Advertisement

ಸದ್ದು ಮಾಡಿ ಸುದ್ದಿಯಾದವರು

10:38 AM Dec 30, 2019 | Suhan S |

ಅಲ್ಫಾಬೆಟ್‌ಗೆ ಸುಂದರ ಪಿಚೈ : ಗೂಗಲ್‌ ಕಂಪನಿ ಸಿಇಒ ಆಗಿ ಸುದ್ದಿ ಮಾಡಿದ್ದ ಭಾರತೀಯ ಮೂಲದ ಸುಂದರ ಪಿಚೈ ಈಗ ಅತ್ಯಂತ ಗರಿಷ್ಠ ವೇತನ ಪಡೆಯುವ ವಿಶ್ವದ 5ನೇ ಸಿಇಒ. ಈ ವರ್ಷ ಗೂಗಲ್‌ನ ಅಲ್ಫಾಬೆಟ್‌ಗೂ ಸಿಇಒ ಆಗಿ ನೇಮಕವಾಗಿದ್ದಾರೆ. ಚೆನ್ನೈ  ಮೂಲದ ಪಿಚೈ ಐಐಟಿ ಖರಗಪುರದಲ್ಲಿ ಪದವಿ ಪಡೆದಿದ್ದು, 2004ರಲ್ಲಿ ಗೂಗಲ್‌ ಕಂಪನಿ ಸೇರಿ ಹಂತಹಂತವಾಗಿ ಉನ್ನತ ಸ್ಥಾನಕ್ಕೇರಿದವ ರು. ಗೂಗಲ್‌ ಕ್ರೋಮ್‌, ಗೂಗಲ್‌ ಡ್ರೈವ್, ಗೂಗಲ್‌ ಮ್ಯಾಪ್‌ ಸೇರಿದಂತೆ ವಿವಿಧ ಆ್ಯಪ್‌ಗ್ಳ ಅಭಿವೃದ್ಧಿಯಲ್ಲಿ ಕ್ರಿಯಾಶೀಲ ಕೆಲಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೂಗಲ್‌ ಸ್ಪರ್ಧಾತ್ಮಕವಾಗಿ ಗಟ್ಟಗೊಳಿಸಿದ ಹೆಗ್ಗಳಿಕೆ ಪಿಚೈಗಿದೆ.

Advertisement

ದೇಶದ ಮನ ಗೆದ್ದ ಕೆ.ಶಿವನ್‌ : ಕೈಲಾಸವಾಡಿ ಶಿವನ್‌. ತಮಿಳುನಾಡಿನ ಪುಟ್ಟ ಹಳ್ಳಿಯ ರೈತನ ಮಗ. ಇಡೀ ಜಗತ್ತನ್ನೇ ನಭೋ ಮಂಡಲದತ್ತ ಮುಖ ಮಾಡಿ ತುದಿಗಾಲ ಮೇಲೆ ನಿಲ್ಲಿಸಿದ ಸಾಹಸಿ ವಿಜ್ಞಾನಿ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2ರ ಉಸ್ತುವಾರಿ ಹೊತ್ತಿದ್ದ ಅಪ್ರತಿಮ ಸಾಧಕ. ಚಂದ್ರನ ದಕ್ಷಿಣ ಮೇಲ್ಮೆಯಲ್ಲಿ ವಿಕ್ರಮ ಲ್ಯಾಂಡರ್‌ ಇಳಿಸುವ ಸಾಹಸ ಕೈಗೂಡದಿದ್ದರೂ ವಿಶ್ವದ ಗಮನ ಭಾರತದತ್ತ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.7ರಂದು ಬೆಳಗ್ಗೆ ಚಂದ್ರನ ಮೇಲೆ ಲ್ಯಾಂಡ್‌ ಆಗಬೇಕಿದ್ದ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೆ ತಲುಪಲು ಇನ್ನು 2.5 ಕಿಮೀ ಇರುವಾಗಲೇ ಸಂಪರ್ಕ ಕಡಿದುಕೊಂಡಿತ್ತು. ಇದಕ್ಕೆ ಪ್ರಧಾನಿ ಮೋದಿ ಖುದ್ದು ಸಾಕ್ಷಿಯಾಗಿದ್ದರು. ಕೊನೆ ಗಳಿಗೆಯ ನಿರಾಸೆಗೆ ಸಾಂತ್ವನ ಹೇಳಿದ್ದರು.

