Advertisement

ನಂಬಿಕೆಯೇ ಸ್ನೇಹದ ತಳಪಾಯ

11:57 PM Mar 08, 2020 | Sriram |

ಹಿಂದೊಮ್ಮೆ ಆವಂತಿಕ ಮಹಾರಾಜನು ರಾಜ ಬೀದಿ ಪ್ರವೇಶಿಸುತ್ತಿರುವ ವೇಳೆ ಜನ್ಯ ಮತ್ತು ನಾವಿದ ಎಂಬ ಇಬ್ಬರು ಆಪ್ತ ಸ್ನೇಹಿತರ ಪರಿಚಯವಾಗುತ್ತದೆ. ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಇವರ ವ್ಯಕ್ತಿತ್ವ ರಾಜನಿಗೆ ನನಗೂ ಒಬ್ಬ ಪ್ರಾಣ ಸ್ನೇಹಿತನಿದ್ದರೆ ಚೆನ್ನಾಗಿತ್ತು ಎಂದು ಅಸೂಯೆ ಹುಟ್ಟಿಸುವಂತೆ ಮಾಡಿತು. ಯಾರಾದರೂ ನಂಬಿಕಸ್ತ ಸ್ನೇಹಿತನನ್ನು ಹೊಂದಲೇಬೇಕೆಂಬ ಆಸೆಯಿಂದ ರಾಜಭಟರಲ್ಲಿ ಹುಡುಕಲು ತಿಳಿಸುತ್ತಾನೆ. ಆದರೆ ಸರ್ವರ ಅಭಿಮತದಿಂದ ನಾವಿದನ ಹೆಸರು ಕೇಳುತ್ತಲೇ ಸಂತೋಷಗೊಂಡು ಅವನನ್ನೇ ತನ್ನ ಪ್ರಾಣ ಸ್ನೇಹಿತನಾಗಿಸಿಕೊಳ್ಳಬೇಕೆಂದು ನಿಶ್ಚಯಿಸುತ್ತಾನೆ.

Advertisement

ನಾವಿದನನ್ನು ಅರಮನೆಗೆ ಬರ ಹೇಳಿ ರಾಜಸಭೆಯಲ್ಲಿ ಅವನನ್ನು ಸ್ನೇಹಿತನಾಗಿ ಇಂದಿನಿಂದ ಅಂಗೀಕರಿಸಿದ್ದೇನೆ ಎಂದು ಘೋಷಣೆಯೂ ಆಯಿತು. ಇತ್ತ ಜನ್ಯನಿಗೆ ನಾವಿದನ ಅನುಪಸ್ಥಿತಿ ಬೇಸರ ಪಡಿಸುತ್ತಿದ್ದರೂ ಅವನ ಸ್ಥಾನ-ಗೌರವಗಳನ್ನು ಕಂಡು ಖುಷಿಯಾಗುತ್ತಿತ್ತು. ಆದರೆ ನಾವಿದ ರಾಜನೊಂದಿಗೆ ಮಾತನಾಡುವಾಗಲೆಲ್ಲ ಜನ್ಯನ ಕುರಿತು ಪ್ರಸ್ತಾಪ ಸಲ್ಲಿಸುತ್ತಲೇ ಇರುವುದು ಸರಿ ಎಂದು ಕಂಡು ಬಾರದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದನು. “ಇನ್ನು ಮುಂದೆ ಅವನನ್ನು ನೀನು ಭೇಟಿಯಾಗಬಾರದು. ನಿನ್ನ ಪ್ರಾಣ ಸ್ನೇಹಿತ ನಾನು ಮಹಾರಾಜ, ಆ ಮೂರು ಕಾಸಿನವನ ಸಹವಾಸ ಈಗ ನಿನಗೆ ಬೇಕೆ?’ ಎಂದು ತನ್ನ ಅಭಿಪ್ರಾಯ, ಅಸಮಾಧಾನವನ್ನು ತಿಳಿಸುತ್ತಾನೆ. ಆದರೆ ನಾವಿದನಿಗೆ ಈ ಮನಃಸ್ಥಿತಿ ಕಂಡು ಆಶ್ಚರ್ಯವೂ ಬೇಸರವೂ ಆಯಿತು. ಇನ್ನೂ ತಾಳ್ಮೆ ವಹಿಸಿದರೆ ಜನ್ಯ ನನ್ನ ಬದುಕಿನಿಂದಲೇ ದೂರ ಸರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು, “ನನಗೆ ಬದುಕ ಕಲಿಸಿದ ಜನ್ಯನೇ ಪ್ರಾಣ ಸ್ನೇಹಿತ. ಸಂಪತ್ತಿನಿಂದ ನಂಬಿಕೆನ್ನಾಗಲಿ ಸ್ನೇಹವನ್ನಾಗಲಿ ಸಂಪಾದಿಸಲು ಸಾಧ್ಯವಿಲ್ಲ. ಹಾಗೇ ಸಂಪಾದಿಸಿದರೂ ಅದು ನೀರ ಮೇಲಿನ ಗುಳ್ಳೆಯಂತೆ’ ಎಂದು ಪ್ರತಿಕ್ರಿಯಿಸುತ್ತಾನೆ. ತಪ್ಪನ್ನು ಅರಿತ ರಾಜನೂ ಬೇಸರದಿಂದ ಜನ್ಯ ಮತ್ತು ನಾವಿದರಲ್ಲಿ ಕ್ಷಮೆಯಾಚಿಸಿ ಇಬ್ಬರ ಸ್ನೇಹಕ್ಕೂ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ.

