Advertisement

ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ: ಓರ್ವನ ವಿಚಾರಣೆ, ತಪ್ಪೊಪ್ಪಿಗೆ

01:44 AM Oct 16, 2020 | mahesh |

ಪುತ್ತೂರು: ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ಏಜೆಂಟ್‌ ನೀಡಿದ ದೂರಿನ ಅನ್ವಯ ನಗರ ಪೊಲೀಸರು ಓರ್ವ ಆರ್‌ಟಿಒ ದಲ್ಲಾಳಿಯನ್ನು ವಿಚಾರಣೆ ನಡೆಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

Advertisement

“ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ’ ಶೀರ್ಷಿಕೆಯಡಿ ಅ. 15ರಂದು ಉದಯವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಈ ನಕಲಿ ವ್ಯವಹಾರದ ಕರಾಳ ಮುಖ ಹೊರ ಬರಲಾರಂಭಿಸಿದೆ. ಆರ್‌ಟಿಒ ದಲ್ಲಾಳಿ ಪುತ್ತೂರಿನ ಹೊರವಲಯದ ಅಶ³ಕ್‌ ತಪ್ಪೊಪ್ಪಿಕೊಂಡಿರುವ ವ್ಯಕ್ತಿ.

ಆರ್‌ಸಿ ಬದಲಾವಣೆಗೆ ನಕಲಿ ವಿಮೆ ಬಳಕೆ
ಅಬ್ದುಲ್‌ ಖಾದರ್‌ ಅವರು ಜಲೀಲ್‌ಗೆ ಅಟೋ ರಿಕ್ಷಾ ಮಾರಾಟ ಮಾಡಿದ್ದು, ಜಲೀಲ್‌ ಅ. 12ರಂದು ಪುತ್ತೂರು ವಿಮಾ ಕಚೇರಿಗೆ ಬಂದು ವಿಮೆಯನ್ನು ತನ್ನ ಹೆಸರಿಗೆ ಬದಲಾಯಿಸಲು ಮುಂದಾದ ಸಂದರ್ಭ ಈ ಆವಾಂತರ ಬೆಳಕಿಗೆ ಬಂದಿದೆ. ಆರ್‌ಸಿ ಬದಲಾವಣೆಗೆ ಆರ್‌ಟಿಒ ಕಚೇರಿಗೆ ವಿಮಾ ಪ್ರತಿ ಸಲ್ಲಿಸಬೇಕು. ಇದಕ್ಕಾಗಿ ನಕಲಿ ವಿಮೆ ತಯಾರಿಸಿ ನೀಡಲಾಗಿದೆ. ಇಲ್ಲಿ ಅಶ³ಕ್‌ನು ಖಾದರ್‌ ಅವರಿಗೆ ಆರ್‌ಸಿ ಬದಲಾವಣೆ ಸಂದರ್ಭ ಅಧಿಕೃತ ಸಂಸ್ಥೆಯ ಏಜೆನ್ಸಿ ಕೋಡ್‌ ಬಳಸಿ ಖಾದರ್‌ ಹೆಸರಿನಲ್ಲಿ ವಿಮೆ ನೀಡಿದ್ದಾರೆ. ಇದು ನಕಲಿ ಅನ್ನುವ ವಿಚಾರ ಖಾದರ್‌ ಅವರ ಗಮನಕ್ಕೂ ಬಂದಿರಲಿಲ್ಲ. ಅವರು ಅಸಲಿ ವಿಮೆಯೆಂದೇ ಭಾವಿಸಿ ವಿಮೆ ಸಹಿತ ಜಲೀಲ್‌ಗೆ ಅಟೋ ಮಾರಾಟ ಮಾಡಿದ್ದರು. ವಿಮೆ ನಕಲಿಯೆಂದು ತಿಳಿದಾಗ ಅಧಿಕೃತ ಸಂಸ್ಥೆಯ ಏಜೆಂಟ್‌ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಾಹನದ ಮಾಲಕನನ್ನು ವಿಚಾರಿಸಿದಾಗ ಆತ ತನಗೆ ವಿಮೆ ಮಾಡಿಕೊಟ್ಟ ದಲ್ಲಾಳಿ ಅಶ³ಕ್‌ನ ಮಾಹಿತಿ ನೀಡಿದರು.

