸುವುದನ್ನು ತಡೆಯಲು ಸಾಧ್ಯವಿಲ್ಲ. ಇದರಿಂದಾಗಿ ಹುಲಿ ಅಭಯಾರಣ್ಯದ ಭದ್ರತೆಗೂ ಸವಾಲಾಗಿದೆ ಎನ್ನುವುದು ಅವರ ಆತಂಕ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ರುವವರು ಕೂಡ ಗಾಲಿ ಕುರ್ಚಿಯಲ್ಲಿ ಆಗಮಿಸಿ ಇಪ್ಪೆ ಮರದ ಕೆಳಗೆ ಕುಳಿತು ಹೋಗುತ್ತಿದ್ದಾರೆ. ಮರದ ಚಮತ್ಕಾರದ ಕುರಿತು ರೈತ ವೀಡಿಯೋ ಮಾಡಿದ್ದಾನೆ. ಅದರಲ್ಲಿ, ‘ನಾನು ಮನೆಗೆ ಹೋಗುತ್ತಿದ್ದಾಗ ಇಪ್ಪೆ ಮರ ಸೆಳೆದಂತಾಯಿತು. 10 ನಿಮಿಷ ಅಲ್ಲಿ ಕುಳಿತೆ. ಅಲ್ಲಿಂದ ಹೊರಟಾಗ ಏನೋ ಬದಲಾವಣೆ ಕಂಡಂತೆ ಆಯಿತು. ಕುಂಟಿ ಕೊಂಡು ನಡೆಯುತ್ತಿದ್ದ ನಾನು ಆ ರೀತಿ ನಡೆಯುತ್ತಿಲ್ಲ. ಹೀಗಾಗಿ ಪ್ರತಿ ಶನಿವಾರ, ರವಿವಾರ ಅಲ್ಲಿಗೆ ತೆರಳುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ವೀಡಿಯೋ ವೈರಲ್ ಆದ ಬಳಿಕ ಅಲ್ಲಿ ಪ್ರತಿ ದಿನ ಜನಜಾತ್ರೆ. ಕೆಲವರು ಇಪ್ಪೆ ಮರದ ಕೆಳಗೆ ಕುಳಿತವರ ಫೋಟೋ ತೆಗೆದು ಮಾರುತ್ತಿದ್ದಾರೆ. ಜನರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಹೆಚ್ಚಿನ ಭದ್ರತೆ ನೀಡಿ, ಅವರನ್ನು ತಡೆಯುವುದು ಹೇಗೆ ಎಂಬ ಚಿಂತೆಯಲ್ಲಿದೆ ಜಿಲ್ಲಾಡಳಿತ.