ನಂಬಿಕೆ ನಮ್ಮ ವ್ಯಕ್ತಿತ್ವದಿಂದಲೇ ಹುಟ್ಟಿಕೊಳ್ಳಬೇಕೆ ವಿನಾಃ ಇತರರ ಆದ್ಯತೆಗೆ ಮೊರೆಹೋಗಿ ಹುಟ್ಟುವಂತದಲ್ಲ. ಸ್ನೇಹವು ಸಂಪತ್ತಿನ ಮುಖ ತಳೆದಿದ್ದರೆ ಅದು ವ್ಯಾಮೋಹವಷ್ಟೇ. ಅದು ಸಂಪತ್ತು ಕರಗಿ ಹೋದಂತೆ ಸ್ನೇಹವು ಮಾಯವಾಗುತ್ತದೆ. ಅದೇ ರೀತಿ ಸ್ನೇಹವನ್ನು ಸಂಪತ್ತಿನಿಂದ ಸಂಪಾದಿಸಲು ಸಾಧ್ಯವಿಲ್ಲ. ಹಾಗೆ ಮಾಡಲು ಹೋದರೂ ಪಂಜರದ ಗಿಳಿಯಂತೆ ಬದುಕ ಸಾಗಿಸಬೇಕೆನ್ನುವ ಸತ್ಯ ಮರೆಯಬಾರದು. ಜನ್ಯ, ನಾವಿದರು ಪ್ರಾಣ ಸ್ನೇಹಿತರಾದ ಕಾರಣ ಎಲ್ಲೇ ಇದ್ದರೂ ಅವರ ಏಳಿಗೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಹಾಗೆಂದು ಸಂಬಂಧ ತೊರೆಯುವುದು ತರವಲ್ಲ, ಬೇಕೆನಿಸಿದ ಸಂಬಂಧವನ್ನು ಉಳಿಸಲು ಕಠೊರ ಧೋರಣೆ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ. ಬಾಹ್ಯವ್ಯಕ್ತಿತ್ವದಿಂದ ಅಥವಾ ಸ್ಥಾನದಿಂದಾಗಲಿ ನಾವು ದೊಡ್ಡವರಾಗಲಾರೆವು. ಈ ಕಥೆಯಲ್ಲಿ ಮಹಾರಾಜ ಸ್ಥಾನದಲ್ಲಿ ಉತ್ತಮವಿದ್ದರೂ ಆತನ ಆಂತರಿಕ ವ್ಯಕ್ತಿತ್ವದಲ್ಲಿ ಅಸಹನೆ, ಅಸೂಯೆ ಎಲ್ಲವೂ ಅಡಗಿತ್ತು ಸೂಕ್ತ ಸಮಯದಂದು ಹೊರಬರುತ್ತದೆ. ಅದರಂತೆ ನಮಗರಿವಿಲ್ಲದೇ ಎಲ್ಲರೂ ನಮ್ಮವರೆಂದು ಅಂದುಕೊಳ್ಳಬಾರದ. ಅಂದುಕೊಂಡ ಮೇಲೆ ಪ್ರೀತಿ, ಸ್ನೇಹ ನಂಬಿಕೆಯ ತಳಪಾಯದ ಸಂಬಂಧವನ್ನು ಗಟ್ಟಿಗೊಳಿಸಿದಾಗಲೇ ಬದುಕು ನಿಜವಾದ ಅರ್ಥಪಡೆಯುತ್ತದೆ.

-ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next