ವಿಮೆ ಅಧಿಕಾರಿಗಳ ನಿರ್ಲಕ್ಷ ಕಾರಣ
ಆರ್‌ಸಿ ಬದಲಾವಣೆ ಸಂದರ್ಭ ಆ ವಾಹನದ ವಿಮೆ ಪ್ರತಿಯನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕು. ಆರ್‌ಟಿಒ ಅಧಿಕಾರಿಗಳು ಪರಿಪೂರ್ಣವಾಗಿ ಪರಿಶೀಲಿಸದೆ ವಿಮೆ ಪಾಲಿಸಿ ಪತ್ರದಲ್ಲಿ ವಾಹನದ ಮಾಹಿತಿ ಮತ್ತು ದಿನಾಂಕ ಮಾತ್ರ ನೋಡಿ ಒಪ್ಪಿಗೆ ನೀಡುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅನಧಿಕೃತ ದಲ್ಲಾಳಿಗಳು ಆರ್‌ಸಿ ವರ್ಗಾವಣೆಗೆ ವಿಮೆ ಕಟ್ಟುವ ಹೆಸರಿನಲ್ಲಿ ವಾಹನ ಮಾಲಕರಿಂದ ಹಣ ವಸೂಲಿ ಮಾಡಿ, ಅನಂತರ ನಕಲಿ ವಿಮೆ ಸೃಷ್ಟಿಸುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಜಾಲ ಸಕ್ರಿಯವಾಗಲು ಕಾರಣ ಎನ್ನುವ ಅಂಶವೀಗ ಸ್ಪಷ್ಟವಾಗಿದೆ.

ಕ್ಯುಆರ್‌ ಕೋಡ್‌ ಸ್ಕ್ಯಾನ್‌
ವಿಮೆ ಅಸಲಿ/ನಕಲಿ ಬಯಲು ತಾನು ಹೊಂದಿರುವ ವಿಮೆ ನಕಲಿಯೊ ಅಥವಾ ಅಸಲಿಯೋ ಎಂದು ಅರಿಯಲು ಸ್ಮಾರ್ಟ್‌ ಫೋನ್‌ ಹೊಂದಿರುವ ವಿಮಾದಾರರು ವಿಮಾ ಪ್ರತಿಯಲ್ಲಿರುವ ಕ್ಯುಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ಖಾತರಿ ಆಗುತ್ತದೆ. ಆದರೆ ಈ ಕಾರ್ಯವನ್ನು ಆರ್‌ಟಿಒ ಅಧಿಕಾರಿಗಳಾಗಲಿ, ಸಂಚಾರ ಪೊಲೀಸರಾಗಲಿ ಮಾಡುತ್ತಿಲ್ಲ.

Advertisement

ಪೈಪೋಟಿ ನೆಪ; ಸೌಲಭ್ಯಕ್ಕೆ ಕುತ್ತು!
ವಾಹನ ವಿಮೆ ಮಾಡಿಸಿಕೊಡಲು ಹಲವು ಪೋರ್ಟಲ್‌ ಕಚೇರಿಗಳು ಕಾರ್ಯ ನಿರ್ವ ಹಿಸುತ್ತಿದ್ದು ಕೆಲವು ವಿಮಾ ಪ್ರತಿನಿಧಿಗಳು ಭಾರೀ ರಿಯಾಯಿತಿ ದರದಲ್ಲಿ ಪಾಲಿಸಿ ಮಾಡುವ ಆಫರ್‌ ನೀಡುತ್ತಿದ್ದಾರೆ. ಇದರ ನಿಜವಾದ ಅಸಲಿಯತ್ತು ಪರಿಶೀಲಿಸಿದರೆ ದರ ಕಡಿಮೆಯಿಂದ ವಿಮಾದಾರ ಹಲವು ಸೌಲಭ್ಯಗಳಿಂದ ವಂಚಿತನಾಗುತ್ತಿದ್ದಾನೆ ಎನ್ನುವುದು ಖಚಿತ. ಉದಾಹರಣೆಗೆ ವಾಹನದ ಡಿಎಲ್‌ ಹೊಂದಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಅಂಗ ಊನವಾಗಿ ಕೆಲಸ ಮಾಡುವ ಶಕ್ತಿ ಕಳೆದುಕೊಂಡರೆ ತನ್ನ ವಾಹನಕ್ಕೆ ಪಾವತಿಸಿದ ವಿಮೆಯಿಂದ 15 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ದೊರೆಯುತ್ತದೆ. ಕಡಿಮೆ ದರದಲ್ಲಿ ಪಾಲಿಸಿ ಮಾಡಿಕೊಡುವ ಸಂದರ್ಭ ಇಂತಹ ಸೌಲಭ್ಯ ದೊರೆಯದಂತಹ ಪಾಲಿಸಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ವಿಮೆ ಕಂತು ಪಾವತಿಸುವ ಸಂದರ್ಭ ಫಲಾನುಭವಿ ಎಚ್ಚರಿಕೆಯಿಂದ ಇರಬೇಕು ಎಂದು ವಿಮಾ ತಜ್ಞರು ತಿಳಿಸಿದ್ದಾರೆ.

ಏಜೆಂಟ್‌ ನೀಡಿದ ದೂರಿನ ಆಧಾರದಲ್ಲಿ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ಎರಡು ನಕಲಿ ವಿಮೆ ಮಾಡಿರುವ ಬಗ್ಗೆ ಒಪ್ಪಿದ್ದಾನೆ. ಎರಡು ದಿನದೊಳಗೆ ಅಸಲಿ ವಿಮೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
– ಜಂಬೂರಾಜ್‌,  ಎಸ್‌ಐ ಪುತ್ತೂರು ನಗರ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next