ದುಷ್ಟರ ಸದ್ದಡಗಿಸಿದ ಸಜ್ಜನರ್‌: ನ.27ರಂದು ಹೈದ್ರಾಬಾದ್‌ನ ಶಮ್ಮಾಬಾದ್‌ ಟೋಲ್‌ಗೇಟ್‌ ಬಳಿ ಮನೆಗೆ ಮರಳುತ್ತಿದ್ದ ಪಶು ವೈದ್ಯೆ ಮೇಲೆ ನಾಲ್ವರು ದುರು ಳರು ಅತ್ಯಾಚಾರವೆಸಗಿ ಕೊಂದು ಹಾಕಿದ್ದರು. ನಾಲ್ವರನ್ನು ಬಂಧಿಸಿದ್ದ ಪೊಲೀಸರು ಡಿ.6ರಂದು ಸ್ಥಳ ಮಹಜರು ನಡೆಸಲು ತೆರಳಿದ್ದರು.ಆಗ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾದಾಗ ಶೂಟೌಟ್‌ ಮಾಡಿ ಹೊಡೆದುರುಳಿಸಿದ್ದರು. ತನಿಖೆ ತಂಡದ ಉಸ್ತುವಾರಿ ಹೊತ್ತಿದ್ದು ಹುಬ್ಬಳ್ಳಿ ಮೂಲದ ವಿಶ್ವನಾಥಸಜ್ಜನರ್‌. ದಕ್ಷತೆಗೆ ಹೆಸರುವಾಸಿಯಾದ ಅಧಿಕಾರಿ. ನಿರ್ಭಯಾ ಪ್ರಕರಣದ ಆರೋಪಿಗಳಿಗೆ ನೇಣು ಕುಣಿಕೆ ಬಿಗಿಯಲು ಕಾನೂನು ಹೋರಾಟ ನಡೆದಿರುವಾಗಲೇ, ಕಾಮಪಿಪಾಸುಗಳನ್ನು ಹೊಡೆದುರುಳಿಸಿದ ಕೀರ್ತಿ ಇವರಿಗಿದೆ.

ಆ್ಯಮ್‌ ಬ್ಯಾಕ್‌ ಎಂದ ಡಿ.ಕೆ.ಶಿವಕುಮಾರ : ಕಾಂಗ್ರೆಸ್‌ ಪಕ್ಷದ ಪಾಲಿಗೆ ಸಂಕಷ್ಟ ನಿವಾರಕ. ಆದರೆ, 2019ರಲ್ಲಿ ಖುದ್ದು ಡಿಕೆಶಿಗೆ ಸಂಕಷ್ಟ ಬಂದಿದ್ದು ರಾಜಕಾರಣದ ಇನ್ನೊಂದು ಮಜಲು. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಐಟಿ ಮತ್ತು ಇಡಿ ಹೊಡೆತಕ್ಕೆ ತಿಹಾರ ಜೈಲು ಸೇರಿ ಮೂರು ತಿಂಗಳು ಸೆರೆವಾಸ ಅನುಭವಿಸಿ ಬಂದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಾಗಿಲಲ್ಲಿ ನಿಂತಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕನಾಗಿ , ಸೊರಗಿರುವ ಹಾಗೂ ಆಂತರಿಕ ಕಲಹದಿಂದ ತತ್ತರಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಜೀವ ತುಂಬಲು ಸನ್ನದ್ಧರಾಗಿದ್ದಾರೆ. ಬೆಳಗಾವಿ ವಿಷಯಕ್ಕೆ ಕೈ ಹಾಕಿ ಜಾರಕಿಹೊಳಿ ಕುಟುಂಬದ ವಿರೋಧ ಕಟ್ಟಿಕೊಂಡಿದ್ದಾರೆ.

