Advertisement

ಪತಿ – ಪತ್ನಿ ನಡುವೆ ಶುರುವಾದ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ

11:47 AM Apr 02, 2022 | Team Udayavani |

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ನಡುವೆ ಕಲಹ ಉಂಟಾಗಿ, ಪತಿಯೇ ಪತ್ನಿಯನ್ನು ಹೊಡೆದು ಕೊಂದಿರುವ ಘಟನೆ ವಿಧಾನಸೌಧ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಪಶ್ಚಿಮ ಬಂಗಾಳ ಮೂಲದ ಸಂಚಿ ಉರವ್‌ (36) ಕೊಲೆಯಾದ ಮಹಿಳೆ. ಈ ಸಂಬಂಧ ಆಕೆಯ ಪತಿ ಪೂಲ್‌ ಚಂದ್‌ ಉರವ್‌(40) ನನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳ ಮೂಲದ ದಂಪತಿ ನಗರದಲ್ಲಿ ಬಿಸುರಾಯ್‌ ಎಂಬ ಗುತ್ತೆಗೆದಾರನ ಬಳಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದರು. ವಿಧಾನಸೌಧ ಸಮೀಪದ ಹೋಟೆಲ್‌ ಪಕ್ಕದಲ್ಲಿರುವ ಕಟ್ಟಡ ನೆಲ ಮಹಡಿಯಲ್ಲಿ ದಂಪತಿ ಹಾಗೂ ಇತರೆ ಆರು ಮಂದಿ ಕಾರ್ಮಿಕರು ವಾಸವಾಗಿದ್ದರು. ಸಂಚಿ ಉರವ್‌ ಆರೇಳು ಕಾರ್ಮಿಕರಿಗೆ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದರು. ಈ ನಡುವೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ನಿತ್ಯ ಜಗಳ ಮಾಡುತ್ತಿದ್ದರು. ಈ ವಿಚಾರ ತಿಳಿದ ದೂರುದಾರದ ಶ್ರೀಧರ್‌ಗೆ ದಂಪತಿಗೆ, ಪದೇ ಪದೆ ಜಗಳ ಮಾಡುತ್ತಿದ್ದರೆ, ಕೆಲಸಕ್ಕೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ದಂಪತಿ ಕೆಲ ದಿನಗಳಲ್ಲಿ ಕೆಲಸ ತೊರೆಯುವುದಾಗಿ ಹೇಳಿದ್ದರು.

ಈ ಮಧ್ಯೆ ಮಾ.26ರಂದು ಬಿಸುರಾಯ್‌, ಶ್ರೀಧರ್‌ಗೆ ಕರೆ ಮಾಡಿ, ಸಂಚಿ ಉರವ್‌ ಎರಡು ದಿನಗಳಿಂದ ಮನೆಯಿಂದ ಹೊರಗಡೆ ಬಂದಿಲ್ಲ. ಹೋಗಿ ನೋಡಿದಾಗ ಮಾತನಾಡದೆ ಮಲಗಿದ್ದಾರೆ ಎಂದು ತಿಳಿಸಿದ್ದರು. ಕೂಡಲೇ ಗಾಬರಿಗೊಂಡು ಸ್ಥಳಕ್ಕೆ ಬಂದು ನೋಡಿದಾಗ, ಆಕೆಯ ಮುಖದ ಮೇಲೆ ಕಪ್ಪು ಕಲೆಯಾಗಿತ್ತು. ಬಾಯಿಂದ ನೊರೆ ಬಂದಿದೆ. ಅಲ್ಲದೆ, ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗೆ ಕೇಳಿದಾಗ ಬೆಳಗ್ಗೆ 6 ಗಂಟೆಯಿಂದ ಪೂಲ್‌ ಚಂದ್‌ ಕಾಣಿಸುತ್ತಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಯಲ್ಲಿ ಶ್ರೀಧರ್‌ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ವಿಚಾರಣೆಯಲ್ಲಿ ಆರೋಪಿ ಪತಿ, ಪತ್ನಿಯ ಮುಖ ಹಾಗೂ ಕೆನ್ನೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಆಕೆ ಮೃತಪಟ್ಟಿದ್ದಾಳೆ. ಅಲ್ಲದೆ, ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next