Advertisement

ರಾಜಸ್ಥಾನದಲ್ಲಿ ಇನ್ನೊಬ್ಬ ಗುರ್ಮಿತ್‌, ಫ‌ಲಾಹಾರಿ ಬಾಬಾ ಸೆರೆ

04:18 PM Sep 23, 2017 | Team Udayavani |

ಆಳ್ವಾರ್‌ : ಫ‌ಲಾಹಾರಿ ಬಾಬಾ ಎಂದೇ ಖ್ಯಾತನಾಗಿರುವ ಸ್ವಘೋಷಿತ ದೇವಮಾನವ ಕುಶಲೇಂದ್ರ ಪ್ರಪಣ್ಣಾಚಾರಿ ಎಂಬಾತನನ್ನು ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜಸ್ಥಾನದ ಆಳ್ವಾರ್‌ ಪೊಲೀಸರು ಇಂದು ಬಂಧಿಸಿದ್ದಾರೆ. 

Advertisement

ಖಾಸಗಿ ಆಸ್ಪತ್ರೆಯಲ್ಲಿದ್ದ ಆತನನ್ನು ಪೊಲೀಸರು ಅಲ್ಲಿಂದಲೇ ಬಂಧಿಸಿ ಸರಕಾರಿ ಆಸ್ಪತ್ರೆಗೆ ಒಯ್ದು ಅಲ್ಲಿ ಆತನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದರು. 

ಫ‌ಲಾಹಾರಿ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಿಲಾಸ್‌ಪುರ ಕಾನೂನು ವಿದ್ಯಾರ್ಥಿನಿಯೋರ್ವಳು ಆಳ್ವಾರ್‌ ಪೊಲೀಸರಲ್ಲಿ ದೂರು ದಾಖಲಿಸಿದ್ದಳು. ಆ ಪ್ರಕಾರ ಪೊಲೀಸರು ಬಾಬಾನನ್ನು ಬಂಧಿಸಿದರು. ಆತನ ಮೇಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಪೊಲೀಸರು ಪರಿಣತ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದ್ದಾರೆ. 

ಹರಿಯಾಣದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ 15 ವರ್ಷಗಳ ಹಿಂದೆ ಎಸಗಿದ್ದ ಅತ್ಯಾಚಾರ ಅಪರಾಧಕ್ಕಾಗಿ ನ್ಯಾಯಾಲಯವು ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಳೆದ ಆ.28ರಂದು ನೀಡಿದ್ದ ತೀರ್ಪಿನಿಂದ ಪ್ರೇರಿತಳಾದ ಕಾನೂನು ವಿದ್ಯಾರ್ಥಿನಿಯು ತನ್ನ ಮೇಲೆ ಫ‌ಲಾಹಾರಿ ಬಾಬಾ ಅತ್ಯಾಚಾರ ಎಸಗಿದ್ದ ಬಗ್ಗೆ  ಧೈರ್ಯದಿಂದ ಪೊಲೀಸರಿಗೆ ದೂರು ನೀಡಿ ಆತನ ಬಂಧನಕ್ಕೆ ಕಾರಣಳಾಗಿದ್ದಾಳೆ. 

ಅತ್ಯಾಚಾರದ ದೂರು ಕೊಟ್ಟಿರುವ ಕಾನೂನು ವಿದ್ಯಾರ್ಥಿನಿಯ ಹೆತ್ತವರು ಕಳೆದ ಅನೇಕ ವರ್ಷಗಳಿಂದ ಫ‌ಲಾಹಾರಿ ಬಾಬಾನ ಅನುಯಾಯಿಗಳಾಗಿದ್ದರು. 

Advertisement

ಫ‌ಲಾಹಾರಿ ಬಾಬಾ ತನ್ನ ಮೇಲೆ ಕಳೆದ ಆಗಸ್ಟ್‌ 7ರಂದು ಆತನ ಆಳ್ವಾರ್‌ ಆಶ್ರಮದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಹೇಳಿದ್ದಾಳೆ. 

ಕಳೆದ 25 ವರ್ಷಗಳಿಂದ ತಾನು ಕೇವಲ ಫ‌ಲಾಹಾರದಲ್ಲೇ ಬದುಕುತ್ತಿರುವುದಾಗಿ ಸ್ವಘೋಷಿತ ದೇವಮಾನವ ಬಾಬಾ ಹೇಳಿಕೊಂಡಿದ್ದು ಆ ಕಾರಣಕ್ಕಾಗಿ ಆತನನ್ನು ಆತನ ಅನುಯಾಯಿಗಳು “ಫ‌ಲಾಹಾರಿ ಬಾಬಾ’ ಎಂದೇ ಕರೆಯುತ್ತಾರೆ. 

ಅತ್ಯಾಚಾರದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಫ‌ಲಾಹಾರಿ ಬಾಬಾ ವಿರುದ್ಧ ಐಪಿಸಿ ಸೆ.376, ಸೆ.506ರ ಅಡಿ ತಾವು ಕೇಸು ದಾಖಲಿಸಿಕೊಂಡಿರುವುದಾಗಿ ಆಳ್ವಾರ್‌ ಹೆಚ್ಚುವರಿ ಎಸ್‌ಪಿ ಪಾರಸ್‌ ಜೈನ್‌ ಹೇಳಿದ್ದಾರೆ. 

ತನ್ನ ಮೇಲೆ ಅತ್ಯಾಚಾರದ ದೂರು ದಾಖಲಾದ ಬೆನ್ನಿಗೇ ಫ‌ಲಾಹಾರಿ ಬಾಬಾ ಅಲಿಯಾಸ್‌ ಕುಶಲೇಂದ್ರ ಪ್ರಪಣ್ಣಾಚಾರಿ ಬುಧವಾರ ಸಂಜೆಯೇ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ. ಆತ ಆರೋಗ್ಯದಿಂದ ಇದ್ದು ಬಿಡುಗಡೆಗೆ ಯೋಗ್ಯನಿದ್ದಾನೆ ಎಂದು ವೈದ್ಯರು ಘೋಷಿಸಿದ ಬೆನ್ನಿಗೇ ಆತನನ್ನು ಪೊಲೀಸರು ಬಂಧಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next