ಇನ್ಫಿ ಅಳಿಯ ಬ್ರಿಟನ್‌ ಸಂಸದ : ಇನ್ಫೋಸಿಸ್‌ ಸಂಸ್ಥೆ ಸಂಸ್ಥಾಪಕ ನಾರಾಯಣ ಮೂರ್ತಿ ಜಗತ್ಪ್ರಸಿದ್ಧ ವ್ಯಕ್ತಿ. ರಾಜಕೀಯದಿಂದ ಬಲು ದೂರ. ಆದರೆ, ಅವರ ಅಳಿಯ ರಿಶಿ ಸುನಾಕ್‌ ಈಗ ಬ್ರಿಟನ್‌ ಸಂಸದ! 38 ವರ್ಷದ ರಿಶಿ ಬ್ರಿಟನ್‌ನ ಕನ್ಸ ರ್ವೆಟಿವ್‌ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಅಲ್ಲದೇ ಅಲ್ಲಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸಂಪುಟದಲ್ಲೂ ಸ್ಥಾನ ಪಡೆದಿದ್ದಾರೆ. ಭಾರತೀಯ ಮೂಲದ ರಿಶಿ ಹುಟ್ಟಿ ಬೆಳೆದಿದ್ದು ಬ್ರಿಟನ್‌ನಲ್ಲಿ. ಅವರು ನಾರಾಯಣಮೂರ್ತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿದ್ದಾರೆ.

Advertisement

ಗ್ರೇಟಾ ಥನ್‌ಬರ್ಗ್‌ : ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪರಿಸರ ಕಾಳಜಿ ಬಗ್ಗೆ ಚಿಂತಿಸುವ ಜನಗಳ ಮಧ್ಯೆ ಸ್ವೀಡನ್‌ ದೇಶದ 16 ವರ್ಷದ ಪುಟ್ಟ ಬಾಲಕಿ ಗ್ರೇಟಾ ಥನ್‌ಬರ್ಗ್‌ ಪರಿಸರ ಕ್ರಾಂತಿಯನ್ನೇ ಸೃಷ್ಟಿಸಿದ್ದಾಳೆ. ಇಡೀ ವಿಶ್ವಕ್ಕೆ ಪರಿಸರ ಪಾಠ ಮಾಡುತ್ತಿದ್ದಾಳೆ. ವಿಶ್ವಸಂಸ್ಥೆಯಲ್ಲೇ ಜಗದ್ವಿಖ್ಯಾತರ ಎದುರು ನಿಂತು ಪರಿಸರ ಹಾಳು ಮಾಡುತ್ತಿದ್ದೀರಿ. ಇನ್ನಾದರೂ ಅದನ್ನು ರಕ್ಷಿಸಿ ಎಂದು ಏರಿದ ಧ್ವನಿಯಲ್ಲಿ ಎಚ್ಚರಿಕೆ ಕೊಟ್ಟಿದ್ದಾಳೆ. ಸ್ವೀಡನ್‌ಸರ್ಕಾರಕ್ಕೆ ಪ್ರತಿ ವರ್ಷ ಶೇ.15ರಷ್ಟು ಮಾಲಿನ್ಯ ತಗ್ಗಿಸಲು ಕ್ರಮ ಕೈಗೊಳ್ಳಲೇಬೇಕು ಎಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾಳೆ!

