Advertisement

ಜಿಲ್ಲಾದ್ಯಂತ ನಕಲಿ ರಸಗೊಬ್ಬರ ಮಾರಾಟ?

02:28 PM Feb 11, 2022 | Team Udayavani |

ಭಾರತೀನಗರ: ಮೋಸ ಮಾಡೋರು ಇರೋವರೆಗೂ ಮೋಸ ಹೋಗೋರು ಇದ್ದೇ ಇರುತ್ತಾರೆ. ಅದರಲ್ಲೂ ಅಮಾಯಕರೇ ಹೆಚ್ಚು ಮೋಸ ಹೋಗುತ್ತಿರುವುದುವಿಪರ್ಯಾಸವೇ ಸರಿ. ರೈತ ದೇಶದ ಬೆನ್ನೆಲುಬು ಅನ್ನುತ್ತಾರೆ, ಆದರೆ, ಆ ರೈತರ ಬೆನ್ನೆಲುಬನ್ನೇ ಮುರಿಯೋ ಕೆಲಸ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ರೈತನಿಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿರೈತ ಬೆಳೆ ಬೆಳೆಯಲು ಉಪಯೋಗಿಸುವ ರಸಗೊಬ್ಬರದಲ್ಲೂ ಮೋಸವಾಗುತ್ತಿದೆ.

Advertisement

ಕಂಡು ಕಾಣದಂತೆ: ಮಂಡ್ಯ ಜಿಲ್ಲಾದ್ಯಂತ ಕಳಪೆ ರಸಗೊಬ್ಬರ ಮಾರಾಟ ಎಗ್ಗಿಲ್ಲದೆ ಸಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮದ್ದೂರು ತಾಲೂಕು ಹೊನ್ನನಾಯಕನಹಳ್ಳಿಯ ರೈತಸೋಮಶೇಖರ್‌ ಖರೀದಿಸಿರುವ ಗೊಬ್ಬರ ನಕಲಿ  ಯಾಗಿರುವುದು ಕಂಡು ಬಂದಿದೆ.

ಚಿಹ್ನೆ, ತೂಕದಲ್ಲೂ ವ್ಯತ್ಯಾಸ: ಮದ್ದೂರಿನ ಸೊಸೈಟಿಗಳಲ್ಲಿ ಗೊಬ್ಬರ ಸಿಗದ ಕಾರಣ ಮಳವಳ್ಳಿ ತಾಲೂಕಿನ ಸುಜ್ಜಲೂರು ಗ್ರಾಮದ ಸಹಕಾರ ಸಂಘದಲ್ಲಿ ಎರಡು ಬ್ಯಾಗ್‌ ಡಿಎಪಿ ಗೊಬ್ಬರ ಪಡೆದಿದ್ದರು. ಆದರೆ, ನಂತರಮನೆಗೆ ಬಂದು ಹಿಂದೆ ಖರೀದಿಸಿದ್ದ ಗೊಬ್ಬರ ಬ್ಯಾಗ್‌ ಹೋಲಿಕೆ ಮಾಡಿ ನೋಡಿದಾಗ ನಕಲಿ ಗೊಬ್ಬರ ವಿತರಣೆಯಾಗಿರುವುದು ಗೊತ್ತಾಗಿದೆ. ನಕಲು ಗೊಬ್ಬರದ ಚೀಲದ ಮೇಲಿನ ಚಿಹ್ನೆಗಳು ಅದಲು ಬದಲಾಗಿದೆ. ಅಲ್ಲದೆ, ಕೆಜಿಯಲ್ಲೂ ವ್ಯತ್ಯಾಸ ಕಂಡು ಬಂದಿದ್ದರಿಂದ ಕಳಪೆ ಗೊಬ್ಬರ ಎಂದು ತಿಳಿದು ಬಂದಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ನಕಲಿ ಗೊಬ್ಬರದ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಆದರೆ ಅವರಿಂದ ಸರಿಯಾದ ಉತ್ತರ ಬರಲಿಲ್ಲ. ಜತೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಹಾರಿಕೆ ಉತ್ತರ ನೀಡಿದರು ಎಂದು ರೈತ ಸೋಮಶೇಖರ್‌ ಆರೋಪಿಸಿದ್ದಾರೆ. ನಂತರ ಇಲಾಖೆಯ ಒಬ್ಬರು ಅಧಿಕಾರಿ ಸ್ಥಳಕ್ಕೆ ಆಗಮಿಸಿ ಗೊಬ್ಬರವನ್ನು ಪರಿಶೀಲಿಸಿದಾಗ ಇದು ಮೇಲ್ನೋಟಕ್ಕೆ ನಕಲಿ ಎಂದು ಕಾಣಿಸುತ್ತದೆ ಎಂದು ಹೇಳಿದರು.

ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ಗೊಬ್ಬರ ಎಲ್ಲಿ ತಯಾರಾಗುತ್ತದೆ ಎಂಬುದರ ಬಗ್ಗೆ ಪತ್ತೆ ಮಾಡಿಲ್ಲ. ಈ ನಕಲಿ ಗೊಬ್ಬರ ಮಾರಾಟದಲ್ಲಿಕೃಷಿ ಇಲಾಖೆ ಅಧಿಕಾರಿಗಳೂ ಕೂಡ ಶಾಮೀಲಾಗಿರಬಹುದೆಂದು ಆರೋಪ ಮಾಡಿದ್ದಾರೆ.

Advertisement

ಸಚಿವರಿಗೂ ಮನವಿ: ನಕಲಿ ಗೊಬ್ಬರ ಮಾರಾಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೂ ದೂರು ನೀಡಿದ್ದರು. ನಂತರ ಜಿಲ್ಲಾಧಿಕಾರಿಗೂ ದೂರು ನೀಡಿದ ಪರಿಣಾಮ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಮಾರಾಟಕ್ಕೆ ಬ್ರೇಕ್‌: ದೂರು ನೀಡಿದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕಿನ ಸುಜಲೂರು, ಡಿ.ಹಲಸಹಳ್ಳಿ, ದುಗ್ಗನಹಳ್ಳಿ ಹಾಗೂ ನೆಲಮಾಕನಹಳ್ಳಿ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಕಲಿ ಗೊಬ್ಬರಮಾರಾಟಕ್ಕೆ ಬ್ರೇಕ್‌ ಹಾಕಲಾಗಿದೆ ಎಂದು ರೈತ ಸೋಮಶೇಖರ್‌ ತಿಳಿಸಿದ್ದಾರೆ.

ನಕಲಿ ಗೊಬ್ಬರ ದೃಢ, ಕಂಪನಿಗೆ ನೋಟಿಸ್‌ :  ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವ ಬಗ್ಗೆ ದೂರು ಬಂದಿದ್ದು, ಗೊಬ್ಬರದ ಸ್ಯಾಂಪಲ್‌ಲ್ಯಾಬ್‌ಗ ಕಳುಹಿಸಲಾಗಿತ್ತು. ವರದಿಯಲ್ಲಿ ನಕಲಿಗೊಬ್ಬರ ಎಂದು ತಿಳಿದು ಬಂದಿದೆ. ಅದರಂತೆ ಸುಜಲೂರು ಸಹಕಾರ ಸಂಘದ ಕಾರ್ಯದರ್ಶಿಗೆ ಹಾಗೂ ಅದನ್ನು ಸರಬರಾಜು ಮಾಡಿದ ಮಂಜುನಾಥ ಫ‌ರ್ಟಿಲೈಸರ್‌ ಕಂಪನಿ ವಿರುದ್ಧ ನೋಟಿಸ್‌ ನೀಡಲಾಗಿದೆ. ನಕಲಿಗೊಬ್ಬರ ತಯಾರಾಗುವ ಕಾರ್ಖಾನೆ ಪತ್ತೆ ಹಚ್ಚಲು ಏಳು ದಿನಗಳ ನಂತರ ಮಂಡ್ಯದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಕರಣದಾಖಲಿಸಲಾಗುವುದು ಎಂದು ಮಂಡ್ಯ ಜಿಲ್ಲೆಜಂಟಿ ಕೃಷಿ ನಿರ್ದೇಶಕರಾದ ಡಾ.ಬಿ.ಎಸ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

ಅಕ್ರಮ ದಂಧೆಗೆ ಕಡಿವಾಣ ಯಾವಾಗ? :

ನಕಲಿ ಗೊಬ್ಬರ ಮಾರಾಟ ಮಾಡುವ ಬಗ್ಗೆ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಾರಾಟ ಮಾಡುವುದನ್ನುನಿಷೇಧಿಸಿದರೆ ಸಾಲದು. ಬದಲಾಗಿ ನಕಲಿ ಗೊಬ್ಬರ ತಯಾರಿಸುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ನಿಯಂತ್ರಿಸುವ ಮೂಲಕ ರೈತರ ಹಿತದೃಷ್ಟಿ ಕಾಪಾಡಬೇಕಾಗಿದೆ.

ಅಧಿಕಾರಿಗಳು ನಕಲಿ ಗೊಬ್ಬರ ಮಾರಾಟ ಮಾಡುವುದು ಹಾಗೂ ಉತ್ಪಾದನೆಯನ್ನು ತಡೆಗಟ್ಟಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಕೃಷಿ ಸಚಿವರುಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ, ಅನ್ಯಾಯ ವಿವರಿಸಿ ಪ್ರತಿಭಟನೆ ನಡೆಸಲಾಗುವುದು. -ಸೋಮಶೇಖರ್‌, ಹೊನ್ನನಾಯಕನಹಳ್ಳಿ ರೈತ, ಮದ್ದೂರು

-ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next