Advertisement

ರೈತರ ಬಿಕ್ಕಟ್ಟು ಪರಿಹಾರಕ್ಕೆ ರಾಜಿ ರಹಿತ ಹೋರಾಟ ಅಗತ್ಯ

04:53 PM May 22, 2019 | Team Udayavani |

ಧಾರವಾಡ: ರೈತರ ಬಿಕ್ಕಟ್ಟು ಪರಿಹಾರಕ್ಕೆ ರಾಜಿ ರಹಿತ ಹೋರಾಟ ಕಟ್ಟಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಹೇಳಿದರು.

Advertisement

ಕವಿಸಂನಲ್ಲಿ ನೀರಸಾಗರ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸರ್ಕಾರಗಳೇ ತಮ್ಮ ಮೂಗಿನಡಿಯಲ್ಲಿ ಕೆರೆಗಳ ಒತ್ತುವರಿಗೆ ಕುಮ್ಮಕ್ಕು ಕೊಡುತ್ತಿವೆ. ನೀರಿನ ಮೂಲಗಳನ್ನು ಬರಡು ಮಾಡುವ ಹುನ್ನಾರದಲ್ಲಿವೆ. ಈ ಎಲ್ಲ ಹುನ್ನಾರಗಳನ್ನು ಸೋಲಿಸಬೇಕು. ನೀರಸಾಗರ ಕೆರೆಗೆ ನೀರು ತುಂಬಿಸುವ ವ್ಯಾಪಕವಾದ ಈ ಹೋರಾಟವನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಸಜ್ಜಾಗಬೇಕು ಎಂದರು.

ಆರ್‌ಕೆಎಸ್‌ ರೈತ ಸಂಘಟನೆ ರಾಜ್ಯ ಖಜಾಂಚಿ ವಿ. ನಾಗಮ್ಮಾ ಮಾತನಾಡಿ, ಇಂದು ಕುಡಿಯುವ ನೀರಿಗೆ ತತ್ವಾರವಿದ್ದರೂ ಕಾರ್ಪೊರೇಟ್ ಕಂಪನಿಗಳಿಗೆ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸರ್ಕಾರಗಳು ಜನಪರವಾಗಿ ಕೆಲಸ ಮಾಡಿದರೆ ನೀರಸಾಗರ ಕೆರೆಗೆ ಕೇವಲ ಒಂದು ವರ್ಷದಲ್ಲೇ ನೀರು ತುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ ಈ ಸರ್ಕಾರಗಳು ಜನಪರವಾಗಿಲ್ಲ. ಆದ್ದರಿಂದ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಿದೆ. ಎಲ್ಲ ಗ್ರಾಮದ ರೈತರು ಪ್ರಬಲ ಹೋರಾಟ ಬೆಳೆಸಬೇಕು ಎಂದು ಹೇಳಿದರು.

ಎಸ್‌ಯುಸಿಐ(ಕಮ್ಯುನಿಸ್ಟ್‌) ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಹುಬ್ಬಳ್ಳಿ, ಕುಂದಗೋಳ ಹಾಗೂ ಕಲಘಟಗಿ ತಾಲೂಕಿನ ಸುಮಾರು 20-25 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಆಧಾರವಾಗಿದ್ದ ನೀರಸಾಗರ ಕೆರೆ ಇಂದು ಬತ್ತಿ ಬೆಂಗಾಡಾಗಿದೆ. ಕೃಷಿಯನ್ನೇ ನಂಬಿರುವ ರೈತರು ಹೊಲಗಳಲ್ಲಿ ಹೊಸ ಬೋರ್‌ವೆಲ್ಗಳನ್ನು 500 ಅಡಿ ಆಳ ಕೊರೆಸಿದರೂ ಅಲ್ಪ-ಸ್ವಲ್ಪ ನೀರು ಸಿಗುವುದು ಕಷ್ಟವಾಗಿದೆ. ಈ ಭಾಗದ ರೈತರ ಬದುಕು ಹಸನಾಗಬೇಕಾದರೆ ನೀರಸಾಗರ ಕೆರೆಗೆ ನೀರು ತುಂಬಬೇಕಾಗಿದೆ ಎಂದರು.

Advertisement

ಆರ್‌ಕೆಎಸ್‌ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವೆಂಕನಗೌಡ ಪಾಟೀಲ, ಲಕ್ಷ್ಮಣ ಜಡಗನ್ನವರ, ಅಲ್ಲಾವುದ್ದಿನ ಅಡ್ಲಿ, ಸದಸ್ಯರಾದ ಕಲ್ಲಪ್ಪ ರಾಮನಾಳ, ಪಕ್ಕೀರಪ್ಪ ಕೋಟಿ ಇನ್ನಿತರರಿದ್ದರು.

ಹೋರಾಟಕ್ಕೆ ಸಮಿತಿ ರಚನೆ; ಗಡುವು ನೀಡಲು ತೀರ್ಮಾನ

ನೀರಸಾಗರ ಕೆರೆಗೆ ನೀರು ತುಂಬಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಮುಖ್ಯ ಗೊತ್ತುವಳಿಯನ್ನು ಸಮಾವೇಶದಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಕೆರೆಯ ಸುತ್ತಮುತ್ತಲಿನ ಹಳ್ಳಿಗಳ 30ಕ್ಕೂ ಹೆಚ್ಚು ರೈತರನ್ನೊಳಗೊಂಡ ನೀರಸಾಗರ ಕೆರೆ ಹೋರಾಟ ಸಮಿತಿ ರಚಿಸಲಾಯಿತು. ಮುಂದಿನ ದಿನಗಳಲ್ಲಿ ಸಮಿತಿ ನೇತೃತ್ವದಲ್ಲಿ ಹೋರಾಟ ಮುಂದುವರಿಸಲು ತೀರ್ಮಾನಿಸಲಾಯಿತು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಗಡುವು ನೀಡಲು ತೀರ್ಮಾನಿಸಲಾಯಿತು. ಆ ಗಡುವಿನೊಳಗೆ ಪ್ರತಿಕ್ರಿಯಿಸದಿದ್ದರೆ ಪ್ರಬಲ ಹೋರಾಟ ಕೈಗೆತ್ತಿಕೊಳ್ಳಲು ನಿರ್ಣಯಿಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next