ಸನ್ನಾ ಮರೀನ್‌ : ವಿಶ್ವದ ಅತಿ ಕಿರಿಯ ಪ್ರಧಾನಿ. ಫಿನ್ ಲ್ಯಾಂಡ್ ನ‌ಲ್ಲಿ ಕ್ರಾಂತಿ ಸೃಷ್ಟಿಸಿದ ಮಹಿಳೆ. ಸೊಷಿಯಲ್‌ ಡೆಮಾಕ್ರಾಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಸನ್ನಾ ಮರೀನ್‌ ಅಲ್ಲಿನ ಜನರ ಮನಗೆದ್ದು ಗದ್ದುಗೆ ಏರಿದ್ದಾರೆ. ಇದಕ್ಕೂ ಮೊದಲು ಫಿನ್ ಲ್ಯಾಂಡ್ ಸರ್ಕಾರದಲ್ಲಿ ಅತಿ ಕಿರಿಯ ವಯಸ್ಸಿನ ಸಾರಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯೂ ಮರೀನ್‌ಗಿದೆ. ರಾಜಕೀಯ ಅನುಭವ, ಪಟ್ಟುಗಳನ್ನು ಚಿಕ್ಕ ವಯಸ್ಸಿನಲ್ಲೇ ಕರಗತ ಮಾಡಿಕೊಂಡಿರುವ ಸನ್ನಾ ಮೇಲೆ ಅಲ್ಲಿನ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ರಾಜೀವ್‌ ಗಾಂಧಿ 40ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದು ಇದುವರೆಗಿನ ದಾಖಲೆ.

ಹೌದು ಹುಲಿಯಾ! : ಕಾಗವಾಡ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ವೇದಿಕೆ ಕೆಳಗೆ ಕುಳಿತಿದ್ದ ಅಥಣಿಯ ಪೀರಪ್ಪ ಎಂಬುವವರು ಸಿದ್ದು ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಲು ಎದ್ದು ನಿಂತು ಹೌದು ಹುಲಿಯಾ ಎಂದುಬಿಟ್ಟರು. ಬಹು ಆಕರ್ಷಿತವಾದ ಪದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಯಿತು. ಅಷ್ಟೇ ಅಲ್ಲ, ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘದಿಂದ ಮಹೇಶ ಕಲ್ಲೋಳರ ಅವರು ಇದೇ ಹೆಸರಿನಲ್ಲಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಜ.9ರಿಂದ ತಿಂಗಳ ಕಾಲ ಪ್ರದರ್ಶನವಾಗಲಿದೆ.

ಉದ್ಧವ್‌ ಠಾಕ್ರೆ : ಪ್ರಬಲ ಹಿಂದುತ್ವ ಪ್ರತಿಪಾದಕ ಬಾಳಾಸಾಹೇಬ್‌ ಠಾಕ್ರೆ ಪುತ್ರ. ಬಿಜೆಪಿ ಗೆಳೆತನದಲ್ಲೇ ಚುನಾವಣೆ ಎದುರಿಸಿ ಕೊಡು-ಕೊಳ್ಳುವಿಕೆ ಚೌಕಾಸಿಯಲ್ಲಿ ಮುನಿಸಿಕೊಂಡು ತದ್ವಿರುದ್ಧ ಸಿದ್ಧಾಂತಗಳ ಪಕ್ಷಗಳಾದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಗಾದಿ ಮೇಲೆ ಕುಳಿತಿದ್ದಾರೆ. ರಾಜಕೀಯ ಸ್ಥಿತ್ಯಂತರದಲ್ಲಿ ಗುದ್ದಾಡಿ ಠಾಕ್ರೆ ಕುಟುಂಬದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫ‌ಡ್ನವೀಸ್‌ ಅವರು ಅಜಿತ್‌ ಪವಾರ್‌ ಜತೆ ಸೇರಿ ಸರ್ಕಾರ ರಚಿಸಿದರೂ ಶರದ್‌ ಪವಾರ್‌ ಅವರ ಚಾಣಾಕ್ಷತೆಯಿಂದ ಉದ್ಧವ್‌ ಸಿಎಂ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸದ್ಯಕ್ಕೆ ಗೆಳೆತನದಲ್ಲಿ ಎಲ್ಲವೂ ಚೆನ್ನಾಗಿದೆ. ಮುಂದೆ ಹೇಗಿರುತ್ತದೆ ಎಂದು ಕಾಲವೇ ಉತ್ತರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next